Home / ಕವನ / ಕವಿತೆ / ವಿಜಯ ನಗರವೆ!

ವಿಜಯ ನಗರವೆ!


ವಿಜಯ ನಗರವೆ! ವಿಜಯ ನಗರವೆ! ಹಿಂದೆ ನೀ ಮು೦ದೊತ್ತಿಹೆ
ನಿಜ ಮಹೋತ್ಸಾಹದಲಿ ಲೋಕದ ಬೆರಗಿನುತ್ಸವವಾಂತಿಹೆ!
ಹಿಗ್ಗಿನಲಿ ತೊಳ ತೊಳಗಿಹೆ!- ನೀ
ಬಗ್ಗದೆಯೆ ಬೆಳಬೆಳಗಿಹೆ!!


# ಹಿಂದೆ ಮಾರುತಿ–ವಾಲಿ–ಸುಗ್ರೀವಾದಿ ಕಪಿಗಳ ಗೆಳೆತನ,
ಸಂದ ರಾಘವ-ಲಕ್ಷ್ಮಣಾರ್ಯರ ಮೈತ್ರಿಯಾ ದೊಡ್ಡಿಸ್ತನ,
ಇವುಗಳಲಿ ಮೆರೆದಾಡಿಹೆ!- ಮ-
ತ್ತವನಿಜೆಯ ತೊಡವಾಂತಿಹೆ!!


ಸಾವಿರದ ಮುನ್ನೂರ ಮೂವತ್ತಾರನೆಯ ಶುಭ ‘ಇಸವಿ’ಲಿ
ದೇವರಾಶೀರ್ವಾದದಲಿ ಹೇ ವಿಜಯನಗರವೆ! ನಿನ್ನಲಿ
ಸಾಸಿ ವಿದ್ಯಾರಣ್ಯರು- ಸಿ೦-
ಹಾಸನ ಸ್ಥಾಪಿಸಿದರು


‘ಏಳು, ಸಾಯಣ! ಕಟ್ಟು ಗ್ರಂಥವ’ ನೆಂದ ವಿದ್ಯಾರಣ್ಯರು,-
ಏಳು, ಹರಿಹರ! ಕಟ್ಟು ರಾಜ್ಯವ’ ನೆಂದ ಮೌನಿವರೇಣ್ಯರು-
ಎಲ್ಲಿ ಶಾಸ್ತ್ರದ ಕವಿಗಳು? ಅವ-
ರೆಲ್ಲಿ ಕೀರ್ತಿಯ ರವಿಗಳು?


ಮನ್ನಣೆಯ ವೇದಗಳ ‘ಭಾಷ್ಯ’ ವನೊರೆದ ಸಾಯಣ ವಿಪ್ರನು,
ಕನ್ನಡದಿ ಭಾರತವ ಬರೆದಿಹ ಆ ಕುಮಾರ ವ್ಯಾಸನು,
ನಿನ್ನ ಘನತೆಯ ಬೀರುತ,-ಇಂ-
ದಿನ್ನು ಮೆರೆವರು ಸಂತತ!


ವಿಜಯನಗರವೆ! ನೈಜದಿಂದೆವೆದೆರೆದನಾ ಭಾಗ್ಯದ ರವಿ!
ವಿಜಯ-ವಿಭವದ ಹೆಮ್ಮೆ..ಹುಮ್ಮಸ ಮಿರುಗಿತಾ ಪ್ರಗತಿಚ್ಛವಿ!!
ಅ೦ದೆ ನೀ ಮುಂದೊತ್ತಿದೆ!… ಕಣ್‌-
ಮುಂದೆ ಮಿಗೆ ತಲೆಯೆತ್ತಿದೆ!!


ಅಂದು ವಿಪುಲೈಶ್ವರ್ಯದಿಂದಲಿ ಜಗವ ವಿಸ್ಮಯಗೊಳಿಸಿದೆ;
ಮುಂದರಿದು, ನವ ನಾಗರೀಕತೆಯಿಂದ ಚೇತನಕೆಳಸಿದೆ
ಶಿಲೆಗಳಿಗೆ ರೂಪಿತ್ತಿಹೆ- ಸತ್‌-
ಕಲೆಗಳಲಿ ಕಳೆಯೇರಿಹೆ


ಯಾರು ವಿಜಯದ ದಶಮಿಯಲಿ ಹೊಸ ಹುರುಪಿನಲಿ ಹೊರಹೊಮ್ಮುತ
ಸಾರಿ ಪರರಾಷ್ಟ್ರವನು ಸಮರದಿ ವೀರ ವಿಜಯದೊಳುಬ್ಬುತ
ಮೆರೆದರೋ ಆ ರಾಜರು- ಈ
ಗಿರುವರೇ ನವ ತೇಜರು ?


