ಇದು ನಮ್ಮ ಸಮೀಪದೂರಿನ ಒಂದು ಘಟನೆ. ಅದೊಂದು ಸಣ್ಣ ಕೆರೆ. ತಾಯಿ ತನ್ನ ಮೂರುವರ್ಷದ ಕಂದನೊಂದಿಗೆ ಬಟ್ಟೆ ಒಗೆಯಲು ಬಂದವಳು ತನ್ನ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಮಗು ತನ್ನಷ್ಟಕ್ಕೆ ಪಕ್ಕದಲ್ಲಿ ಆಡುತ್ತ ಆಡುತ್ತ ಸ್ವಲ್ಪ ದೂರ ಸರಿದಿತ್ತಷ್ಟೇ! ಆಗಲೇ ಅಲ್ಲಿಗೆ ಬಂದ ನಾಯಿಯೊಂದು ಮಗುವನ್ನು ಏಕಾಏಕಿ ಕಚ್ಚಿ ಹಿಡಿಯಿತು. ಜೋರಾದ ಮಗುವಿನ ಚೀರಾಟಕ್ಕೆ ತಾಯಿಯ ಜೀವ ಅರೆ ಜೀವವಾಗಿತ್ತು. ಅಕ್ಕಪಕ್ಕ ಯಾರೂ ಇಲ್ಲದೇ ಆಕೆ ಮುಂದೇನೂ ತೋಚದೆ ಹಾಗೆ ನಿಲ್ಲಲಿಲ್ಲ. ಒಂದೇ ಗುಪ್ಪಿಗೆ ಮಗುವಿನೆಡೆ ಧಾವಿಸಿದ ಆಕೆ ಮೊದಲು ಮಾಡಿದ ಕೆಲಸವೆಂದರೆ ಕಚ್ಚಿ ಹಿಡಿದ ನಾಯಿಯ ಗಂಟಲಿಗೆ ತನ್ನೆರಡು ಕೈಗಳಿಂದ ಒತ್ತಿ ಹಿಡಿದು ಉಸಿರು ಗಟ್ಟಿಸಿದಳು. ಒದ್ದಾಡಿದ ನಾಯಿ ಮಗುವನ್ನು ಬಾಯಿಯಿಂದ ಬಿಡುತ್ತಲೂ ತನ್ನ ಮಗುವಿಗೆ ಕಚ್ಚಿದ ಆ ನಾಯಿಯ ಹಾಗೆ ನೀರಿನಲ್ಲಿ ಮುಳುಗಿಸಿ ಹಿಡಿದು ಅದು ಸಾಯುವವರೆಗೂ ಗಂಟಲು ಅಮುಕಿ ಬಿಟ್ಟಳು. ಇಷ್ಟು ಸಾಕು ಹೆಣ್ಣು ಸಂದರ್ಭ ಬಂದಾಗ ಕೋರೆಹಲ್ಲುಗಳ ನಾಯಿಯನ್ನು ಬಿಡಲಾರಳು. ಆಕೆಯ ಸಾಮರ್ಥ್ಯದ ಅವಗಣನೆ ವಿಪರೀತವಾದಾಗಲೆಲ್ಲ ಇಂತಹ ಘಟನೆಗಳು ಆಕೆಯ ಗಟ್ಟಿತನಕ್ಕೆ ಸಾಕ್ಷಿಯಾಗುತ್ತಲೇ ಹೋಗುತ್ತವೆ. ಆಕೆಯ ಸಾಮರ್ಥ್ಯವ ತೀರಾ ಕ್ಷುಲಕವಾಗಿ ಕಾಣುವವರಿಗೆ ಇಂತಹ ಘಟನೆಗಳು ಕಣ್ಣು ತೆರೆಸಬಹುದು.
