Home / ಕವನ / ಕವಿತೆ / ಪೆರ್ರೂಗೀ ಮತ್ತು ಮೋನಲಿಸಾ

ಪೆರ್ರೂಗೀ ಮತ್ತು ಮೋನಲಿಸಾ

ನನ್ನ ನಂಬು ಮೋನಾಲಿಸಾ
ನಾನು ಹಗಲು ಗಳ್ಳನೂ ಆಲ್ಲ ತಲೆಹಿಡುಕನೂ ಅಲ್ಲ
ಪೊಳ್ಳು ಭ್ರಮೆ ಎಂದರೂ ಅನ್ನಲಿ
ಈ ಜನ ಈ ನ್ಯಾಯಾಲಯ
ನೀನು ನನ್ನವಳೇ.
ಮರೆಯಲಾದೀತೆ ನಾನೂರು ವರ್ಷಗಳ
ಹಿಂದಿನ ನಮ್ಮ ಸಂಸಾರ?
ಹೇಗೆ ಹೇಳಲಿ ಇವರಿಗೆ
ಸಧೃಢ ದೇಹ ಮುಗುಳ್ನಗೆ
ಹೊಳಪು ಕಣ್ಣುಗಳ ನೀನು
ಹೊರಬಿದ್ದಾಗೆಲ್ಲ ನಾನದೆಷ್ಟು ಅಸೂಯೆ ಪಡುತ್ತಿದ್ದೆ ಗೊತ್ತೇ
ಲಿರ್ಯೊನಾರ್ಡ್ ಡಾ ವಿಂಚಿ ಕುಂಚಕ್ಕೆ
ನೀ ರೂಪದರ್ಶಿ ಯಾದಾಗ ನಾನು
ಚಡಪಡಿಸಿದ್ದೇನು ನಿನ್ನ ಕೆನ್ನಗೆ ಬಾರಿಸಿದ್ದೇನು
ಪೂನರ್ಜನ್ಮ ಇಲ್ಲದಿದ್ದರೆ
ಮತ್ತೆ ಹುಟ್ಟಿ ನಿನ್ನನ್ನು ನೆನಪಿಸಿಕೊಳ್ಳುವ
ಪ್ರಮೇಯವೇ ಇರುತ್ತಿರಲಿಲ್ಲವೇನೋ
ನಾನು ಮತ್ತೆ ಹುಟ್ಟಿದ್ದೇನೆ
ತೈಲ ಚಿತ್ರದ ನೀನು
ಮತ್ತೆ ಮತ್ತೆ ನನ್ನನ್ನು ಕಾಡುತ್ತಿರುವಿ
ಪ್ಯಾರಿಸ್ಸಿನ ಸುತ್ತಲ್ಲ ಹರಿದಾಡಿದ
ಸೈನ್ ನದಿಯಂತೆ ಕೆಂಪು ಹಸಿರು
ಮಿಶ್ರಿತ ಪ್ಲುಟೋಯ್ ಗಿಡಗಳಂತೆ.
ಲೂವೃ ಮ್ಯೂಸಿಯಂ
ಬಂಧಿಖಾನೆಯಲ್ಲೇಕಿರಬೇಕು ನೀನು
ಎಂದೇ ಭದ್ರತಾ ಪಡೆಯನ್ನೇ ಭೇದಿಸಿ
ನಿನ್ನ ಹೊರಕರೆದುಕೊಂಡು ಬಂದೆ
ಊರೂರು ಸುತ್ತಿದೆ.

