Home / ಕವನ / ಕವಿತೆ / ವಿಜಯ ನಗರವೆ!

ವಿಜಯ ನಗರವೆ!


ವಿಜಯ ನಗರವೆ! ವಿಜಯ ನಗರವೆ! ಹಿಂದೆ ನೀ ಮು೦ದೊತ್ತಿಹೆ
ನಿಜ ಮಹೋತ್ಸಾಹದಲಿ ಲೋಕದ ಬೆರಗಿನುತ್ಸವವಾಂತಿಹೆ!
ಹಿಗ್ಗಿನಲಿ ತೊಳ ತೊಳಗಿಹೆ!- ನೀ
ಬಗ್ಗದೆಯೆ ಬೆಳಬೆಳಗಿಹೆ!!


# ಹಿಂದೆ ಮಾರುತಿ–ವಾಲಿ–ಸುಗ್ರೀವಾದಿ ಕಪಿಗಳ ಗೆಳೆತನ,
ಸಂದ ರಾಘವ-ಲಕ್ಷ್ಮಣಾರ್ಯರ ಮೈತ್ರಿಯಾ ದೊಡ್ಡಿಸ್ತನ,
ಇವುಗಳಲಿ ಮೆರೆದಾಡಿಹೆ!- ಮ-
ತ್ತವನಿಜೆಯ ತೊಡವಾಂತಿಹೆ!!


ಸಾವಿರದ ಮುನ್ನೂರ ಮೂವತ್ತಾರನೆಯ ಶುಭ ‘ಇಸವಿ’ಲಿ
ದೇವರಾಶೀರ್ವಾದದಲಿ ಹೇ ವಿಜಯನಗರವೆ! ನಿನ್ನಲಿ
ಸಾಸಿ ವಿದ್ಯಾರಣ್ಯರು- ಸಿ೦-
ಹಾಸನ ಸ್ಥಾಪಿಸಿದರು


‘ಏಳು, ಸಾಯಣ! ಕಟ್ಟು ಗ್ರಂಥವ’ ನೆಂದ ವಿದ್ಯಾರಣ್ಯರು,-
ಏಳು, ಹರಿಹರ! ಕಟ್ಟು ರಾಜ್ಯವ’ ನೆಂದ ಮೌನಿವರೇಣ್ಯರು-
ಎಲ್ಲಿ ಶಾಸ್ತ್ರದ ಕವಿಗಳು? ಅವ-
ರೆಲ್ಲಿ ಕೀರ್ತಿಯ ರವಿಗಳು?


ಮನ್ನಣೆಯ ವೇದಗಳ ‘ಭಾಷ್ಯ’ ವನೊರೆದ ಸಾಯಣ ವಿಪ್ರನು,
ಕನ್ನಡದಿ ಭಾರತವ ಬರೆದಿಹ ಆ ಕುಮಾರ ವ್ಯಾಸನು,
ನಿನ್ನ ಘನತೆಯ ಬೀರುತ,-ಇಂ-
ದಿನ್ನು ಮೆರೆವರು ಸಂತತ!


ವಿಜಯನಗರವೆ! ನೈಜದಿಂದೆವೆದೆರೆದನಾ ಭಾಗ್ಯದ ರವಿ!
ವಿಜಯ-ವಿಭವದ ಹೆಮ್ಮೆ..ಹುಮ್ಮಸ ಮಿರುಗಿತಾ ಪ್ರಗತಿಚ್ಛವಿ!!
ಅ೦ದೆ ನೀ ಮುಂದೊತ್ತಿದೆ!… ಕಣ್‌-
ಮುಂದೆ ಮಿಗೆ ತಲೆಯೆತ್ತಿದೆ!!


ಅಂದು ವಿಪುಲೈಶ್ವರ್ಯದಿಂದಲಿ ಜಗವ ವಿಸ್ಮಯಗೊಳಿಸಿದೆ;
ಮುಂದರಿದು, ನವ ನಾಗರೀಕತೆಯಿಂದ ಚೇತನಕೆಳಸಿದೆ
ಶಿಲೆಗಳಿಗೆ ರೂಪಿತ್ತಿಹೆ- ಸತ್‌-
ಕಲೆಗಳಲಿ ಕಳೆಯೇರಿಹೆ


ಯಾರು ವಿಜಯದ ದಶಮಿಯಲಿ ಹೊಸ ಹುರುಪಿನಲಿ ಹೊರಹೊಮ್ಮುತ
ಸಾರಿ ಪರರಾಷ್ಟ್ರವನು ಸಮರದಿ ವೀರ ವಿಜಯದೊಳುಬ್ಬುತ
ಮೆರೆದರೋ ಆ ರಾಜರು- ಈ
ಗಿರುವರೇ ನವ ತೇಜರು ?


