Home / ಕವನ / ಕವಿತೆ / ಕೆಂಪು ಬಸ್ಸು ನಾ…

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು?
ಸರ್ವರಿಗೆಂದೆ ತಂಪು;
ಒನಪು, ವೈಯಾರ, ಥಳಕು ಬಳಕು ಕೈಕುಲುಕು!
ಹಳ್ಳ ದಿನ್ನಿ ಊರು ಕೇರಿ ಹಾರಿ;
ಹಗಲಿರುಳೂ ಸಾಗಿ,
ಚಳಿ ಮಳೆ ಗಾಳಿಗೆ ಮಾಗಿ,
ನಿತ್ಯ ದುಡಿವೆ ನೋಡಿ.
ಆಸೆ ನಿರಾಸೆ ಸುಖ ದುಃಖಗಳ ಹೊದ್ದು,
ಮದುವೆ ಮುಂಜಿ ಮಸಣಕಂಜಿ
ಶುಭ ಲಾಭ ನಷ್ಟ, ಟೀಕೆ ಟಿಪ್ಪಣಿ ಲೆಕ್ಕಿಸೆ
ನಿಜ ಸೇವೆ ಸ್ವರ್ಗ ಸಮಾನ!
ಬಡವ ಬಲ್ಲಿದ, ಭೇದವಿಲ್ಲದ,
ವಿದ್ಯಾವಂತ ಅವಿದ್ಯಾವಂತ
ಸಣ್ಣ ದೊಡ್ಡವ ಎಣಿಸದೆ,
“ಈಶ ಸೇವೆ, ದೇಶ ಸೇವೆ,
ಸಾರಿಗೆ ಸೇವೆ, ನೈಜ ಸೇವೆಂಬ”
ಮಂತ್ರ ಜಪಿಸುತ್ತಾ…
ನಿತ್ಯ ನಿತ್ಯ ಲಕ್ಷ ಜನರ ಹೊತ್ತು,
ಅವರವರ ಕನಸು, ಮನಸ್ಸಿಗೆ ಸ್ಪಂಧಿಸಿ,
ನಿರೀಕ್ಷೆ ಪರೀಕ್ಷೆಗೆ ತವಕಿಸಿ,
ನನ್ನ ದಾರಿ ನಿಮಗೆ ಶ್ರೀ ರಕ್ಷೆ,
ನನ್ನ ನಂಬಿ, ತಬ್ಬಿ ಹಬ್ಬಿ ಕೊಬ್ಬಿ ಬೆಳೆದವರೆ,
ಗದ್ದುಗೆ ಹಿಡಿದವರೆ,
ಪಟ್ಟಣವ ಕಂಡು,
ಡಿಗ್ರಿಗಳ ಪಡೆದು,
ಏನೆಲ್ಲ ಆದವರಿಗೆ,
ಏಣಿಯಾದವ!
ನನ್ನೆಲ್ಲ ಕಥೆ ವ್ಯಥೆಗೆ ೫೦ರ ಪ್ರಾಯ!
ತಾಯಿ ಭಾರತಿಗೆ ಎರಡನೆ ದೊಡ್ಡಕೂಸು.
ಕನ್ನಡದ ಕಂದ-
ರಾಜ್ಯ ರಾಜ್ಯಕ್ಕೆ ಸಂಚರಿಸಿ, ಕೋಟಿ ಕೋಟಿ… ರೊಕ್ಕ ಒಪ್ಪಿಸಿ,
ಕೀರ್ತಿ ಪತಾಕೆ ಹಾರಿಸಿ…!
ನಿಲ್ದಾಣ, ಡಿಪೋ, ಪಾಸು, ರಿಯಾಯಿತಿ, ಆಶ್ರಯ, ಕಾಮಧೇನು,
ಏನೆಲ್ಲ ಹಿಗ್ಗಿ ಹೀರೆಕಾಯಿ ಆದವ
ಎಳೆಯ ಗೆಳೆಯರ, ಶಾಲೆ ಬಾಲಕರ,
ಸ್ವಾತಂತ್ರ್‍ಯಯೋಧರ, ವೃದ್ಧ
ಆಬಾಲರ ಎತ್ತಿ ಮುದ್ದಾಡಿ,
ಬಲು ಎತ್ತರಕೆ ಬೆಳೆಸಿ,
ಕನಸುಗಳ ಅರಳಿಸಿ
ನಿಮ್ಮ ಬೇಕು, ಬಯಕೆಗಳಿಗೆ ನಿತ್ಯ ಉಸಿರಾಗಿ, ಬಸಿರಾಗಿ,
ಏನೆಲ್ಲ ಹೆಸರಾಗಿ, ಹಸಿರಾಗಿ,
ಕಿಸಿ ಕಿಸಿ ನಕ್ಕು ಕಸಿಯಾದವ
ವರ್ಷ ವರ್ಷಕೂ ಹರ್ಷದಿ ನಿರೀಕ್ಷೆಗಳ ತೂಗು ಸೇತುವೆ ಕಟ್ಟಿ,
ಹೊಳೆ ದಾಟಿಸಿದ ಅಂಬಿಗ
ಹೊಳೆ ದಾಟಿದ ನೀವೆಲ್ಲ.
ಆಕಾಶಕ್ಕೆ ಕೈ ಹಬ್ಬಿ ಬೂಟುಗಾಲಲಿ
ನನ್ನ ಒದ್ದರೂ;
ಒಂದೇ ಮುಗುಳ್ನಗೆಗೆ ಅದೇ ರಾಗ-
“ನಿಮ್ಮ ದೇವರೆಂದು” ‘ಪ್ರಭು’ ‘ಅನ್ನದಾತ’ ‘ಮಾಲೀಕರೆಂದು’
ಅಪ್ಪಿ ಮುದ್ದಿಡುವ, ಒಪ್ಪಿ ಓಡಾಡುವ,
ವಿಲ ವಿಲ ಒದ್ದಾಡುವ,
ಮುಲು ಮುಲು ಮುಲುಗುಟ್ಟುವ,
ಕೆಂಪು ಬಸ್ಸು ನಾ!… ನಿಮ್ಮ ಬಸ್ಸು ನಾ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...