Home / ಕವನ / ಕವಿತೆ / ಅವ್ವ

ಅವ್ವ

ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ
ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು
ಪೋಲಿಸನ ಕೆಲಸ ಅವನದಾಗಿದ್ದರೆ
ಇವಳ ಕೆಲಸ ಅದೇ ಝೆಂಡಾ ಹಿಡಿದು
ಊರತುಂಬೆಲ್ಲ ಪ್ರಭಾತಪೇರಿ ಹಾಕುತ
ಗಾಂಧಿ ಹೆಸರು ಹಿಡಿದು ಕೂಗುವುದು
ಅದೆಷ್ಟು ಧೈರ್ಯ ಅದೆಷ್ಟು ಶಕ್ತಿ ಅವಳಿಗೆ
ಒಬ್ಬೊಬ್ಬರನು ಎತ್ತಿ ಚಚ್ಚಿ ಬಿಡುವಷ್ಟು-
ಸುಳ್ಳು ಮೋಸ ಏನೇನೂ ನಡೆಯುವುದಿಲ್ಲ
ಎಲ್ಲವೂ ನೇರ ಕಡಾಖಂಡಿತ
ಹೀಗೆಂದು ಒಮ್ಮೊಮ್ಮೆ
ಜಗಳಗಂಟೆಯೂ ಅನಿಸಿಕೊಂಡಿದ್ದಾಳೆ

ಅವಳಪ್ಪ ಉದಾರಿ; ನಮ್ಮಪ್ಪ ಜಿಪುಣ ಸರಳವಾದಿ
ಉಂಡುಟ್ಟು ತಿಂದು ತೇಗಿದ ಮನೆಯಿಂದ
ಬಂಗಾರಕವಚ ತೊಟ್ಟು ಬಂದವಳಿಗೆ
ಇಲ್ಲಿ ಎಲ್ಲದಕೂ ಲೆಕ್ಖಾಚಾರ, ಸೀದಾ ಸಾದಾ
ವಯಸ್ಸಿನ ಶಿಕ್ಷಣದ ಅಂತರ ಇದ್ದ ಅವ್ವ
ಆಗಾಗ ಅಧಿಕಾರಿ ಗಂಡನೊಂದಿಗೆ
ಮಾತುಬಿಟ್ಟು ಮೌನಿ
ಮಾತನಾಡಿದ್ದು ಪುಸ್ತಕಗಳೊಂದಿಗೆ
ಕಲೆತದ್ದು ನಯ ನಾಜೂಕು ಶಿಸ್ತು

ನಿಂತನಿಂತಲ್ಲೇ ಬಟ್ಟೆಗಳ ಸುಕ್ಕು
ಒದ್ದೆ ಕೈಯಲೇ ಬಿಡಿಸುತ
ಇಸ್ತ್ರಿ ಹೊಡೆದಂತೆ ತೀಡಿ ತಿದ್ದಿ
ಯುನಿಫಾರ್ಮ್ ತೊಡಿಸಿ
ಬಿಗಿಯಾಗಿ ಜಡೆಹೆಣೆದು ಶಾಲೆಗೆ ಕಳಿಸುತ-
ಪಾಠ ಪುಸ್ತಕಗಳೊಂದಿಗೆ ಒಂದಾಗಿ ಓದಿ ಚರ್ಚಿಸುತ

ಈಗ ಸಾಹಿತಿಗಳ ರಾಜಕಾರಣಿಗಳ
ಸಮಾನಾಂತರ ಚರ್ಚಿಸುವಳು, ವಾದಿಸುವಳು.
ಅವರಪ್ಪ ನಮ್ಮಪ್ಪ ಇಬ್ಬರೂ
ಆಗಲೇ ದೇವರಪಾದ ಸೇರಿದ್ದಾರೆ
ಬ್ರಿಟೀಷರ ಸೇವೆಮಾಡಿ ಅವರಿಂದ
‘ಬಹದ್ದೂರ’ ಅನಿಸಿಕೊಂಡು ಆತ ಹೋದ
ಸರಕಾರದ ಸೇವೆಮಾಡಿ ಇವರಿಂದ
‘ದಕ್ಷ‌ಅಧಿಕಾರಿ’ ಎಂದೆನಿಸಿಕೊಂಡು ಈತ ಹೋದ
ನನಗೂ ಇನ್ನೊಂದಿಷ್ಟು ಓದಿಸಿದ್ದರೆ
ಸಹಕರಿಸಿದ್ದರೆ ಇವರಿಬ್ಬರನು ಮೀರಿಸುತ್ತಿದ್ದೆ
ಎನುತ ಒಮ್ಮೊಮ್ಮೆ ಅವರನು ಬಯ್ಯುತ

ನಮಗೆಲ್ಲ ಸಮಯಪ್ರಜ್ಞೆ ಸಮಾನತೆ
ಬಗೆಗೆ ಎಚ್ಚರಿಸಿ
ಬೆನ್ನುತಟ್ಟಿ ಆಶೀರ್ವದಿಸುವಳು
ಆಗಾಗ ಮಕ್ಕಳೆಲ್ಲರ ಸಾಧನೆಗೆ
ಕಣ್ಣೀರು ತುಂಬಿಕೊಂಡು
ಭಾವಪರವಶಳಾಗುತ್ತಾಳೆ.

ಆದರೂ ಅವಳೊಳಗೆ ಬೇರುಬಿಟ್ಟ
ಗಾಂಧಿತತ್ವ
ಪೋಲಿಸನ ದರ್ಪ
ಅಧಿಕಾರಿಯ ಮಾತುಗಳು
ಮತ್ತೆ ಮತ್ತೆ ಚಿಗಿಯುತ್ತವೆ
ಸಮಯ ಪ್ರಜ್ಞೆಗೆ ತಾನೂ
ಅವನ್ನೆಲ್ಲಾ ಬಳಸಿಕೊಳ್ಳುತ
ಒಮ್ಮೊಮ್ಮೆ ಗುಡುಗು ಸಿಡಿಲು ಮಳೆಯಾಗಿ ಬಿಡುತ್ತಾಳೆ.

ವಾತ್ಸಲ್ಯ
ಉಡಿತುಂಬ ತುಂಬಿಕಳಿಸಿದ
ನನ್ನವ್ವಳ ಆಶೀರ್ವಾದ
ಹಾಸಿದ್ದೇನೆ ಹೊದ್ದಿದ್ದೇನೆ
ಬಿತ್ತಿ ಬೆಳೆದುಕೊಂಡು
ತೊನೆದಾಡುತ್ತಿದ್ದೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...