ಚಂಡ ಶಾಸನ

ಕಸಕಿಂತ ಕಡೆಯಾಯ್ತೆ
ಹೆಣ್ಣು ಜನ್ಮವು ನಿನಗೆ
ಈ ಭಾರ ಹೊರಿಸುವುದಕೆ

ಲಂಚಕೋರನು ನೀನು
ವಂಚನೆಯ ಮಾಡಿರುವೆ
ಮೃದುತನದ ಸ್ತ್ರೀವರ್ಗಕೆ

ಗಿಡವೆಂದು ಬಗೆದೆಯೋ
ಹೆಣ್ಣು ಜನ್ಮದ ಒಡಲ
ಫಲಗಳನು ಸೃಜಿಸುವುದಕೆ

ಕವಣೆ ಕಲ್ಲೋ ನಿನ್ನ
ಮಾನಸವು ಎಲೆ ದೇವ
ಈ ಕ್ರಮವೆ ಸ್ತ್ರೀವರ್ಗಕೆ?

ಪುಷ್ಪ ಸೃಷ್ಟಿಯನೇನೊ
ಸುಲಭದಿಂ ನೀ ಗೈದೆ
ಅಲ್ಲಿ ಕನಿಕರವು ಬಂತೆ?

ಕುಸುಮಕಿಂತಲು ಮೃದುವು
ಹೆಣ್ಣು ಜನ್ಮವು ಎಂಬ
ಅರಿವೆ ನಿನಗಿಲ್ಲವಾಯ್ತೆ?

ಏನ್ನುಡಿದು ಫಲವೇನು?
ನ್ಯಾಯವಿಲ್ಲದ ಬಳಿಕ
ತೀರುವುದೆ ಈ ಪ್ರಶ್ನೆಯು

ನೀನೆ ಕಾಣದ ಮುನ್ನ
ನಾವು ಮಾಡುವುದೇನು
ಇನ್ನೆಲ್ಲಿ ವಿಶ್ರಾಂತಿಯು?

ಅದಕಾಗಿ ಬಿತ್ತಿದೆಯೊ
ನಿರ್ಗುಣದ ಸುದ್ದಿಯನು
ವನಿತೆಯರಿಗಳುಕಿ ನೀನು

ಅಲ್ಲದೊಡೆ ನೀನೆಮ್ಮ
ಸಂಧಿಯನು ಬಯಸಿದೊಡೆ
ಈ ಸೃಷ್ಟಿ ಉಳಿವುದೇನು?

ಇರಲಿರಲಿ ಈ ಭಾರ-
ಕಳುಕುವರು ನಾವಲ್ಲ
ಅರ್ಜುನನ ಒಕ್ಕಲಲ್ಲ!

ನೆರವಾಗಿ ನಿಂತಿಹೆವು
ಅನುಗಾಲ ನಿನಕೃತಿಗೆ
ಸೋಲಿಗಿಲ್ಲೆಡೆಯಿಲ್ಲವು!

ಕಾಲ ಚಕ್ರವ ಮೆಟ್ಟಿ
ಅಭಿಮಾನಗಳ ತೊರೆದು
ಲೆಕ್ಕಿಸದೆ ಸಾವು ನೋವ

ನಿನ್ನ ಬೆಳಸನು ಅಪ್ಪಿ
ತೊಟ್ಟಿಲೊಳು ಲಾಲಿಸುತ
ಜೋಗುಟ್ಟುತಿಹೆವು ನಾವು

ಬಹುಕಾಲದೆಜಮಾನ
ಬಹುದೊಡ್ಡ ಕೃಷಿಗಾರ
ತೀರದಾರಂಬಗಾರ

ನಿನ್ನ ಗೆಯ್ಮೆಗೆ ಹೆಣ್ಣು
ನೇಗಿಲಿಲ್ಲದ ಮೇಲೆ
ಉಂಟೆ ಈ ಸತ್ಯಸಾರ!

ಅಂತಿರಲಿ ನೀನೇನೊ
ಮುಕ್ತಿದಾಯಕನೆಂಬ
ಸುದ್ದಿ ಹಬ್ಬಿಹುದು ಇಲ್ಲಿ

ದೊಡ್ಡವರ ಮಾತುಗಳೆ
ಸಾಕ್ಷಿಯಾಗಿಹವೆಮಗೆ
ಗ್ರಂಥ ಶೋಧನೆಗಳಲ್ಲಿ!

ವನಿತೆಯರು ಕಾಣುತಿಹ
ಪಾರಮಾರ್ಥಿಕವೆಂಬ
ದೃಷ್ಟಾಂತ ತಾ ಮುಕ್ತಿಯೆ?

ಕಾಯಗಳ ಬಿಟ್ಟೊಡನೆ
ಸಗ್ಗ ದೊರೆಯುವುದೆಂಬ
ಕಥೆಯೊಳುಂಟೇ ಮುಕ್ತಿಯು?

ಹೆಣ್ತನದಿ ತುಂಬಿರುವ
ಮುಕ್ತಿಪಥವೇ ಸಾಕು
ಮತ್ತೊಂದ ಬಯಸಲೇಕೆ?

ಆನಂದ ಒಳಹೊರಗೆ
ತುಂಬಿರಲಿ ಎಂದಿಹಳು
ಜನಕಜೆಯು ಸ್ತ್ರೀವರ್ಗಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ಬಗೆಯಲಿ ಸಾಗುತಿದೆ
Next post ತುಂತುರು ಮಳೆ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…