ಇಲ್ಲಿ ಕವಿಯ ದೃಷ್ಟಿಯರಳಿ
ಮಾಗಿತವನ ಜೀವವು.
ಇಲ್ಲಿ ಕೊಳದ ಬಳಿಗೆ ಬರಲು
ಕೊನರಿತವನ ಭಾವವು.
ಗಿರಿಕ೦ದರದೀ ಸುಂದರ ಸೀಮೆಯನ್ನೆ ತುಂಬಿತು
ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ನಂಬಿತು.
ರವಿಯ ದಿನದ ಬೆಳಗು-ಮುಳುಗು
ಜಲಪಾತದ ಹಿರಿಯ ಮೊಳಗು
ಮಳೆಬಿಲ್ಲಿನ ಮಣಿತವು
ಎಳೆಹುಲ್ಲಿನ ಕುಣಿತವು
ಕುಕೂ ಎಂದು ಕರೆವ ಹಕ್ಕಿ,
ದೂರ ಮಿನುಗುತಿರುವ ಚಿಕ್ಕಿ
ತಾನು ತೇಲಿ ತನ್ನ ನೆಳಲ
ತೇಲಿಸಿರುವ ಹಂಸದಮಲ
ಶೋಭೆಗೆಲ್ಲ ಹರುಷಗೊಂಡು ಪಕ್ಕ ಬಲಿತು ಹಾರಿತು:
ಕವಿಯೆ! ನಿನ್ನ ಭಾವ ನಭೋಮಂಡಲವನೆ ಮೀರಿತು.
ಇಲ್ಲಿ ನಿಂತು ನೋಡೆ ಮುಗಿಲು
ಸಾಲುಗೊಂಡು ರಾತ್ರಿ ಹಗಲು
ಆಲೆಯುತಲೆಯುತಲೆಯುತಿರುವವು
ಮತ್ತೆ
ಗ್ರಾಸಮಿಯರ ಶೃಂಗದೊಡನೆ ಮಲೆಯುತಿರುವವು.
ಹಚ್ಚ ಹಸಿರು ಕೆಳಗೆ ಮೇಲೆ
ಕುರಿಹಿಂಡಿವು ಸಾಲು ಸಾಲೆ
ಮೇಯುಮೇಯುಮೇಯುತಿರುವವು.
ಮೇದು
ಲಾಂಗಡೇಲದೆಡೆಗೆ ದಾರಿ ಕಾಯುತಿರುವವು.
ನೋಡು! ಬಣ್ಣ ಬಣ್ಣದರಳು
ಪ್ರಕೃತಿದೇವಿಯಿಟ್ಟ ಹರಳು:
ನೆನಹು ಹೂವು, ಡ್ಯಾಫೊಡಿಲ್ಲು,
ನರಿಕುಲಾಯಿ,-ನೋಡಿದಲ್ಲು!
ಶೋಭಿಸಿರಲು ಡಾರಾಯಡಲ್ಲ ತುಂಗಶೃಂಗವು,-
ಸವಿದಿತದನು ಕಮಲದಂತೆ ಜೀವಭೃಂಗವು!
ಫಲಿಸಿತಿಲ್ಲಿ ಆ ಸಮಾಧಿ:
ಅದಕೆ ದಿವ್ಯ ಸ್ಥಾನವಿದು!
ತಿಳಿಯಿತಿಹದ ಅಂತ್ಯ, ಆದಿ!
ಎಂಥ ಹಿರಿಯ ಮೌನವಿದು!
ಓ! ಕವಿಸಮ್ರಾಟ! ತಿಳಿದೆ ನಿನ್ನ ಪ್ರತಿಭೆಯಾಟಪಾಟ
ಜರುಗಿತಿಲ್ಲಿ,-ಇಲ್ಲಿ ತುಂಬಿ ಬಂತು ನಿನ್ನ ದಿವ್ಯನೋಟ!
ಗ್ರಾಸಮಿಯರ ಕೊಳದ ಬಳಿಗೆ ನಿಂತು ಕುರಿತೆನು;
ಪ್ರಕೃತಿ-ಪುರುಷರಮರಲೀಲೆಯೆಲ್ಲವರಿತೆನು!
*****








