Home / ಕವನ / ಕವಿತೆ / ರಾತ್ರಿಗೆ

ರಾತ್ರಿಗೆ

ನಿನ್ನ ನಾನು ಪ್ರಿತಿಸುವೆನು
ಶ್ಯಾಮ ಮಧುರ ಯಾಮಿನಿ
ನಿನಗಾಗಿಯೆ ಹಾತೊರೆವೆನು
ಸ್ವಪ್ನ ಲೋಕ ಸ್ವಾಮಿನಿ.

ನೀ ಬಂದರೆ ಇಳೆಗಿಳಿವುದು
ಅತುಲ ದಿವ್ಯ ಶಾಂತಿಯು
ನಿನ್ನಿರುಳಲಿ ಕರುಳಿಗೆಲ್ಲಿ
ಸಂಸಾರದ ಭ್ರಾಂತಿಯು

ಉಕ್ಕಿಸುತ್ತ ಕಾಳ್ಗಡಲನು
ಬ್ರಹ್ಮಾಂಡವ ಮುತ್ತಿದೆ
ಬಾನ್ಬಯಲಲಿ ಹಣ್ಣಿಸಿರುವ
ರವಿ ತೇಜವ ಮುಕ್ಕಿದೆ.

ಅಂಧಂತಮವೆಂದು ನಿನ್ನ
ಕರೆದರೇನು ರಜನಿಯೆ
ನಿನ್ನೊಡಲಿದೆ ದೀಪ್ತಿಮಂತ-
ತಾರಾಗೃಹ ರಾಶಿಯೆ.

ಪ್ರತಿ ಜೀವದ ಪ್ರತ್ಯಾಸೆಯು
ನಿನ್ನೆಡೆಯಲಿ ಬೆಳೆಯಿತು
ಈ ಲೋಕವು ಸ್ವರ್ಲೋಕದ
ಸುಖ ಸ್ವಪ್ನವ ಸವಿಯಿತು.

ಅಜ್ಞಾನದ ಕದಡೆಲ್ಲವು
ನೀ ಕರುಣಿಸೆ ತಿಳಿಯಿತು
ನಿನ್ನುಡಿಯಲಿ ಋಷಿವರರಿಗೆ
ಸದ್ದರ್ಶನ ದೊರೆಯಿತು.

ಅರ್ತರ ಮೊರೆ, ದೀನರ ದಯೆ,
ಸೋತವರಿಗೆ ಆಸರೆ
ಮಾದೇವನು ಮರೆತವರಿಗು
ನೀ ಮಮತೆಯ ಹೆದ್ದೊರೆ.

ಮಾದಾಯಿಯೆ ನಿನ್ನೊಲವಿನ
ಹಾಲ್ಬಲವನು ಪಡೆಯಲು.
ವಿಸ್ತಾರಿತ ಹೃತ್ಕುಮುದದ
ಹೂಸೊದೆಯನು ಸವಿಯಲು

ಈ ಮೌನದ ಹಿಮಶೃಂಗಕೆ
ಈ ಶಾಂತಿಯ ಗಂಗೆಗೆ
ಓಡೋಡುತ ನಾ ಬಂದೆನು
ತೃಷಿತಾತ್ಮದ ತುಷ್ಟಿಗೆ.

ನೀ ಬೀಸಿದ ನಿದ್ದೆಯ ಬಲೆ
ಸವಿಕನಸಿನ ಸಂಕಲೆ
ಹರಿದೊಗೆದೆನು ಜಾಗರಿಸುತ-
ಲೀನನಾದೆ ನಿನ್ನೊಳೆ.

ಇಲ್ಲಿ ನಾನು ಕಾಣಲಿಲ್ಲ
ನಿಜ ಮರೆಸುವ ಕಲೆಯನು
ಸುಳ್ಳು ಸುಖದ ಸವಿ ಮಬ್ಬಿನ
ಸೆರೆಹಿಡಿಯುವ ಬಲೆಯನು

ನಿಂತೆ ನಿನ್ನ ಈ ವಿಶಾಲ-
ಅಂತರಂಗ ಸಂಮುಖ
ಕಂಡೆ ನಾನು ಈ ಭುವನದ
ಭವ್ಯವಾದ ಶ್ರೀಮುಖ.

ಹೃದಯದಲ್ಲಿ ಹುದುಗಿರಿಸಿದ
ಭಾವಲತೆಯು ನೆಗೆದಿತು
ಹೂವಿಸುತ್ತ ತೇಲಿಸಿತೊ
ಗಂಧ ಕವನ ಮೆಲ್ಲಿತು.

ಜಗದ ಗಾಯದಿಂದ ಬಸಿವ
ಕರುಣಾಜಲ ಹೊಮ್ಮಿತು
ಎಂಟು ದಿಕ್ಕಿನಿಂದ ಹರಿವ
ಗಾಳಿಯಲ್ಲಿ ತುಂಬಿತು.

ಪತಿತ ಶಪ್ತ ಪಾಪಾತ್ಮರ
ನಿಟ್ಟುಸಿರೂ ಮೊರೆಯಿತು
ನಿನ್ನದೆ ಬಾಗಿಲವ ತಟ್ಟಿ
ಆಸರೆಯನು ಕೇಳಿತು.

ಮುರಿದೊಲವಿನ ಕನಿಕರವೂ
ನಿನ್ನ ಮುಖದಿ ಮೂಡಿತು
ನೊಂದವರಾ ಕಣ್ಣೀರೂ
ನಿನ್ನೆವೆಯಿಂದಿಳಿಯಿತು.

ಕರುಣೆಯಲ್ಲಿ ಕಂಡರಿಸಿದ
ಶ್ಯಾಮನ ಮಧುಮೂರ್ತಿಯು
ನಿನ್ನದೆಯಲಿ ಮಿಂಚಿತದೊ
ಅತಿ ಬಂಧುರ ಜ್ಯೋತಿಯು.

ಸುಳಿಗಾಳಿಯ ಕೊರಳಿನಲ್ಲಿ
ಮುರಲಿ ಗೀತ ಹೊಮ್ಮಿತು
ಜಗದಾತ್ಮದ ಮೂಕ ಮೌನ
ಪ್ರಾರ್ಥನೆಯಲ್ಲರಳಿತು

ಬಾನ್ನೆಲದಲಿ ಸೂಸಿತೊಂದು
ಭಾವಲಹರಿಯದ್ಭುತ
ಪಂಚಕರಣ ಹರಣಗಳನು
ಕಣ ಕಣದಲಿ ಮೀಟುತ

ನವಲೋಕದ ನವತೇಜದ
ಬೀಜಾಂಕುರವಾಯಿತು
ಆ ವಿಭವದ ಉನ್ಮಾದವು
ಎಲ್ಲೆಲ್ಲೂ ತೋರಿತು.

ನನ್ನೆದೆಯನು ಮುಟ್ಟಿ ತಾಯೆ
ಆ ಆಸೆಯ ಚಿಗುರಿಸು
ಹಗೆ ಕೊಳೆಗಳ ತೊಳೆದು ತಾಯೆ
ಹೊಸ ಕೆಳೆಗಳ ಬೆಳೆಯಿಸು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...