ಶ್ರೀ, ರಾಮಚಂದ್ರ ದೇವರು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಒಂದು ಸಿಂಹಾಸನಾರೂಢನಾಗಿ ರಾಜ್ಯವಾಳುವುದಕ್ಕೆ ಸುರುಮಾಡಿದನು.
ಅಧಿಕಾರ ಸೂತ್ರವು ತನ್ನ ಕೈಗೆ ಬಂದೊಡನೆಯೇ ಸೀತಾಪತಿಯು ತನ್ನೊಡನೆ ಅರಣ್ಯಲ್ಲಿ ದುರ್ದಿನಗಳನ್ನು ಕಳೆದ, ಲಂಕೆಯನ್ನು ಸುಟ್ಟು ತನ್ನ ಧರ್ಮಪತ್ನಿಯನ್ನು ಬಿಡಿಸಿಕೊಂಡು ಬಂದ ಕಪಿಕುಲವನ್ನು ಕರೆದು ಒಂದೊಂದು ಮಂಗನನ್ನು ಒಂದೊಂದು ಹುದ್ದೆಯ ಮೇಲೆ ನೇಮಿಸಿದನು. ಭಕ್ತಶಿಖಾಮಣಿಯಾದ ಹನುಮಂತನಂತೂ ಗಿಡದ ತುತ್ತ ತುದಿಗೆ ಕುಳಿತು ಟುರ್ ಎಂದು ಹುಕುಂ ಬಜಾಯಿಸಹತ್ತಿದನು. ಅವನಿಗೆ ‘ಸರ್ವ ಭಾಷಾ ಕೋವಿದ’ ಎಂಬ ಬಿರುದು ಸಿಕ್ಕಿತು!
ಅಯೋಧ್ಯೆಯ ಸಭ್ಯ ಪ್ರಜೆಗಳು ಯಾವದಾದರೊಂದು ಕೆಲಸಕ್ಕೆ ಅರ್ಜಿ ಮಾಡಿದರೆ ಶ್ರೀರಘುಕುಲತಿಲಕನೇ ಮುಂದೆ ಬಂದು “ನೀವು ನನ್ನೊಡನ ವನವಾಸ ಎಷ್ಟು ದಿನ ಮಾಡಿದ್ದಿರಿ? ಲಂಕೆಯ ಎಷ್ಟು ಮನೆಗಳನ್ನು ಸುಟ್ಟ ವೀರರು ನೀವು?” ಎಂದು ಪ್ರಶ್ನಿಸುತ್ತಿದ್ದನು. ಈಗಿನ ಕಾಲದಂತೆ ಜಾತಿ ವಯಸ್ಸು ಮುಂತಾದವುಗಳನ್ನು ಕೇಳುವ ಪದ್ಧತಿ ಆಗ ಚಾಲೂ ಇತ್ತಿಲ್ಲ.
ಇದನ್ನೆಲ್ಲ ಕಂಡು ಲಕ್ಷ್ಮಣನು ಒಂದು ದಿನ ಅಣ್ಣನಲ್ಲಿ ಸವಿನಯ ವಿಜ್ಞಾಪನೆ ಮಾಡಿದನು: ರಾಜ್ಯವಾಳುವುದಕ್ಕೂ ನಮ್ಮೊಡನೆ ವನವಾಸ ಲಂಕಾದಹನಗಳನ್ನು ಮಾಡಿದ್ದಕ್ಕೂ ಏನೂ ಸಂಬಂಧವಿಲ್ಲ. ಲಂಕಾದಹನಕ್ಕೆ ರಾಜ್ಯದ ಕಾರಭಾರ ನಡೆಸುವ ಜಾಣ್ಮೆ ಬೇಕಾಗಿದ್ದಿಲ್ಲ.
ಅದಕ್ಕೆ ಪತಿಪಾವನನು “ತಮ್ಮಾ ನೀನಂದದ್ದು ನಿಜ. ಆದರೆ ನಮ್ಮೊಡನೆ ಅಡವಿಯಲ್ಲಿ ಬಳಲಿ, ಲಂಕಾದಹನದಂಥ ಶೌರ ಕಾರ್ಯವೆಸಗಿದ ಈ ಕಪಿಗಳಿಗೆ ದೊಡ್ಡ ದೊಡ್ಡ ಅಧಿಕಾರ ಕೊಡುವದು ನಮ್ಮ ಕರ್ತವ್ಯವಲ್ಲವೇ?”
ಲಕ್ಷಣನು ಕೂಡಲೇ “ಅಣ್ಣಾ ನಮ್ಮೊಡನೆ ಕಾಡಿನಲ್ಲಿ ಬಳಲಿ, ಲಂಕೆಯನ್ನು ಸುಟ್ಟು ಹೈರಾಣಾದ ಈ ಭಕ್ತಶಿಖಾಮಣಿಗಳನ್ನು ದೊಡ್ಡ ದೊಡ್ಡ ಅಧಿಕಾರಗಳಲ್ಲಿಟ್ಟು ದುಡಿಸುವದು ನ್ಯಾಯವಲ್ಲ. ಹಿಂದೆ ಮಾಡಿದ ಸಾಹಸ ತ್ಯಾಗಗಳಿಗಾಗಿ ಇವರನ್ನು ಒಂದು ಉಪವನದಲ್ಲಿ ಸುಖವಾಗಿ ಇಡುವದು ನಮಗೆ ಒಪ್ಪುವ ವಿಷಯ. ದಣಿದು ಸಣ್ಣಾದ ಇವರನ್ನು ಮತ್ತೆ ದುಡಿಸಹತ್ತುವದು ತರವೇ?” ಅಂದನು.
ಜಾನಕಿ ಜೀವನನ ತಲೆಯಲ್ಲಿ ಹೊಸ ಬೆಳಕು ಬಿದ್ದಿತು. ಮರುದಿನವೇ ಅವನು ಕಪಿಗಳನ್ನೆಲ್ಲ ಕರೆದು ಅವರಿಗಾಗಿ ತಯಾರಿಸಿದ ಒಂದು ‘ಸ್ಪೆಶಲ್’ ಉಪವನದಲ್ಲಿ ಅವರಿಗೆ ‘ಪೆನ್ಯನ್’ ಅನುಗ್ರಹಿಸಿದನು.
ಅಂದಿನಿಂದ ದೊಡ್ಡ ಸಣ್ಣ ಕೆಲಸಗಳಿಗೆಲ್ಲ ಅಯೋಧ್ಯೆಯ ಪ್ರಜೆಗಳೇ ಬಂದರು; ಆ ರಾಜ್ಯವು ರಾಮರಾಜ್ಯವೆಂದು ಪ್ರಸಿದ್ಧಿ ಪಡೆಯಿತು.
*****








