Home / ಕವನ / ಕವಿತೆ / ಬದರಿಕಾಶ್ರಮದಲ್ಲಿ ಒಂದು ಬೆಳಗು

ಬದರಿಕಾಶ್ರಮದಲ್ಲಿ ಒಂದು ಬೆಳಗು

ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು
ದೇವಗಾನದಿ ಬೆಳಕ ತಂದನೇನು?
ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ
ಸೂರ್ಯನಾರಾಯಣನು ಬಂದನೇನು ?

ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ
ಹಿಮಕೆ ಮುತ್ತಿದ ತಿಮಿರರಾಸಿಯನ್ನು
ಮಾಯಮಾಡಿದ ಅಬ್ಬ! ಆದಿತ್ಯನವಗಾವು-
ದೀಡಹುದು ! ಕೇಳುವನೆ ಘನತಮವನು?

ಭಕ್ತಿ ಹಣ್ಣಾದಂತೆ ಬೆಳಕು ಸೋರಿತು ಬುವಿಗೆ
ಹಿಮಕೆ ಎರೆದಿತು ಬೆಳೆಕುಜೇನು ತುಂಬ
ಜೀವಿಗಳನೆಬ್ಬಿಸಿತು “ಏಳಿ ಕಳೆದಿದೆ ಕಾಳು
ಬನ್ನಿ ತುಂಬಿಹುದೀಗ ಅಮೃತಕುಂಭ

ನಾರಾಯಣಾದ್ರಿಯಲಿ ಆತ್ಮಪ್ರಭೆಯನು ಕಂಡು
ಪೂರ್ವನರಗಿರಿ ಮಿಂಚಿ ಬೆಳಗುತಿಹುದು
ತನ್ನಲ್ಲಿ ಆ ಬಿಂಬದೈಸಿರಿಯನುಂಡುಂಡು
ಸಾರೂಪ್ಯ ಸೌಖ್ಯದಲಿ ತೊಳಗುತಿಹುದು

ಓ! ದಿವ್ಯ ದೃಷ್ಟಿಯನ್ನು ತೆರೆದಾಗ ಪುಣ್ಯವೋ
ಪಾಪವೋ ಏನೆಲ್ಲ ಮಾಯವಾಗಿ
ಏಕಮೇವಂ ಆದ ದಿವ್ಯ ಪುರುಷನ ಇದಿರು
ಜೀವ ನಿಲುವದು ಬಾಗಿ ಭಕ್ತನಾಗಿ

ಪ್ರಕೃತಿಗೀಯಲು ನೆರವ ಕಾರುಣ್ಯದಲಿ ಪುರುಷ
ಅವಳ ಬಸಿರಲಿ ಬಹುದು ದಿವ್ಯ ಸೃಷ್ಟಿ
ಮಾಯೆಯಾವುದು ಇಲ್ಲಿ ಭಗವಂತನಾಟದಲಿ?
ನೀಡಿರಲು ನಮಗಾತ ಸತ್ಯದೃಷ್ಟಿ

ಬದರಿಕಾಶ್ರಮದಲ್ಲಿ ನೋಡಿದೆನು ಬೆಳಗಿನಲಿ
ಹಿಮಗಿರಿಯು ಬುದ್ಧನೊಲು ನಿಂತಿದ್ದಿತು
ನಿಸ್ಸೀಮವಾಗಿರುವ ಬಾನು ಬಯಲುಗಳಲ್ಲಿ
ಬಗೆವಕ್ಕಿ ಪಕ್ಕಗಳ ಕೆದರಿದ್ದಿತು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...