ಶೂರ ಹರಿಹರ-ಬುಕ್ಕ ನರಪತಿ-ವೀರ ಕಂಪ ನೃಪಾಲಕ,
ಧೀರ ಕೃಷ್ಣ ಸುದೇವರಾಯನು-ಅಧಟಿನೆಚ್ಚಮನಾಯಕ
ಎ೦ದು ಮೊದಲಾದರಸರು-ಎ-
ಲ್ಲಿಂದಿಹರು ಬಹು ಸರಸರು?

೧೦
ಅಂದು ನಿನ್ನಲಿ ನೃಪರು ಮೆರೆದರು; ಅಂದು ರಾಣಿಯರೊಲಿದರು,
ಅಂದು ಕವಿಗಳು ಕವನ ಕಟ್ಟಿದರಂದು ಗಾಯಕರು ಉಲಿದರು,
ವಾದಿಸಿದರಾ ವಾದಿಗಳ್,- ಮ-
ತ್ತೋದಿದರು ವರ ಗಮಕಿಗಳ್

೧೧
ಏನು ಹೇಳಲಿ? ವಿಜಯನಗರವೆ! ನಿನ್ನ ಪರಿಭವ ವಾರ್ತೆಯ
ಮಾನಸವು ಮರುಗುವುದು- ಶತ್ರುಗಳಿಂದು ನುಗ್ಗುತ ನಿನ್ನಯ
ಪಟ್ಟಣವ ಪುಡಿಗೈದರು-ನಿ
ನ್ನಟ್ಟಹಾಸವ ಹಿಳಿದರು

೧೨
*ತಾಳಿಕೋಟೆಯ ಕಾಳಗದ ಕಳದಲ್ಲಿ ನಿನ್ನ ಮಹತ್ವವ
ಸೀಳಿಬಿಟ್ಟನೆ ಕಾಲ ರಾಕ್ಷಸ?- ಕೋಳುಗೊಂಡನೆ ಸತ್ವವ?
ಅ೦ದಿನಾ ದುಷ್ಕಾಲವು?- ಆ-
ನಂದದಾ ಕೊನೆಗಾಲವು

೧೩
ಸತ್ಕಲಾಚಾರ್ಯರ ಪರಿಶ್ರಮದಿಂದಲೇಳಿಗೆವಡೆದಿಹ,
ಉತ್ಕಟಾಮಲ ದೈವ ಭಕ್ತಿಯ ಶಕ್ತಿಯಲಿ ಮೈವೆತ್ತಿಹ
ಆ ಬೃಹದ್ವಿಗ್ರಹಗಳು- ಸಂ-
ಕ್ಷೋಭೆಯನು ಪಡೆದವುಗಳು

೧೪
ನಿನ್ನ ಕೀರ್ತಿಯ ವಿಜಯ ತೂರ್ಯವು ಅಂದು ಗಾನವ ನಿಲಿಸಿತೇ?
ನಿನ್ನ ಹೆಸರಿನ ‘ವಿಜಯ’ ಶಬ್ದದ ಮೊಗಕೆ ಅಪಜಯ ಕವಿಯಿತೇ
ಆ ಮಹಾ ಸಾಮ್ರಾಜ್ಯವು- ತ-
ನ್ನಾಮ ಮಾತ್ರದಿ ಶೇಷವು!

೧೫
ಒಂದೆ ದಿನದಲಿ ನಿನ್ನ ಮಂಗಲ ತಿಲಕ ಹಣೆಯಿಂದಳಿಯಿತು
ಸುಂದರ ಸ್ವಾತಂತ್ರ್ಯ ಕೇತುವು, ಮುರಿದು, ಮಳಲಲಿ ಮುರುಟಿತು!
ಆಶೆಯಾ ಕುಡಿ ಮುಗ್ಗಿತು-ಸಂ-
ತೋಷದಾ ಕಳೆ ಕುಗ್ಗಿತು

೧೬
ಕಾಲ ಚಕ್ರದ ಕಾಲಡಿಗೆ ನೀ ಬಿದ್ದು ಗಾಸಿಯ ಪಡೆದರೂ,
ಲೀಲೆಯಾ ನೋಟಗಳು ನಿನ್ನಲಿ ತುಂಬಿಹವು- ಅದನಾದರೂ
ಇಂದು ನೋಡುತ, ನೆನೆಯುವ-ನಾ-
ವಂದಿನಾ ಗತವೈಭವ!
*****
೧೯೩೬
# ತ್ರೇತಾಯುಗದಲ್ಲಿ, ರಾಮಾಯಣ ಕಾಲದಲ್ಲಿ.
*ರಕ್ಕಸತಂಗಡಿ
ವಿಜಯನಗರದ ಷಟ್‌ ಶತ ಸಾಂವತ್ಸರಿಕೋತ್ಸವದ ಸವಿಪಿನೆನಪಿಗೆ ಅದೇ ವರ್‍ಷ ಬರೆದುದು

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...