ಪೀಠಿಕೆ.
ಭಾ.ಷ.
ಹರಿವ ನದಿಯೊಳು ಮಿಂದ ಮಾತ್ರಕೆ |
ಹರಿಯುವದೆ ದುಷ್ಕೃತ್ಯದೋಷವು? |
ಹರಿಯು ಕಾಂಬನೆ ಬರಿಯ ಜಪತಪ ಹೋಮಹವನಗಳಿ೦ ||
ಉರುತರದ ಶುದ್ಧಾಂತರಂಗದಿ |
ಸ್ಮರಿಸಿದಾಕ್ಷಣ ನಾಮಮಾತ್ರವ |
ಹರಿಯು ಬರುವನು ಬೇಡು ಭಕ್ತನೆ ವರವನೆಂದೆನುತ ||೧||
ಗುರುವು ನುಡಿದೀ ನುಡಿಯನಾಲಿಸಿ |
ತರಳನೊಬ್ಬನು ಬಾಲಭಾವದಿ |
ಗುರುವರೇಣ್ಯರೆ, ನಿಮ್ಮ ಮಾತಿನ ಭಾವವೇನಿಹುದೋ ||
ಅರಿಯೆನೈ ನೀಂ ಪೇಳಿರೆಲ್ಲವ |
ಹರಿಯ ಕಾಣುವದೆಂದರೇನದು? |
ವರವನೀಯುವನಾತನೆಂತೀ ಕಲಿಯ ಕಾಲದಲಿ ||೨||
ಕಂದ, ನಿನ್ನಯ ಮಾತಿನಿಂದಾ |
ನಂದವಾಯಿತು; ಕೇಳು ಪೇಳುವೆ |
ನಿಂದು ವರಹರಿ ಭಕ್ತಿಸಾರವ ನಿನಗೆ ತಿಳಿವಂತೆ ||
ಕಂದ! ನೀ ತಿಳಿದಿರುವೆಯಲ್ಲವೆ? |
“ಚಂದದಿಂ ನೀನೊಂದು ಪಾರವ |
ನಿಂದು ಕಲಿತರೆ’ ಕೊಡುವೆನುಂಡೆಯ” ನೆಂಬ ಮಾತನ್ನು ||೩||
ಹೊಂದಿಸುತ ನೀನೋಡು ಮೇಲಣ |
ಸಂದ ಧರ್ಮೋಕ್ತಿಯನು ನಿನ್ನಯ |
ತಂದೆ ತಾಯ್ಗಳು ತೋರುವಾಶೆಯು ಚಿಕ್ಕ ನುಡಿಯೊಡನೆ ||
ಮಂದಮತಿಗಳು ತಿಳಿಯಲಾರರು |
ಎಂದೆನುತ ಬಹು ಗೂಢತತ್ವವ |
ತಂದಿಹರು ಪೂರ್ವಜರು ತಾವೀ ಸುಲಭರೂಪಕ್ಕೆ ||೪||
ನೋಡದಲೆ ಫಲವನ್ನು ಕರ್ಮವ |
ಮಾಡುವದು ಮೂಢರಿಗಸಾಧ್ಯವು |
ಬೇಡುವರು ಫಲವನ್ನು ತತ್ಕ್ಷಣವವರು ಚಡಪಡಿಸಿ ||
ನೋಡುತೀ ಕಷ್ಟವನ್ನು ಹಿರಿಯರು |
ಹೂಡಿದರು ಬಹುದೊಡ್ಡ ಜಾಲವ |
ಗೂಢವಾದಾ ಸ್ವರ್ಗ-ನರಕದ ಪುಣ್ಯ ಪಾಪಗಳ ||೫||
ಮನಕೆ ಸಿಗ್ಗೆನಿಸದಿಹ ಕರ್ಮವ |
ತನಗೆ ಸೇರಿದುದೆಂಬ ಭಾವದಿ |
ಮನದಿ ಫಲದಾಶೆಯನು ತಾರದೆ ಗೈವುದಿದು ನೀತಿ ||
ಜನರು ತಿಳಿಯರಮೌಲ್ಯನೀತಿಯ |
ನೆನುತ ಹಿರಿಯರು ಜೋಡಿಸಿದರೈ |
