ಒಂದಾನೊಂದು ಕೊಳದಲ್ಲಿ ಶತಬುದ್ಧಿ ಸಹಸ್ರಬುದ್ಧಿ,ಎಂಬ ಎರಡು ಮೀನುಗಳು ಇದ್ದುವು. ಅವಕ್ಕೆ ಸ್ನೇಹಿತನಾಗಿ ಏಕಬುದ್ದಿ ಎಂಬ ಒ೦ದು ಕಪ್ಪೆಯು ಇತ್ತು. ಅವು ಮೂರೂ ಕೊಳದ ತೀರಕ್ಕೆ ಬಂದು ಬಂದು ಅಷ್ಟು ಹೊತ್ತು ಸುಖವಾಗಿ ಮಾತನಾಡುತ್ತ ಸ್ವಲ್ಪ ಹೊತ್ತು ಕುಳಿತಿದ್ದು ಹೋಗುವವು.
ಹೀಗೆ ಇರುತ್ತಿರಲು ಒಂದು ದಿನ ಬೆಸ್ತರು ಬಲೆಗಳನ್ನೂ ಮೀನಿನ ಬುಟ್ಟಿಗಳನ್ನೂ ಹೊತ್ತು ಕೊಂಡು ಸಂಜೆಯ ಸುಮಾರಿನಲ್ಲಿ ಅತ್ತಕಡೆ ಬಂದರು. ಅವರು ಆ ಕೊಳವನ್ನು ಕಂಡು, “ಇಲ್ಲಿ ಮೀನು ಬೇಕಾದಹಾಗೆ ಇದೆ, ನೀರೂ ಕೊಂಚವೇ ಇದೆ. ನಾಳೆ ಬೆಳಿಗ್ಗೆ ಇಲ್ಲಿಗೇ ಬರೋಣ? ಎಂದು ಮಾತನಾಡಿಕೊಂಡು ಹೋದರು.
ಅದನ್ನು ಕೇಳಿ ಮೀನುಗಳು ಇನ್ನೇನು ಗತಿ ಎಂದು. ಹೆದರಿದುವು. ಕಪ್ಪೆಯು ಸ್ನೇಹಿತರನ್ನು ಕರೆದು, “ಬೆಸ್ತರು ಹೇಳಿದುದನ್ನು ಕೇಳಿದಿರಾ?” ಮುಂದೇನು ಮಾಡಬೇಕೆಂದಿರುವಿರಿ? ಓಡಿ ಹೋಗುವುದೇ ಸರಿಎನ್ನಿಸುತ್ತದೆ. ನೀವೆಲ್ಲ ಯೋಚನೆ ಮಾಡಿ ಏನು ಮಾಡಬೇಕೋ ಹೇಳಿ” ಎಂದಿತು. ಸಹಸ್ರ ಬುದ್ಧಿಯು “ಮಿತ್ರ ಹೆದರಬೇಡ, ಮಾತಿಗೆ ಭೀತಿ ಪಟ್ಟರೆ ಹೇಗೆ? ಕೇಳಿಲ್ಲವೇ?
ಖಲರು ಸರ್ಪಗಳು ದುಷ್ಟ ಬುದ್ಧಿಗಳು |
ನೆನೆದ ಕಾರ್ಯಗಳು ನಿಜದಿ ಸಿದ್ಧಿಸವು ||
ಉಳಿದಿಹುದು ಲೋಕ ನೋಡು ಅದರಿಂದ ||೨೧||
ಅದರಿಂದ, ಅವರು ನಾಳೆ ಬರದೆಯೇ ಹೋಗಬಹುದು. ಹಾಗೆ ಬಂದರೂ ನನ್ನ ಬುದ್ಧಿಯ ಬಲದಿಂದ ನಿನ್ನನ್ನು ಕಾಪಾಡುವೆನು” ಎಂದಿತು. ಶತಬುದ್ಧಿಯೂ ಅದನ್ನೇ ಒಪ್ಪಿತು. ಮತ್ತೂ
ಹೇಳಿತು “ಕೇಳಿಲ್ಲವೇ?
