Home / ಕವನ / ಕವಿತೆ / ಬಾಗಿಲು ತೆಗೆ ಮಗೂ

ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ
ಗಾಳಿ ಸ್ವಚ್ಚಂದ ಓಡಾಡಲಿ
ಕಿಟಕಿಯ ಬಾಗಿಲು ತೆರೆದು
ಕಣ್ಣಿನ ಬಾಗಿಲು ತೆರೆದು
ತುಂಬಿಕೋ, ನೋಡಿಕೋ ನೂರಾರು ನೋಟ
ಅರಿತುಕೋ
ಬಹಳಷ್ಟು ಇವೆ ಕಲಿಯಬೇಕಾದ ಪಾಠ

ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು
ಕಣ್ಣು ಕಿವಿ ಮೂಗು ಎಲ್ಲಾ
ಮುಚ್ಚಿದ ಬಾಗಿಲು ತೆರೆದು
ಮನ ಬಿಚ್ಚಿ ನೋಡು
ಕಂಡ ಕತ್ತಲೆಯು ಬೆಳಕೆಂದು
ಭ್ರಮಿಸುವ ಕಣ್ಣುಮುಚ್ಚಾಲೆ
ಬೇಡವೇ ಬೇಡ ಮರಿ ಸಾಕು ಮಾಡು

ಎಲ್ಲಾ ಬಂಧನ ಕಳಚಿ
ಸರಪಳಿ ಬಿಚ್ಚಿದ ನಾಯಿ
ಒಮ್ಮೆಲೇ ಜಿಗಿದಾಡುವಂತೆ
ಉಲ್ಲಾಸ, ಸಂತೋಷ ತುಂಬಿ
ಹಿಗ್ಗಿ ಕುಣಿದಾಡು
ಯಾವತ್ತಿಗೂ ಬೇಡ, ಬೇಡ ಬೇಡ
ಬಂಧನದ ನಾಯಿ ಪಾಡು

ಆಕಾಶ ನೋಡು, ಆಕಾಶದ ತುಂಬಾ
ನಕ್ಕಿ ಚಂದ್ರ ತಾರೆಗಳ ಉಲ್ಲಾಸ ನೋಡು
ಹನ್ನೆರಡು ಗಂಟೆಯ ಬಿಸಿಲು
ನಿಮ್ಮೂರ ಗುಡ್ಡದ ತುದಿಯ
ಮೇಲೆ ಹತ್ತಿ ನಿನ್ನೂರು ನೋಡು
ನಿನ್ನೂರು
ಎಷ್ಟು ಸಣ್ಣದು ಮರೀ
ಕಂಡೆಯಾ?

ಒಳಗೊಳಗೇ ಕುಳಿತು
ಇದೇ ಬ್ರಹಾಂಡ ಎಂದುಬಿಟ್ಟಿವಲ್ಲ
ಅಯ್ಯೊ ಮಗು
ಅದ್ಭುತ ಗೋಲಾಕಾರ ಈ ಭೂಮಿ
ಭೂಮಿಯನ್ನು ಮೀರಿ ವಿಶ್ವ-
ವಿಶ್ವಾತ್ಮಗಳ ಎದುರು
ನಾನೂ ನೀನೂ
ಹೇಳು, ಅಣುವಾಗಿಯಾದರೂ ಉಳಿಯಬಹುದೇನು ?

ಮಗೂ, ಅಂಗಿ ಚಡ್ಡಿ ಎಲ್ಲಾ ಕಳಚು
ಈ ಗೋಡೆ, ಈ ಬಾಗಿಲು, ಈ ಕಿಟಕಿ
ಎಲ್ಲಾ ಗೌರವದ ಬಂಧನ
ಬಂಧಿಸಿದ
ಆತ್ಮೀಯ ಆಕ್ರಮಣ

ಬಾಗಿಲು ತೆರೆಯೋಣ ಮಗೂ ಬಾ ಬಾ
ಬಾಗಿಲು ತೆರೆದು
ಮುಟ್ಟೋಣ ಈ ಭೂಮಿಯಿಂದ ಆ ಮುಗಿಲು
ತುಂಬಿದ ನಿಗಿ ನಿಗಿ ಹಗಲು
ಅಂಥ ದಿವ್ಯ ತೇಜಸ್ಸಿನೊಡಲು
*****

 

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...