Home / ಕವನ / ಕವಿತೆ / ಕನ್ನಡಿ

ಕನ್ನಡಿ

ಕಳವಳವು ಕನಸಿಂದ ಬೆಳಗಾಗಿ ಬಲುಕಾಲ
ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ
ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು
ಬಿಳಿ ಮಡಿಯ ಶೆಳೆದುಡುತಲೆ

ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ
ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು
ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ
ಸರಸತಿಯು ನಸು ನಗುತಲೆ

ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ
ಮುದದಿ ಮನದಿನಿಯನಡಿಗೆರಗಿ ಬರುವೆ
ಹದಿನೆಂಟು ಶತಮಾನ ಪುದಿದ ದುಮ್ಮಾನದಲಿ
ಮುದ ಹಾಸವರಿಯದಲೆ ಕೊರಗಿ ಕುಳಿತೆ

ಗುಜರಾತ ಗಗ್ಗರವು ಪದಪದಕೆ ಧನಿಗೊಡಲು
ಗಜಬಜಿಯ ಮಗುವಂತೆ ಮುದವಿಟ್ಟು ಅನುಸರಿಸಿ
ವಿಜಯ ವಂಗದ ಶಂಖದಂದವಹ ಚೂಡಿಗಳು
ಕಿಂಕಿಣನೆ ಧನಿಗೈಯುತ

ಭಾರತಿಯ ಬಲು ಮಧುರ ಹಾವ ಭಾವಗಳನ್ನು
ತೋರಿ ನಲಿದೊಲಿಯೆ ಮಾರರವದಿಂಪಿನಲಿ
ಪೂರವದ ನೆನಹೆಂಬ ಹಿರಿಶೆರಗಿನಂಬರವ
ನಿರಿ ಹಿಡಿದು ತಾನುಟ್ಟಳು

ಸಂಸ್ಕೃತದ ಕಾಂಚಿಯ! ಹೊಳೆವ ಗೆಜ್ಜೆಗಳಲುಗೆ
ಝೇಂಕರಿಸೆ ಜಯಕೆನುತ ಬಳೆಗಗ್ಗರಗಳೆಲ್ಲ
ಬಿಂಕದಲಿ ಗಂಟಿಕ್ಕಿ ರಸಗಬ್ಬ ಕುಪ್ಪುಸವ
ಬಿಗಿಯು ಹಳದೆನುತ ನಗುತ!

ಅಂದವಿದು ಕುಂಕುಮವು ಹಿಂದಿಯಾ ನವ ರಾಗ
ದಿಂದ ಕೂಡಿಹುದೆನುತ ಒಂದು ಬೆರಳಲಿ ತೇದು
ಎಂದಿನಾ ನೆಪ್ಪಿನಲಿ ಹಣೆಗಿಟ್ಟಳವಸರದಿ
ಬಳಿಕ ತಿದ್ದುವೆನೆನ್ನುತ.

ಮಹರಾಷ್ಟ್ರ ಮುಖುರವದು ಬಿಗಿದ ಮುತ್ತುಗಳಿಂದ
ಗಹಗಹಿಸಿ ಯಲುಗುತ್ತ ದೇವಿ ನಗಲು! ನಗಲು!
ಬಹು ಕೆಂಪಿನಾವೊಲೆ ತೆನುಗನ್ನು ಹೋಲುತಲಿ
ಮಿನುಗಿ ಮೃಗಶಿರನ ಹಳಿಯೆ!

ತಮಿಳು ಕಂಠಿಯ ಕೀಲನಮಿತ ಪ್ರೇಮದಲೊತ್ತಿ
ರಮಣಿ ಯುಳಿದಾಭರಣಗಳ ಧರಿಸೆ
ಉಡಿಗೆ ತೊಡಿಗೆಗಳೆಲ್ಲ ಪಡೆಯುತಿರೆ ತಿಳಿ ಹೊಳಪ
ಸಿರಿ ಮೈಯ ತೇಜದಿಂದ

ಸಿಂಗರವು ಮುಗಿಯಿತಿದು ಮುಂಬೆಳಗಿ ಬೆಳೆಯುತಿದೆ
ಅಂಗಾಂಗಳ ಕಾಂತಿ! ಇಂಬಾಯ್ತು ಉಡಿಗೆ ತೊಡಿಗೆ!
ಸಂಗಡಲೆ ತಿದ್ದುವೆನು ತಿಲಕವನು ಎನ್ನುತಲೆ
ಅರಸಿ! ರನ್ನ ಗನ್ನಡಿಯ!

ಬಲುದಿನದ ರತುನವಿದು ಚಿರಕಾಲವಾಯ್ತಿದನು
ತೆರೆದು ನೋಡಿಲ್ಲೆಂದು ಒಲಿದು ನೋಡುತ ರಮ್ಯೆ!
ಒರೆಸಿದಳು ಶರಗಲ್ಲಿ ಅಬ್ಬಬ ಬಲುಮಂಕು
ಮೊಬ್ಬಾಯ್ತು ಎನುತೆನುತಲೆ!

ಶರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ
ಸಿರಿಗನಡಿ ಏತಕಿದು ಒಲಿಯದಿಹುದು!
ವರಪತಿಯ ಕಾಣಲಿಹೆ
ಸರಿ‌ಇಲ್ಲ! ಇದು ತಿಲಕ!
ಸಿರಿಗನಡ ವದನವನು ತೋರದಿಹುದು

ಚಿರದಿನದ ರತುನವಿದು
ಸಿರಿಗನಡ ಕನಡಿಯಿದು!
ಶೆರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ!
ಸಿರಿಗನಡಿ! ಏತಕಿದು
ಮೊಗಛವಿಯ ತೋರದೆನುತ
ಹಿರಿಹೊಲಸ ನೊರಸುತ್ತ
ಮರುಗುತಿಹಳು!
ಮರು ಮರುಗುತಿಹಳು!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...