ಒಬ್ಬಾನೊಬ್ಬನು ಚಿತ್ರರಥನೆಂಬ ರಾಜನು ಇದ್ದನು. ಆತನು ಒಂದು ಸರೋವರವನ್ನು ಕಟ್ಟಿಸಿ ಅಲ್ಲಿ ತಾವರೆಗಳನ್ನು ಬೆಳೆಸಿ ಅದಕ್ಕೆ ಪದ್ಮವನ ಎಂದು ಹೆಸರಿಟ್ಟನು. ಅಲ್ಲಿಗೆ ಯಾರಾದರೂ ಹೋಗಿ ಅದನ್ನು ಕೆಡಿಸಿಯಾರು ಎಂದು ಕಾವಲಿಟ್ಟನು. ಅಲ್ಲಿ ಚಿನ್ನದ ಹಂಸಗಳು ಬಂದು ನೆಲಸಿದುವು. ಅವು ಅರು ತಿಂಗಳಿಗೊಮ್ಮೆ ಒಂದೊಂದು ಗರಿಯನ್ನು ಕೊಡುತ್ತಿದ್ದುವು.
ಒಂದು ದಿನ ಅಲ್ಲಿಗೆ ಚಿನ್ನದ ಹಕ್ಕಿಯೊಂದು ಬಂತು. ಅದು ಅಲ್ಲಿ ಇರಬೇಕು ಎನ್ನಲು ಹಂಸಗಳು “ನಾವು ಆರು ತಿಂಗಳಿಗೊಂದು ಚಿನ್ನದ ಗರಿಯನ್ನು ಕೊಟ್ಟು, ಈ ಪದ್ಮವನವನ್ನು ಗುತ್ತಿಗೆಗೆ ತೆಗೆದು ಕೊಂಡಿರುವೆವು” ಎಂದುವು. ಎರಡಕ್ಕೂ ಮಾತಿಗೆ ಮಾತು ನಡೆದು ಎರಡಕ್ಕೂ ಜಗಳವೂ ಆಯಿತು. ಆ ದೊಡ್ಡ ಹಕ್ಕಿಯು ನೇರವಾಗಿ ರಾಜನ ಬಳಿಗೆ ಹೋಯಿತು. “ದೇವ, ಈ ಹಕ್ಕಿಗಳಿಗೆ ತಾವು ಈ ಪದ್ಮವನ್ನು ಗುತ್ತಿಗೆಗೆ ಕೊಟ್ಟಿರುವಿರಾ? ನಮ್ಮನ್ನು ದೊರೆಯು ಏನೂ ಮಾಡುವಂತಿಲ್ಲ ನಾವು ಯಾರನ್ನೂ ಇಲ್ಲಿ ಸೇರಿಸುವುದಿಲ್ಲ. ಎನ್ನುವವಲ್ಲಾ!” ಎಂದು ದೂರು ಹೇಳಿತು.
ಆಗ ರಾಜನು ದೂತರನ್ನು ಕರೆದು “ಹೋಗಿ, ಆ ಪಕ್ಷಿಗಳನ್ನೆಲ್ಲಾ ಕೊಂದು ತನ್ನಿ” ಎಂದು ಅಪ್ಪಣೆ ಮಾಡಿದನು. ಆಳುಗಳು ದೊಣ್ಣೆಗಳನ್ನು ತೆಗೆದುಕೊಂಡು ಅಲ್ಲಿಗೆ ಹೋದರು. ಅದನ್ನು ಕಂಡು ಆ ಹಂಸಗಳಲ್ಲಿ ವಯಸ್ಸಾದ ಹಿರಿಯ ಹಂಸವೊಂದು ಎಲ್ಲರನ್ನೂ ಕೂಗಿ, “ಏಳಿ, ಏಳಿ, ಎಲ್ಲರೂ ಹಾರಿ ಹೋಗೋಣ” ಎಂದು ಕೂಗಿ ಕೊಂಡಿತು. ಎಲ್ಲವೂ ಹಾರಿಯೂ ಹೊರಟು ಹೋದುವು. ಅರಸನಿಗೆ ಬರುತ್ತಿದ್ದ ಚಿನ್ನದ ಗರಿಗಳು ಇಲ್ಲವಾಯಿತು. ಅರಸನು ಹೀಗೆ ಕಾಯಬೇಕಾಗಿದ್ದ ಹಂಸಗಳನ್ನು ಕೊಲ್ಲಲು ಹೋಗಿ ನಷ್ಟ ಪಟ್ಟನು.
