Home / ಕವನ / ಕವಿತೆ / ಕಾವ್ಯ ಸ್ರೋತ

ಕಾವ್ಯ ಸ್ರೋತ

ಒಣಗುತಿದೆ ನನ್ನ ಪಂಚೆ,
ಒಣಗುತಿದೆ ನನ್ನ ಪಂಚೆ
ಎಲ್ಲಿ ತೊಯ್ಯಿಸಲಿ ಈ ಪಂಚೆ,
ಎಲ್ಲಿ ಒದ್ದಿ ಮಾಡಲಿ ಈ ಪಂಚೆ
ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು
ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ
ನಿಮ್ಮ ಕಣ್ಣೀರೂ ಬತ್ತಿಹುದು
ಸಮೀಪಿಸುತಿದೆ ನನ್ನ ಜೀವನದ ಸಂಜೆ
ಒಣಗುತಿದೆ ನನ್ನ ಪಂಚೆ

ಒಣಗಿದ ಪಂಚೆಯುಟ್ಟು
ಒಣಗಿದ ಕವಿತೆಗಳ ಬರೆಯುತಿರುವೆ
ಗೀಚುತಿರುವೆ,
ಗೀಚಿ ಬರೆಯುತಿರುವೆ
ಕವಿತೆಯಾಗಬಹುದೆಂಬಾಸೆಯಿಂದ
ಎಲ್ಲವೂ ಒಣಗಿವೆ, ಸಂಸಾರದ ತಾಪದ ಬಿಸಿಯಿಂದ
ನಿಮ್ಮ ಉದಾಸೀನತೆಯ
ನಿಟ್ಟುಸಿರಿನ ಕಾವಿನಿಂದ
ಇದು ಎಂಥ ಬರ, ಒಣಗಿವೆ ಎಲ್ಲಾ

ದೇವರೇ ಮಳೆಯಾಗಲಿ
ಮರ ಗಿಡ ಬಳ್ಳಿಗಳು
ಬಯಲೋ ಬಯಲು
ಹುಯಿಲೋ ಹುಯಿಲು

ಇದನು ವರ್‍ಣಿಸಿ ಕವಿ ಅನ್ನಿಸಿಕೊಳ್ಳಲು ನಾಚಿಕೆಯಾಗುತಿದೆ
ಯಾರಿಗಿಹುದು ನನ್ನ ಒಣಗಿದ ಪಂಚೆಯ ಚಿಂತೆ
ಎಲ್ಲರಿಗೂ ಅವರವರ ದಿನದ ಗಂಜಿಯ ಚಿಂತೆ
ದೇವರೇ, ಮಳೆಯಾಗಲಿ ಬೆಳೆಯಾಗಲಿ, ಎಲ್ಲ ಹಸಿರಾಗಲಿ
ಜಗದ ನೋಟ ಕಣ್ಣಿಗೊಂದು ಹಬ್ಬವಾಗಲಿ,
ನೋಡಿ ವರ್‍ಣಿಸಿದುದು ಕಬ್ಬವಾಗಲಿ!
ಆದರೆಂದು ತೀರುವದೊ ಈ ಬರ,
ಎಂದು ಚಿಗುರುವದೊ ನಾ ನೆಟ್ಟ ಮರ…

ಮಳೆಯಾದಾಗ ತೊಯ್ಯಿಸಲು ಈ ಪಂಚೆ
ನಾನೇ ಇರದಿರಬಹುದು
ಬಾಳ ಸಂಜೆಯ ದಾಟಿ ದೂರ ಸಾಗಿರಬಹುದು
ಆದರೂ ಪ್ರಾರ್‍ಥಿಸುವೆ ಮಳೆಯಾಗಲೆಂದು

ನಾನಿದ್ದರೂ ಇರದಿದ್ದರೂ ನಾ
ಬಿಟ್ಟು ಹೋಗುವೆ ನಾನುಟ್ಟ ಪಂಚೆ
ನಾನುಟ್ಟ ಪಂಚೆಯೆಂದು ಅಲಕ್ಷಿಸದಿರಿ,
ಇದು ಕುಮಾರವ್ಯಾಸನುಟ್ಟ ಪಂಚೆ-
ಅವನು ನನಗೆ ಕೊಟ್ಟ ಪಂಚೆ;
‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆಯ ಪಂಚೆ’
ಉಟ್ಟು ನೋಡಿರಿ ಮಳೆಯಾದಾಗ –
ನಾ ಹೋಗುವೆ, ಮತ್ತೆ ಬರುವೆ
ಮಳೆ ನೀರಿನ ಹನಿಗಳಾಗಿ ಬೀಳುವೆ –
ಬಿದ್ದು ನಿಮ್ಮ ಬರವ ತೀರಿಸುವೆ
ನಾ ನೆಟ್ಟ ಮರದ ಹೂವಾಗುವೆ.
ಆದರೆ ಆ ಹೂವ ಬಣ್ಣಿಸಲು ಮರೆಯದಿರಿ
ನಿಮ್ಮ ವರ್‍ಣನೆಯಲಿ ನಾನೊಂದು ಕವನವಾಗುವೆ
ಕವಿಯಾಗದಿದ್ದರೂ ಚಿಂತೆಯಿಲ್ಲ
ನೀವು ಬರೆದ ಕವನವಾದರೂ ಆಗುವೆ
*****

ಕನ್ನಡದ ದಿಗ್ಗಜ ಕವಿ ಕುಮಾರವ್ಯಾಸ ಮಹಾಭಾರತವನ್ನು ರಚಿಸುವ ಮುನ್ನ ಕೆರೆಯಲ್ಲಿ ಮಿಂದು, ಹಾಗೆಯೇ ಒದ್ದೆ ಪಂಚೆಯನ್ನು ಉಟ್ಟು ಪಂಚೆ ಆರಿಹೋಗುವ ತನಕ ಗದಗಿನ ವೀರನಾರಾಯಣ ಗುಡಿಯಲ್ಲಿ ಕುಳಿತುಕೊಂಡು ರಚಿಸುತ್ತಿದ್ದನೆಂದು ಪ್ರತೀತಿ. ಇದನ್ನೇ ಕಾವ್ಯ ಸ್ರೋತದ ಸ್ಫೂರ್‍ತಿಯ ಸಂಕೇತವನ್ನಾಗಿಟ್ಟುಕೊಂಡು ರಚಿಸಿದ ಕವನ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...