Home / ಲೇಖನ / ಇತರೆ / ತಾಯ ಚುಂಬನದಲ್ಲಿ ಮೊದಲ ಹೂಬನ!

ತಾಯ ಚುಂಬನದಲ್ಲಿ ಮೊದಲ ಹೂಬನ!

ಚಿತ್ರ: ಮೊಹಮದ್ ಹಾಸನ

ತಾಯ ಮಡಿಲು ಮಮತೆಯ ಮಲ್ಲಿಗೆ ತೊಟ್ಟಿಲು ಮಾತ್ರವೇ ಅಲ್ಲ, ತಾಯಿ ನೀಡುವ ಬಿಸಿಬಿಸಿ ಚುಂಬನದಿಂದಲೇ ಮಗುವಿನ ಜೀವನದ ಜೇನ ಹೆಬ್ಬಾಗಿಲು ತೆರೆಯುತ್ತದೆ. ಹೆತ್ತತಾಯಿ ಅರಮನೆಯ ಮಹಾರಾಣೀಯೇ ಇರಲಿ, ಇಲ್ಲವೆ… ಹುಲ್ಲ ಗುಡಿಸಿಲಿನ ಕೂಲಿಕುಂಬಳಿಯ ಬೆಮರಿನ ಜೀವವೇ ಆಗಿರಲಿ… ಮಗುವಿಗೆ… ಅವಳೇ ದೇವರು… ಅವಳೇ ವಿಶ್ವ… ಅವಳೇ ಮೂಡು – ಪಡುವಲದ ಹೊಂಬೆಳಗು! ಈ ನಿಟ್ಟಿನಲ್ಲಿ ಮಗುವಿಗೆ ಅವಳು ತಾಯಿ ಮಾತ್ರವಲ್ಲ. ತಾಯಿರೂಪದಿಂದ ಬಂದ ಶಿಕ್ಷಕಿ… ಸದ್ಗುರು… ಸಂಭ್ರಮದ ಗೆಳತಿ! ಇಂಥ ಮಗುವಿನ ಮನಸ್ಸನ್ನೇ ಅಲ್ಲಮಪ್ರಭು… ‘ಕೂಸು ಕಂಡ ಕನಸಿನಂತೆ ಇದ್ದಿತು’ ಎಂದು ಗಾನಿಸಿದ್ದಾನೆ. ಕೂಸಿನ ಕನಸಿಗಿಂತಲೂ ಮಿಗಿಲಾದ ನಿರ್ಮಲ, ಲಲಿತ, ಕೋಮಲಭಾವ ಇನ್ನೊಂದಿರಲು ಸಾಧ್ಯವೇ ಇಲ್ಲ! ಸಂಸ್ಕೃತದ ನಾಟಕಕಾರ ಭವಭೂತಿ ಕೂಡ ‘ಉತ್ತರರಾಮಚರಿತೆ’ಯಲ್ಲಿ… ‘ಮಗುವೆಂದರೆ ಸತಿ-ಪತಿಯರನ್ನು ಬಂಧಿಸುವ ಆನಂದದ ಗಂಟು’… ಎಂದು ಎಷ್ಟೊಂದು ಸೊಗಸಾಗಿ ಬಣ್ಣಿಸಿದ್ದಾನೆ!

ಇಂಥ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲೇಬೇಕಾದ ಪ್ರಥಮಾಚಾರ್ಯ ಸ್ಥಾನದಲ್ಲಿರುವ ತಂದೆ-ತಾಯಿಗಳು ತಾವೇ ಮಧ್ಯಪಾನ-ಧೂಮಪಾನ-ತಂಬಾಕು ಸೇವನೆ – ಮಾದಕ ಪದಾರ್ಥಗಳು – ಲೈಂಗಿಕ ವ್ಯಸನ – ಜೂಜಾಟಗಳಿಗೆ ಬಲಿಯಾದರೆ ಅವರ ತಮ್ಮ ಎಳೆಯರ ಮುಂಬರುವ ಬಾಳಿನ ಬಾಳೆಯ ತೋಟವನ್ನೇ ಹಾಳುಮಾಡುತ್ತಾರೆ.

ಎಷ್ಟೋ ಸಲ, ಮಹಾಮೂರ್ಖರಾದ ತಾಯ್ತಂದೆಯರು ರಾತ್ರಿಯ ಹೋಟೆಲುಗಳಿಗೆ ತಮ್ಮೊಂದಿಗೆ ಮಕ್ಕಳನ್ನು ಕರೆದೊಯ್ದು ಅವುಗಳ ಗುಲಾಬಿ ಹೊಟ್ಟೆಯಲ್ಲಿ ತುಂಬಬಾರದ ಹೊಲಸನ್ನೆಲ್ಲ ತುಂಬಿಬಿಡುತ್ತಾರೆ. ನಾವು ಕಳಕೊಂಡ ಸಂಯಮ ಮಕ್ಕಳ ಭವಿಷ್ಯದಲ್ಲಿ ಹುಡುಕಿದರೆ ಯಾವ ಕಾಲಕ್ಕೂ ಸಿಗಲಾರದು.