ಬುದ್ದಿವಂತಗೆ ಸಿದ್ಧಿಸದ ಕಾರ್ಯಮಿಲ್ಲ |
ಕತ್ತಿಯನ್ನು ಹಿಡದಿದ್ದ ನಂದರೆಲ್ಲ॥
ಚಾಣಕ್ಯ ಬುದ್ಧಿಗೇ ತುತ್ತಾದರಲ್ಲ ॥ ೨೨ ॥
ಅಲ್ಲದೆ,
ಸೂರ್ಯನ ಕಿರಣಗಳಾಡದೆಡೆ। ಗಾಳಿಯು ಸುಳಿಯದೆಡೆ ॥
ಫಲಿಪುದು ಧೀಮಂತರ ಬುದ್ಧಿಯು ತಪ್ಪದೆ ನೋಡುವೊಡೆ ॥ ೨೩ ॥
ಅದರಿಂದ, ಅವರಾಡಿದ ಮಾತಿಗಂಜಿ, ಹಿರಿಯರ ಕಾಲದಿಂದ ಬಂದಿರುವ ಜನ್ಮಭೂಮಿಯನ್ನು ಬಿಟ್ಟು ಹೋಗುವುದೆ? ಕೇಳಿಲ್ಲವೆ? ದಿವ್ಯ ಸುಖವನ್ನು ಕೊಡುವ ಸ್ವರ್ಗಕ್ಕಿಂತ ಜನ್ಮವನ್ನು ಕೊಟ್ಟ ಪಾಳೂರೇ ಮೇಲು ಎಂದು? ಅದರಿಂದ ಎಲ್ಲೂ ಹೋಗಬಾರದು.ನಾನಿರುವಾಗ ನಿನಗೇನು?” ಎಂದಿತು.
ಕಪ್ಪೆಯು ಅದನ್ನು ಒಪ್ಪದೆ “ಅಯ್ಯಾ ನೀವೇನೇ ಹೇಳಿ, ನಾನು ಏಕ ಬುದ್ಧಿಯು. ನನಗೆ ಪಲಾಯನವೇ ಸರಿಯೆಂದು ತೋರುವುದು” ಎಂದು ಹೇಳಿ, ಆ ರಾತ್ರಿಯೇ ಹೆಂಡತಿ ಮಕ್ಕಳನ್ನು ಕರೆದು ಕೊಂಡು ಎಲ್ಲಿಗೋ ಹೋಯಿತು.
ಬೆಳಗಾಗುತ್ತಲೂ ಬೆಸ್ತರು ಬಂದರು. ಶತಬುದ್ಧಿ ಸಹಸ್ರ ಬುದ್ದಿಗಳು ತಮ್ಮ ಬುದ್ಧಿಯನ್ನೆಲ ತೋರಿಸಿದರೂ ಫಲವಾಗಲಿಲ್ಲ: ಕೊನೆಗೆ ಬಲೆಯಲ್ಲಿ ಸಿಕ್ಕಿ ಸತ್ತವು. ಒಬ್ಬನು ಶತಬುದ್ಧಿಯನ್ನು ತಲೆಯ ಮೇಲೆ ಹೊತ್ತುಕೊಂಡನು. ಇನ್ನೊಬ್ಬನು ಸಹಸ್ರಬುದ್ಧಿಯನ್ನು ಕೈಯಲ್ಲಿ ಹಿಡಿದುಕೊಂಡನು. ಅವರು ಹೋಗುತ್ತಿದ್ದಾಗ ಕಪ್ಪೆಯು ಹೆಂಡತಿಯನ್ನು ಕರೆದು ನೋಡು ಎಂದು ತೋರಿಸಿತು. ಅದರಿಂದ ಹಾಗೆ ಹೇಳಿದೆನೆಂದನು. ಅದನ್ನು ಕೇಳಿ ಸುವರ್ಣಸಿದ್ಧಿಯು “ನಿನ್ನ ಮಾತನ್ನು ಒಪ್ಪಿಕೊಂಡು ಬುದ್ಧಿಯು ಮಾತ್ರವೇ ಸಾಲದು” ಎಂದರೂ ಸ್ನೇಹಿತರ ಮಾತನ್ನಾದರೂ ಕೇಳಬೇಕು. ನೀನು ಲೋಭದಿಂದ ನನ್ನ ಮಾತನ್ನು ಕೇಳದೆ ಅಹಂಕಾರದಿಂದ ಕೆಟ್ಟೆ. ಕೇಳಿಲ್ಲವೆ?
ಬೇಡೆಂದರೆ ಬಿಡದೇ ಹಾಡಿದ ಮಾವನಿಗೆ |
ಬೀಸುವ ಕಲ್ಲಿನ ಸರವಾಯಿತು ಕೊರಳೊಳಗೆ ॥ ೨೪ ॥
ಚಕ್ರಧರನು “ಅದೇನು?” ಎಂದು ಕೇಳಿದನು. ಸುವರ್ಣ ಸಿದ್ಧಿಯು ಹೇಳಿದನು.
*****
ಹಾಡುವ ಕತ್ತೆಯ ಕಥೆ ಓದಿ