ಕೊನೆ, ಮೊದಲು

ಪ್ರತಿಯೊಂದು ಯುದ್ಧಮುಗಿದ ಮೇಲೂ
ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು.
ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ
ಸರಿಯಾಗುವುದಿಲ್ಲ ತಾನೇ?

ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ
ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ
ಹೆಣ ಹೂತ್ತೆಗಾಡಿಗಳು
ಸಾಗುವುದಕ್ಕೆ ದಾರಿ ಮಾಡಬೇಕು.

ಯಾರಾದರೂ ಸರಿ
ಗಾಜಿನ ಚೂರು, ರಕ್ತದ ಬಟ್ಟೆ ರಾಶಿ,
ಸೋಫಾ ಸ್ಪ್ರಿಂಗು, ಕೆಸರು, ಬೂದಿ, ಇಟ್ಟಿಗೆ,
ಸಿಮೆಂಟು ಕಬ್ಬಿಣದ ಅವಶೇಷಗಳ ನಡುವೆ ಕಷ್ಪಪಡಲೇಬೇಕು

ಯಾರಾದರೂ ಬಂದು
ಗೋಡೆಗೆ ಆಸರೆಯಾಗಿ ಕಂಬವನ್ನು ಎತ್ತಿನಿಲ್ಲಿಸಬೇಕು,
ಕಿಟಕಿಗೆ ಗಾಜು ಹಾಕಬೇಕು, ಬಾಗಿಲುವಾಡ ಕೂಡಿಸಬೇಕು.

ಸಂಗೀತದ ಸದ್ದಿಲ್ಲ, ಫೋಟೋಗಳ ಸುಳಿವಿಲ್ಲ
ವರ್‍ಷಗಟ್ಟಲೆ ಸುಮೃನೆ ದುಡಿಯಬೇಕು.
ಕ್ಯಾಮೆರಾಗಳೆಲ್ಲ ಬೇರೆ ಹೊಸ ಯುದ್ಧಗಳ
ಫೋಟೋ ತೆಗೆಯಲು ಹೋಗಿವೆ.
ಸೇತುವೆಗಳು ಹೊಸವಾಗಬೇಕು,
ಅಂಗಿ ತೋಳು ಮೇಲಕ್ಕೆ ಮಡಿಸಿ ಮಡಿಸಿ
ಚಿಂದಿ ಚಿಂದಿಯಾಗಬೇಕು.

ಪೊರಕೆ ಹಿಡಿದ ಯಾರಾದರೂ
ಇದೆಲ್ಲ ಹೇಗಾಯಿತೆಂದು ನೆನಪು ಮಾಡಿಕೊಳ್ಳುತ್ತಾರೆ.
ಸುಮ್ಮನೆ ನಿಂತ ಇನ್ನು ಯಾರೋ
ಗಾಯವಿರದ ತಮ್ಮ ತಲೆ ತೂಗುತ್ತಾ ಕೇಳುತ್ತಾರೆ.
ಅಲ್ಲೆ ಸಮೀಪದಲ್ಲಿ ಬಹಳ ಜನ
ಈ ಹಳೆಯ ಯುದ್ಧದ ಕತೆಯೆಲ್ಲ
ಬರೀ ಬೋರು ಅಂದುಕೊಳ್ಳುತ್ತ ಇರಲೇಬೇಕು.
ಬೆಳೆದ ಮುಳ್ಳು ಪೊದೆಯ ಅಡಿಯಲ್ಲಿ
ಸಿಕ್ಕುಬಿದ್ದಿರುವ ತುಕ್ಕುಹಿಡಿದ
ವಾಗ್ವಾದವನ್ನು ಕಿತ್ತು ಆಗಾಗ ತಿಪ್ಪೆಗೆ ಎಸೆಯುವವರು
ಯಾರಾದರೂ ಇನ್ನೂ ಇರಲೇಬೇಕು.
ಇದೆಲ್ಲ ಆದದ್ದು ಏನು ಯಾಕೆ ಎಂದು
ತಿಳಿದಿರುವವರು
ಅಷ್ಟು ತಿಳಿಯದವರಿಗೆ ಅವಕಾಶ ಮಾಡಿಕೊಟ್ಟು
ಜಾಗಖಾಲಿ ಮಾಡಲೇಬೇಕು.
ಅಷ್ಟು ತಿಳಿಯದವರು
ಏನೂ ತಿಳಿಯದವರಿಗೆ
ಅವರು ಏನೇನೋ ತಿಳಿಯದು ಎಂದು ಕೂಡಾ ತಿಳಿಯದವರಿಗೆ
ಅವಕಾಶ ಮಾಡಿಕೊಡುತ್ತಾರೆ.
ಆಮೇಲೆ
ಕಾರ್‍ಯಕ್ರಮಗಳನ್ನೆಲ್ಲ ಮುಚ್ಚಿ ಬೆಳೆದ
ಹಸಿರು ಹುಲ್ಲಿನ ಮೇಲೆ,
ಹಲ್ಲಿನಲ್ಲಿ ಹುಲ್ಲಿನೆಳೆ ಕಚ್ಚುತ್ತಾ
ಮೇಲೆ ತೇಲುವ ಮೋಡವನ್ನು
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ
ಅಂಗಾತ ಮಲಗಿದವನು ಇದ್ದೇ ಇರಬೇಕು.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ / Wisława Szymborska

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಮುದ್ದು ಗೋಪಾಲ
Next post ಮುಸ್ಸಂಜೆಯ ಮಿಂಚು – ೫

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…