Home / ಕವನ / ಕವಿತೆ / ಕಲ್ಲುಹೋಯಿತು-ಹಣ್ಣಿಲ್ಲ!

ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ
ಸಿಹಿಮಾವು ಒಂದು ನೋಡಿ,
ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು-
ಬೀಳಿಸಲೆ ಬೇಕು ಎಂದು!

ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು
ಯೋಚಿಸಿದೆ ತಲೆಯನೆತ್ತಿ;
ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ
ನೋಡಿದೆ ನಿರಾಶನಾದೆ!

ಅಹೊ ನೋಡು ತನಿವಣ್ಣು ಹಸುರಳಿದು ಬೆಳೆಸಾಗಿ
ಕಾಣುವುದು ತೂಗಿ ಮೇಲೆ,
ಹಾರೆನೋ ಅದು ಸಾಗ!  ನಾನೊರ್ವ ಅಳಿಮನುಜ
ಜೊಲ್ಲರಿಸಿ ನೋಡಿದೆ ನಾ!

ಭೂರಸ ಸತ್ವವನ್ನಡಗಿಸಿ ಹೆಮ್ಮೆಯಿಂ
ಜೋಲುತಿಹೆ ಮಾವೆ ನೀನು;
ನೆನೆದೊಡೇಂ ನಿನ್ನನೂ ದರ್ಪದಲಿ ಇರಿತಾಗ
ಹಣ್ಗಳಾ ‘ಮಾಂವ’-ಎಂದು!

ನೋಡ್ನೋಡಿ ಬೆಂಡಾಗಿ ಕರತಲದಿ ಕಲ್ಚೂರು
ಒಂದಿಡಿದು ಪೇಳ್ದೆ ನಾನು,
ಎಲೆ ಕಲ್ಲೆ, ನೀ ಹಾರಿ ನುಣುಪಾದ ಆ ಹಣ್ಣ
ತಾರೊ ನೀ ಅಂತೆ ನೀನು!

ನೋವ್ಗೀವು ಮಾಡಬೇಡ, ರಭಸದಿ ಹೊಡಿಬೇಡ
ತೆಳ್ದೂಗಲು ಸುಲಿಯಬೇಡ;
ನನಗಾಗಿ ಹಣ್ಣಿಡಿದ ಇಳಿಕೊಂಬೆಯನು ತಾಗಿ
ಬೀಳಿಸೆಲೊ ಹಣ್ಣ ನೀನು!

ಇದೊ ನಾನು ಕಾಯುವೆನು, ಹಿಡಿದಪ್ಪಿಕೊಳ್ಳುವೆನು,
ನಿನಗಂತು ಋಣಿಯೆ-ಎಂದು
ಬೀಸಿದೆ ನಾ ಕೈಯ್ಯನ್ನು ಹಾರಿಸಿದೆ ಕಲ್ಲನ್ನು
ನೋಡಿದೆನು-ಆ ಹಣ್ಣನ್ನು!

ಅಯ್ಯಯ್ಯೊ ಕಲ್ಲೋಯ್ತು, ಹಣ್ಣಲ್ಲೆ ಇರಿತುಂಟು-
ಬೆಪ್ಪನೇ-ನಾನಾದೆನೊ!
ಅಳಿಮನದ ಹಿರಿಯಾಸೆ-ಕರತಲದ ಕಲ್ಮಣಿಯ
ಕಳಕೊಂಡ ದೀನ ನಾನು!

ಹಣ್ಣದೋ ದರ್ಪದಲಿ ಅಣಕಿಪುದು ನನ್ನೋಡಿ,
ತೂಗುತಿಹುದದೊ ನೋಽಡು!
ಸಿಗಲಾರೆ-ಎಂದು ಅದು ಕೊನರೆಲೆ ಮಧ್ಯದಲಿ
ತಲೆ ಅಲ್ಲಾಡಿಸುತಲಿಹುದು

ಸಾಹಸದ ಸಂಕಲ್ಪದವಸಾನ ಇಷ್ಟರಲಿ
ಕಲ್ಲೋಯ್ತು-ಹಣ್ಣಽಲ್ಲ!
ಹಿರಿದಾದ ಆಸೆಯದು ಜಾರುವುದು-ವಿಧಿನಿಯಮ,
ಯತ್ನದಾ ಮೆಟ್ಟಲಿಂದ!!

ಚಂದಿರನ ಹಿಡಿಯಲು ಕೈಲಾಸ ಆಳಽಲು
ಲೋಕಗಳ ಸುತ್ತಲೆಂದು,
ಹುಸಿಯಾಸೆ ರತ್ನಗಳ ತಾಗೈವ ಯತ್ನದಲಿ
ಬೆರೆಸಽಲು-ಆಗದೇನು?

ಜ್ಞಾನಿಗಳ ಆ ನೀತಿ, ಋಷಿಗಳ ಆ ಸೂಕ್ತಿ
ಗಳಿಗೆ ನಾ ಶರಣು ಇಂದು!
ಮರಳಿ ಯತ್ನವ ಮಾಡಿ, ಮರಳಿ ಸಾಧಿಸು-ಎಂದು
ಪೇಳಲದೊ ಶರಣಾದೆನೊ!!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...