Home / ಕವನ / ಕವಿತೆ / ವಾಹನದ ಗೀಳು

ವಾಹನದ ಗೀಳು

ಏಳು ವಾಹನದ ಗೀಳು ಅಂಟಿತ್ತೊ !
ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ
ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ
ಕಚ್ಚಿತ್ತು ಯಂತ್ರದ
ಹುಚ್ಚು ವ್ಯಾಮೋಹ.
ಸದಾ ಒತ್ತಿ ಒತ್ತಿ
ಬ್ರೇಕೇ ಕಾಲು, ಹ್ಯಾಂಡಲೇ ತೋಳು
ದೀಪವೇ ಕಣ್ಣು, ದನಿ ಹಾರನ್ನು,
ಇದರ ಮೂಲಕವೇ ಪ್ರಪಂಚ ಸಂಪರ್ಕ
ಹೊನ್ನು ಹೆಣ್ಣು ಮಣ್ಣು,
ಇದಿಲ್ಲದಿದ್ದರೆ ಇನ್ನೇನು ಗತಿ
ಇದೇ ನಾನು ಎನ್ನಿಸಿಬಿಟ್ಟಿತ್ತು
ಮೊನ್ನೆ ರಾತ್ರಿ ಟಾಪ್ ಗೇರಿನಲ್ಲೇ ಹಾಯುತ್ತ
ಎದುರಿಗೆ ಹಠಾತ್ತನೆ ಲಾರಿ !
ಬ್ರೇಕು ಒತ್ತುತ್ತಲೇ ಜಾರಿ
ಅಮ್ಮಾ ಅಂತ ಚೀರಿ
ಬುಡಕ್ಕೇ ಬಿದ್ದೆ.

ಯಾರೋ ‘ಬಾ, ಸಾಕು’ ಎಂದರು
ಇಳಿದು ಹೊರಕ್ಕೆ ಬಂದೆ
‘ನೋಡು ಹೇಗಿತ್ತು’ ಎಂದರು
ನೋಡಿದೆ
ನೋಡಿಕೊಂಡೇ ಇರಲಿಲ್ಲ ಮುಂಚೆ ಎನ್ನುವಂತೆ.
ಲಾರಿಯ ಬುಡಕ್ಕೆ ಬಿದ್ದಿತ್ತು ರಕ್ತಸಿಕ್ತ
ಕಾಲು ತೋಳು ಜಜ್ಜಿತ್ತು
ಕಣ್ಣು ಸಿಡಿದಿತ್ತು ಹಾರನ್ ತಣ್ಣಗಾಗಿತ್ತು
ಸುತ್ತ ಜನ, ಏನೇನೋ ಮಾತು ಸನ್ನೆ –
‘ಅಯ್ಯೋ ಪಾಪ’ ‘ಕಾದಿತ್ತಲ್ಲಪ್ಪ ವಿಧಿ’
‘ಇಷ್ಟೆ ಕಣಪ್ಪ ಎಲ್ಲ’ ಎನ್ನುವಂತೆ.

ಈಗ ಎಲ್ಲಿಗೆ ? ಎಂದೆ.
ಕನಸು ಸಿಡಿದ ಮೇಲೆ ಎಲ್ಲೆಂದರಲ್ಲಿಗೆ ಎಂದರು
‘ಕನಸಾ? ಅಬ್ಬ!
ಗೊತ್ತಾಗಲೇ ಇಲ್ಲ ಇಷ್ಟು ಕಾಲ
ಎಂಥ ಭ್ರಮೆ ! ಎಷ್ಣು ದಟ್ಟ ಎಷ್ಟು ಗಟ್ಟಿ’ ಎನ್ನುತ್ತಿರುವಂತೆ
‘ಅದು ಹಾಗೆಯೇ
ಕಟ್ಟಿಕೊಂಡದ್ದು
ಕಳೆದುಕೊಂಡ ಮೇಲೆಯೇ ತಿಳಿಯೋದು’
ನಡಿ ಹೋಗೋಣ ಎಂದರು.