ಹೆಣ್ಣು ಮಮತಾಮಯಿ, ಕೋಮಲೆ, ಮೃದುಹೃದಯಿ ಇವೆಲ್ಲವೂ ಸರಿಯೇ. ಆದಾಗ್ಯೂ ಆಕೆಯಲ್ಲೊಬ್ಬ ವ್ಯಗ್ರ ಪುರುಷನಿರುವುದು ಅಷ್ಟೇ ಸತ್ಯ.ಅಂತಹ ಹಲವು ಪಾತ್ರಗಳು ಇತಿಹಾಸ ಪುmಗಳಲ್ಲಿವೆ.ಪುರಾಣದ ಕಟ್ಟುಗಳಲ್ಲಿವೆ. ಆದರೆ ನಮ್ಮ ನಿಮ್ಮ ನಡುವಿನ ಅನೇಕ ಅಂತಹ ಪಾತ್ರಗಳು ದಿನವೂ ಕೆಲವೇ ಜನರ ಗಮನಕ್ಕೆ ಬಂದು ಮೂಲೆ ಗುಂಪಾಗುತ್ತಿವೆ.ತಾಯಿ ಮಮತೆಯ ಪ್ರತಿರೂಪ.ತನ್ನ ಕಂದನ ಬದುಕು ಬೆಳವಣಿಗೆ ಇತ್ಯಾದಿಗಳ ಕುರಿತೇ ಆಕೆ ಚಿಂತಿಸುತ್ತಿರುತ್ತಾಳೆ. ಮಗುವಿಗೇನಾದರೂ ಅನಾಹುತವಾದಲ್ಲಿ ಆಕೆಯ ಹೃದಯ ಒದ್ದಾಡುತ್ತದೆ ಇದೇನೂ ಹೊಸ ವಿಷಯವಲ್ಲ. ಆದರೆ ಆಕೆಯ ಸಾಮರ್ಥ್ಯಕ್ಕೆ ಸಣ್ಣ ಘಟನೆಯ ಪ್ರಸ್ತಾಪವಿದೆ.
ಸ್ತ್ರೀ ಸಾಮರ್ಥ್ಯದ ಕುರಿತು ಬ್ರೀಟಿಸ್ ನಾಟಕಕಾರನೂ, ಕಾದಂಬರಿಕಾರನೂ, ಕವಿಯೂ ಆದ ವಿಲಿಯಂ ಗೋಲ್ಡಿಂಗ್ ಹೀಗೆ ಹೇಳುತ್ತಾನೆ:” ನನ್ನ ಪ್ರಕಾರ ಹೆಣ್ಣು ಪುರುಷನಿಗೆ ಸಮಾನ ಸ್ಥಾನಕ್ಕಾಗಿ ಪ್ರಯತ್ನಿಸುವುದು ಮೂರ್ಖತನವೇ ಸರಿ. ಯಾಕೆಂದರೆ ಆಕೆ ಆತನಿಗಿಂತ ತುಂಬಾ ಶ್ರೇಷ್ಠಳು ಮತ್ತು ಹಾಗೆ ಇರುವಳು ಕೂಡಾ. ಬೇಕಾದರೆ ಆಕೆಗೆ ಏನನ್ನಾದರೂ ಕೊಟ್ಟು ನೋಡಿ. ಆಕೆ ಅದು ಇದ್ದಕ್ಕಿಂತ ಉನ್ನತಗೊಳಿಸುತ್ತಾಳೆ. ದುಪ್ಪಟ್ಟುಗೊಳಿಸುತ್ತಾಳೆ. ನೀವಾಕೆಗೆ ವೀರ್ಯ ನೀಡಿದರೆ ಆಕೆ ನಿಮಗೆ ಮಗುವನ್ನು ನೀಡುವಳು. ಕಟ್ಟಡವೊಂದನ್ನು ಕೊಟ್ಟರೆ ಆಕೆ ಅದನ್ನು ಮನೆಯನ್ನಾಗಿಸುವಳು.