Home / ಕವನ / ಕವಿತೆ / ಕಾರಂಜಿ ಕೆರೆಯ ಬಳಿ

ಕಾರಂಜಿ ಕೆರೆಯ ಬಳಿ

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ
ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ
ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ
ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ
ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ
ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ
ಅಲಗುವುದೊ, ಮಲಗಿಹುದೊ, ಎನುವಂತೆ ಸುಳಿಯುತಿಹ
ಮೆಲ್ಲಲೆಗಳಾಳದಲಿ ನೆರಳುಗಳು ನಡುಗುತಿವೆ!
ಅವು ತೊಟ್ಟ ನೀರಂಗಿಯಲಿ ಕಾಲ ಮಾಡಿಟ್ಟ
ಹರುಕಿನಲಿ, ತಾರೆಗಳ ಛಾಯೆ ಅಲ್ಲಲ್ಲಿರಲು,
ದೂರದಲಿ, ಮೂಡಲಕೆ, ಕಂಬವೊಂದರ ಮೇಲೆ
ಮಂಕಡರಿ ಮಿಣುಕುತಿಹ ದೀಪದರೆನೆರಳೊಂದು
ಅಲೆಗಳಾಳದ ಇರುಳ ಭೇದಿಸುತ ಅತ್ತಿತ್ತ
ಒಸರುತಿದೆ. ಆ ಮೂಲೆಯೊಳಗೊಂದು ಬೆಳ್ವಕ್ಕಿ
ನೀರೊಳಗ ಮೀನುಗಳ ಸಂಸಾರವನು ಹೊಂಚಿ
ಕಾಯುತಿದೆ. ಇತ್ತ ಮೃಗಶಾಲೆಯಲಿ, ಬಂಧನದ
ಕೂಳನುಣ್ಣುತ ಮರುಗಿ, ಬಿಡುಗಡೆಗೆ ಹಂಬಲಿಸಿ,
ಒಲ್ಲದೆಯೆ ಬಲ್ಲಿದರ ಬಿಲ್ಗಳಿಗೆ ನೇಣಾಗಿ,
ಕಾತರದಿ, ಸಂಕಟದಿ, ಇರುಳಲೇ ನರಳುತಿಹ
ಹಾರು ಹಕ್ಕಿಗಳೆದೆಯ ಕೊರಗ ದನಿಯೊಳು ದನಿಯ
ಕೂಡಿಸಿವೆ ಕಾಡ ಹುಲಿ ಸಿಂಹಗಳು, ಅದ ಕೇಳಿ
ಮಾರುದನಿ, ಆ ಕಡೆಗೆ, ಮಾನವನ ಮುಗಿಲಾಸೆ
ಬಿಂಬಿಸುತ, ಚಾಮುಂಡಿ ಬೆಟ್ಟ ನೆಟ್ಟನೆ ನಿಂತು
ಮುಗಿಲಿಗೀಟಿಯ ಹಾಕಲೆನುವಂತೆ ನಿಮಿರಿಹುದ
ಕಂಡು ಹಿಂದೆಗೆಯುತಿದೆ; ಮೌನಕ್ಕೆ ಶರಣಾಗಿ
ನೀರಿನಲ್ಲಿ ಮುಳುಗುತಿದೆ, ನೀರ ಪಕ್ಕದ ಹಾದಿ
ತುಳಿಯುತಿಹ ಗೆಳಯರಗೊ, ಕತ್ತಲಲಿ ಬರಿಯೆರಡು
ನೆರಳಾಗಿ ಸರಿದಿಹರು. ಅವರಲೊಬ್ಬನ ದನಿಯ
ಹೆಣ್ತನದ ಮಾಧುರ್ಯ, ಅಳಿದ ಬಾಳಿನ ಒಂದು
ಸವಿಗನಸ ನನಸಂತೆ, ಹೃದಯದೊಳ ಇಂಚರದಿ
ಹಾಸು ಹೊಕ್ಕಾಗುತಿರೆ, ಮೈ ಮನಸು ಮೇಲೇರಿ
ಆಗಸದ ಮಡಿಲಿನಲಿ ಉಯಾಲೆಯಾಡುತಿಹ
ಬಿಳಿ ಮೋಡದೊಳಗೊಂದು ಕಣವಾಗಿ ಇಣುಕುತಿದೆ.
ಕೇಳುತಿದೆ- ಸ್ವರ್ಗದೊಳಗಿಂತು ಆತ್ಮೀಯತೆಯ,
ಗೆಳೆತನದ, ನೆನಪುಗಳ, ಪ್ರೇಮದುನ್ಮಾದಗಳ
ನೋವು ನಲೆಗಳುಂಟೆ ?- ಇಲ್ಲಿರಲು ಅಲ್ಲೆಲ್ಲಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...