“ನಿನ್ನ ಮುಗಳ್ನಗೆಯಿಂದ
ಪ್ಯಾರಿಸ್ಸಿನ ಮುಸ್ಸಂಜೆಗಳಿಗೆ ರಂಗೇರುತ್ತಿತ್ತು
‘ಶಾಂಪೇನ್’ ಬಾಟಲ್‌ಗಳು ಖಾಲಿಯಾಗುತ್ತಿದ್ದವು’
ಮೋನಾಲಿಸಾ ನೀನೂ ಲೂವೃದ ಮಹಾರಾಣಿ
ಜಗತ್ತಿನ ರಾಜಕುಮಾರಿ
ನನ್ನ ಗುಡಿಸಲಲ್ಲೇನು
ನಿನ್ನ ನಗು ಹೊಳಪು ಕಣ್ಣು ಕಂದಿಡುತ್ತಿದೆಯಲ್ಲ
ರೂಪರಾಶಿ ರೂಪಸಿ
ಇದೆಂತಹ ವಿರಹವೇದನೆ ನನಗೆ
ಚಿತ್ರ ಹರಿದು ಸುಡಲೂ ಮನಸ್ಸು ಬರುತ್ತಿಲ್ಲ
ನೀನು ನನ್ನವಳು.
ಪೋಲೀಸ ವಶಕ್ಕೆ ನಾನು ಸೇರಿದ್ದೇನು ಮಹಾ ಬಿಡು
ನನ್ನಿಂದ ಅವರು ಕಿತ್ತುಕೊಂಡರಲ್ಲ ನಿನ್ನ
ನ್ಯಾಯಾಲಯ ಹುಚ್ಚ ಮನೋರೋಗಿ ಎಂದಿತೇನೋ
ನಿಜವಾಗಿಯೂ ನಾನೇನೂ ಅಲ್ಲ
ಪುನರ್ಜನ್ಮದಲ್ಲಿ ನಂಬಿಕೆ ಇರುವವನು ಮಾತ್ರ.
ಜೈಲಿನಿಂದ ಹೊರಬಿದ್ದು ಎಷ್ಟೋ ವರ್ಷಗಳಾದವು
ಈಗ ನೂರರ ಮುದುಕ
ಲುವೃದ ಎದುರಿನ ಸೈನ್ ನದಿಯ
ದಡದಲ್ಲೇ ಕುಳಿತು
ಹದಿಹರೆಯರ ಮುಗುಳ್ನಗೆಯಲಿ
ನಿನ್ನ ಕಾಣುತ್ತ ಬೆಚ್ಚಗಾಗುತ್ತಿದ್ದೇನೆ ಲೀಸಾ
ಮತ್ತೆ ಮತ್ತೆ ಅವರಲ್ಲಿ
ನೀ ಹುಟ್ಟಿ ಬರುತ್ತಲೇ ಇರುವಿಯೆಂದು.

(ಪ್ಯಾರಿಸ್ಸಿನ ಲೂವೃ ಮ್ಯೂಸಿಯಂದಲ್ಲಿ ಮೋನಾಲಿಸಾ ಚಿತ್ರ ನೋಡಿದಾಗ – ೧೫೦೬ರಲ್ಲಿ ಲಿರ್ಯೊನಾರ್ಡ್‌ ಡಾ ವಿಂಚಿ ಮೋನಾಲಿಸಾ ತೈಲ ಚಿತ್ರ ತೆಗೆದ. ಅದು ಜಗತ್ತ್ರಸಿದ್ದವಾಯಿತು. ೧೯೧೧ ರಲ್ಲಿ ಪುನರ್ಜನ್ಮದಲ್ಲಿ ನಂಬಕೆ ಇರುವ ಪೆರೂಗೀ ಎನ್ನುವ ವ್ಯಕ್ತಿ ಈ ಚಿತ್ರ ಕಳವು ಮಾಡಿವ. ಕೊನೆಗೆ ಇವನು ಸಿಕ್ಕಿಬಿದ್ದು ವಿಚಾರಣೆ ನ್ಯಾಯಾಲಯದಲ್ಲಿ ನಡೆದಾಗ ಇವನೊಬ್ಬ ಮನೋರೋಗಿ ಎಂದು ಜೈಲಿನಿಂದ ಬಿಡುಗಡೆ ಮಾಡಿದರು. ಕಳುವಿನ ಉದ್ದೇಶ ಏನಿರಬಹುದು? ದೇಶ ವಿದೇಶದಲ್ಲಿ ಸುದ್ದಿ ಹಬ್ಬಿತ್ತು.)
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...