ದವಸಧಾನ್ಯಗಳ ತಂದುಕೊಟ್ಟರೆ, ತಿರುಗಿ ನಿಮಗಾಕೆ ಊಟವನ್ನು ನೀಡುವಳು. ನೀವು ಮುಗುಳು ನಗೆ ಎಸೆದರೆ, ಆಕೆ ತನ್ನ ಕರುಣಾಮಯಿಯಾಗಿ ಹೃದಯವನ್ನೆ ಕೊಡುವಳು. ಆಕೆ ತನಗೆ ನೀಡಿದ್ದನ್ನೆಲ್ಲಾ ದ್ವಿಗುಣಗೊಳಿಸುತ್ತಾಳೆ, ವಿಸ್ತರಿಸುತ್ತಾಳೆ.ಹಾಗಾಗಿ ನೀವೇನಾದರೂ ಆಕೆಗೆ ಅಸಭ್ಯ ಹೊಲಸು, ಅವ್ಯಾಚ್ಯವಾದದನ್ನು ಅಥವಾ ಬೇಡದ್ದನ್ನು ನೀಡಿದರೆ ಆಕೆಯಿಂದ ಅದನ್ನೆ ಟನ್ಗಟ್ಟಲೆ ಮರಳಿ ಪಡೆಯಲು ಸಿದ್ದರಾಗಿರಿಎನ್ನುತ್ತಾನೆ.
ಹೌದು, ಹೆಣ್ಣು ಸೃಷ್ಟಿಯ ಸೃಜನಶೀಲತೆಯ ಸಂಕೇತ. ಆಕೆಯ ಕೈಯಲ್ಲಿ ಅಂತಹ ಶಕ್ತಿ ಇದೆ. ತನ್ನಲ್ಲಿರುವ ಇಲ್ಲವೇ ನೀಡಿದ ವಸ್ತುಗಳನ್ನು ಇಲ್ಲ ಯೋಜನೆಗಳನ್ನು ತ್ವರಿತವಾಗಿ ಹರಿತವಾಗಿ ಆಕೆ ಇಮ್ಮಡಿಗೊಳಿಸಿಕೊಳ್ಳುವದಲ್ಲಿ ಆಸಕ್ತೆ.ಗಂಡು ಬರಿಯ ವೀರ್ಯದಾನಿ ಅಷ್ಟೇ!ಹೆಣ್ಣಿನ ಗರ್ಭ ಸೇರಿದ ಆ ವೀರ್ಯಕ್ಕೆ ತನ್ನೆಲ್ಲಾ ರಕ್ತ ಮಾಂಸಗಳ ಧಾರೆ ಎರೆದು ಸುಂದರವಾದ ಜೀವವನ್ನು ಆಕೆ ಜಗತ್ತಿಗೆ ನೀಡುತ್ತಾಳೆ. ಆ ಒಂಬತ್ತು ತಿಂಗಳು ಆಕೆಯ ಕನಸುಗಳಲ್ಲಿ ಮಗುವಿನ ಕುರಿತಾದ ಸುಂದರ ಕಾಲ್ಪನಿಕ ಚಿತ್ರಗಳು ಮೇಳೈಸುತ್ತಾ, ಕ್ರಮೇಣ ಆದನ್ನೆ ವಾಸ್ತವಿಕ ರೂಪದಲ್ಲಿ ಆಕೆ ಅದನ್ನು ಇಯುತ್ತಾಳೆ. ಎಂತಹ ಅನನ್ಯ ಸಾಮರ್ಥ್ಯ ಆಕೆಯದು.