ಅತ್ತ… ಹಳ್ಳಿಗಳಲ್ಲಿ… ಕಡುಬಡವರಾದ ಶ್ರಮಜೀವಿ ರೈತರು ತಮ್ಮ ಹಾಲುಗಲ್ಲದ ಮಕ್ಕಳನ್ನು ದನಮೇಯಿಸಲು, ಇಲ್ಲವೆ ಅಡವಿಯಿಂದ ಕುರುಚಲು ಕಟ್ಟಿಗೆ ತರಲು ಕಾಡಿಗೆ ಅಟ್ಟುತ್ತಾರೆ. ಈ ಗುಡ್ಡದ ಮಕ್ಕಳು ಗುಡ್ಡದಷ್ಟೇ ಗಟ್ಟಿಗರು. ಅಲ್ಲಿ ಪ್ರಕೃತಿಯೇ ಶಿಕ್ಷಕಿಯಾಗುತ್ತದೆ. ಮಣ್ಣು-ನೀರು-ಗಾಳಿ-ಬಿಸಿಲು-ಬಯಲು…. ಈ ಪಂಚತತ್ವದಲ್ಲಿ ತಾಯಂದಿರು ಕೊಡುವ ಪ್ರಾಕೃತಿಕ ಪ್ರಾಕ್ಟಿಕಲ್ ಟ್ರೇನಿಂಗ್ ಎಷ್ಟೊಂದು ಅದ್ಭುತ! ಈ ಚಿಣಿಗಿ ಹಾವಿನ ಜಿಣ್ಣರು ಆಯುಷ್ಯದುದ್ದಕ್ಕೂ ರೋಗಪ್ರೂಫ್ ಆಗುತ್ತಾರೆ. ಗುಂಡಕಲ್ಲು ಗುಳ್ಳವ್ವ ಆಗುತ್ತಾರೆ. ಈ ಕಾಡಿನ ಮಕ್ಕಳು ಸುಮ್ಮನಿರುತ್ತಾರೆಯೇ? ಹುಣೀಸೆ ಮರ – ಬೇವು – ನೀರಲ – ಮಾವು – ಆಲ – ಅರಳೆ ಮರಗಳನ್ನೇರಿ ಗಿಡಮಂಗನಾಟ, ಕಲ್ಲು ಗುರಿ ಹೊಡೆಯುವ ಆಟ, ಹೆಂಟೆಪೆಂಟೆಗಳ ಮೇಲೆ ಮುಟ್ಟಾಟ ಇತ್ಯಾದಿ ಹುಂಬ ಹುಡದಿಯಲ್ಲಿ ತೊಡಗುತ್ತಾರೆ. ತೆರೆದ ಬಯಲಿನ ತಾವರೆಗಳಾದ ಈ ಖಾಲಿಹೊಟ್ಟೆಯ ಮಕ್ಕಳು ಪಟ್ಟಣದ ಏರಕಂಡೀಶನ್ಡ್ ಮಕ್ಕಳಿಗಿಂತ ನೂರುಪಾಲು ಸಾವಿರಪಾಲು ಆರೋಗ್ಯವಂತರು.

ಆಧುನಿಕತೆ, ಶ್ರೀಮಂತಿಕೆಗಳ ಫ್ಯಾಷನ್ ಪರೇಡಿನಲ್ಲಿ ಉಗುರು – ತುಟಿಗಳಿಗೂ ಬಣ್ಣಬಳೆದ ಬೆಡಗಿನ ಲಲನೆಯರು, ಎಷ್ಟೋ ಸಲ ಎಳೆಬಿಸಿಲಿನಲ್ಲೂ ಬಣ್ಣದ ಕೊಡೆ ಬಿಚ್ಚಿಕೊಂಡು ಹೋಗುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ. ಒಬ್ಬಳು ಫ್ಯಾಷನ್ನಾಗಿಯೇ ಹೇಳಿದಳು… ‘ಅಂಕಲ್… ನಾನು ಐದು ದ್ರಾಕ್ಷಿ ಹಣ್ಣು ತಿಂದರೂ ನನಗೆ ನೆಗಡಿ ಬರುತ್ತೆ? ಆದರೆ ಅತ್ತ ಆ ಕಡೆ… ಗುಡ್ಡದ ಮೇಲೆ ಧೋಧೋ ಎಂದು ಸುರಿವ ತಡಸಲು ಜಲವನ್ನು ಹೊಟ್ಟೆತುಂಬ ಕುಡಿಯುವ ಹಳ್ಳಿಯ ಪೆದ್ದಂಟಿ ಹುಡಿಗಿಯರು ಟಗರುಟಗರಾಗಿತ್ತಾರೆ!

