ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು,
ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು,
ಮಂಕುತೊರೆಮೈಗೆ ಬಂಗಾರ ರಸವನು ಬಳಿದು,
ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು.
ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು
ದಿವ್ಯಮುಖ ಮರೆಸಿ ಕರಿತೆರೆಯಾಗಿ ತೇಲುವುವು,
ಪಶ್ಚಿಮಕೆ ಸರಿಯುವುದು ನೊಂದು ಅವಮಾನದೊಳು
ಸದ್ದಿರದೆ ರವಿಬಿಂಬ ಒಂಟಿ ಇಳೆಯನ್ನುಳಿದು.
ನನ್ನ ಬಾಳಿನಲು ಹಿಂದೊಮ್ಮೆ ಭಾಸ್ಕರನುದಿಸಿ
ಜ್ವಲಿಸಿ ಬೆಳಗಿದ ನನ್ನ ಮುಖಕೆ ಕಾಂತಿಯನೆರೆದು;
ಅದರೊಂದೇ ಗಳಿಗೆ ಮಾತ್ರ, ಮತ್ತೆಲ್ಲಿ ? ಮಸಿ
ಮುಗಿಲು ನಿಂತಿದೆ ನಡುವೆ ಸಂಬಂಧವನೆ ಹರಿದು.
ನನ್ನೊಲುಮೆ ಇದರಿಂದ ಕಣದಷ್ಟೂ ಅಲುಗಿಲ್ಲ ;
ದಿವದ ರವಿಗೇ ಗ್ರಹಣ, ಇಳೆಯ ರವಿಗೇಕಿಲ್ಲ ?
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 33
Full many a glorious morning have I seen
Related Post
ಸಣ್ಣ ಕತೆ
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…