Home / ಕವನ / ಕವಿತೆ / ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ
ನೆಲೆ ನಿಂತು ಜೀವಗಳ ಕಾದವಳೆ ||

ಕಂದಗಳ ಕಾದವಳೆ
ಜೀವಿನ ಮರದವಳೆ
ಕೇಳಿದ್ದ ಕೊಟ್ಟವಳೆ
ಬೇಡಿದ್ದ ಬಿಟ್ಟವಳೆ ||

ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ
ಬೇವ ತಿಂದು ಬೇವನುಟ್ಟಮ್ಮ
ಸಿಡುಬ ನುಂಗಿ ಕಂದಗಳ ಕಾದವಳೆ
ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ ||

ಜೋಗಿಯ ಪ್ರಸಂಗ

ಮೇಳ:     ತಾಯೆ ನೀ ಯಾರೆ
ಅಂತರ್‍ಗಟ್ಟೆ ಮಾರಿ ||

ಕೇಡು ಬಯಸಿದವಗೆ
ಕೇಡು ನೀಡಿದೆ ಕೊಡುಗೆ
ಒಳಿತು ಬಯಸಿದವಗೆ
ಕೊಟ್ಟೆ ಬಯಸಿದ ಹಾಗೆ ||

ನಿಂತಲ್ಲೆ ನಿಂತವಳೆ
ಕುಂತಲ್ಲೆ ಕುಂತವಳೆ
ಬ್ರಹ್ಮಾಂಡ ತಿಳಿದವಳೆ
ಸಕಲವಾ ನಡೆದವಳೆ

ರೂಪದೊಳು ರೂಪವಿಲ್ಲ
ಕಾಯದೊಳು ಕಾಯವಿಲ್ಲ
ಇಲ್ಲವೆಂದರೆ ಐದೀ
ಐದಿಯೆಂದರೆ ಇಲ್ಲ ||

ಹೆಬ್ಬೂರು ನಿಗರು ಶಿಖೆಯ ಗಣಂಗು ಪ್ರಸಂಗ

ಮೇಳ:    ಮಾಟಗಾತಿ ಮಾಯಗಾತಿ
ಏನೆ ನಿನ್ನ ಕೀರುತಿ ||

ಮಾಯಾವ ಗೆದ್ದವಳೆ
ಗೆಲುವನ್ನೆ ಹೊದ್ದವಳೆ
ಮೀಯ ಬಂದವರಿಗೆಲ್ಲ
ಹಿಂಗು ತಿನ್ನಿಸಿದವಳೆ ||

ಗರಿ ನಿರಿಗೆ ಸೆರಗ ತಾಯಿ
ಸೋಜಿಗವೆ ಮಹಾಮಾಯಿ
ಪಿಂಡಾಂಡ ಬ್ರಹ್ಮಾಂಡವೆಲ್ಲ
ನಿನ್ನ ಸೀರೆಯಾಯಿತಲ್ಲ ||

ತ್ರಿಮೂರ್ತಿಗಳ ತ್ರಿಶೂಲ ಮಾಡಿ
ದಿಕ್ಕು ದೆಸೆನೆಲ್ಲ ಪಟ್ಟಣ ಮಾಡಿ
ಅಂತರದ ನಿನ್ನ ಕಟ್ಟೆಯ ಒಳಗೆ
ಜೀವ ಕಾಯುವ ಕಾಯಕದೊಳಗೆ ||

ಮೇಳ:    ಕಿಲಗುಡವ ಹಸಿಗೂಸ
ನುಂಗೀದನಲ್ಲ
ಕೂಸಾದ ಅಮ್ಮನ್ನ
ನುಂಗೀದನಲ್ಲ ||

ಹೊಟ್ಟೇಲಿಂದ ತಾಯಿ
ಬಿಳಲಾದಳಲ್ಲ
ಬೆಳಬೆಳೆದು ಮಾಯಾವಿ
ಮರವಾದಳಲ್ಲ ||

ಕಂಚಿ ವೀರನ ಪ್ರಸಂಗ

ಮೇಳ:     ಕಂಚಿಯ ವೀರನೊಬ್ಬ
ಅಂತರಗಟ್ಟೆವ್ವನ ಸುದ್ದಿಕೇಳಿ
ಗೆಲ್ಲುತ್ತೇನಂತ ಬಂದಾನೆ
ತಂದನ್ನಾ ತಾನ ||

ವೀರಾನ ವೇಸ ಧರಿಸಿ
ಬರುತಾನೆ ಕಂಚಿ ಕಡಿಯಿಂದ
ತಂದನ್ನಾ ತಾನ ||

ಮೇಳ :    ಅವ್ವಾ ತಾಯೆ
ಅಂತರಗಟ್ಟೆವ್ವ ||

ಕಾಯಿ ಹಣ್ಣು ಮಾಡಿದವಳೆ
ಕಲ್ಲು ನೀರು ಮಾಡಿದವಳೆ
ಬೀಜ ವೃಕ್ಷ ಮಾಡಿದವಳೆ ||

ಮೂರು ಲೋಕ ಬ್ರಹ್ಮಾಂಡವನೆ
ಸೀರೆ ಮಾಡಿ ಸುತ್ತಿ ನೆರಿಗೇಲಿ
ನೆಲದ ಕಂದಗಳ ಕಾದವಳೆ ||

ತಂದನ್ನೊ ತಾನೊ
ತಾನಂದಾನೊ ತಾನೊ ||

ಬಾಳ ಹಸನು ಮಾಡಲು ಕುಂತು
ಕಂದಗಳಿಗೆ ಜೀವ ಹಿಡಿದು ಕುಂತು
ಜಗದ ಜುಟ್ಟ ನಡುಗಿಸಿದವಳೆ
ಬಂದ ಮಕ್ಕಳನ್ನೆಲ್ಲ ಕಾಪಾಡಿದವಳೆ ||

ಹಂಸದ ಮೇಲಿನ ಪದ

ಹುಡುಕಿ ಬಂದಾ ಹಂಸೆ
ಎತ್ತ ಹಾರಿತು ನಂಬಿಸಿ ||

ಸೆಳೆದಿತ್ತು ಕಣ್ಣಮಿಂಚ
ಹಾಕಿ ಪ್ರೀತಿಯ ಹೊಂಚ
ಕರೆದೊಯ್ಯಲು ಮುಗಿಲತ್ತ
ಕಾಣದೆ ಹೋಯಿತೆತ್ತ ||

ಅಮೃತವ ಕುಡಿದ ಹಂಸೆ
ಬಿಟ್ಟು ಮಾನವ ಹಿಂಸೆ
ನಲಿನಲಿದು ನರಕವ
ಮಾಡಿತಲ್ಲ ಸ್ವರ್ಗವ ||

ಏಕತಾರಿಯ ಕಾಯಿ
ಹಣ್ಣಾದಂತೆ ಕಾಯ
ತಂತಿ ನಾದದ ಇಂಪು
ತತ್ವ ಗ್ಯಾನದ ತಂಪು ||

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...