“ನಿನಗೆ ಪಾಪವು ಬರುವದೆ ” ನ್ನುವ ಭೀತಿಭಾವನೆಯ ||೬||
ನೀತಿ ಭೀತಿಗಳೆಂಬ ಜೋಡಿಗೆ |
ಆತುಕೊಂಡಿತು ಮುಂದಿನಾಶೆಯು |
ಈತರದ ಮೂವಿಧದೆ ನಡೆವವು ಸಕಲಕರ್ಮಗಳು ||
ನೀತಿಯನು ನೋಡುವರು ಪೂಜ್ಯರು |
ಭೀತಿಯಲಿ ನಡೆಯುವರು ನೀಚರು |
ಸೋತು ಸಕಲವ ಮುಂದಿನಾಶೆಗೆ ನಡೆವರುಳಿದವರು ||೭||
ಈಗ ಪೇಳಿದ ಪೂಜ್ಯವರ್ಗದ |
ಯೋಗಿಗಳು ಜಗದೊಳಗೆ ದುರ್ಲಭ |
ರಾಗಿಹರು ಕಲಿಮಹಿಮೆ! ಉಳಿದವರಲ್ಲಿ ಬಹುಜನರು ||
ಆ ಗುಣೋತ್ತಮರಂತೆ ನೀತಿಯ |
ಸೋಗುಗಳ ಕೈಕೊಂಡು ಮನದಲಿ |
ನೀಗಲಾರದೆ ಫಲದೊಳಾಶೆಯ ಕರ್ಮವೆಸಗುವರು ||೮||
ಈ ಪರಿಯ ಫಲದಾಶೆಗೈವರಿ |
ಗಾಪುರುಷರುವದೇಶಗೈದರು |
ವಾಪತಾಪದ ನಾಶ, ಪುಣ್ಯದ ಲಾಭದಾಶೆಗಳ ||
ಪಾಪವೆಂಬುದು ಲೋಕದಲಿತಾ |
ರೂಪುಗೊಂಡಿಲ್ಲೈಯ! ಕಂದನೆ |
ಪಾಪಕಾರ್ಯವಗೈಯೆ ಮನಕಹ ತಾಪವೇ ಪಾಪ ||೯||
ಪುಣ್ಯ ಪಾಪಗಳಲ್ಲಿ ವೈಲ |
ಕ್ಷಣ್ಯವಿರುವದು ಸತ್ಯಕಂದನೆ |
ಪುಣ್ಯಮನಕಾನಂದವೀವುದು ಪಾಪತಾಪಕರ ||
ಪುಣ್ಯವಂತರಿಗಾಗಿ ದೇವರು |
ಪುಣ್ಯಲೋಕವ ನಿರ್ಮಿಸಿಲ್ಲವು |
ಪುಣ್ಯ ಕಾರ್ಯವಗೈಯೆ ಮನಕಹ ಶಾಂತಿಯೇ ಸ್ವರ್ಗ ||೧೦||
ಪರರಿಗುಪಕೃತಿಯಪ್ಪ ಕೃತಿಯನು |
ಪರರನುತಿ ಸ್ವಾರ್ಥಂಗಳೆಣಿಸದೆ |
ತಿರುಗಿಯುಪಕಾರವನು ಬಯಸದೆ ಮಾಡೆ ಪುಣ್ಯವದು ||
ಪರರ ಮನವನನೀತಿಯಿಂದಲಿ |
ಕೊರಗಿಸುವದೇ ಪಾಪಕಾರ್ಯವು |
ನರಕವದರಿಂದುದ್ಭವಿಸುವದು; ಮನವ ನೋಯಿಪುದು ||೧೧||
ನರಕನಾಕಗಳೆಂಬವಿಲ್ಲವು |
ನರರ ಹೃದಯವೆ ನಾಕನರಕಗ |
ಳರಿತು ನಡೆವುದು ಕಂದ ನೀನೀಗೂಢತತ್ವವನು ||
ಹರಿಯಕಾಣುವದೆಂದರೇನೆಂ |
ದರಿವುದಕ್ಕೀ ಮಾತುಪೀಠಿಕೆ |
ತರಳಪೇಳುವೆ ಮುಂದಿನಂಶವ ಕೇಳು ಭಕ್ತಿಯಲ್ಲಿ ||೧೨||
