Home / ಕವನ / ಕವಿತೆ / ರಾತ್ರಿಗೆ

ರಾತ್ರಿಗೆ

ನಿನ್ನ ನಾನು ಪ್ರಿತಿಸುವೆನು
ಶ್ಯಾಮ ಮಧುರ ಯಾಮಿನಿ
ನಿನಗಾಗಿಯೆ ಹಾತೊರೆವೆನು
ಸ್ವಪ್ನ ಲೋಕ ಸ್ವಾಮಿನಿ.

ನೀ ಬಂದರೆ ಇಳೆಗಿಳಿವುದು
ಅತುಲ ದಿವ್ಯ ಶಾಂತಿಯು
ನಿನ್ನಿರುಳಲಿ ಕರುಳಿಗೆಲ್ಲಿ
ಸಂಸಾರದ ಭ್ರಾಂತಿಯು

ಉಕ್ಕಿಸುತ್ತ ಕಾಳ್ಗಡಲನು
ಬ್ರಹ್ಮಾಂಡವ ಮುತ್ತಿದೆ
ಬಾನ್ಬಯಲಲಿ ಹಣ್ಣಿಸಿರುವ
ರವಿ ತೇಜವ ಮುಕ್ಕಿದೆ.

ಅಂಧಂತಮವೆಂದು ನಿನ್ನ
ಕರೆದರೇನು ರಜನಿಯೆ
ನಿನ್ನೊಡಲಿದೆ ದೀಪ್ತಿಮಂತ-
ತಾರಾಗೃಹ ರಾಶಿಯೆ.

ಪ್ರತಿ ಜೀವದ ಪ್ರತ್ಯಾಸೆಯು
ನಿನ್ನೆಡೆಯಲಿ ಬೆಳೆಯಿತು
ಈ ಲೋಕವು ಸ್ವರ್ಲೋಕದ
ಸುಖ ಸ್ವಪ್ನವ ಸವಿಯಿತು.

ಅಜ್ಞಾನದ ಕದಡೆಲ್ಲವು
ನೀ ಕರುಣಿಸೆ ತಿಳಿಯಿತು
ನಿನ್ನುಡಿಯಲಿ ಋಷಿವರರಿಗೆ
ಸದ್ದರ್ಶನ ದೊರೆಯಿತು.

ಅರ್ತರ ಮೊರೆ, ದೀನರ ದಯೆ,
ಸೋತವರಿಗೆ ಆಸರೆ
ಮಾದೇವನು ಮರೆತವರಿಗು
ನೀ ಮಮತೆಯ ಹೆದ್ದೊರೆ.

ಮಾದಾಯಿಯೆ ನಿನ್ನೊಲವಿನ
ಹಾಲ್ಬಲವನು ಪಡೆಯಲು.
ವಿಸ್ತಾರಿತ ಹೃತ್ಕುಮುದದ
ಹೂಸೊದೆಯನು ಸವಿಯಲು

ಈ ಮೌನದ ಹಿಮಶೃಂಗಕೆ
ಈ ಶಾಂತಿಯ ಗಂಗೆಗೆ
ಓಡೋಡುತ ನಾ ಬಂದೆನು
ತೃಷಿತಾತ್ಮದ ತುಷ್ಟಿಗೆ.

ನೀ ಬೀಸಿದ ನಿದ್ದೆಯ ಬಲೆ
ಸವಿಕನಸಿನ ಸಂಕಲೆ
ಹರಿದೊಗೆದೆನು ಜಾಗರಿಸುತ-
ಲೀನನಾದೆ ನಿನ್ನೊಳೆ.

ಇಲ್ಲಿ ನಾನು ಕಾಣಲಿಲ್ಲ
ನಿಜ ಮರೆಸುವ ಕಲೆಯನು
ಸುಳ್ಳು ಸುಖದ ಸವಿ ಮಬ್ಬಿನ
ಸೆರೆಹಿಡಿಯುವ ಬಲೆಯನು

ನಿಂತೆ ನಿನ್ನ ಈ ವಿಶಾಲ-
ಅಂತರಂಗ ಸಂಮುಖ
ಕಂಡೆ ನಾನು ಈ ಭುವನದ
ಭವ್ಯವಾದ ಶ್ರೀಮುಖ.

ಹೃದಯದಲ್ಲಿ ಹುದುಗಿರಿಸಿದ
ಭಾವಲತೆಯು ನೆಗೆದಿತು
ಹೂವಿಸುತ್ತ ತೇಲಿಸಿತೊ
ಗಂಧ ಕವನ ಮೆಲ್ಲಿತು.

ಜಗದ ಗಾಯದಿಂದ ಬಸಿವ
ಕರುಣಾಜಲ ಹೊಮ್ಮಿತು
ಎಂಟು ದಿಕ್ಕಿನಿಂದ ಹರಿವ
ಗಾಳಿಯಲ್ಲಿ ತುಂಬಿತು.

ಪತಿತ ಶಪ್ತ ಪಾಪಾತ್ಮರ
ನಿಟ್ಟುಸಿರೂ ಮೊರೆಯಿತು
ನಿನ್ನದೆ ಬಾಗಿಲವ ತಟ್ಟಿ
ಆಸರೆಯನು ಕೇಳಿತು.

ಮುರಿದೊಲವಿನ ಕನಿಕರವೂ
ನಿನ್ನ ಮುಖದಿ ಮೂಡಿತು
ನೊಂದವರಾ ಕಣ್ಣೀರೂ
ನಿನ್ನೆವೆಯಿಂದಿಳಿಯಿತು.

ಕರುಣೆಯಲ್ಲಿ ಕಂಡರಿಸಿದ
ಶ್ಯಾಮನ ಮಧುಮೂರ್ತಿಯು
ನಿನ್ನದೆಯಲಿ ಮಿಂಚಿತದೊ
ಅತಿ ಬಂಧುರ ಜ್ಯೋತಿಯು.

ಸುಳಿಗಾಳಿಯ ಕೊರಳಿನಲ್ಲಿ
ಮುರಲಿ ಗೀತ ಹೊಮ್ಮಿತು
ಜಗದಾತ್ಮದ ಮೂಕ ಮೌನ
ಪ್ರಾರ್ಥನೆಯಲ್ಲರಳಿತು

ಬಾನ್ನೆಲದಲಿ ಸೂಸಿತೊಂದು
ಭಾವಲಹರಿಯದ್ಭುತ
ಪಂಚಕರಣ ಹರಣಗಳನು
ಕಣ ಕಣದಲಿ ಮೀಟುತ

ನವಲೋಕದ ನವತೇಜದ
ಬೀಜಾಂಕುರವಾಯಿತು
ಆ ವಿಭವದ ಉನ್ಮಾದವು
ಎಲ್ಲೆಲ್ಲೂ ತೋರಿತು.

ನನ್ನೆದೆಯನು ಮುಟ್ಟಿ ತಾಯೆ
ಆ ಆಸೆಯ ಚಿಗುರಿಸು
ಹಗೆ ಕೊಳೆಗಳ ತೊಳೆದು ತಾಯೆ
ಹೊಸ ಕೆಳೆಗಳ ಬೆಳೆಯಿಸು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...