Home / ಕವನ / ಕವಿತೆ / ಕೆಂಪು ಬಸ್ಸು ನಾ…

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು?
ಸರ್ವರಿಗೆಂದೆ ತಂಪು;
ಒನಪು, ವೈಯಾರ, ಥಳಕು ಬಳಕು ಕೈಕುಲುಕು!
ಹಳ್ಳ ದಿನ್ನಿ ಊರು ಕೇರಿ ಹಾರಿ;
ಹಗಲಿರುಳೂ ಸಾಗಿ,
ಚಳಿ ಮಳೆ ಗಾಳಿಗೆ ಮಾಗಿ,
ನಿತ್ಯ ದುಡಿವೆ ನೋಡಿ.
ಆಸೆ ನಿರಾಸೆ ಸುಖ ದುಃಖಗಳ ಹೊದ್ದು,
ಮದುವೆ ಮುಂಜಿ ಮಸಣಕಂಜಿ
ಶುಭ ಲಾಭ ನಷ್ಟ, ಟೀಕೆ ಟಿಪ್ಪಣಿ ಲೆಕ್ಕಿಸೆ
ನಿಜ ಸೇವೆ ಸ್ವರ್ಗ ಸಮಾನ!
ಬಡವ ಬಲ್ಲಿದ, ಭೇದವಿಲ್ಲದ,
ವಿದ್ಯಾವಂತ ಅವಿದ್ಯಾವಂತ
ಸಣ್ಣ ದೊಡ್ಡವ ಎಣಿಸದೆ,
“ಈಶ ಸೇವೆ, ದೇಶ ಸೇವೆ,
ಸಾರಿಗೆ ಸೇವೆ, ನೈಜ ಸೇವೆಂಬ”
ಮಂತ್ರ ಜಪಿಸುತ್ತಾ…
ನಿತ್ಯ ನಿತ್ಯ ಲಕ್ಷ ಜನರ ಹೊತ್ತು,
ಅವರವರ ಕನಸು, ಮನಸ್ಸಿಗೆ ಸ್ಪಂಧಿಸಿ,
ನಿರೀಕ್ಷೆ ಪರೀಕ್ಷೆಗೆ ತವಕಿಸಿ,
ನನ್ನ ದಾರಿ ನಿಮಗೆ ಶ್ರೀ ರಕ್ಷೆ,
ನನ್ನ ನಂಬಿ, ತಬ್ಬಿ ಹಬ್ಬಿ ಕೊಬ್ಬಿ ಬೆಳೆದವರೆ,
ಗದ್ದುಗೆ ಹಿಡಿದವರೆ,
ಪಟ್ಟಣವ ಕಂಡು,
ಡಿಗ್ರಿಗಳ ಪಡೆದು,
ಏನೆಲ್ಲ ಆದವರಿಗೆ,
ಏಣಿಯಾದವ!
ನನ್ನೆಲ್ಲ ಕಥೆ ವ್ಯಥೆಗೆ ೫೦ರ ಪ್ರಾಯ!
ತಾಯಿ ಭಾರತಿಗೆ ಎರಡನೆ ದೊಡ್ಡಕೂಸು.
ಕನ್ನಡದ ಕಂದ-
ರಾಜ್ಯ ರಾಜ್ಯಕ್ಕೆ ಸಂಚರಿಸಿ, ಕೋಟಿ ಕೋಟಿ… ರೊಕ್ಕ ಒಪ್ಪಿಸಿ,
ಕೀರ್ತಿ ಪತಾಕೆ ಹಾರಿಸಿ…!
ನಿಲ್ದಾಣ, ಡಿಪೋ, ಪಾಸು, ರಿಯಾಯಿತಿ, ಆಶ್ರಯ, ಕಾಮಧೇನು,
ಏನೆಲ್ಲ ಹಿಗ್ಗಿ ಹೀರೆಕಾಯಿ ಆದವ
ಎಳೆಯ ಗೆಳೆಯರ, ಶಾಲೆ ಬಾಲಕರ,
ಸ್ವಾತಂತ್ರ್‍ಯಯೋಧರ, ವೃದ್ಧ
ಆಬಾಲರ ಎತ್ತಿ ಮುದ್ದಾಡಿ,
ಬಲು ಎತ್ತರಕೆ ಬೆಳೆಸಿ,
ಕನಸುಗಳ ಅರಳಿಸಿ
ನಿಮ್ಮ ಬೇಕು, ಬಯಕೆಗಳಿಗೆ ನಿತ್ಯ ಉಸಿರಾಗಿ, ಬಸಿರಾಗಿ,
ಏನೆಲ್ಲ ಹೆಸರಾಗಿ, ಹಸಿರಾಗಿ,
ಕಿಸಿ ಕಿಸಿ ನಕ್ಕು ಕಸಿಯಾದವ
ವರ್ಷ ವರ್ಷಕೂ ಹರ್ಷದಿ ನಿರೀಕ್ಷೆಗಳ ತೂಗು ಸೇತುವೆ ಕಟ್ಟಿ,
ಹೊಳೆ ದಾಟಿಸಿದ ಅಂಬಿಗ
ಹೊಳೆ ದಾಟಿದ ನೀವೆಲ್ಲ.
ಆಕಾಶಕ್ಕೆ ಕೈ ಹಬ್ಬಿ ಬೂಟುಗಾಲಲಿ
ನನ್ನ ಒದ್ದರೂ;
ಒಂದೇ ಮುಗುಳ್ನಗೆಗೆ ಅದೇ ರಾಗ-
“ನಿಮ್ಮ ದೇವರೆಂದು” ‘ಪ್ರಭು’ ‘ಅನ್ನದಾತ’ ‘ಮಾಲೀಕರೆಂದು’
ಅಪ್ಪಿ ಮುದ್ದಿಡುವ, ಒಪ್ಪಿ ಓಡಾಡುವ,
ವಿಲ ವಿಲ ಒದ್ದಾಡುವ,
ಮುಲು ಮುಲು ಮುಲುಗುಟ್ಟುವ,
ಕೆಂಪು ಬಸ್ಸು ನಾ!… ನಿಮ್ಮ ಬಸ್ಸು ನಾ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...