ಇನ್ನು ಬರಿಯ ಸಿಮೆಂಟು ಗಾರೆಗಳಿಂದ ಕೂಡಿದ ಕಟ್ಟಡದ ಗೋಡೆ ಬಾಗಿಲುಗಳು ಕೂಡಾ ಮಾತನಾಡುವುದು ಆ ಮನೆಯಲ್ಲೊಂದು ಸ್ತ್ರೀ ನೆಲಸಿದಾಗಲೇ ಅಲ್ಲವೇ?ಕಟ್ಟಡವೊಂದು ಜೀವಭಾವ ತುಂಬಿಕೊಂಡು ಮಕ್ಕಳು ಮರಿಗಳಿಂದ ತುಂಬಿ ಅವರ ತೊದಲುನುಡಿಗಳಲ್ಲಿ ನಂದನವನದಂತೆ ಶೋಭಿಸುವುದು ಆ ಮನೆಯಲ್ಲಿ ಹೆಣ್ಣು ವಾಸಿಸಿದಾಗಲೇ.ಮನೆ ಮುಂದೊಂದು ತುಳಸಿಕಟ್ಟೆ,ರಂಗೋಲಿಯ ದರ್ಶನವಾಗುವುದು ಹೆಣ್ಣೊಂದು ಆ ಮನೆಯಲ್ಲಿರುವ ಸಂಕೇತ ಸೂಚಕ. ಸಂಬಂಧಗಳ ಬಲೆ ಬೆಸೆದ ಅದೊಂದು ಮನೆಯಾಗುವುದು.ಹಾಗೆ ಕೋಮಲ ಮನಸ್ಸಿನ ಆಕೆಗೆ ಪತಿಯ ಕಿರುನಗೆಯ ಕಾಣಿಕೆ ಸಾಕು ಆಕೆ ಬೇಸರ, ನೋವುಗಳ ತೊಡೆದು ಹಾಕಲು ಒಂದೆರಡು ಮೆಚ್ಚುಗೆಯ ಸಾಲುಗಳಾದರೂ ಸಾಕು ಆಕೆಯ ಗುಲಾಬಿ ಹೃದಯ ಅರಳಲು.
ಆದರೆ ಅದೇನಾದರೂ ನೀವು ಆಕೆಯ ಅನ್ಯಾಯವಾಗಿ ನಿಂದಿಸಿದಿರೋ ಇಲ್ಲವೇ ಅವ್ಯಾಚ್ಯವಾಗಿ ಹಂಗಿಸಿದಿರೋ ಆಕೆಯ ಗಂಟಲನ್ನು ನಿಯಂತ್ರಿಸುವುದು ಬಹಳ ಕಷ್ಟ.ಸೇರಿಗೆ ಸವ್ವಾಸೇರು ಎಂಬಂತೆ ತನ್ನ ನಾಲಿಗೆಯ ಬತ್ತಳಿಕೆಯಲ್ಲಿಯ ಎಲ್ಲ ಶಬ್ದಗಳನ್ನು ಆಕೆಗೆ ಲೀಲಾಜಾಲವಾಗಿ ನಲ್ಲಿಯಲ್ಲಿ ನೀರು ಬಿಟ್ಟಂತೆ ಹರಿಸುವ ಸಾಮರ್ಥ್ಯ ಉಳ್ಳವಳು. ಹಾಗಾಗಿ ಹೆಣ್ಣು ಮತ್ತಾಕೆಯ ಭಾವನೆಗಳ ಮೇಲೆ ದಬ್ಬಾಳಿಕೆ ಸಲ್ಲ. ಹಾಗೆ ಆಕೆ ಕೆಲವು ಸಂದರ್ಭಗಳಲ್ಲಿ ಕಾಳಿಯಾಗುವುದು ಮತ್ತದರ ಪುಷ್ಕಳ ಕಲ್ಪನೆಗಳು ಪುರುಷನಾದವನಿಗೆ ಗೊತ್ತಿಲ್ಲದ ಸಂಗತಿಗಳಲ್ಲ.ಮನೆಯ ನಾರಿಮಣಿಗಳ ಜೊತೆ ಇಂತಹ ಪ್ರಸಂಗಗಳು ಬಹುಸಂಖ್ಯಾತ ಪುರುಷರ ಅನುಭವವೇ.