ದೇವರು
ಎತ್ತಿಹಿಡಿದಿಹರಾರು ಭೂಮಿಯ |
ಸುತ್ತಿಸುವರಾರದನು ಸೂರ್ಯನ |
ಸುತ್ತಲೂ ಗರಗರನೆಯನುದಿನ ಗಳಿಗೆ ಬಿಡದಂತೆ ||
ಬಿತ್ತಿರುವ ಬೀಜಗಳ ಮಳೆಯ |
ನಿತ್ತು ಬೆಳಿಸುವರಾರು ಬೆಳಕನು |
ಕತ್ತಲೆಯನಾರುಂಟುಮಾಡಿದರೆಮಗೆ ತಿಳಿಯುವದೇ? ||೧೩||
ಹಾವಿಗಂತಹ ವಿಷವನೀಯುತ |
ಗೋವಿಗಂತಹ ಸುಧೆಯ ನೀಡಿದ |
ನಾವನೆಂಬುದ ಪೇಳಲಾಪೆಯ ಕಂದ! ಕಠಿಣವಿದು ||
ದೇವರೆನ್ನುವ ಮೂರುವರ್ಣಗ |
ಳಾವ ಶಕ್ತಿಯ ತೋರಿಸುವವೋ |
ಆವ ಶಕ್ತಿಯು ಜಗವ ಸೃಷ್ಟಿಸಿ ಬೆಳಿಸಿ ಕೊಲ್ಲುವದೋ ||೧೪||
ಭಕ್ತಿಯಿಂ ಕೇಳುವದು ಬಾಲನೆ |
ಭಕ್ತ ವತ್ಸಲ ದೇವರೆನ್ನುವ |
ಶಕ್ತಿಯೊಂದಿಹುದೀ ಜಗತ್ತಿನೊಳೆಂದು ನಂಬುವದು
ಭಕ್ತರಾದವರಿಷ್ಟ ಕಾರ್ಯಕೆ |
ಶಕ್ತಿಯನು ಸಂಗ್ರಹಿಸಲೋಸುಗ |
ಯುಕ್ತಿಯಿಂದಾ ಶಕ್ತಿಗಿತ್ತರು ಹಲವು ರೂಪಗಳ ||೧೫||
ರೂಪವೊಂದೇ ಸಾಲದೆಂದಾ |
ರೋಪಿಸಿದರದರಲ್ಲಿ ಗುಣಗಳ |
ರೂಪಗುಣಗಳ ಜೋಡಿಗಿತ್ತರು ಹಲವು ಹೆಸರುಗಳ ||
ಈ ಪರಿಯ ನೂರೆಂಟು ನಾಮದಿ |
ರೂಪಗುಣಗಳೊಳಡಗಿಕೊಂಡಿಹ |
ಆ ಪರಮಶಕ್ತಿಯನು ಕಾಣಲು ಭಕ್ತಿಯೇ ಯುಕ್ತಿ ||೧೬||
ಭಕ್ತಿ
ಹೊತ್ತು ಹೊತ್ತಿಗೆ ಮೊಲೆಯನುಣಿಸುತ |
ಎತ್ತಿ ಮುದ್ದಾಡುತ್ತ ಬೆಳಿಸುವ |
ಹೆತ್ತ ತಾಯನು ಕಾಣದಿರೆ ನಿನಗಂದು ಮನದೊಳಗೆ ||
ಎತ್ತ ನೋಡಿದಡತ್ತ ಕಣ್ಣಿಗೆ |
ಕತ್ತಲೆಯೆ ಕಾಣಿಸಿತು ಬಾಲ್ಯದಿ |
ಉತ್ತುಮನೆಯೀ ತಾಯ ಮೇಲಣ ಮಮತೆಯೇ ಭಕ್ತಿ ||೧೭||
ಹರೆಯದೊಳ್ ಪ್ರಿಯತ್ನಿಯೊಳ್ ಮನ |
ಹರಿವು ತಿರುವದು, ಅನ್ನ ನೀರಿನ |
ಪರಿವೆಯಿಲ್ಲದೆ ಕಷ್ಟ ನಷ್ಟಗಳೆಣಿಕೆಯಿಲ್ಲದಲೆ ||
ಹರಿವ ನೀರಿನೊಳುರಿವ ಬೆಂಕಿಯೊ |