ಒಬ್ಬಳು ಶ್ರೀಮಂತಿಕೆಯ ಶೋಮನ್‌ಶಿಪ್ಪಿನಲ್ಲಿರುವ ತಾಯಿ ಬಿನ್ನಾಣದಿಂದ ಹೇಳಿದಳು ‘ನನ್ನ ಮಗಳು ತುಂಭಾ ನಾಜೂಕು ಕಣ್ರಿ… ಅರ್ಧ ಚಪಾತಿ ತಿಂದರೂ ಅವಳ ಊಟ ಮುಗೀತು’. ಆ ಸೂಕ್ಷ್ಮಾತಿಸೂಕ್ಷ ಮಗಳು ಮುಂದೆ ಹೆರಿಗೆಯ ಕಾಲಕ್ಕೆ ಸಿಜೇರಿಯನ್ ಆಪರೇಷನ್ನಿನ ಬಾಗಿಲಿಗೆ ಬಂದು ನಿಂದಾಗಲೂ ಅವಳಿಗೆ ಸಮಸ್ಯೆ ಅರ್ಥವಾಗಲಿಲ್ಲ! ಆದರೆ… ನಮ್ಮ ಹಳ್ಳಿಯ ತಿಪ್ಪವ್ವ ದೂರದ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋದಾಗಲೇ, ಅಲ್ಲೇ ಅಡವಿಯಲ್ಲೇ ಪುಸಕ್ಕನೆ ಹಡೆದು, ಹೆತ್ತ ಕೂಸನ್ನೇ ಸೆರಗಿನ ಸಿಂಚಿನಲ್ಲಿ ಕಟ್ಟಿಕೊಂಡು ನಡೆಯುತ್ತ ಮನೆಗೆ ಬಂದದ್ದನ್ನು ಹೇಗೆ ಮರೆಯಲಿ?

ಈ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಕೂಳಿಲ್ಲದೆ ಸಾಯುವವರಿಗಿಂತ, ಹೆಚ್ಚು ಕೂಳು ತಿಂದು ಸಾಯುವವರೇ ಅಧಿಕವೆಂದು ತಿಳಿದು ಬಂದಿದೆ! ಬಿಳಿ ಜೋಳದ ರೊಟ್ಟಿ, ನುಚ್ಚು, ಹಕ್ಕರಿಕೆ, ಮೂಲಂಗಿ, ಮೆಂತೆಸೊಪ್ಪು, ಉಂಡು ಕಿಚ್ಚಿನಂತಿದ್ದ ನಮ್ಮ ಅಜ್ಜ ನೂರಾಐದು ವರ್ಷದವರೆಗೂ ಗಟ್ಟಿಯಾಗಿದ್ದ. ಅವನಿಗೆ ಕೊನೆಯವರೆಗೂ ಕಣ್ಣು ಕಂಡವು, ಕಿವಿ ಕೇಳಿದವು. ರೋಗಗಳು ಅವನ ಮನೆ ಹತ್ತಿರ ಕೂಡ ಸುಳಿಯಲಿಲ್ಲ. ಅಬ್ಬಬ್ಬಾ… ನಮ್ಮ ಅಜ್ಜಿ… ನೂರು ವರ್ಷದ ಮುದಿಕಿ ಆದರೂ ಅವಳ ಕೂದಲು ಗುಂಗೀ ಹುಳದಂತೆ ಕರಿದೋ ಕರಿದು! ನಿಜವಾದ ವಿಶ್ವಸುಂದರಿ ಅವಳೇ! ಇಂದು ಹೊಸಹರೆಯದ ಯೌವನಿಗರು ತಲೆಗೂದಲಿಗೆ ಬಣ್ಣ ಬಳಿದುಕೊಳ್ಳುವ ದುರಂತಕ್ಕೆ ಏನು ಕಾರಣ ಎಂದು ನಾವು ಕೇಳಿದ್ದೇವೆಯೇ?

ಇನ್ನೊಬ್ಬರ ಬೆವರಿನಲ್ಲಿ ಪುಕ್ಕಟೆಯಾಗಿ ಉಂಡುಮಲಗುವ ಏರಕಂಡೀಶನ್ಡ್ ಬದುಕಿನ ಪಾಪಕ್ಕಿಂತ ಇನ್ನೊಂದು ಪಾಪವಿಲ್ಲ. ನಿಜವಾದ ನೈತಿಕತೆ ಗುಡಿ-ಮಠಗಳಲ್ಲಿಲ್ಲ, ನಮ್ಮ ಬದುಕಿನ ಪ್ರಜ್ಞೆ – ಪ್ರಯೋಗ – ಪ್ರಾಮಾಣಿಕತೆಯಲ್ಲಿದೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...