Home / ಕವನ / ಕವಿತೆ / ಕಾವ್ಯ ಸ್ರೋತ

ಕಾವ್ಯ ಸ್ರೋತ

ಒಣಗುತಿದೆ ನನ್ನ ಪಂಚೆ,
ಒಣಗುತಿದೆ ನನ್ನ ಪಂಚೆ
ಎಲ್ಲಿ ತೊಯ್ಯಿಸಲಿ ಈ ಪಂಚೆ,
ಎಲ್ಲಿ ಒದ್ದಿ ಮಾಡಲಿ ಈ ಪಂಚೆ
ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು
ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ
ನಿಮ್ಮ ಕಣ್ಣೀರೂ ಬತ್ತಿಹುದು
ಸಮೀಪಿಸುತಿದೆ ನನ್ನ ಜೀವನದ ಸಂಜೆ
ಒಣಗುತಿದೆ ನನ್ನ ಪಂಚೆ

ಒಣಗಿದ ಪಂಚೆಯುಟ್ಟು
ಒಣಗಿದ ಕವಿತೆಗಳ ಬರೆಯುತಿರುವೆ
ಗೀಚುತಿರುವೆ,
ಗೀಚಿ ಬರೆಯುತಿರುವೆ
ಕವಿತೆಯಾಗಬಹುದೆಂಬಾಸೆಯಿಂದ
ಎಲ್ಲವೂ ಒಣಗಿವೆ, ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ
ನಿಟ್ಟುಸಿರಿನ ಕಾವಿನಿಂದ
ಇದು ಎಂಥ ಬರ, ಒಣಗಿವೆ ಎಲ್ಲಾ

ದೇವರೇ ಮಳೆಯಾಗಲಿ
ಮರ ಗಿಡ ಬಳ್ಳಿಗಳು
ಬಯಲೋ ಬಯಲು
ಹುಯಿಲೋ ಹುಯಿಲು

ಇದನು ವರ್‍ಣಿಸಿ ಕವಿ ಅನ್ನಿಸಿಕೊಳ್ಳಲು ನಾಚಿಕೆಯಾಗುತಿದೆ
ಯಾರಿಗಿಹುದು ನನ್ನ ಒಣಗಿದ ಪಂಚೆಯ ಚಿಂತೆ
ಎಲ್ಲರಿಗೂ ಅವರವರ ದಿನದ ಗಂಜಿಯ ಚಿಂತೆ
ದೇವರೇ, ಮಳೆಯಾಗಲಿ ಬೆಳೆಯಾಗಲಿ, ಎಲ್ಲ ಹಸಿರಾಗಲಿ
ಜಗದ ನೋಟ ಕಣ್ಣಿಗೊಂದು ಹಬ್ಬವಾಗಲಿ,
ನೋಡಿ ವರ್‍ಣಿಸಿದುದು ಕಬ್ಬವಾಗಲಿ!
ಆದರೆಂದು ತೀರುವದೊ ಈ ಬರ,
ಎಂದು ಚಿಗುರುವದೊ ನಾ ನೆಟ್ಟ ಮರ…

ಮಳೆಯಾದಾಗ ತೊಯ್ಯಿಸಲು ಈ ಪಂಚೆ
ನಾನೇ ಇರದಿರಬಹುದು
ಬಾಳ ಸಂಜೆಯ ದಾಟಿ ದೂರ ಸಾಗಿರಬಹುದು
ಆದರೂ ಪ್ರಾರ್‍ಥಿಸುವೆ ಮಳೆಯಾಗಲೆಂದು

ನಾನಿದ್ದರೂ ಇರದಿದ್ದರೂ ನಾ
ಬಿಟ್ಟು ಹೋಗುವೆ ನಾನುಟ್ಟ ಪಂಚೆ
ನಾನುಟ್ಟ ಪಂಚೆಯೆಂದು ಅಲಕ್ಷಿಸದಿರಿ,
ಇದು ಕುಮಾರವ್ಯಾಸನುಟ್ಟ ಪಂಚೆ-
ಅವನು ನನಗೆ ಕೊಟ್ಟ ಪಂಚೆ;
‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯ ಪಂಚೆ’
ಉಟ್ಟು ನೋಡಿರಿ ಮಳೆಯಾದಾಗ –
ನಾ ಹೋಗುವೆ, ಮತ್ತೆ ಬರುವೆ
ಮಳೆ ನೀರಿನ ಹನಿಗಳಾಗಿ ಬೀಳುವೆ –
ಬಿದ್ದು ನಿಮ್ಮ ಬರವ ತೀರಿಸುವೆ
ನಾ ನೆಟ್ಟ ಮರದ ಹೂವಾಗುವೆ.
ಆದರೆ ಆ ಹೂವ ಬಣ್ಣಿಸಲು ಮರೆಯದಿರಿ
ನಿಮ್ಮ ವರ್‍ಣನೆಯಲಿ ನಾನೊಂದು ಕವನವಾಗುವೆ
ಕವಿಯಾಗದಿದ್ದರೂ ಚಿಂತೆಯಿಲ್ಲ
ನೀವು ಬರೆದ ಕವನವಾದರೂ ಆಗುವೆ
*****

ಕನ್ನಡದ ದಿಗ್ಗಜ ಕವಿ ಕುಮಾರವ್ಯಾಸ ಮಹಾಭಾರತವನ್ನು ರಚಿಸುವ ಮುನ್ನ ಕೆರೆಯಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನು ಉಟ್ಟು ಪಂಚೆ ಆರಿಹೋಗುವ ತನಕ ಗದಗಿನ ವೀರನಾರಾಯಣ ಗುಡಿಯಲ್ಲಿ ಕುಳಿತುಕೊಂಡು ರಚಿಸುತ್ತಿದ್ದನೆಂದು ಪ್ರತೀತಿ. ಇದನ್ನೇ ಕಾವ್ಯ ಸ್ರೋತದ ಸ್ಫೂರ್‍ತಿಯ ಸಂಕೇತವನ್ನಾಗಿಟ್ಟುಕೊಂಡು ರಚಿಸಿದ ಕವನ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...