ತಾರೆ ತೇಲಿ ಬರುವ ರೀತಿ
ತೀರ ಇರದ ಬಾನಿಗೆ
ತೇಲಿ ಬಂದೆ ನೀನು ನನ್ನ
ಮೇರೆ ಇರದ ಪ್ರೀತಿಗೆ
ನಲ್ಲೆ ನಿನ್ನ ಬೆಳಕಿನಲ್ಲಿ
ಬಿಚ್ಚಿ ತನ್ನ ದಳಗಳ
ನಲಿಯಿತಲ್ಲೆ ಜೀವ ಹೇಗೆ
ಸುತ್ತ ಚೆಲ್ಲಿ ಪರಿಮಳ!
ಒಲಿದರೇನು ಜೀವ ಎರಡು
ಮುನಿಯಿತಲ್ಲೆ ಲೋಕವೇ!
ಕುಲುಮೆಯಾಯ್ತು ಉರಿವ ಬಾಳು
ಪ್ರೇಮ ಎಂಥ ಶಾಪವೆ?
ನಾನು ಇಲ್ಲಿ ನೀ ಅದೆಲ್ಲಿ?
ನಡುವೆ ಕುದಿವ ಸಾಗರ,
ನಮ್ಮ ಬಾಳ ಸೀಳಿ ಎಸೆದ
ಲೋಕ ಏನು ಭೀಕರ!
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.