ಕಾರಂಜಿ ಕೆರೆಯ ಬಳಿ

ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ
ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ
ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ
ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ
ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ
ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ
ಅಲಗುವುದೊ, ಮಲಗಿಹುದೊ, ಎನುವಂತೆ ಸುಳಿಯುತಿಹ
ಮೆಲ್ಲಲೆಗಳಾಳದಲಿ ನೆರಳುಗಳು ನಡುಗುತಿವೆ!
ಅವು ತೊಟ್ಟ ನೀರಂಗಿಯಲಿ ಕಾಲ ಮಾಡಿಟ್ಟ
ಹರುಕಿನಲಿ, ತಾರೆಗಳ ಛಾಯೆ ಅಲ್ಲಲ್ಲಿರಲು,
ದೂರದಲಿ, ಮೂಡಲಕೆ, ಕಂಬವೊಂದರ ಮೇಲೆ
ಮಂಕಡರಿ ಮಿಣುಕುತಿಹ ದೀಪದರೆನೆರಳೊಂದು
ಅಲೆಗಳಾಳದ ಇರುಳ ಭೇದಿಸುತ ಅತ್ತಿತ್ತ
ಒಸರುತಿದೆ. ಆ ಮೂಲೆಯೊಳಗೊಂದು ಬೆಳ್ವಕ್ಕಿ
ನೀರೊಳಗ ಮೀನುಗಳ ಸಂಸಾರವನು ಹೊಂಚಿ
ಕಾಯುತಿದೆ. ಇತ್ತ ಮೃಗಶಾಲೆಯಲಿ, ಬಂಧನದ
ಕೂಳನುಣ್ಣುತ ಮರುಗಿ, ಬಿಡುಗಡೆಗೆ ಹಂಬಲಿಸಿ,
ಒಲ್ಲದೆಯೆ ಬಲ್ಲಿದರ ಬಿಲ್ಗಳಿಗೆ ನೇಣಾಗಿ,
ಕಾತರದಿ, ಸಂಕಟದಿ, ಇರುಳಲೇ ನರಳುತಿಹ
ಹಾರು ಹಕ್ಕಿಗಳೆದೆಯ ಕೊರಗ ದನಿಯೊಳು ದನಿಯ
ಕೂಡಿಸಿವೆ ಕಾಡ ಹುಲಿ ಸಿಂಹಗಳು, ಅದ ಕೇಳಿ
ಮಾರುದನಿ, ಆ ಕಡೆಗೆ, ಮಾನವನ ಮುಗಿಲಾಸೆ
ಬಿಂಬಿಸುತ, ಚಾಮುಂಡಿ ಬೆಟ್ಟ ನೆಟ್ಟನೆ ನಿಂತು
ಮುಗಿಲಿಗೀಟಿಯ ಹಾಕಲೆನುವಂತೆ ನಿಮಿರಿಹುದ
ಕಂಡು ಹಿಂದೆಗೆಯುತಿದೆ; ಮೌನಕ್ಕೆ ಶರಣಾಗಿ
ನೀರಿನಲ್ಲಿ ಮುಳುಗುತಿದೆ, ನೀರ ಪಕ್ಕದ ಹಾದಿ
ತುಳಿಯುತಿಹ ಗೆಳಯರಗೊ, ಕತ್ತಲಲಿ ಬರಿಯೆರಡು
ನೆರಳಾಗಿ ಸರಿದಿಹರು. ಅವರಲೊಬ್ಬನ ದನಿಯ
ಹೆಣ್ತನದ ಮಾಧುರ್ಯ, ಅಳಿದ ಬಾಳಿನ ಒಂದು
ಸವಿಗನಸ ನನಸಂತೆ, ಹೃದಯದೊಳ ಇಂಚರದಿ
ಹಾಸು ಹೊಕ್ಕಾಗುತಿರೆ, ಮೈ ಮನಸು ಮೇಲೇರಿ
ಆಗಸದ ಮಡಿಲಿನಲಿ ಉಯಾಲೆಯಾಡುತಿಹ
ಬಿಳಿ ಮೋಡದೊಳಗೊಂದು ಕಣವಾಗಿ ಇಣುಕುತಿದೆ.
ಕೇಳುತಿದೆ- ಸ್ವರ್ಗದೊಳಗಿಂತು ಆತ್ಮೀಯತೆಯ,
ಗೆಳೆತನದ, ನೆನಪುಗಳ, ಪ್ರೇಮದುನ್ಮಾದಗಳ
ನೋವು ನಲೆಗಳುಂಟೆ ?- ಇಲ್ಲಿರಲು ಅಲ್ಲೆಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ
Next post ಈ ರಾತ್ರಿ

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…