ಳಿರದು ಭಯವದಕಿಂಥ ಕವಲುಗ |
ಳಿರದ ತನ್ನಯ ಸತಿಯೊಳಿರ್ಸಾ ಪ್ರೇಮವೇ ಭಕ್ತಿ ||೧೮||
ದುಡಿದು ಗಳಿಸಿದ ಹಣದ ರಾಶಿಯ |
ಮಡದಿ ಮಕ್ಕಳ ಕೈಯೊಳಾದರು |
ಕೊಡಲು ಮನವಿಲ್ಲದಲೆ ಕಾಯುವ ಮೂಢಮಾನವರ ||
ದೃಢತರದ ಧನಲೋಭವೆಂಬುವ |
ಬಿಡದ ಮನದಾಸಕ್ತಿಯೇ ಜಗ |
ದೊಡೆಯ ಶಂಕರನೊಡನೆ ಘಟಿಸಲು ಭಕ್ತಿ ಯೆನಿಸುವದು ||೧೯||
ಭಕ್ತಿಯೆಂಬುದು ಬೇರೆಯಿಲ್ಲವು |
ಯುಕ್ತಿ ಕವಲುಗಳಿರದ ಮನದಾ |
ಸಕ್ತಿಯೇ ನಿಜಭಕ್ತಿಯದರಿಂ ತಮ್ಮ ಮನದೊಳಗೆ ||
ಶಕ್ತಿ ಸಂಗ್ರಹವಾಗಿ ಇಚ್ಛಾ |
ಶಕ್ತಿಯಿಂ ಜಗವನ್ನು ತುಂಬಿದ |
ಶಕ್ತಿಯೊಡನೈಕ್ಯವನು ಪಡೆವುತ ಪಡೆವರಿಷ್ಟವನು ||೨೦||
ಮೂರ್ತಿ ಪೂಜೆ
ಮನದ ಬಯಕೆಯ ಪಡೆಯಲೋಸುಗ |
ಘನಮಹಿಮ ಜಗದೇಕಶಕ್ತಿಗೆ |
ತನಗೆ ಬೇಕಾಗಿರ್ದರೂಪವ ನಿತ್ತು ಪೂಜಿಸುತ ||
ಮನದೆ ಭಾವಿಸುತಲದರ ಗುಣಗಳ |
ತನಗೆ ಬೇಕಾದಂತೆಯೇ ಕಡೆ |
ಗನುನಯದಿ ನಂಬುವನು ತನ್ನಾಧೀನವಾಯ್ತೆಂದು ||೨೧||
ತನಗೆ ವಶವಾಗಿರ್ದ ಶಕ್ತಿಯ |
ತನಗೆ ಬೇಕಾಗಿರ್ದ ಕಾರ್ಯಕೆ |
ಅನುಗೊಳಿಸಿ ಕಳುಹಿಸುವನಾತನು ಮನದ* ಬಲದಿಂದ ||
ಮನದಿ ಹರಿಯಿಹನೆಂಬ ಮಾತಿದು! |
ಜನರು ಗೈಯುವ ದೇವತಾರಾ- |
ಧನೆಯ ಗುಟ್ಟಿದು! ಮಂತ್ರಶಾಸ್ತ್ರದ ಮೂಲತತ್ವವಿದು! ** ||೨೨||
ಭಾವವೇ ಬಲವೆಂಬ ಮಾತಿನ |
ಭಾವವಿದರೊಳಗಿಹುದು ಬಾಲನೆ |
ಭಾವಿಸದಿರನ್ಯಥಾ! ನಂಬುತ ನಡೆವುದೀ ನುಡಿಯ ||
ಆವನಿಚ್ಛಾಶಕ್ತಿ ಬಲವಿಹು |
ದಾವನಲಿ ತನುಮನವನಾಳುವ |
ಭಾವದೈಕ್ಯತೆಯಿರುವದವನೇ ಭಕ್ತಪುಂಗವನು ||೨೩||
ಭೂತದಯೆ
ಲೋಕದಲಿ ನರರಿಷ್ಟ ಸಿದ್ಧಿಗೆ |
ಏಕವಾಕ್ಯತೆಯಿಂದ ವೇಳ್ದರು |
ಲೋಕಸಂಗ್ರಹ ಶಕ್ತಿಸಂಗ್ರಹವೆಂಬ ಮಾರ್ಗಗಳ ||
