Home / ಕವನ / ಕವಿತೆ / ಜೀವದ ಒಳಗುಟ್ಟು

ಜೀವದ ಒಳಗುಟ್ಟು

ಕರ್ಮದ ಬಾಳಿಗೆ ಮಣ್ಣಿಟ್ಟು
ನೋಡಿದೆ ಜೀವದ ಒಳಗುಟ್ಟು!

ಧರ್ಮಕೆ ಕಸಿಯನು ನಾ ಮಾಡಿ
ತಿಂದೆನೊ ಪಾಪದ ಹಣ್ಣು ಇಡಿ;

ಮೂಡಲ ಸೂರ್ಯನು ಅಲ್ಲಿರನು
ಮನುಜನು ಬುದ್ದಿಯ ತಾಳಿರನು!

ಗಂಟೆಯ ಮುಳ್ಳದು ತಿರುಗಾಡಿ
ಲೋಕಕೆ ಕಲಿಪುದು ಬಲುಮೋಡಿ.

ಸುತ್ತಲು ಮಂಜಿನ ನೆನೆಹನಿ
ಕಣ್ಣಲಿ ಪಾಡಿನ ಮಂಕು ಹನಿ!

ಹೊಂಡವೆ ನೀರಿನ ಸದ್ಯನೆಲೆ,
ಲೋಕ ದಾರಿದ್ರ್‍ಯದ ಕಟ್ಟುಬಲೆ;

ಜೀವನ ಜಿದ್ದಿನ ಜೀಕಲಿನ
ಆಶ್ರಯವಾಗಿದೆ-ಅದೆ ಮಲಿನ!

ಪಾಪಿಯ ನಗುವಿನ ಕಹಿ ಗೆಲುವು
ಯಾರ ಹೃದಯಕೆ ಎಸೆದುಗುಳು?

ಪುಷ್ಪದ ಎಸಳಿನ ಆ ಸೊಗವು
ಮೋಹಿನಿ ತೋರಿದ ಆ ಸೊಬಗು-

ಅಂಗೈ ತೋರಿದ ಭಾಗ್ಯವದು
ಎಲ್ಲಿವರೆಗದು- ಅದೆ ನೆನವು!

ಸೂಜಿಯು ಹೊರುವುದು ದಾರವನು
ಇರುವೆಯು ಹೊರುವುದು ಕಾಳನ್ನು,

ಮರಗಳು ಹೊರುವುವು ಹಣ್ಣನ್ನು
ಮಾನವ ಹೊರುವನು ಪಾಪವನು!

ನಾಯಿಗೆ ನಾಯ್ಗಳು ವೈರಿಗಳು,
ಜನಗಳು ಜನಕೆ ಮೊನೆಮುಳ್ಳು!

ರಕ್ತದ ದಾಹವೆ ಹೃದಯದಲು,
ಕಾಮಿಯ ವಾಣಿಯ ಉಸುರಿನಲು;

ಸತ್ತರು ಮರೆಯರು ಲೋಭವನು,
ಮತ್ಸರ ಬಾಳಿನ ದರ್ಪವನು,

ಮೀನಿಗೆ ಮೀನೇ ಸವಿಯೂಟ
ಸೋದರ ವಧೆಯೇ ನರನಾಟ!

ವಿದ್ಯೆಯು ದ್ರೋಹಿಯ ಮಂಕಾಟ,
ಬಡವನ ವಂಚಿಪ ಹುಸಿಮಾಟ!

ತಿನ್ನುವ ಕಾಳದು ಕರುಳಿನಲಿ
ಉರಳ್ವದು ಮೋಹದ ರಾಟೆಯಲಿ.

ಅದರಿಂ ಸೂರ್ಯನು ಚಂದ್ರನನು
ವಂಚಿಪ ಬಾಳಿನ ತಿರುಳನ್ನು,

ನೋಡುತ ಪೋಗ್ವುದೆ-ಈ ಮಾಯ,
ಮಾಯ ಪ್ರಪಂಚದ ಅಧಿಮಾಯ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...