ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ
ಸಿಹಿಮಾವು ಒಂದು ನೋಡಿ,
ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು-
ಬೀಳಿಸಲೆ ಬೇಕು ಎಂದು!

ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು
ಯೋಚಿಸಿದೆ ತಲೆಯನೆತ್ತಿ;
ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ
ನೋಡಿದೆ ನಿರಾಶನಾದೆ!

ಅಹೊ ನೋಡು ತನಿವಣ್ಣು ಹಸುರಳಿದು ಬೆಳೆಸಾಗಿ
ಕಾಣುವುದು ತೂಗಿ ಮೇಲೆ,
ಹಾರೆನೋ ಅದು ಸಾಗ!  ನಾನೊರ್ವ ಅಳಿಮನುಜ
ಜೊಲ್ಲರಿಸಿ ನೋಡಿದೆ ನಾ!

ಭೂರಸ ಸತ್ವವನ್ನಡಗಿಸಿ ಹೆಮ್ಮೆಯಿಂ
ಜೋಲುತಿಹೆ ಮಾವೆ ನೀನು;
ನೆನೆದೊಡೇಂ ನಿನ್ನನೂ ದರ್ಪದಲಿ ಇರಿತಾಗ
ಹಣ್ಗಳಾ ‘ಮಾಂವ’-ಎಂದು!

ನೋಡ್ನೋಡಿ ಬೆಂಡಾಗಿ ಕರತಲದಿ ಕಲ್ಚೂರು
ಒಂದಿಡಿದು ಪೇಳ್ದೆ ನಾನು,
ಎಲೆ ಕಲ್ಲೆ, ನೀ ಹಾರಿ ನುಣುಪಾದ ಆ ಹಣ್ಣ
ತಾರೊ ನೀ ಅಂತೆ ನೀನು!

ನೋವ್ಗೀವು ಮಾಡಬೇಡ, ರಭಸದಿ ಹೊಡಿಬೇಡ
ತೆಳ್ದೂಗಲು ಸುಲಿಯಬೇಡ;
ನನಗಾಗಿ ಹಣ್ಣಿಡಿದ ಇಳಿಕೊಂಬೆಯನು ತಾಗಿ
ಬೀಳಿಸೆಲೊ ಹಣ್ಣ ನೀನು!

ಇದೊ ನಾನು ಕಾಯುವೆನು, ಹಿಡಿದಪ್ಪಿಕೊಳ್ಳುವೆನು,
ನಿನಗಂತು ಋಣಿಯೆ-ಎಂದು
ಬೀಸಿದೆ ನಾ ಕೈಯ್ಯನ್ನು ಹಾರಿಸಿದೆ ಕಲ್ಲನ್ನು
ನೋಡಿದೆನು-ಆ ಹಣ್ಣನ್ನು!

ಅಯ್ಯಯ್ಯೊ ಕಲ್ಲೋಯ್ತು, ಹಣ್ಣಲ್ಲೆ ಇರಿತುಂಟು-
ಬೆಪ್ಪನೇ-ನಾನಾದೆನೊ!
ಅಳಿಮನದ ಹಿರಿಯಾಸೆ-ಕರತಲದ ಕಲ್ಮಣಿಯ
ಕಳಕೊಂಡ ದೀನ ನಾನು!

ಹಣ್ಣದೋ ದರ್ಪದಲಿ ಅಣಕಿಪುದು ನನ್ನೋಡಿ,
ತೂಗುತಿಹುದದೊ ನೋಽಡು!
ಸಿಗಲಾರೆ-ಎಂದು ಅದು ಕೊನರೆಲೆ ಮಧ್ಯದಲಿ
ತಲೆ ಅಲ್ಲಾಡಿಸುತಲಿಹುದು

ಸಾಹಸದ ಸಂಕಲ್ಪದವಸಾನ ಇಷ್ಟರಲಿ
ಕಲ್ಲೋಯ್ತು-ಹಣ್ಣಽಲ್ಲ!
ಹಿರಿದಾದ ಆಸೆಯದು ಜಾರುವುದು-ವಿಧಿನಿಯಮ,
ಯತ್ನದಾ ಮೆಟ್ಟಲಿಂದ!!

ಚಂದಿರನ ಹಿಡಿಯಲು ಕೈಲಾಸ ಆಳಽಲು
ಲೋಕಗಳ ಸುತ್ತಲೆಂದು,
ಹುಸಿಯಾಸೆ ರತ್ನಗಳ ತಾಗೈವ ಯತ್ನದಲಿ
ಬೆರೆಸಽಲು-ಆಗದೇನು?

ಜ್ಞಾನಿಗಳ ಆ ನೀತಿ, ಋಷಿಗಳ ಆ ಸೂಕ್ತಿ
ಗಳಿಗೆ ನಾ ಶರಣು ಇಂದು!
ಮರಳಿ ಯತ್ನವ ಮಾಡಿ, ಮರಳಿ ಸಾಧಿಸು-ಎಂದು
ಪೇಳಲದೊ ಶರಣಾದೆನೊ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೪
Next post ನನ್‌ ಲಚ್ಮಿ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…