ಪತಿಪತ್ನಿಯರ ನಡುವಿನ ಸಂಬಂಧಗಳು ಕೂಡಾ ಇಂದಿಗೆ ತೀರಾ ತಿಕ್ಕಾಟದಲ್ಲೇ ಸವೆದುಹೋಗುತ್ತಿರುತ್ತವೆ.ಆಗಾಗ ಮನೆಯಲ್ಲಿ ರುಧ್ರನ ನರ್ತನಗಳು,ಕಾಳಿಮಂಕಾಳಿಯರು ಮೈಮೇಲೆ ಬರುವುದಿದೆ.ಇವೆಲ್ಲ ಸಂಸಾರ ಸಾಗರದ ಏಳು ಬೀಳುಗಳ ಕೊಂಡಿಗಳು.ಉಬ್ಬರವಿಳಿತದ ಅಲೆಗಳು.ಹಾಗಿದ್ದೂ ಸಾಂಸಾರಿಕ ಸುಖವೊಂದಿದೆ.ಪತಿಪತ್ನಿ ಮಕ್ಕಳು ಎಂಬೆಲ್ಲಾ ಬೆಸುಗೆಗಳಿವೆ. ಅವೆಲ್ಲವೂ ಬದುಕಿನ ಅವಿಭಾಜ್ಯ ಸಂಗತಿಗಳೇ. ಪರಸ್ಪರ ಸ್ನೇಹ,ವಿಶ್ವಾಸ ಸಹಕಾರಗಳು ಮನೆಯ ತಳಪಾಯ, ಗೋಡೆ ಮೇಲ್ಚಾವಣಿಗಳಿದ್ದಂತೆ. ಆದರೆ ಸರಿಸಮಾನ ಗೌರವ ಆದರಗಳು ಆ ಮನೆಯ ಸ್ತ್ರೀ ಪಡೆದದ್ದೆ ಹೌದಾದರೆ ಅಲ್ಲಿ ಸಧೃಡ ಬಂಧಗಳು ಏರ್ಪಡುತ್ತವೆ.ಕುಟುಂಬ ಜೀವನಕ್ಕೆ ಸಮಾಜದ ಬಲವಾದ ಪ್ರತಿಪಾದನೆ ಇದೆ. ಕಟ್ಟುಪಾಡುಗಳಿವೆ.ಜೀವನ ವಿಧಾನಗಳಿವೆ. ಇವೆಲ್ಲದರಲ್ಲಿಯೂ ಹೆಣ್ಣು ಸಮಸಮವಾಗಿ ಪರಿಗಣಿಸಲ್ಪಡಬೇಕು.
ಆದರೆ ಗಂಭೀರ ನಿರ್ಧಾರಗಳ ಮಟ್ಟಿಗೆ ಅಕೆಯನ್ನು ದೂರವಿಟ್ಟೆ ನಿರ್ಧರಿಸುವುದು ಅವಿಭಕ್ತ ಕೌಟಂಬಿಕಗಳಲ್ಲಿ ಸರ್ವೇಸಾಮಾನ್ಯ. ಅಂತಹ ಕುಟುಂಬಗಳಲ್ಲಿ ಹೆಣ್ಣು ಬರಿಯ ಮಕ್ಕಳನ್ನು ಹೆತ್ತು, ಅಡುಗೆ ಬೇಯಿಸಿ ಹಾಕಲು ಇರುವ ಯಂತ್ರದಂತೆ ಎಂಬ ಸಾಮಾನ್ಯ ಕಲ್ಪನೆ ಬದಲಾಗಲು ಇನ್ನೆಷ್ಟು ಕಾಲ ಕಾಯಬೇಕೋ ತಿಳಿಯದು.ಆದರೆ ಇಂದು ಆರ್ಥಿಕ ಸಮಾನತೆಯ ಕಾರಣ ವಿಭಕ್ತ ಕುಟುಂಬಗಳು ತಲೆ ಎತ್ತುತ್ತಿದ್ದು ಅಲ್ಲಿ ಹೆಣ್ಣು ಕೂಡಾ ಗಂಡಿನಂತೆ ಸಮಾನ ಚಿಂತನೆಗೆ ಭಾಗಿಯಾಗುತ್ತಿದ್ದಾಳೆ.ಇಲ್ಲಿಯೂ ದೋಷಗಳು ಇಲ್ಲವೆಂದಲ್ಲ. ಆದರೆ ಈ ಮಟ್ಟಿಗೆ ಆಕೆ ಸ್ವಂತ ಅಭಿಪ್ರಾಯಕ್ಕೆ ಆದ್ಯತೆ ಸಿಗುತ್ತಿದೆ.