ಏಕಲಕ್ಷ್ಯದಿ ಶಕ್ತಿ ಸಂಗ್ರಹ |
ವೇಕಲಕ್ಷ್ಯದೊಳಿಷ್ಟ ಸಾಧನ |
ಲೋಕಸಂಗ್ರಹಕಾಗಿ ಹುಟ್ಟಿತು ಭೂತದಯೆ ಜಗದಿ ||೨೪||
ಭೂತದಯೆಯಿಂ ನಡೆವ ಮನುಜಗೆ |
ಭೂತಗಳ್ ವಶವಾಗಿ ವರ್ತಿಸ |
ಲಾತ ಪಡೆಯುವನಿಷ್ಟ ಸಿದ್ಧಿಯ ಲೋಕಸಂಗ್ರಹದಿ ||
“ಭೂತದಯೆಯಿಂ ಪ್ರೀತನಾಗುವ |
ಭೂತನಾಥನು” ಎಂಬ ಮಾತಿನೊ- |
ಳೀ ತೆರದ ಗೂಢಾರ್ಥವಿಹುದೈ ಮುದ್ದು ಬಾಲಕನೇ ||೨೫||
ತಾತ್ಪರ್ಯ
ತತ್ವವರಿಯದ ಮೂರ್ತಿಪೂಜೆಯು |
ಸತ್ವ ಹೀನರ ಭೂತದಯೆಯುಂ |
ವ್ಯರ್ಥವಾಗುವವರಿತು ನಡೆವುದು ಕಂದ! ತತ್ವವನು ||
ತತ್ವ ವಿದರಾದಂಥ ಮುನಿಗಳು |
ಸತ್ವ ಶಾಲಿಗಳಾಗಿ ಮನಸಿನ |
ಸತ್ವ ಬಲದಿಂ ಹರಿಯನೋಳ್ಪರು ವರವ ಪಡೆಯುವರು ||೨೬||
*****
** ಪ್ರತಿಯೊಂದು ದೇವತಾರಾಧನೆಯ ಕಾರ್ಯದಲ್ಲಿಯೂ ಆವಾಹನೆ, ಅರ್ಚನೆ, ಧ್ಯಾನ,
ಪ್ರಾರ್ಥನೆ ಎಂಬ ನಾಲ್ಕು ಮುಖ್ಯ ಅಂಗಗಳು ಇದ್ದೇ ಇರುವವು. ಅಖಿಲ ಜಗದ್ವ್ಯಾಪಿಯಾದ
ಈಶ್ವರೀ ಶಕ್ತಿಯನ್ನು ಇಚ್ಛಿತ ಆಕಾರದ ವಸ್ತುವಿನಲ್ಲಿ (ಮೂರ್ತಿಯಲ್ಲಿ) ಸಂಗ್ರಹಿಸುವದೇ ಆವಾಹನೆಯು; ಆ ಆವಾಹ್ನಿತ ದೇವತಾಶಕ್ತಿಗೆ ಭಕ್ತಿಯಿಂದ ಯಥಾಶಕ್ತಿ ಷೋಡಶೋಪಚಾರಗಳನ್ನು ಅರ್ಪಿಸಿ ಅದರಲ್ಲಿ ಅವಶ್ಯಕ ಗುಣಗಳನ್ನು ಆರೋಪಿಸಿ ಆ ಶಕ್ತಿಯ ಪ್ರಕಾಶಕ್ಕೂ ಪೂಜಕನಿಗೂ ಸಂಬಂಧವುಂಟಾಗುವಂಥ ಅನುಕೂಲ ಅವಸ್ಥೆಯನ್ನು ತ೦ದುಕೊಳ್ಳುವದೇ ಅರ್ಚನೆಯು. ಧ್ಯಾನವು ಶಕ್ತಿ ಸಂಗ್ರಾಹಕ ಕಾರ್ಯವು, ಅಂದರೆ ಆವಾಹ್ನಿತ ದೇವತಾಶಕ್ತಿಯೊಡನೆ ತಾದಾತ್ಮ್ಯವನ್ನು ಪಡೆಯುವದು, ಹಾಗು ಈ ರೀತಿಯಾಗಿ ಸಂಗ್ರಹಿಸಿದ ಶಕ್ತಿಯನ್ನು ಇಚ್ಛಿತಕಾರ್ಯದ ಸಾಧನೆಗೆ ನಿಯೋಗಿಸಿಕೊಳ್ಳುವದೇ ಪ್ರಾರ್ಥನೆಯು
* Will-Power








