Home / ಕವನ / ಕವಿತೆ / ಕಾರಡ್ಕ

ಕಾರಡ್ಕ

ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು
ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ.
ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ
ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು
ನೆನಪಿಗೆ ತರುತ್ತದೆ.

ಪಶ್ಚಿಮದಲ್ಲಿ ಹೊಳೆವ ಸಮುದ್ರದ ಅಂಚಿನಂತೆ
ಸ್ಪಷ್ಟವಾಗಿರುತ್ತದೆ. ಬಹುದೂರದ ಆಕಾಶದಲ್ಲಿ ಮಾಯುವ
ಘಟ್ಟಗಳ ಶಿಖರಗಳಂತೆ ಅಸ್ಪಷ್ಟವಾಗಿರುತ್ತವೆ ಕೂಡ.
ಅಂಥ ಸ್ಥಳಗಳಿಂದ ಸಂಜೆ ಕಣಿವೆಗಳಲ್ಲಿ ಇರುಳು
ತುಂಬಿ ಬರುವುದನ್ನು ಕಣ್ಣಾರೆ ಕಾಣಬಹುದು.

ಹೆಮ್ಮರಗಳು ಕಡಿದುರುಳಬಹುದು. ಬೆಂಕಿಯಿಟ್ಪರೆ ಬುಡಗಳು
ಅನೇಕ ದಿನಗಳ ತನಕ ಉರಿದು ಬೂದಿಯಾಗಬಹುದು ಅಥವ
ಕಮರಿ ಹೋಗಬಹುದು. ಬೆಂಕಿ ಹಚ್ಚಿದ ಕಾಡು ಇಡೀ ಗ್ರಾಮದ
ಮೇಲೆ ಕವಿಸುವುದು ಕಂದು ಹೊಗೆ. ಬಿಸಿಲು ಬೀಳುವ ದಿನ
ಆ ಬಣ್ಣಕ್ಕೆ ಬೇರೆ ಹೋಲಿಕೆಯಿಲ್ಲ.

ಒಮ್ಮೆ ವಲಸೆ ಹೋದ ಹುಲಿಗಳು ಮರಳಿ ಬರುವುದಿಲ್ಲ. ಆದರೂ
ಹೆಸರುಗಳು ಉಳಿಯುತ್ತವೆ. ಜಡಿ ಮಳೆಯಲ್ಲಿ ಹಳೆ ರೂಪಕಗಳಂತೆ
ಧ್ವನಿಸುತ್ತವೆ. ಚಳಿಗಾಲದ ಮುಗಿಯದ ರಾತ್ರಿಗಳಲ್ಲಿ
ಅಗ್ಗಿಷ್ಟಿಕೆಯ ಮುಂದೆ ಕತೆಗಳಾಗುತ್ತವೆ. ಬೇಸಿಗೆಯಲ್ಲಿ
ಮಾಗಿದ ಗೇರು ಮರಗಳಿಂದ ಕೆಂಪು ಹಳದಿ ಹಣ್ಣುಗಳಾಗಿ
ತೊನೆಯುತ್ತವೆ -ಅಥವ ಹಾಗೆಂದು ನೆನಪು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...