
೧
ಕಂಡ ವಸ್ತುವನುಳಿದು ಕಾಣದುದ ಬಯಸುವರೆ?
ಕೆಂಡವನು ಕರ್ಪೂರ ಬಯಸಿದಂತೆ!
ಭಂಡರಿಗೆ ಬಲು ಭಾಗ್ಯ ಬೇಡೆನಲು ಬರುವುದುರೆ
ಹಿಂಡನಗಲಿದ ಜಿಂಕೆ ಬೆದರುವಂತೆ!
೨
ಇಂದಿನೀ ಬಾಳೆಲ್ಲ ನರಕವಾದರು ಸರಿಯೆ,
ಮನುಜನಂತೆಯೆ ಬಾಳು ತಾಳ್ಮೆಯಿಂದ
ಮಂದಿಯಾಡುವ ಮಾತು ಹೀನವಿರಲೆದೆಬಿರಿಯೆ
ನಿನಗು ದಿನವುಂಟೆಂಬ ಧೈರ್ಯದಿಂದ
೩
ನಿನ್ನ ನಿರ್ಮಲ ಹೃದಯ ಜ್ಯೋತಿಯನು ಬೆಳಗಿಸುತೆ
ನೈರ್ಮಲ್ಯದಿಂ ಬದುಕಿದೆಂಬುದರಿತು!
ನಿನ್ನ ನೀತಿಯೆ ನಿನಗೆ ಬಾಳ ಕೈ ಕಿರು ಹಣತೆ –
ಧರ್ಮವನು ದೂಡದಿರು ಮೈಯ್ಯಮರೆತು
೪
ದುರ್ಜನರ ಗುರುತಿಸಲು ಕರಮುಗಿದು ಶಿರಬಾಗು
ಸಜ್ಜನರು ಸಜ್ಜನರೆ ಹಾಲು ಹಾಲೇ
ವರ್ಜವಾಗಿರಲಾಸೆ ಸಂತಸದಿ ತಲೆದೂಗು
ಕಜ್ಜ ಕೈಲಾಸದಲಿ ಜಯದ ಮಾಲೆ
***
ಇದು ಬಾಳ ಪಲ್ಲವಿಯು
ಇದು ಯಶೋ ದುಂದುಭಿಯು
*****
ಬೆಂಗಳೂರು : ೧೯೪೩
















