Home / ಕವನ / ಕವಿತೆ / ಕೆಂಪು ಬಸ್ಸು ನಾ…

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು?
ಸರ್ವರಿಗೆಂದೆ ತಂಪು;
ಒನಪು, ವೈಯಾರ, ಥಳಕು ಬಳಕು ಕೈಕುಲುಕು!
ಹಳ್ಳ ದಿನ್ನಿ ಊರು ಕೇರಿ ಹಾರಿ;
ಹಗಲಿರುಳೂ ಸಾಗಿ,
ಚಳಿ ಮಳೆ ಗಾಳಿಗೆ ಮಾಗಿ,
ನಿತ್ಯ ದುಡಿವೆ ನೋಡಿ.
ಆಸೆ ನಿರಾಸೆ ಸುಖ ದುಃಖಗಳ ಹೊದ್ದು,
ಮದುವೆ ಮುಂಜಿ ಮಸಣಕಂಜಿ
ಶುಭ ಲಾಭ ನಷ್ಟ, ಟೀಕೆ ಟಿಪ್ಪಣಿ ಲೆಕ್ಕಿಸೆ
ನಿಜ ಸೇವೆ ಸ್ವರ್ಗ ಸಮಾನ!
ಬಡವ ಬಲ್ಲಿದ, ಭೇದವಿಲ್ಲದ,
ವಿದ್ಯಾವಂತ ಅವಿದ್ಯಾವಂತ
ಸಣ್ಣ ದೊಡ್ಡವ ಎಣಿಸದೆ,
“ಈಶ ಸೇವೆ, ದೇಶ ಸೇವೆ,
ಸಾರಿಗೆ ಸೇವೆ, ನೈಜ ಸೇವೆಂಬ”
ಮಂತ್ರ ಜಪಿಸುತ್ತಾ…
ನಿತ್ಯ ನಿತ್ಯ ಲಕ್ಷ ಜನರ ಹೊತ್ತು,
ಅವರವರ ಕನಸು, ಮನಸ್ಸಿಗೆ ಸ್ಪಂಧಿಸಿ,
ನಿರೀಕ್ಷೆ ಪರೀಕ್ಷೆಗೆ ತವಕಿಸಿ,
ನನ್ನ ದಾರಿ ನಿಮಗೆ ಶ್ರೀ ರಕ್ಷೆ,
ನನ್ನ ನಂಬಿ, ತಬ್ಬಿ ಹಬ್ಬಿ ಕೊಬ್ಬಿ ಬೆಳೆದವರೆ,
ಗದ್ದುಗೆ ಹಿಡಿದವರೆ,
ಪಟ್ಟಣವ ಕಂಡು,
ಡಿಗ್ರಿಗಳ ಪಡೆದು,
ಏನೆಲ್ಲ ಆದವರಿಗೆ,
ಏಣಿಯಾದವ!
ನನ್ನೆಲ್ಲ ಕಥೆ ವ್ಯಥೆಗೆ ೫೦ರ ಪ್ರಾಯ!
ತಾಯಿ ಭಾರತಿಗೆ ಎರಡನೆ ದೊಡ್ಡಕೂಸು.
ಕನ್ನಡದ ಕಂದ-
ರಾಜ್ಯ ರಾಜ್ಯಕ್ಕೆ ಸಂಚರಿಸಿ, ಕೋಟಿ ಕೋಟಿ… ರೊಕ್ಕ ಒಪ್ಪಿಸಿ,
ಕೀರ್ತಿ ಪತಾಕೆ ಹಾರಿಸಿ…!
ನಿಲ್ದಾಣ, ಡಿಪೋ, ಪಾಸು, ರಿಯಾಯಿತಿ, ಆಶ್ರಯ, ಕಾಮಧೇನು,
ಏನೆಲ್ಲ ಹಿಗ್ಗಿ ಹೀರೆಕಾಯಿ ಆದವ
ಎಳೆಯ ಗೆಳೆಯರ, ಶಾಲೆ ಬಾಲಕರ,
ಸ್ವಾತಂತ್ರ್‍ಯಯೋಧರ, ವೃದ್ಧ
ಆಬಾಲರ ಎತ್ತಿ ಮುದ್ದಾಡಿ,
ಬಲು ಎತ್ತರಕೆ ಬೆಳೆಸಿ,
ಕನಸುಗಳ ಅರಳಿಸಿ
ನಿಮ್ಮ ಬೇಕು, ಬಯಕೆಗಳಿಗೆ ನಿತ್ಯ ಉಸಿರಾಗಿ, ಬಸಿರಾಗಿ,
ಏನೆಲ್ಲ ಹೆಸರಾಗಿ, ಹಸಿರಾಗಿ,
ಕಿಸಿ ಕಿಸಿ ನಕ್ಕು ಕಸಿಯಾದವ
ವರ್ಷ ವರ್ಷಕೂ ಹರ್ಷದಿ ನಿರೀಕ್ಷೆಗಳ ತೂಗು ಸೇತುವೆ ಕಟ್ಟಿ,
ಹೊಳೆ ದಾಟಿಸಿದ ಅಂಬಿಗ
ಹೊಳೆ ದಾಟಿದ ನೀವೆಲ್ಲ.
ಆಕಾಶಕ್ಕೆ ಕೈ ಹಬ್ಬಿ ಬೂಟುಗಾಲಲಿ
ನನ್ನ ಒದ್ದರೂ;
ಒಂದೇ ಮುಗುಳ್ನಗೆಗೆ ಅದೇ ರಾಗ-
“ನಿಮ್ಮ ದೇವರೆಂದು” ‘ಪ್ರಭು’ ‘ಅನ್ನದಾತ’ ‘ಮಾಲೀಕರೆಂದು’
ಅಪ್ಪಿ ಮುದ್ದಿಡುವ, ಒಪ್ಪಿ ಓಡಾಡುವ,
ವಿಲ ವಿಲ ಒದ್ದಾಡುವ,
ಮುಲು ಮುಲು ಮುಲುಗುಟ್ಟುವ,
ಕೆಂಪು ಬಸ್ಸು ನಾ!… ನಿಮ್ಮ ಬಸ್ಸು ನಾ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...