ಹಾಗಾಗಿ ಸ್ತ್ರೀ ಪುರುಷ ಸಮಾನ ಸಂವೇದಿಗಳು.ಸನ್ನಿವೇಷಕ್ಕೆ ಅನುಗುಣವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳಷ್ಟೇ ಹೊರತು ಯಾರೊಬ್ಬರೂ ಶ್ರೇಷ್ಠರೂ ಕನಿಷ್ಠರೂ ಅಲ್ಲ.ವಿವಾಹ ಎನ್ನುವ ಮೂರಕ್ಷರದೊಂದಿಗೆ ನಾವೆಲ್ಲ ಬಂಧಿಗಳಾಗಿರುವುದು ಸಹಜ. ಅದು ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದು ಚೌಕಟ್ಟು.ಸುರಕ್ಷಿತತೆಯ ದೃಷ್ಟಿಕೋನದಿಂದ ಒಂದು ಒಪ್ಪಂದ.ಭಾವನಾತ್ಮಕ ನೆಲೆಯಿಂದ ಸೂಕ್ಷ್ಮ ಸಂಗತಿ.ಆದರೆ ವಿಪರ್ಯಾಸವೆಂದರೆ ಮದುವೆಯಾಗುತ್ತಲೇ ಹೆಣ್ಣಿನ ಕುತ್ತಿಗೆಯಲ್ಲಿ ಹೊಳೆವ ತಾಳಿ ಬೀಳಲೆ ಬೇಕು. ಅದಾಕೆಯ ಒಂದು ಘನತೆಯನ್ನು ಗೌರವವನ್ನು ತಂದುಕೊಡುತ್ತದೆ ಎಂಬುದು ಹೆಚ್ಚಿನ ಸ್ತ್ರೀಯರ ಅಭಿಪ್ರಾಯವೂ. ಅದೇನೂ ತಪ್ಪಲ್ಲ.
ಆದರೆ ಇದನ್ನು ಗಂಡಿಗೂ ಅನ್ವಯಿಸಿದ್ದರೆ ಆಗ ಆತನ ಬಗ್ಗೆಯೂ ಇಂತಹುದೇ ಗೌರವ ಸಂಪಾದನೆಯ ಅವಕಾಶ ಸುಲಭದಲ್ಲಿ ಸಿಗುತ್ತಿತ್ತಲ್ಲ. ಆತನ ಬಗ್ಗೆ ಅಪಾರವಾದ ಅಭಿಮಾನ ಗೌರವಗಳು ಇತರರಿಗೆ ಮೂಡುತ್ತಿತ್ತು. ಆದರೆ ಅದಕ್ಕೆ ಅವಕಾಶವಿಲ್ಲ. ಇಲ್ಲಿ ಕಾಣುವುದೇ ಅಸಮಾನತೆ. ಹಾಗಾಗಿ ಮುಂದುವರೆದಂತೆ ಕಾಲ ಸ್ತ್ರೀ ಕೂಡಾ ಸಮಾನತೆಯ ಸಂಕೇತವಾಗಿ ತನ್ನ ಲಾಂಚನವೊಂದನ್ನು ಪುರುಷನಿಗೆ ಧಾರಣೆ ಮಾಡುವ ಕಾಲ ಬೇಗನೇ ಬರಲಿ ಎಂಬುದು ಅರ್ಧನಾರೀಶ್ವರ ಕಲ್ಪನೆಯಲ್ಲಿ ಒಲವುಳ್ಳ ಮಹಿಳೆಯರ ಆಪೇಕ್ಷೆ.
*****