Home / ಕವನ / ಕವಿತೆ / ಬಾಗಿಲು ತೆಗೆ ಮಗೂ

ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ
ಗಾಳಿ ಸ್ವಚ್ಚಂದ ಓಡಾಡಲಿ
ಕಿಟಕಿಯ ಬಾಗಿಲು ತೆರೆದು
ಕಣ್ಣಿನ ಬಾಗಿಲು ತೆರೆದು
ತುಂಬಿಕೋ, ನೋಡಿಕೋ ನೂರಾರು ನೋಟ
ಅರಿತುಕೋ
ಬಹಳಷ್ಟು ಇವೆ ಕಲಿಯಬೇಕಾದ ಪಾಠ

ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು
ಕಣ್ಣು ಕಿವಿ ಮೂಗು ಎಲ್ಲಾ
ಮುಚ್ಚಿದ ಬಾಗಿಲು ತೆರೆದು
ಮನ ಬಿಚ್ಚಿ ನೋಡು
ಕಂಡ ಕತ್ತಲೆಯು ಬೆಳಕೆಂದು
ಭ್ರಮಿಸುವ ಕಣ್ಣುಮುಚ್ಚಾಲೆ
ಬೇಡವೇ ಬೇಡ ಮರಿ ಸಾಕು ಮಾಡು

ಎಲ್ಲಾ ಬಂಧನ ಕಳಚಿ
ಸರಪಳಿ ಬಿಚ್ಚಿದ ನಾಯಿ
ಒಮ್ಮೆಲೇ ಜಿಗಿದಾಡುವಂತೆ
ಉಲ್ಲಾಸ, ಸಂತೋಷ ತುಂಬಿ
ಹಿಗ್ಗಿ ಕುಣಿದಾಡು
ಯಾವತ್ತಿಗೂ ಬೇಡ, ಬೇಡ ಬೇಡ
ಬಂಧನದ ನಾಯಿ ಪಾಡು

ಆಕಾಶ ನೋಡು, ಆಕಾಶದ ತುಂಬಾ
ನಕ್ಕಿ ಚಂದ್ರ ತಾರೆಗಳ ಉಲ್ಲಾಸ ನೋಡು
ಹನ್ನೆರಡು ಗಂಟೆಯ ಬಿಸಿಲು
ನಿಮ್ಮೂರ ಗುಡ್ಡದ ತುದಿಯ
ಮೇಲೆ ಹತ್ತಿ ನಿನ್ನೂರು ನೋಡು
ನಿನ್ನೂರು
ಎಷ್ಟು ಸಣ್ಣದು ಮರೀ
ಕಂಡೆಯಾ?

ಒಳಗೊಳಗೇ ಕುಳಿತು
ಇದೇ ಬ್ರಹಾಂಡ ಎಂದುಬಿಟ್ಟಿವಲ್ಲ
ಅಯ್ಯೊ ಮಗು
ಅದ್ಭುತ ಗೋಲಾಕಾರ ಈ ಭೂಮಿ
ಭೂಮಿಯನ್ನು ಮೀರಿ ವಿಶ್ವ-
ವಿಶ್ವಾತ್ಮಗಳ ಎದುರು
ನಾನೂ ನೀನೂ
ಹೇಳು, ಅಣುವಾಗಿಯಾದರೂ ಉಳಿಯಬಹುದೇನು ?

ಮಗೂ, ಅಂಗಿ ಚಡ್ಡಿ ಎಲ್ಲಾ ಕಳಚು
ಈ ಗೋಡೆ, ಈ ಬಾಗಿಲು, ಈ ಕಿಟಕಿ
ಎಲ್ಲಾ ಗೌರವದ ಬಂಧನ
ಬಂಧಿಸಿದ
ಆತ್ಮೀಯ ಆಕ್ರಮಣ

ಬಾಗಿಲು ತೆರೆಯೋಣ ಮಗೂ ಬಾ ಬಾ
ಬಾಗಿಲು ತೆರೆದು
ಮುಟ್ಟೋಣ ಈ ಭೂಮಿಯಿಂದ ಆ ಮುಗಿಲು
ತುಂಬಿದ ನಿಗಿ ನಿಗಿ ಹಗಲು
ಅಂಥ ದಿವ್ಯ ತೇಜಸ್ಸಿನೊಡಲು
*****

 

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...