ಬರುವುದ ಕಂಡೆ ಗಿರಿಧಾರಿ
ನನ್ನ ಮನೆಯ ಮುಂದೆ
ಹಿಗ್ಗಿ ಅಡಗಿದೆನು ಲಜ್ಜೆಯಲಿ
ಮನೆಬಾಗಿಲ ಹಿಂದೆ.
ಹಳದಿಯ ರೇಸಿಮೆ ವಸ್ತ್ರದಲಿ
ಹೊಳೆವ ದಿವ್ಯ ದೇಹ
ಬಾನಿನ ಬಣ್ಣದ ಮುಖದಲ್ಲಿ
ಕಣ್ಣು ಜೋಡಿ ಸೂರ್ಯ.
ಕೇಸರಿ ಬಣ್ಣದ ಸೀರೆಯಲಿ
ಮಿಂಚುತಿರುವ ರಾಧೆ
ಕಾದೇ ಇರುವಳು ಶ್ರೀಹರಿಗೆ
ತಾಳಿ ವಿರಹಬಾಧೆ.
ತಿಳಿಯಲಾರನೇ ಗಿರಿಧಾರಿ
ಒಲವಿನಾಳವನ್ನ?
ತಳ್ಳಿದ ಬಾಗಿಲ ಹಿಂದಕ್ಕೆ
ಸೆಳೆದ ರಾಧೆಯನ್ನ!
************
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.