ದೇವರು ನಗುವುದಾ ಕಂಡೆ

ಪೇಪರಿನ ಬಾಣಬತ್ತಳಿಕೆಗಳ ಹಿಡಿದು
ಒಬ್ಬರನ್ನೊಬ್ಬರು ಗುರಿಯಿಟ್ಟು ಕೊಲ್ಲಲು
ಪುರಾವೆ ಪತ್ರಗಳ ಹಿಡಿದು
ದೇವರಿಗೆ ಹೊರಟಿವೆ ರಾಜಕೀಯ ಪಾತ್ರಧಾರಿಗಳು*
ಬಣ್ಣಬಣ್ಣದ ಹುಲಿವೇಷದವುಗಳು.

ಆಣೆ ಪ್ರಮಾಣ ಪ್ರತಿಜ್ಞೆಗಳಿಗೆ
ಎಚ್ಚರಿದ್ದಂತೆಯೇ ಇದ್ದ ದೇವರು
ಇಬ್ಬದಿಯ ಗಂಟುಮುಖಗಳ ನಡುವೆ
ಗುಮ್ಮಾಗಿ ನಗುವುದಾ ಕಂಡೆ.

ಕಂಡೆಕಂಡೆ ತುಕ್ಕುಹಿಡಿದ ಖಾಲಿಕೊಡಗಳ
ಬುಡಬುಡಿಕೆ ಭರ್‍ಚಿ ಗುರಾಣಿ ಎಸೆದಾಟ
ದೇವರು ಕಾಣಿಸಿಯೇ ಕಾಣುವನೆಂಬ
ಭರವಸೆ ಹೊತ್ತು ಕಣ್ಣುಮುಚ್ಚಿ ತುಟಿಬಿಚ್ಚಿ
ಪಿಟಿಪಿಟಿಸುವ ಸಮಯಸಾಧಕರ.

ತಣ್ಣನೆಯ ಬೆಳಕಿನಾ ನಡುವೆ
ಕಿವುಡ ಮೂಕ ಹೆಳವನಾಗಿ ಕಲ್ಲಿನೊಳಗೆ
ಕಣ್ಣು ಪಿಳಿಕಿಸದೆ ಕತ್ತಲೆ ಕೋಣೆಯಲಿ
ಇವರಂಥವರೇ ತೊಡಿಸಿದ ಮುಖವಾಡದೊಳಗೆ
ಉಸಿರು ಬಿಗಿಹಿಡಿದು ಇವರಂತೆಯೇ
ಮೇಲೆ ನಗುಮುಖ ಹೊಂದಿರುವ ದೇವರು ನಗುವುದಾ ಕಂಡೆ.

ಜರತಾರಿ ಪಂಚೆ ಉಟ್ಟ ಪಾತ್ರಧಾರಿಗಳು
ಹತ್ತೂ ಬೆರಳ ಹರಳಿನ ನಕ್ಷತ್ರಕರು
ಕುಂಕುಮ ಶ್ರೀಗಂಧ ಪೂಸಿತರು
ದೇವರನು ಮಾತನಾಡಿಸಿಯೇ ಬಂದಂತೆ
ಕಚ್ಚಾಡಿದ್ದೇ ಕಚ್ಚಾಡಿ ನಂಜೇರಿಸಿಕೊಂಡು
ಸುರಿವ ಮಳೆಯೊಳಗೆ ಭಾಷಣ ಬಿಗಿದದ್ದು ನೋಡಿ
ದೇವರು ನಕ್ಕ.
ಮಂತ್ರಿಗಳಂತೆ ಇವು ಅಲ್ಲಲ್ಲ ತಂತ್ರಿಗಳು.
ಕಂಡೆ ಕಂಡೆ ಮತ್ತೊಮ್ಮೆ ಇನ್ನೊಮ್ಮೆ
ದೇವರು ನಗುವುದಾ ಕಂಡೆ.

ರಾತ್ರಿಗೆ ಸುಸ್ತಾದ ದೇವನ ಹೂಹಾರ
ಮುಖವಾಡ ತೆಗೆದಿಟ್ಟು ಪೂಜಾರಿ
ಹಗುರಾಗಿ ಹಣ್ಣು ಹಂಪಲ ಹೊತ್ತುಕೊಂಡು ಹೋದದ್ದೇ-
ಬೆತ್ತಲೆ ದೇವರು ಸುಸ್ತಾಗಿ
ಗಡದ್ದಾಗಿ ನಿದ್ದೆಗೆ ಜಾರಿದಾಗಲೂ
ಈ ಯಂತ್ರ ಮಂತ್ರ ತಂತ್ರದವರ
ಕಂಬಿ ಕಟಕಟೆಯ ಶಿಕ್ಷೆ ನೋಡಿ
ಕೈಯಲೊಂದು ಏಕತಾರಿ ಕೊಡಬೇಕಿವಕೆನ್ನುತ
ದೇವರು ಗಹಗಹಿಸಿ ನಗುವುದಾ ಕಂಡೆ
ದೇವರು ಬಿದ್ದು ಬಿದ್ದು ನಗುವುದ ಕಂಡೆ.

* [ಮಾಜಿ ಮಂತ್ರಿಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ – ಧರ್ಮಸ್ಥಳದ ಮಂಜುನಾಥನ ಎದುರು. ಮಂತ್ರಿ ಕಿಮ್ಮನೆ ರತ್ನಾಕರ – ಮಾರಿಕಾಂಬ ದೇವಸ್ಥಾನದಲ್ಲಿ.]
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೩
Next post ರಂಗಣ್ಣನ ಕನಸಿನ ದಿನಗಳು – ೨೯

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…