ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ
ಸಿಹಿಮಾವು ಒಂದು ನೋಡಿ,
ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು-
ಬೀಳಿಸಲೆ ಬೇಕು ಎಂದು!

ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು
ಯೋಚಿಸಿದೆ ತಲೆಯನೆತ್ತಿ;
ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ
ನೋಡಿದೆ ನಿರಾಶನಾದೆ!

ಅಹೊ ನೋಡು ತನಿವಣ್ಣು ಹಸುರಳಿದು ಬೆಳೆಸಾಗಿ
ಕಾಣುವುದು ತೂಗಿ ಮೇಲೆ,
ಹಾರೆನೋ ಅದು ಸಾಗ!  ನಾನೊರ್ವ ಅಳಿಮನುಜ
ಜೊಲ್ಲರಿಸಿ ನೋಡಿದೆ ನಾ!

ಭೂರಸ ಸತ್ವವನ್ನಡಗಿಸಿ ಹೆಮ್ಮೆಯಿಂ
ಜೋಲುತಿಹೆ ಮಾವೆ ನೀನು;
ನೆನೆದೊಡೇಂ ನಿನ್ನನೂ ದರ್ಪದಲಿ ಇರಿತಾಗ
ಹಣ್ಗಳಾ ‘ಮಾಂವ’-ಎಂದು!

ನೋಡ್ನೋಡಿ ಬೆಂಡಾಗಿ ಕರತಲದಿ ಕಲ್ಚೂರು
ಒಂದಿಡಿದು ಪೇಳ್ದೆ ನಾನು,
ಎಲೆ ಕಲ್ಲೆ, ನೀ ಹಾರಿ ನುಣುಪಾದ ಆ ಹಣ್ಣ
ತಾರೊ ನೀ ಅಂತೆ ನೀನು!

ನೋವ್ಗೀವು ಮಾಡಬೇಡ, ರಭಸದಿ ಹೊಡಿಬೇಡ
ತೆಳ್ದೂಗಲು ಸುಲಿಯಬೇಡ;
ನನಗಾಗಿ ಹಣ್ಣಿಡಿದ ಇಳಿಕೊಂಬೆಯನು ತಾಗಿ
ಬೀಳಿಸೆಲೊ ಹಣ್ಣ ನೀನು!

ಇದೊ ನಾನು ಕಾಯುವೆನು, ಹಿಡಿದಪ್ಪಿಕೊಳ್ಳುವೆನು,
ನಿನಗಂತು ಋಣಿಯೆ-ಎಂದು
ಬೀಸಿದೆ ನಾ ಕೈಯ್ಯನ್ನು ಹಾರಿಸಿದೆ ಕಲ್ಲನ್ನು
ನೋಡಿದೆನು-ಆ ಹಣ್ಣನ್ನು!

ಅಯ್ಯಯ್ಯೊ ಕಲ್ಲೋಯ್ತು, ಹಣ್ಣಲ್ಲೆ ಇರಿತುಂಟು-
ಬೆಪ್ಪನೇ-ನಾನಾದೆನೊ!
ಅಳಿಮನದ ಹಿರಿಯಾಸೆ-ಕರತಲದ ಕಲ್ಮಣಿಯ
ಕಳಕೊಂಡ ದೀನ ನಾನು!

ಹಣ್ಣದೋ ದರ್ಪದಲಿ ಅಣಕಿಪುದು ನನ್ನೋಡಿ,
ತೂಗುತಿಹುದದೊ ನೋಽಡು!
ಸಿಗಲಾರೆ-ಎಂದು ಅದು ಕೊನರೆಲೆ ಮಧ್ಯದಲಿ
ತಲೆ ಅಲ್ಲಾಡಿಸುತಲಿಹುದು

ಸಾಹಸದ ಸಂಕಲ್ಪದವಸಾನ ಇಷ್ಟರಲಿ
ಕಲ್ಲೋಯ್ತು-ಹಣ್ಣಽಲ್ಲ!
ಹಿರಿದಾದ ಆಸೆಯದು ಜಾರುವುದು-ವಿಧಿನಿಯಮ,
ಯತ್ನದಾ ಮೆಟ್ಟಲಿಂದ!!

ಚಂದಿರನ ಹಿಡಿಯಲು ಕೈಲಾಸ ಆಳಽಲು
ಲೋಕಗಳ ಸುತ್ತಲೆಂದು,
ಹುಸಿಯಾಸೆ ರತ್ನಗಳ ತಾಗೈವ ಯತ್ನದಲಿ
ಬೆರೆಸಽಲು-ಆಗದೇನು?

ಜ್ಞಾನಿಗಳ ಆ ನೀತಿ, ಋಷಿಗಳ ಆ ಸೂಕ್ತಿ
ಗಳಿಗೆ ನಾ ಶರಣು ಇಂದು!
ಮರಳಿ ಯತ್ನವ ಮಾಡಿ, ಮರಳಿ ಸಾಧಿಸು-ಎಂದು
ಪೇಳಲದೊ ಶರಣಾದೆನೊ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೪
Next post ನನ್‌ ಲಚ್ಮಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys