Home / ಕವನ / ಕವಿತೆ / ಒಬ್ಬ ವಿಯೆಟ್ನಾಮೀ ಸುಂದರಿಗೆ

ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ
ಹೆಸರು ಹುಣ್ಣಿಮೆಯೆಂದು ಹೂವೆಂದು
ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ–
ಕಾಲದ ಬೆಳಕೆಂದು ಸ್ವಪ್ನವೆಂದು

ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ-
ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು
ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ.
ಎಲ್ಲರನ್ನೂ ಕಳೆದುಕೊಂಡು ನೀನು

ಉತ್ತರ ವಿಯಟ್ನಾಮಿನಿಂದ ದಕ್ಷಿಣಕ್ಕೆ
ಪ್ರಯಾಣಿಸಿದೆ. ದನಗಳನ್ನು ಮೇಯಿಸಿದವಳೆ,
ಹುಲ್ಲುಗಾವಲುಗಳಲ್ಲಿ ಕುಣಿದವಳೆ
ಹೂವುಗಳ ಮುಡಿದವಳೆ, ಹಾಡಿದವಳೆ

ಮನುಷ್ಯರ ವಿಧ್ವಂಸಕ ಯುದ್ಧದಲ್ಲಿ
ಆಗಾಗ ಮಡಿದವಳೆ, ನಿನ್ನ ತೊಡೆಯೇರಿದ
ಗೆಳೆಯರು ಎಲ್ಲಿ ಚದರಿದರು ಹೇಳು–
ಗಂಡಿ ಪೇಟೆಯ ಅಣೆಕಟ್ಟಿನ ಕೆಳಗೆ

ನಿನ್ನೆದುರು ಕುಳಿತು ಯೋಚಿಸುವೆನು
ಸಿಡಿಮದ್ದು ನೆಲದ ಮುಖವ ಒಡೆಯು-
ತಿದ್ದಾಗಲೂ ಸೃಷ್ಟಿ ಮರೆತಿರಲಿಲ್ಲ ನಿನ್ನ!
ಅದು ಪ್ರೀತಿಯ ಕೈಯನಾಡಿಸುತ್ತಲೆ ಇತ್ತು

ನಿನ್ನ ಮೈಯ ಏರುತಗ್ಗುಗಳ ಮೇಲೆ
ಮೂಡಿಸುತಿತ್ತು ಎಂಥ ಅಪರೂಪದ ರಾಗಗಳ!
ನನ್ನ ಕಲ್ಪನೆ ನಿನ್ನ ನೆನಪೆಂದು ನನಗೆ ಗೊತ್ತು,
ದಾಟಲಾರದ ಇತಿಹಾಸವೆ ನಮ್ಮ ನಡುವೆ ಇತ್ತು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...