ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ
ಸಿಹಿಮಾವು ಒಂದು ನೋಡಿ,
ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು-
ಬೀಳಿಸಲೆ ಬೇಕು ಎಂದು!

ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು
ಯೋಚಿಸಿದೆ ತಲೆಯನೆತ್ತಿ;
ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ
ನೋಡಿದೆ ನಿರಾಶನಾದೆ!

ಅಹೊ ನೋಡು ತನಿವಣ್ಣು ಹಸುರಳಿದು ಬೆಳೆಸಾಗಿ
ಕಾಣುವುದು ತೂಗಿ ಮೇಲೆ,
ಹಾರೆನೋ ಅದು ಸಾಗ!  ನಾನೊರ್ವ ಅಳಿಮನುಜ
ಜೊಲ್ಲರಿಸಿ ನೋಡಿದೆ ನಾ!

ಭೂರಸ ಸತ್ವವನ್ನಡಗಿಸಿ ಹೆಮ್ಮೆಯಿಂ
ಜೋಲುತಿಹೆ ಮಾವೆ ನೀನು;
ನೆನೆದೊಡೇಂ ನಿನ್ನನೂ ದರ್ಪದಲಿ ಇರಿತಾಗ
ಹಣ್ಗಳಾ ‘ಮಾಂವ’-ಎಂದು!

ನೋಡ್ನೋಡಿ ಬೆಂಡಾಗಿ ಕರತಲದಿ ಕಲ್ಚೂರು
ಒಂದಿಡಿದು ಪೇಳ್ದೆ ನಾನು,
ಎಲೆ ಕಲ್ಲೆ, ನೀ ಹಾರಿ ನುಣುಪಾದ ಆ ಹಣ್ಣ
ತಾರೊ ನೀ ಅಂತೆ ನೀನು!

ನೋವ್ಗೀವು ಮಾಡಬೇಡ, ರಭಸದಿ ಹೊಡಿಬೇಡ
ತೆಳ್ದೂಗಲು ಸುಲಿಯಬೇಡ;
ನನಗಾಗಿ ಹಣ್ಣಿಡಿದ ಇಳಿಕೊಂಬೆಯನು ತಾಗಿ
ಬೀಳಿಸೆಲೊ ಹಣ್ಣ ನೀನು!

ಇದೊ ನಾನು ಕಾಯುವೆನು, ಹಿಡಿದಪ್ಪಿಕೊಳ್ಳುವೆನು,
ನಿನಗಂತು ಋಣಿಯೆ-ಎಂದು
ಬೀಸಿದೆ ನಾ ಕೈಯ್ಯನ್ನು ಹಾರಿಸಿದೆ ಕಲ್ಲನ್ನು
ನೋಡಿದೆನು-ಆ ಹಣ್ಣನ್ನು!

ಅಯ್ಯಯ್ಯೊ ಕಲ್ಲೋಯ್ತು, ಹಣ್ಣಲ್ಲೆ ಇರಿತುಂಟು-
ಬೆಪ್ಪನೇ-ನಾನಾದೆನೊ!
ಅಳಿಮನದ ಹಿರಿಯಾಸೆ-ಕರತಲದ ಕಲ್ಮಣಿಯ
ಕಳಕೊಂಡ ದೀನ ನಾನು!

ಹಣ್ಣದೋ ದರ್ಪದಲಿ ಅಣಕಿಪುದು ನನ್ನೋಡಿ,
ತೂಗುತಿಹುದದೊ ನೋಽಡು!
ಸಿಗಲಾರೆ-ಎಂದು ಅದು ಕೊನರೆಲೆ ಮಧ್ಯದಲಿ
ತಲೆ ಅಲ್ಲಾಡಿಸುತಲಿಹುದು

ಸಾಹಸದ ಸಂಕಲ್ಪದವಸಾನ ಇಷ್ಟರಲಿ
ಕಲ್ಲೋಯ್ತು-ಹಣ್ಣಽಲ್ಲ!
ಹಿರಿದಾದ ಆಸೆಯದು ಜಾರುವುದು-ವಿಧಿನಿಯಮ,
ಯತ್ನದಾ ಮೆಟ್ಟಲಿಂದ!!

ಚಂದಿರನ ಹಿಡಿಯಲು ಕೈಲಾಸ ಆಳಽಲು
ಲೋಕಗಳ ಸುತ್ತಲೆಂದು,
ಹುಸಿಯಾಸೆ ರತ್ನಗಳ ತಾಗೈವ ಯತ್ನದಲಿ
ಬೆರೆಸಽಲು-ಆಗದೇನು?

ಜ್ಞಾನಿಗಳ ಆ ನೀತಿ, ಋಷಿಗಳ ಆ ಸೂಕ್ತಿ
ಗಳಿಗೆ ನಾ ಶರಣು ಇಂದು!
ಮರಳಿ ಯತ್ನವ ಮಾಡಿ, ಮರಳಿ ಸಾಧಿಸು-ಎಂದು
ಪೇಳಲದೊ ಶರಣಾದೆನೊ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೪
Next post ನನ್‌ ಲಚ್ಮಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…