Home / ಕವನ / ಕವಿತೆ / ಅವ್ವ

ಅವ್ವ

ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ
ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು
ಪೋಲಿಸನ ಕೆಲಸ ಅವನದಾಗಿದ್ದರೆ
ಇವಳ ಕೆಲಸ ಅದೇ ಝೆಂಡಾ ಹಿಡಿದು
ಊರತುಂಬೆಲ್ಲ ಪ್ರಭಾತಪೇರಿ ಹಾಕುತ
ಗಾಂಧಿ ಹೆಸರು ಹಿಡಿದು ಕೂಗುವುದು
ಅದೆಷ್ಟು ಧೈರ್ಯ ಅದೆಷ್ಟು ಶಕ್ತಿ ಅವಳಿಗೆ
ಒಬ್ಬೊಬ್ಬರನು ಎತ್ತಿ ಚಚ್ಚಿ ಬಿಡುವಷ್ಟು-
ಸುಳ್ಳು ಮೋಸ ಏನೇನೂ ನಡೆಯುವುದಿಲ್ಲ
ಎಲ್ಲವೂ ನೇರ ಕಡಾಖಂಡಿತ
ಹೀಗೆಂದು ಒಮ್ಮೊಮ್ಮೆ
ಜಗಳಗಂಟೆಯೂ ಅನಿಸಿಕೊಂಡಿದ್ದಾಳೆ

ಅವಳಪ್ಪ ಉದಾರಿ; ನಮ್ಮಪ್ಪ ಜಿಪುಣ ಸರಳವಾದಿ
ಉಂಡುಟ್ಟು ತಿಂದು ತೇಗಿದ ಮನೆಯಿಂದ
ಬಂಗಾರಕವಚ ತೊಟ್ಟು ಬಂದವಳಿಗೆ
ಇಲ್ಲಿ ಎಲ್ಲದಕೂ ಲೆಕ್ಖಾಚಾರ, ಸೀದಾ ಸಾದಾ
ವಯಸ್ಸಿನ ಶಿಕ್ಷಣದ ಅಂತರ ಇದ್ದ ಅವ್ವ
ಆಗಾಗ ಅಧಿಕಾರಿ ಗಂಡನೊಂದಿಗೆ
ಮಾತುಬಿಟ್ಟು ಮೌನಿ
ಮಾತನಾಡಿದ್ದು ಪುಸ್ತಕಗಳೊಂದಿಗೆ
ಕಲೆತದ್ದು ನಯ ನಾಜೂಕು ಶಿಸ್ತು

ನಿಂತನಿಂತಲ್ಲೇ ಬಟ್ಟೆಗಳ ಸುಕ್ಕು
ಒದ್ದೆ ಕೈಯಲೇ ಬಿಡಿಸುತ
ಇಸ್ತ್ರಿ ಹೊಡೆದಂತೆ ತೀಡಿ ತಿದ್ದಿ
ಯುನಿಫಾರ್ಮ್ ತೊಡಿಸಿ
ಬಿಗಿಯಾಗಿ ಜಡೆಹೆಣೆದು ಶಾಲೆಗೆ ಕಳಿಸುತ-
ಪಾಠ ಪುಸ್ತಕಗಳೊಂದಿಗೆ ಒಂದಾಗಿ ಓದಿ ಚರ್ಚಿಸುತ

ಈಗ ಸಾಹಿತಿಗಳ ರಾಜಕಾರಣಿಗಳ
ಸಮಾನಾಂತರ ಚರ್ಚಿಸುವಳು, ವಾದಿಸುವಳು.
ಅವರಪ್ಪ ನಮ್ಮಪ್ಪ ಇಬ್ಬರೂ
ಆಗಲೇ ದೇವರಪಾದ ಸೇರಿದ್ದಾರೆ
ಬ್ರಿಟೀಷರ ಸೇವೆಮಾಡಿ ಅವರಿಂದ
‘ಬಹದ್ದೂರ’ ಅನಿಸಿಕೊಂಡು ಆತ ಹೋದ
ಸರಕಾರದ ಸೇವೆಮಾಡಿ ಇವರಿಂದ
‘ದಕ್ಷ‌ಅಧಿಕಾರಿ’ ಎಂದೆನಿಸಿಕೊಂಡು ಈತ ಹೋದ
ನನಗೂ ಇನ್ನೊಂದಿಷ್ಟು ಓದಿಸಿದ್ದರೆ
ಸಹಕರಿಸಿದ್ದರೆ ಇವರಿಬ್ಬರನು ಮೀರಿಸುತ್ತಿದ್ದೆ
ಎನುತ ಒಮ್ಮೊಮ್ಮೆ ಅವರನು ಬಯ್ಯುತ

ನಮಗೆಲ್ಲ ಸಮಯಪ್ರಜ್ಞೆ ಸಮಾನತೆ
ಬಗೆಗೆ ಎಚ್ಚರಿಸಿ
ಬೆನ್ನುತಟ್ಟಿ ಆಶೀರ್ವದಿಸುವಳು
ಆಗಾಗ ಮಕ್ಕಳೆಲ್ಲರ ಸಾಧನೆಗೆ
ಕಣ್ಣೀರು ತುಂಬಿಕೊಂಡು
ಭಾವಪರವಶಳಾಗುತ್ತಾಳೆ.

ಆದರೂ ಅವಳೊಳಗೆ ಬೇರುಬಿಟ್ಟ
ಗಾಂಧಿತತ್ವ
ಪೋಲಿಸನ ದರ್ಪ
ಅಧಿಕಾರಿಯ ಮಾತುಗಳು
ಮತ್ತೆ ಮತ್ತೆ ಚಿಗಿಯುತ್ತವೆ
ಸಮಯ ಪ್ರಜ್ಞೆಗೆ ತಾನೂ
ಅವನ್ನೆಲ್ಲಾ ಬಳಸಿಕೊಳ್ಳುತ
ಒಮ್ಮೊಮ್ಮೆ ಗುಡುಗು ಸಿಡಿಲು ಮಳೆಯಾಗಿ ಬಿಡುತ್ತಾಳೆ.

ವಾತ್ಸಲ್ಯ
ಉಡಿತುಂಬ ತುಂಬಿಕಳಿಸಿದ
ನನ್ನವ್ವಳ ಆಶೀರ್ವಾದ
ಹಾಸಿದ್ದೇನೆ ಹೊದ್ದಿದ್ದೇನೆ
ಬಿತ್ತಿ ಬೆಳೆದುಕೊಂಡು
ತೊನೆದಾಡುತ್ತಿದ್ದೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...