ಔನ್ನತ್ಯ-ಸೌಂದರ್ಯ ಭಾವೈಕ್ಯದಾನಂದ
ಮೂರ್ತಿಯೇ ಮೆರೆಯುತಿದೆ; ಕಣ್ಮುಂದೆ ಕಾಣುತಿದೆ
ನಶ್ವರದ ಸುಖ-ಭೋಗ-ರಾಗಾದಿ ನಿಗ್ರಹದೆ
ಮೈವೆತ್ತ ನಿಶ್ಚಲ ತ್ಯಾಗ-ಯೋಗಾಮಂದ
ಸನ್ಮುದ್ರೆ ಮೊಗದಲ್ಲಿ ಕಳೆಗೂಡಿ ಕುಣಿಯುತಿದೆ
ಪ್ರಾಕ್ತನದ ಬಾಹುಬಲಿ ವೈರಾಗ್ಯ ಸಂಸ್ಥಾನ-
ದೊಂದು ಮೈಸಿರಿಯಲ್ಲಿ ಕಾರ್ಕಲ್ಲಿನಾ ಕವನ
ರೂಪದಲಿ ಕೋದಿಹುದೆ – ಶಿಲ್ಪಕಲೆಯಾಶ್ರಯದೆ?
ಓ ಶಿಲಾ ಕಾವ್ಯರ್ಷಿ! ನಿನ್ನತುಲ ಸಾಮರ್ಥ್ಯ್ಯ-
ದರಿವೊಂದೆ ಈ ತೆರಂ ಕಗ್ಗಲ್ಲ ಕಾವ್ಯದಲಿ
ಕಂಡರಿಸಿದ೦ತಿಹುದು. ರಸ-ಭಾವದೋಜೆಯುಲಿ
ನಿನ್ನ ಕೈವಾಡದಲಿ ಕೊನರಿಡಿದು ಸಾಹಿತ್ಯ
ಮಾರ್ಗವನ್ನಾಂತಿಹುದು. ನಿನ್ನಮರ ಕಾವ್ಯವಿದು
ಮೌನ ಹೃದಯೋಪಾತ್ತ ಭಾಷೆಯಲಿ ಬೆಸೆದಿಹುದು!
*****
೧೯೩೨
ಕಾರ್ಕಳದಲ್ಲಿ ಶ್ರೀ ಗೋಮಟೇಶ್ವರ ವಿಗ್ರಹವನ್ನು ನೋಡಿ, ಬರೆದುದು.

