ಹೊರಟೆವು-
ನಿಂತಂತೆ ಹೋಗುತ್ತಲೇ ಇದ್ದೇವೆ
ನೆನೆದಲ್ಲೇ ಇದ್ದೇವೆ
ಎನ್ನುವಂತೆ.
ಗಾಳಿಮಳೆಗಳ ಭಾರಿ ದಾಳಿ ಶುರುವಾಯಿತು
ದಟ್ಟಕಾಡು.
ಹಾದೇ ಹೋದೆವು. ಅರೇ, ಎಂಥ ಆಶ್ಚರ್ಯ!
ತೊಯ್ಯಲಿಲ್ಲ ಆರಲಿಲ್ಲ ಚುಚ್ಚಲಿಲ್ಲ
ಕಚ್ಚಲಿಲ್ಲ ಒಂದು ಸೊಳ್ಳೆಕೂಡ.
ದಾರಿಯಲ್ಲಿ ಭಾರಿ ಬೆಟ್ಟ
ಸುತ್ತಿ ಹೋಗಲು ಹೊರಳಿದೆ.
‘ಛಿ, ದುರಭ್ಯಾಸ
ನೇರ ಹೋಗು’ ಎಂದರು
ಒಳಕ್ಕೆ ಹೋದರೆ ಅಲ್ಲಿ
ಸೇದಿ ಬಿಟ್ಟ ಹೊಗೆಯಲ್ಲಿ
ಕೊರೆದು ತೆಗೆದಂತೆ
ಸಾವಿರ ಬಣ್ಣದ ಸಾವಿರ ದೃಶ್ಯ
ಒಲಿಯುವ ಕೆಲೆಯುವ ಸಾವಿರ ಕಲ್ಪನೆಗಳ ನೆರಳು
ತೂರಿ ಚೆಲ್ಲಾಡಿದಂತೆ ಸುಖ
ತೂಗುವ ಬೆಳ್ಳಿ ಬಂಗಾರ ಹವಳದ ಬಳ್ಳಿ, ಹರಳು.
ನೋಡಿ ದಂಗಾದೆ, ತೋರಿಸುತ್ತ, “ನೋಡು
ಬೆಟ್ಟ ಬಯಸುವ,
ಇನ್ನೂ ಅದಕ್ಕೆ ದಕ್ಕಿಲ್ಲದ ಬಾಳಿನ ಕನಸು” ಎಂದರು.
“ಆಗ ಇದು ಕಾಣುತ್ತಿರಲಿಲ್ಲ” ಎಂದೆ.
“ಅದು ಹಾಗೆಯೇ
ಗಡಿಗಳ ನಡುವೆ ಬಾಗಿಲು ಕಿಟಕಿ ಇಲ್ಲ
ಇನ್ನೊಂದಕ್ಕೆ ಹಾಯುವಂತಿಲ್ಲ
ಈಗಾದರೆ ಬಂಧನವಿಲ್ಲ ಎಲ್ಲಿ ಹೇಳು
ಹಸಿವಾ ? ಎಂದರು
ಇಲ್ಲ
“ದಾಹ ?”
“ಇಲ್ಲ”
“ನೋವು?” ಆಯಾಸ ? ನಿದ್ದೆ?
“ಇಷ್ಟೂ ಇಲ್ಲ, ಎಷ್ಟು ವಿಚಿತ್ರ
ಹಿಂದೆ ಪಟ್ಟ ಅನುಭವ ಅಷ್ಟು ಸುಳ್ಳಾ ?” ಎಂದೆ
“ಸುಳ್ಳಲ್ಲ
ಎಲ್ಲ ಸತ್ಯದ ನೆರಳು
ಸಂತೆಯ ನೋಟಕ್ಕೆ, ಅಲ್ಲಿಯ ಆಟಕ್ಕೆ
ಬಯಸಿದ ಬೇಟಕ್ಕೆ ಕೊಟ್ಟಿದ್ದ ಕಂತೆ ನಿನ್ನ ಮೈ.
ತೊಟ್ಟು ನಿಜ, ಎಸೆದು ಸುಳ್ಳು
ಆಕಾರ ಬಣ್ಣ ಕೊಳಕು ಹರಕು ಅದಕ್ಕೆ,
ಇದಕ್ಕಲ್ಲ” ಎಂದು
ನನ್ನ ಕಡೆ ಬೆರಳು ಮಾಡಿದರು.
ಯಾರಿದು ಎಂದು ನೋಡಿಕೊಳ್ಳಲು ಹೋದರೆ-
ಅರರೆ ! ಏನಿದು !
ಬೊಂಬೆಯಾ ?
ನೆರಳಾ ?
ಅಲ್ಲ
ಗಾಳಿ, ನೀರು, ನೆಲ ?
ಅಲ್ಲವೇ ಅಲ್ಲ
ಅಸ್ತಿತ್ವಕ್ಕೆ ಅವಲಂಬನವೇ ಇಲ್ಲ
ಗಾಬರಿಯಾಗಿ
ಅಯ್ಯೋ ಎಂದು ಸೂರು ಹಾರುವಂತೆ ಕೂಗಿ
ಯಾರೋ ಮತ್ತೆ ಒಳಕ್ಕೆ
ಎಸೆದಂತೆ ಎದ್ದರೆ-

ಮತ್ತೆ ಅದೇ ರೂಮು
ಅದೇ ಪುಸ್ತಕ, ಕ್ಯಾಲೆಂಡರು
ಅದರೊಳಗಿನ ಅದೇ ಲತಾ
ಹಾಡುತ್ತಿರುವ ಚಿತ್ರ ಹಾಡಿತೋ ಎನ್ನುವಂತೆ
ರೇಡಿಯೋದಿಂದ ಅವಳ ಹಾಡೇ ಬರುತ್ತಿದೆ.
ಲಾರಿಯಲ್ಲಿ ಬಿದ್ದಿದ್ದ ವಾಹನ ಸಹ
ಮೊದಲಿನಂತೇ ಇರುತ್ತ
ಓಡಾಟಕ್ಕೆ ಸಿದ್ಧವಾಗಿದೆ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...