ಅದರಿಂದ ಹೇಳಿದೆನು”ಕೇಳಿ ಕಾಣೆಯಾ ಪದ್ಮವನ ಕಥೆಯಾ” ಎಂದು ಅವರನ್ನೆಲ್ಲ ಕಳುಹಿಸಿಕೊಟ್ಟು ತಾನು ಮತ್ತೆ ಹುತ್ತದ ಬಳಿಗೆ ಹೋದನು. ಎಂದಿನಂತೆ ಹಾಲನ್ನು ಇಟ್ಟು, ಹಾವನ್ನು ಕರೆದು ಹಾಲನ್ನು ತೆಗೆದುಕೋ ಎಂದು ಕೇಳಿಕೊಂಡನು. ಹಾವು ಒಳಗಿನಿಂದಲೇ ಹೇಳಿತು: “ನೀನು ಪುತ್ರ ಶೋಕವನ್ನೂ ಮರೆತು ಇಲ್ಲಿಗೆ ಬಂದಿರುವುದು ಲೋಭದಿಂದ. ಅದರಿಂದ ಇನ್ನು ಮೇಲೆ ನನಗೂ ನಿನಗೂ ಪ್ರೀತಿಯು ಉಚಿತವಲ್ಲ. ನಿನ್ನ ಮಗನು ನನ್ನನ್ನು ಹೊಡೆದನು. ನಾನು ಅವನನ್ನು ಕಚ್ಚಿದೆನು. ನಾನು ದೊಣ್ಣೆಯೇಟನ್ನು ಮರೆಯುವಂತಿಲ್ಲ ನೀನು ಪುತ್ರ ಶೋಕವನ್ನು ಮರೆಯುವಂತಿಲ್ಲ. ಆದರೂ ನೀನು ನನಗೆ ಮಿತ್ರನಾಗಿದ್ದವನು, ಅದರಿಂದ ಈ ವಜ್ರವನ್ನು ತೆಗೆದುಕೊ ಇನ್ನು ಮೇಲೆ ಇಲ್ಲಿ ಬರಬೇಡ” ಎಂದು ವಜ್ರವನ್ನು ಕೊಟ್ಟು ಕಳುಹಿಸಿತು. ಬ್ರಾಹ್ಮಣನು “ನೋಡಿದೆಯಾ? ಮಗ ನಿಂದ ಹೀಗಾಯಿತು ಎಂದು ವ್ಯಥೆ ಪಟ್ಟುಕೊಂಡು ಮನೆಗೆ ಹೋದನು.
ಅದರಿಂದ “ಸ್ನೇಹ ಕೂಡಿಸಬಹುದೆ ಒಡೆದ ಗೆಳೆತನವಾ” ಎಂದು ಹೇಳಿದೆನು, ಇವನನ್ನು ಕೊಲ್ಲುವುದೇ ನ್ಯಾಯ. ಇವನನ್ನು ಕೊಂದರೆ ರಾಜ್ಯವು ಅಕಂಟಕವಾಗುವುದು.” (ಕಂಟಕ-ಮುಳ್ಳು, ಅಕಂಟಕ- ಮುಳ್ಳು ಇಲ್ಲದ್ದು)
ಅರಿಮರ್ದನನು ಕ್ರೂರಾಕ್ಷನನ್ನು ಕೇಳಿದನು: ಅವನು ಹೇಳಿದನು: “ದೇವ, ಅವನು ಹೇಳಿದುದು ನಿರ್ದಯವು. ಅದು ಸರಿಯಲ್ಲ. ಶರಣಾಗತನನ್ನು ವಧಿಸಬಾರದು. ಕೇಳಿಲ್ಲವೆ?
ಶರಣು ಬಂದವ ಬೇಡನಾದರು | ಪಾರಿವಾಳವು ಪೂಜೆಗೈದುದು |
ತನ್ನ ಮಾಂಸವನಿತ್ತು ಊಟಕೆ ಸಗ್ಗ ಕೈದಿತಲಾ ॥ ೨೭ ॥
ಅರಿಮರ್ದನನು ಅದೆಂತು ಎಂದು ಕೇಳಲು ಕ್ರೂರಾಕ್ಷನು ಹೇಳಿದನು:-
*****
ಪಾರಿವಾಳವು ಸಗ್ಗಕೈದಿತಲಾ ಕಥೆ ಓದಿ