Home / ಕವನ / ಕವಿತೆ / ಎಚ್ಚರಿಕೆ

ಎಚ್ಚರಿಕೆ

ಬಂಧನವರಿಯದೆ
ಸುಖವನು ಬಯಸದೆ
ಬೆಳೆಯುತ ಬರುತಿಹಳೀ ಸೀತೆ

ನಿರುತವು ಶ್ರಾವ್ಯದ
ಗಾನವನೊರೆವಳು
ಕಿರುನಗೆ ಮೊಗದೊಳು ಸುಪ್ರೀತೆ

ಗಾಯಕಿ ನಿನ್ನಯ
ಗಾನವ ಕೇಳಲು
ಕಾತರರಾಗಿಹೆವೆಂದೊಡನೆ

ಕಂಗಳ ಮುಚ್ಚುತ
ತಾಳವ ತಟ್ಟುತ
ಝೇಂಕೃತನಾದವ ಗೆಯ್ಯುವಳು

ಗಾನದ ಸಾಗರ-
ದಲೆಗಳ ಸೆಳೆತದಿ
ತೂಗಿಸಿ ತೇಲಿಸಿ ನಲಿಸುವಳೂ

ವಾಣಿಯ ವೀಚಿಯ
ಮಾಲೆಯ ಪೋಣಿಸಿ
ಕ್ಷಣದೊಳು ಮೆಯ್ಯನು ಮರೆಸುವಳು

ನಿಸ್ಪೃಹ ಮನಸಿನ
ನಮ್ಮೀ ಸೀತೆಗೆ
ಓದುವುದೆಂದರೆ ಹಿರಿಯಾಸೆ

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಕಂಡರೆ ಬಹುಪ್ರೀತಿ

ಚಿಗುರಿದ ಲತೆಯೊಳು
ಅರಳುತ ಬರುತಿಹ
ಕುಸುಮವ ಹೋಲುವ ಓ ಸೀತೇ

ವಿಶ್ವದ ರಂಗದಿ
ನಾನಾ ಬಗೆಗಳ
ಯಂತ್ರಗಳಿರುವುವು ಎಚ್ಚರಿಕೆ

ಕಣ್ಣಿಗೆ ಕಾಣದ
ಸ್ಥಳದೊಳು ಕೆಲವೆಡೆ
ಮಣ್ಣೊಳು ಹುದುಗಿವೆ ವಜ್ರಗಳು

ಹೊನ್ನಿನ ರಾಸಿಯ
ಮಧ್ಯದಿ ಕೆಲವೆಡೆ
ಸರ್ಪಗಳಿರುವುವು ಎಚ್ಚರಿಕೆ

ಭಾವದಿ ತುಂಬಿದೆ
ದೇವನ ಸೃಷ್ಟಿಯು
ಎಂಬುದನೆಂದಿಗು ಮರೆಯದಿರು

ಮೇಘವ ಚುಂಬಿಸಿ
ಗಗನದಿ ಸುಳಿಯುತ
ಹಾರುವ ಹಕ್ಕಿಯ ತೆರದೊಳಿರು

ಕಲ್ಮಷವಿಲ್ಲದ
ನಿನ್ನೀ ಹೃದಯದಿ
ಮುಳ್ಳಿನ ಕಂಪೆಯ ಹರಡದಿರು

ಕಷ್ಟದಿ ನರಳುವ
ಜನರಿಗೆ ಮರುಗುತ
ಸಾಯವ ಮಾಳ್ಪುದ ಮರೆಯದಿರು

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಬಯಸುವ ಓ ಸೀತೇ

ಸುಖ ಸ್ವಾತಂತ್ರ್‍ಯದ
ಗೈಮೆಯ ಫಲವನು
ಸೃಷ್ಟಿಯ ಕರ್ತನೆ ಉಣುತಿರಲಿ

ಬಂಧನ ರಹಿತದ
ನಿನ್ನೀ ಬಾಳ್ವೆಗೆ
ಸೃಷ್ಟಿಯ ಕರ್ತನ ಒಲವಿರಲಿ

ಎಂದಳು ಕಿವಿಯೊಳು
ಪ್ರೀತಿಯ ತಂಗಿಗೆ
ಸೀತೆಯ ಸೋದರಿ ಜನಕಜೆಯು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...