ಶೂರ ಹರಿಹರ-ಬುಕ್ಕ ನರಪತಿ-ವೀರ ಕಂಪ ನೃಪಾಲಕ,
ಧೀರ ಕೃಷ್ಣ ಸುದೇವರಾಯನು-ಅಧಟಿನೆಚ್ಚಮನಾಯಕ
ಎ೦ದು ಮೊದಲಾದರಸರು-ಎ-
ಲ್ಲಿಂದಿಹರು ಬಹು ಸರಸರು?

೧೦
ಅಂದು ನಿನ್ನಲಿ ನೃಪರು ಮೆರೆದರು; ಅಂದು ರಾಣಿಯರೊಲಿದರು,
ಅಂದು ಕವಿಗಳು ಕವನ ಕಟ್ಟಿದರಂದು ಗಾಯಕರು ಉಲಿದರು,
ವಾದಿಸಿದರಾ ವಾದಿಗಳ್,- ಮ-
ತ್ತೋದಿದರು ವರ ಗಮಕಿಗಳ್

೧೧
ಏನು ಹೇಳಲಿ? ವಿಜಯನಗರವೆ! ನಿನ್ನ ಪರಿಭವ ವಾರ್ತೆಯ
ಮಾನಸವು ಮರುಗುವುದು- ಶತ್ರುಗಳಿಂದು ನುಗ್ಗುತ ನಿನ್ನಯ
ಪಟ್ಟಣವ ಪುಡಿಗೈದರು-ನಿ
ನ್ನಟ್ಟಹಾಸವ ಹಿಳಿದರು

೧೨
*ತಾಳಿಕೋಟೆಯ ಕಾಳಗದ ಕಳದಲ್ಲಿ ನಿನ್ನ ಮಹತ್ವವ
ಸೀಳಿಬಿಟ್ಟನೆ ಕಾಲ ರಾಕ್ಷಸ?- ಕೋಳುಗೊಂಡನೆ ಸತ್ವವ?
ಅ೦ದಿನಾ ದುಷ್ಕಾಲವು?- ಆ-
ನಂದದಾ ಕೊನೆಗಾಲವು

೧೩
ಸತ್ಕಲಾಚಾರ್ಯರ ಪರಿಶ್ರಮದಿಂದಲೇಳಿಗೆವಡೆದಿಹ,
ಉತ್ಕಟಾಮಲ ದೈವ ಭಕ್ತಿಯ ಶಕ್ತಿಯಲಿ ಮೈವೆತ್ತಿಹ
ಆ ಬೃಹದ್ವಿಗ್ರಹಗಳು- ಸಂ-
ಕ್ಷೋಭೆಯನು ಪಡೆದವುಗಳು

೧೪
ನಿನ್ನ ಕೀರ್ತಿಯ ವಿಜಯ ತೂರ್ಯವು ಅಂದು ಗಾನವ ನಿಲಿಸಿತೇ?
ನಿನ್ನ ಹೆಸರಿನ ‘ವಿಜಯ’ ಶಬ್ದದ ಮೊಗಕೆ ಅಪಜಯ ಕವಿಯಿತೇ
ಆ ಮಹಾ ಸಾಮ್ರಾಜ್ಯವು- ತ-
ನ್ನಾಮ ಮಾತ್ರದಿ ಶೇಷವು!

೧೫
ಒಂದೆ ದಿನದಲಿ ನಿನ್ನ ಮಂಗಲ ತಿಲಕ ಹಣೆಯಿಂದಳಿಯಿತು
ಸುಂದರ ಸ್ವಾತಂತ್ರ್ಯ ಕೇತುವು, ಮುರಿದು, ಮಳಲಲಿ ಮುರುಟಿತು!
ಆಶೆಯಾ ಕುಡಿ ಮುಗ್ಗಿತು-ಸಂ-
ತೋಷದಾ ಕಳೆ ಕುಗ್ಗಿತು

೧೬
ಕಾಲ ಚಕ್ರದ ಕಾಲಡಿಗೆ ನೀ ಬಿದ್ದು ಗಾಸಿಯ ಪಡೆದರೂ,
ಲೀಲೆಯಾ ನೋಟಗಳು ನಿನ್ನಲಿ ತುಂಬಿಹವು- ಅದನಾದರೂ
ಇಂದು ನೋಡುತ, ನೆನೆಯುವ-ನಾ-
ವಂದಿನಾ ಗತವೈಭವ!
*****
೧೯೩೬
# ತ್ರೇತಾಯುಗದಲ್ಲಿ, ರಾಮಾಯಣ ಕಾಲದಲ್ಲಿ.
*ರಕ್ಕಸತಂಗಡಿ
ವಿಜಯನಗರದ ಷಟ್‌ ಶತ ಸಾಂವತ್ಸರಿಕೋತ್ಸವದ ಸವಿಪಿನೆನಪಿಗೆ ಅದೇ ವರ್‍ಷ ಬರೆದುದು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...