Home / ಕವನ / ಕವಿತೆ / ಅವ್ವ

ಅವ್ವ

ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ
ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು
ಪೋಲಿಸನ ಕೆಲಸ ಅವನದಾಗಿದ್ದರೆ
ಇವಳ ಕೆಲಸ ಅದೇ ಝೆಂಡಾ ಹಿಡಿದು
ಊರತುಂಬೆಲ್ಲ ಪ್ರಭಾತಪೇರಿ ಹಾಕುತ
ಗಾಂಧಿ ಹೆಸರು ಹಿಡಿದು ಕೂಗುವುದು
ಅದೆಷ್ಟು ಧೈರ್ಯ ಅದೆಷ್ಟು ಶಕ್ತಿ ಅವಳಿಗೆ
ಒಬ್ಬೊಬ್ಬರನು ಎತ್ತಿ ಚಚ್ಚಿ ಬಿಡುವಷ್ಟು-
ಸುಳ್ಳು ಮೋಸ ಏನೇನೂ ನಡೆಯುವುದಿಲ್ಲ
ಎಲ್ಲವೂ ನೇರ ಕಡಾಖಂಡಿತ
ಹೀಗೆಂದು ಒಮ್ಮೊಮ್ಮೆ
ಜಗಳಗಂಟೆಯೂ ಅನಿಸಿಕೊಂಡಿದ್ದಾಳೆ

ಅವಳಪ್ಪ ಉದಾರಿ; ನಮ್ಮಪ್ಪ ಜಿಪುಣ ಸರಳವಾದಿ
ಉಂಡುಟ್ಟು ತಿಂದು ತೇಗಿದ ಮನೆಯಿಂದ
ಬಂಗಾರಕವಚ ತೊಟ್ಟು ಬಂದವಳಿಗೆ
ಇಲ್ಲಿ ಎಲ್ಲದಕೂ ಲೆಕ್ಖಾಚಾರ, ಸೀದಾ ಸಾದಾ
ವಯಸ್ಸಿನ ಶಿಕ್ಷಣದ ಅಂತರ ಇದ್ದ ಅವ್ವ
ಆಗಾಗ ಅಧಿಕಾರಿ ಗಂಡನೊಂದಿಗೆ
ಮಾತುಬಿಟ್ಟು ಮೌನಿ
ಮಾತನಾಡಿದ್ದು ಪುಸ್ತಕಗಳೊಂದಿಗೆ
ಕಲೆತದ್ದು ನಯ ನಾಜೂಕು ಶಿಸ್ತು

ನಿಂತನಿಂತಲ್ಲೇ ಬಟ್ಟೆಗಳ ಸುಕ್ಕು
ಒದ್ದೆ ಕೈಯಲೇ ಬಿಡಿಸುತ
ಇಸ್ತ್ರಿ ಹೊಡೆದಂತೆ ತೀಡಿ ತಿದ್ದಿ
ಯುನಿಫಾರ್ಮ್ ತೊಡಿಸಿ
ಬಿಗಿಯಾಗಿ ಜಡೆಹೆಣೆದು ಶಾಲೆಗೆ ಕಳಿಸುತ-
ಪಾಠ ಪುಸ್ತಕಗಳೊಂದಿಗೆ ಒಂದಾಗಿ ಓದಿ ಚರ್ಚಿಸುತ

ಈಗ ಸಾಹಿತಿಗಳ ರಾಜಕಾರಣಿಗಳ
ಸಮಾನಾಂತರ ಚರ್ಚಿಸುವಳು, ವಾದಿಸುವಳು.
ಅವರಪ್ಪ ನಮ್ಮಪ್ಪ ಇಬ್ಬರೂ
ಆಗಲೇ ದೇವರಪಾದ ಸೇರಿದ್ದಾರೆ
ಬ್ರಿಟೀಷರ ಸೇವೆಮಾಡಿ ಅವರಿಂದ
‘ಬಹದ್ದೂರ’ ಅನಿಸಿಕೊಂಡು ಆತ ಹೋದ
ಸರಕಾರದ ಸೇವೆಮಾಡಿ ಇವರಿಂದ
‘ದಕ್ಷ‌ಅಧಿಕಾರಿ’ ಎಂದೆನಿಸಿಕೊಂಡು ಈತ ಹೋದ
ನನಗೂ ಇನ್ನೊಂದಿಷ್ಟು ಓದಿಸಿದ್ದರೆ
ಸಹಕರಿಸಿದ್ದರೆ ಇವರಿಬ್ಬರನು ಮೀರಿಸುತ್ತಿದ್ದೆ
ಎನುತ ಒಮ್ಮೊಮ್ಮೆ ಅವರನು ಬಯ್ಯುತ

ನಮಗೆಲ್ಲ ಸಮಯಪ್ರಜ್ಞೆ ಸಮಾನತೆ
ಬಗೆಗೆ ಎಚ್ಚರಿಸಿ
ಬೆನ್ನುತಟ್ಟಿ ಆಶೀರ್ವದಿಸುವಳು
ಆಗಾಗ ಮಕ್ಕಳೆಲ್ಲರ ಸಾಧನೆಗೆ
ಕಣ್ಣೀರು ತುಂಬಿಕೊಂಡು
ಭಾವಪರವಶಳಾಗುತ್ತಾಳೆ.

ಆದರೂ ಅವಳೊಳಗೆ ಬೇರುಬಿಟ್ಟ
ಗಾಂಧಿತತ್ವ
ಪೋಲಿಸನ ದರ್ಪ
ಅಧಿಕಾರಿಯ ಮಾತುಗಳು
ಮತ್ತೆ ಮತ್ತೆ ಚಿಗಿಯುತ್ತವೆ
ಸಮಯ ಪ್ರಜ್ಞೆಗೆ ತಾನೂ
ಅವನ್ನೆಲ್ಲಾ ಬಳಸಿಕೊಳ್ಳುತ
ಒಮ್ಮೊಮ್ಮೆ ಗುಡುಗು ಸಿಡಿಲು ಮಳೆಯಾಗಿ ಬಿಡುತ್ತಾಳೆ.

ವಾತ್ಸಲ್ಯ
ಉಡಿತುಂಬ ತುಂಬಿಕಳಿಸಿದ
ನನ್ನವ್ವಳ ಆಶೀರ್ವಾದ
ಹಾಸಿದ್ದೇನೆ ಹೊದ್ದಿದ್ದೇನೆ
ಬಿತ್ತಿ ಬೆಳೆದುಕೊಂಡು
ತೊನೆದಾಡುತ್ತಿದ್ದೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...