Home / ಕವನ / ಕವಿತೆ / ದೇವರು ನಗುವುದಾ ಕಂಡೆ

ದೇವರು ನಗುವುದಾ ಕಂಡೆ

ಪೇಪರಿನ ಬಾಣಬತ್ತಳಿಕೆಗಳ ಹಿಡಿದು
ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು
ಪುರಾವೆ ಪತ್ರಗಳ ಹಿಡಿದು
ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು*
ಬಣ್ಣಬಣ್ಣದ ಹುಲಿವೇಷದವುಗಳು.

ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ
ಎಚ್ಚರಿದ್ದಂತೆಯೇ ಇದ್ದ ದೇವರು
ಇಬ್ಬದಿಯ ಗಂಟುಮುಖಗಳ ನಡುವೆ
ಗುಮ್ಮಾಗಿ ನಗುವುದಾ ಕಂಡೆ.

ಕಂಡೆಕಂಡೆ ತುಕ್ಕುಹಿಡಿದ ಖಾಲಿಕೊಡಗಳ
ಬುಡಬುಡಿಕೆ ಭರ್‍ಚಿ ಗುರಾಣಿ ಎಸೆದಾಟ
ದೇವರು ಕಾಣಿಸಿಯೇ ಕಾಣುವನೆಂಬ
ಭರವಸೆ ಹೊತ್ತು ಕಣ್ಣುಮುಚ್ಚಿ ತುಟಿಬಿಚ್ಚಿ
ಪಿಟಿಪಿಟಿಸುವ ಸಮಯಸಾಧಕರ.

ತಣ್ಣನೆಯ ಬೆಳಕಿನಾ ನಡುವೆ
ಕಿವುಡ ಮೂಕ ಹೆಳವನಾಗಿ ಕಲ್ಲಿನೊಳಗೆ
ಕಣ್ಣು ಪಿಳಿಕಿಸದೆ ಕತ್ತಲೆ ಕೋಣೆಯಲಿ
ಇವರಂಥವರೇ ತೊಡಿಸಿದ ಮುಖವಾಡದೊಳಗೆ
ಉಸಿರು ಬಿಗಿಹಿಡಿದು ಇವರಂತೆಯೇ
ಮೇಲೆ ನಗುಮುಖ ಹೊಂದಿರುವ ದೇವರು ನಗುವುದಾ ಕಂಡೆ.

ಜರತಾರಿ ಪಂಚೆ ಉಟ್ಟ ಪಾತ್ರಧಾರಿಗಳು
ಹತ್ತೂ ಬೆರಳ ಹರಳಿನ ನಕ್ಷತ್ರಕರು
ಕುಂಕುಮ ಶ್ರೀಗಂಧ ಪೂಸಿತರು
ದೇವರನು ಮಾತನಾಡಿಸಿಯೇ ಬಂದಂತೆ
ಕಚ್ಚಾಡಿದ್ದೇ ಕಚ್ಚಾಡಿ ನಂಜೇರಿಸಿಕೊಂಡು
ಸುರಿವ ಮಳೆಯೊಳಗೆ ಭಾಷಣ ಬಿಗಿದದ್ದು ನೋಡಿ
ದೇವರು ನಕ್ಕ.
ಮಂತ್ರಿಗಳಂತೆ ಇವು ಅಲ್ಲಲ್ಲ ತಂತ್ರಿಗಳು.
ಕಂಡೆ ಕಂಡೆ ಮತ್ತೊಮ್ಮೆ ಇನ್ನೊಮ್ಮೆ
ದೇವರು ನಗುವುದಾ ಕಂಡೆ.

ರಾತ್ರಿಗೆ ಸುಸ್ತಾದ ದೇವನ ಹೂಹಾರ
ಮುಖವಾಡ ತೆಗೆದಿಟ್ಟು ಪೂಜಾರಿ
ಹಗುರಾಗಿ ಹಣ್ಣು ಹಂಪಲ ಹೊತ್ತುಕೊಂಡು ಹೋದದ್ದೇ-
ಬೆತ್ತಲೆ ದೇವರು ಸುಸ್ತಾಗಿ
ಗಡದ್ದಾಗಿ ನಿದ್ದೆಗೆ ಜಾರಿದಾಗಲೂ
ಈ ಯಂತ್ರ ಮಂತ್ರ ತಂತ್ರದವರ
ಕಂಬಿ ಕಟಕಟೆಯ ಶಿಕ್ಷೆ ನೋಡಿ
ಕೈಯಲೊಂದು ಏಕತಾರಿ ಕೊಡಬೇಕಿವಕೆನ್ನುತ
ದೇವರು ಗಹಗಹಿಸಿ ನಗುವುದಾ ಕಂಡೆ
ದೇವರು ಬಿದ್ದು ಬಿದ್ದು ನಗುವುದ ಕಂಡೆ.

* [ಮಾಜಿ ಮಂತ್ರಿಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ – ಧರ್ಮಸ್ಥಳದ ಮಂಜುನಾಥನ ಎದುರು. ಮಂತ್ರಿ ಕಿಮ್ಮನೆ ರತ್ನಾಕರ – ಮಾರಿಕಾಂಬ ದೇವಸ್ಥಾನದಲ್ಲಿ.]
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...