Home / ಕವನ / ಭಾವಗೀತೆ / ಕೂಸಿನ ಹಾಡು

ಕೂಸಿನ ಹಾಡು

ಕೂಸ ಕೂಸೆಂದೇನ ಕುಂದಽಲದ್ಹರಳಿಽಗಿ|
ಮಂಡಲದಾಗಾಡೊ ಮಗನ ಗೋವಿಂದಾ||
ಕೂಸ ಕಂಡೀಽರೆ| ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೧||

ಸಣ್ಣಾಗಿ ಬೀಸಿಽದ ಸಂಣ್ಹಲ್ಲಿ ಮಾಡಿಽದ|
ಬೆಣ್ಹೆಚ್ಚಿ ರೊಟ್ಟೀ ನಾ ಕುಡುವೆನವ್ವಾ||
ಕೂಸ ಕಂಡಿಽರೇ| ಅವ್‌ ನನ್ನ|
ಬಾಲಽನ ಕಂಡಿಽರೆ ||೨||

ಹೆಸರಂಗಿ ತೊಡೆಸಿಽದ ಹಾಲಗಡಗ ಇಡಸಿಽದ|
ಕುಸಲದ ಟಿಪ್ಪಿಽಗಿ ತೆಲಿಮ್ಯಾಲಿತ್ತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೩||

ಭಾಂಯಿ ಮ್ಯಾಲ ನಿಂತಿತ್ತು ಬಾಯಿ ಮಾಡಿ ಅಳತಿತ್ತು|
ಕಂಡ ಬಾಲ್ಯಾರಿಗಿಽ ಕೈಮಾಡಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೪||

ಬಿಳಿ ಅಂಗಿ ತೊಡಸಿಽದ ಬಿಳಿಮುತ್ತ ನಿಡಸಿಽದ
ಅಂಗಳದಾಗ ಕೂಸಾ ಮಾಯಾಯಿತವ್ವಾ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೫||

ಗಂಡೆಹೆಂಡರು ಕೂಡಿ ಖಂಡಗ ಹರಕೀ ಮಾಡಿ|
ನಾ ಗಂಡಸಮಗನಽ ಹೆಡೆದಿದ್ದ ನವ್ವಾ|| ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೬||

ಜನವ ಜಾತ್ರಿಽಗ್ಹೊಯ್ತ ನಾನೂ ಜಾತ್ರಿಽಗ್ಹ್ವಾದ|
ಜನಕಿಲ್ಲದ ಕೇಡಾ ನನಗಾಯಿತವ್ವಾ ||
ಕೂಸ ಕಂಡೀಽರೇ| ‌ಅವ್ವ್‌ ನನ್ನ|
ಬಾಲಽನ ಕಂಡಿಽರೆ ||೭||
*****

ಭಾವಗೀತಗಳು

ಹೃದಯೋದ್ರೇಕಕ್ಕೆ ಕಾರಣವಾಗುವ ಯಾವುದೊಂದು ಒಂಟಿ ಸಂಗತಿಯನ್ನು ಕುರಿತು ಅದರ ಬೇರೆಬೇರೆ ಮಗ್ಗಲುಗಳನ್ನು ಒಂದೊಂದಾಗಿ ಬಣ್ಣಿಸುತ್ತ ಬಂದ ಹಾಗೆಲ್ಲ ಶ್ರೋತೃವಿನ ಅಂತರಂಗದಲ್ಲಿ ಭಾವಾವೇಗವು ಏಳುತ್ತದೆ. ಇಂತಹ ಹಾಡುಗಳಿಗೆ “ಭಾವಗೀತಗಳೆ”ಂದು ನಾಮಕರಣ ಮಾಡಲಾಗಿದೆ. ಈ ಹಾಡುಗಳಲ್ಲಿ ಒಂದೇ ಪಾತ್ರವು ತನ್ನ ಸ್ವಗತವನ್ನು ಕಲ್ಲು ಕರಗುವಂತೆ ಬಣ್ಣಿ ಸುತ್ತಿರುವುದುಂಟು.

ಕೂಸಿನ ಹಾಡು

ಜಾತ್ರೆಗೆ ಹೋದ ಒಬ್ಬ ಹೆಣ್ಣುಮಗಳು ಬಾವಿಯ ದಂಡೆಯ ಮೇಲೆ ನೀರು ಕುಡಿಯುವಾಗ ಜನರ ದಟ್ಟಣೆಯಲ್ಲಿ ಅವಳ ಕೂಸು ತಪ್ಪಿಸಿಕೊಂಡು ಬಿಟ್ಟಿದೆ. ಎಷ್ಟು ಹುಡುಕಿದರೂ ಸಿಗದಂತಾಗಲು ಅವಳು ನೆನೆನೆನೆಸಿ ಅಳುತ್ತಾಳೆ.

ಛಂದಸ್ಸು:— ತ್ರಿಪದಿಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಕುಂದಲ=ಕುಂದಣ. ಮಂಡಲ=ಬರಿದಾದ ಸ್ಥಳ. ಹಲ್ಲಿ=ಚಿಕ್ಕ ರೊಟ್ಟಿ. ಇಡಸೀದ=ಇಡಿಸಿರುವೆನು. ತೆಲಿ=ತಲೆ. ಹ್ವಾದ=ಹೋದೆನು.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...