Home / ಕವನ / ಕವಿತೆ / ಕನ್ನಡಿ

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ
ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ
ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು
ಬಿಳಿ ಮಡಿಯ ಶೆಳೆದುಡುತಲೆ

ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ
ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು
ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ
ಸರಸತಿಯು ನಸು ನಗುತಲೆ

ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ
ಮುದದಿ ಮನದಿನಿಯನಡಿಗೆರಗಿ ಬರುವೆ
ಹದಿನೆಂಟು ಶತಮಾನ ಪುದಿದ ದುಮ್ಮಾನದಲಿ
ಮುದ ಹಾಸವರಿಯದಲೆ ಕೊರಗಿ ಕುಳಿತೆ

ಗುಜರಾತ ಗಗ್ಗರವು ಪದಪದಕೆ ಧನಿಗೊಡಲು
ಗಜಬಜಿಯ ಮಗುವಂತೆ ಮುದವಿಟ್ಟು ಅನುಸರಿಸಿ
ವಿಜಯ ವಂಗದ ಶಂಖದಂದವಹ ಚೂಡಿಗಳು
ಕಿಂಕಿಣನೆ ಧನಿಗೈಯುತ

ಭಾರತಿಯ ಬಲು ಮಧುರ ಹಾವ ಭಾವಗಳನ್ನು
ತೋರಿ ನಲಿದೊಲಿಯೆ ಮಾರರವದಿಂಪಿನಲಿ
ಪೂರವದ ನೆನಹೆಂಬ ಹಿರಿಶೆರಗಿನಂಬರವ
ನಿರಿ ಹಿಡಿದು ತಾನುಟ್ಟಳು

ಸಂಸ್ಕೃತದ ಕಾಂಚಿಯ! ಹೊಳೆವ ಗೆಜ್ಜೆಗಳಲುಗೆ
ಝೇಂಕರಿಸೆ ಜಯಕೆನುತ ಬಳೆಗಗ್ಗರಗಳೆಲ್ಲ
ಬಿಂಕದಲಿ ಗಂಟಿಕ್ಕಿ ರಸಗಬ್ಬ ಕುಪ್ಪುಸವ
ಬಿಗಿಯು ಹಳದೆನುತ ನಗುತ!

ಅಂದವಿದು ಕುಂಕುಮವು ಹಿಂದಿಯಾ ನವ ರಾಗ
ದಿಂದ ಕೂಡಿಹುದೆನುತ ಒಂದು ಬೆರಳಲಿ ತೇದು
ಎಂದಿನಾ ನೆಪ್ಪಿನಲಿ ಹಣೆಗಿಟ್ಟಳವಸರದಿ
ಬಳಿಕ ತಿದ್ದುವೆನೆನ್ನುತ.

ಮಹರಾಷ್ಟ್ರ ಮುಖುರವದು ಬಿಗಿದ ಮುತ್ತುಗಳಿಂದ
ಗಹಗಹಿಸಿ ಯಲುಗುತ್ತ ದೇವಿ ನಗಲು! ನಗಲು!
ಬಹು ಕೆಂಪಿನಾವೊಲೆ ತೆನುಗನ್ನು ಹೋಲುತಲಿ
ಮಿನುಗಿ ಮೃಗಶಿರನ ಹಳಿಯೆ!

ತಮಿಳು ಕಂಠಿಯ ಕೀಲನಮಿತ ಪ್ರೇಮದಲೊತ್ತಿ
ರಮಣಿ ಯುಳಿದಾಭರಣಗಳ ಧರಿಸೆ
ಉಡಿಗೆ ತೊಡಿಗೆಗಳೆಲ್ಲ ಪಡೆಯುತಿರೆ ತಿಳಿ ಹೊಳಪ
ಸಿರಿ ಮೈಯ ತೇಜದಿಂದ

ಸಿಂಗರವು ಮುಗಿಯಿತಿದು ಮುಂಬೆಳಗಿ ಬೆಳೆಯುತಿದೆ
ಅಂಗಾಂಗಳ ಕಾಂತಿ! ಇಂಬಾಯ್ತು ಉಡಿಗೆ ತೊಡಿಗೆ!
ಸಂಗಡಲೆ ತಿದ್ದುವೆನು ತಿಲಕವನು ಎನ್ನುತಲೆ
ಅರಸಿ! ರನ್ನ ಗನ್ನಡಿಯ!

ಬಲುದಿನದ ರತುನವಿದು ಚಿರಕಾಲವಾಯ್ತಿದನು
ತೆರೆದು ನೋಡಿಲ್ಲೆಂದು ಒಲಿದು ನೋಡುತ ರಮ್ಯೆ!
ಒರೆಸಿದಳು ಶರಗಲ್ಲಿ ಅಬ್ಬಬ ಬಲುಮಂಕು
ಮೊಬ್ಬಾಯ್ತು ಎನುತೆನುತಲೆ!

ಶರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ
ಸಿರಿಗನಡಿ ಏತಕಿದು ಒಲಿಯದಿಹುದು!
ವರಪತಿಯ ಕಾಣಲಿಹೆ
ಸರಿ‌ಇಲ್ಲ! ಇದು ತಿಲಕ!
ಸಿರಿಗನಡ ವದನವನು ತೋರದಿಹುದು

ಚಿರದಿನದ ರತುನವಿದು
ಸಿರಿಗನಡ ಕನಡಿಯಿದು!
ಶೆರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ!
ಸಿರಿಗನಡಿ! ಏತಕಿದು
ಮೊಗಛವಿಯ ತೋರದೆನುತ
ಹಿರಿಹೊಲಸ ನೊರಸುತ್ತ
ಮರುಗುತಿಹಳು!
ಮರು ಮರುಗುತಿಹಳು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...