Home / ಕವನ / ಕವಿತೆ / ಕನ್ನಡಿ

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ
ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ
ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು
ಬಿಳಿ ಮಡಿಯ ಶೆಳೆದುಡುತಲೆ

ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ
ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು
ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ
ಸರಸತಿಯು ನಸು ನಗುತಲೆ

ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ
ಮುದದಿ ಮನದಿನಿಯನಡಿಗೆರಗಿ ಬರುವೆ
ಹದಿನೆಂಟು ಶತಮಾನ ಪುದಿದ ದುಮ್ಮಾನದಲಿ
ಮುದ ಹಾಸವರಿಯದಲೆ ಕೊರಗಿ ಕುಳಿತೆ

ಗುಜರಾತ ಗಗ್ಗರವು ಪದಪದಕೆ ಧನಿಗೊಡಲು
ಗಜಬಜಿಯ ಮಗುವಂತೆ ಮುದವಿಟ್ಟು ಅನುಸರಿಸಿ
ವಿಜಯ ವಂಗದ ಶಂಖದಂದವಹ ಚೂಡಿಗಳು
ಕಿಂಕಿಣನೆ ಧನಿಗೈಯುತ

ಭಾರತಿಯ ಬಲು ಮಧುರ ಹಾವ ಭಾವಗಳನ್ನು
ತೋರಿ ನಲಿದೊಲಿಯೆ ಮಾರರವದಿಂಪಿನಲಿ
ಪೂರವದ ನೆನಹೆಂಬ ಹಿರಿಶೆರಗಿನಂಬರವ
ನಿರಿ ಹಿಡಿದು ತಾನುಟ್ಟಳು

ಸಂಸ್ಕೃತದ ಕಾಂಚಿಯ! ಹೊಳೆವ ಗೆಜ್ಜೆಗಳಲುಗೆ
ಝೇಂಕರಿಸೆ ಜಯಕೆನುತ ಬಳೆಗಗ್ಗರಗಳೆಲ್ಲ
ಬಿಂಕದಲಿ ಗಂಟಿಕ್ಕಿ ರಸಗಬ್ಬ ಕುಪ್ಪುಸವ
ಬಿಗಿಯು ಹಳದೆನುತ ನಗುತ!

ಅಂದವಿದು ಕುಂಕುಮವು ಹಿಂದಿಯಾ ನವ ರಾಗ
ದಿಂದ ಕೂಡಿಹುದೆನುತ ಒಂದು ಬೆರಳಲಿ ತೇದು
ಎಂದಿನಾ ನೆಪ್ಪಿನಲಿ ಹಣೆಗಿಟ್ಟಳವಸರದಿ
ಬಳಿಕ ತಿದ್ದುವೆನೆನ್ನುತ.

ಮಹರಾಷ್ಟ್ರ ಮುಖುರವದು ಬಿಗಿದ ಮುತ್ತುಗಳಿಂದ
ಗಹಗಹಿಸಿ ಯಲುಗುತ್ತ ದೇವಿ ನಗಲು! ನಗಲು!
ಬಹು ಕೆಂಪಿನಾವೊಲೆ ತೆನುಗನ್ನು ಹೋಲುತಲಿ
ಮಿನುಗಿ ಮೃಗಶಿರನ ಹಳಿಯೆ!

ತಮಿಳು ಕಂಠಿಯ ಕೀಲನಮಿತ ಪ್ರೇಮದಲೊತ್ತಿ
ರಮಣಿ ಯುಳಿದಾಭರಣಗಳ ಧರಿಸೆ
ಉಡಿಗೆ ತೊಡಿಗೆಗಳೆಲ್ಲ ಪಡೆಯುತಿರೆ ತಿಳಿ ಹೊಳಪ
ಸಿರಿ ಮೈಯ ತೇಜದಿಂದ

ಸಿಂಗರವು ಮುಗಿಯಿತಿದು ಮುಂಬೆಳಗಿ ಬೆಳೆಯುತಿದೆ
ಅಂಗಾಂಗಳ ಕಾಂತಿ! ಇಂಬಾಯ್ತು ಉಡಿಗೆ ತೊಡಿಗೆ!
ಸಂಗಡಲೆ ತಿದ್ದುವೆನು ತಿಲಕವನು ಎನ್ನುತಲೆ
ಅರಸಿ! ರನ್ನ ಗನ್ನಡಿಯ!

ಬಲುದಿನದ ರತುನವಿದು ಚಿರಕಾಲವಾಯ್ತಿದನು
ತೆರೆದು ನೋಡಿಲ್ಲೆಂದು ಒಲಿದು ನೋಡುತ ರಮ್ಯೆ!
ಒರೆಸಿದಳು ಶರಗಲ್ಲಿ ಅಬ್ಬಬ ಬಲುಮಂಕು
ಮೊಬ್ಬಾಯ್ತು ಎನುತೆನುತಲೆ!

ಶರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ
ಸಿರಿಗನಡಿ ಏತಕಿದು ಒಲಿಯದಿಹುದು!
ವರಪತಿಯ ಕಾಣಲಿಹೆ
ಸರಿ‌ಇಲ್ಲ! ಇದು ತಿಲಕ!
ಸಿರಿಗನಡ ವದನವನು ತೋರದಿಹುದು

ಚಿರದಿನದ ರತುನವಿದು
ಸಿರಿಗನಡ ಕನಡಿಯಿದು!
ಶೆರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ!
ಸಿರಿಗನಡಿ! ಏತಕಿದು
ಮೊಗಛವಿಯ ತೋರದೆನುತ
ಹಿರಿಹೊಲಸ ನೊರಸುತ್ತ
ಮರುಗುತಿಹಳು!
ಮರು ಮರುಗುತಿಹಳು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...