೧
ವಿಜಯ ನಗರವೆ! ವಿಜಯ ನಗರವೆ! ಹಿಂದೆ ನೀ ಮು೦ದೊತ್ತಿಹೆ
ನಿಜ ಮಹೋತ್ಸಾಹದಲಿ ಲೋಕದ ಬೆರಗಿನುತ್ಸವವಾಂತಿಹೆ!
ಹಿಗ್ಗಿನಲಿ ತೊಳ ತೊಳಗಿಹೆ!- ನೀ
ಬಗ್ಗದೆಯೆ ಬೆಳಬೆಳಗಿಹೆ!!
೨
# ಹಿಂದೆ ಮಾರುತಿ–ವಾಲಿ–ಸುಗ್ರೀವಾದಿ ಕಪಿಗಳ ಗೆಳೆತನ,
ಸಂದ ರಾಘವ-ಲಕ್ಷ್ಮಣಾರ್ಯರ ಮೈತ್ರಿಯಾ ದೊಡ್ಡಿಸ್ತನ,
ಇವುಗಳಲಿ ಮೆರೆದಾಡಿಹೆ!- ಮ-
ತ್ತವನಿಜೆಯ ತೊಡವಾಂತಿಹೆ!!
೩
ಸಾವಿರದ ಮುನ್ನೂರ ಮೂವತ್ತಾರನೆಯ ಶುಭ ‘ಇಸವಿ’ಲಿ
ದೇವರಾಶೀರ್ವಾದದಲಿ ಹೇ ವಿಜಯನಗರವೆ! ನಿನ್ನಲಿ
ಸಾಸಿ ವಿದ್ಯಾರಣ್ಯರು- ಸಿ೦-
ಹಾಸನ ಸ್ಥಾಪಿಸಿದರು
೪
‘ಏಳು, ಸಾಯಣ! ಕಟ್ಟು ಗ್ರಂಥವ’ ನೆಂದ ವಿದ್ಯಾರಣ್ಯರು,-
ಏಳು, ಹರಿಹರ! ಕಟ್ಟು ರಾಜ್ಯವ’ ನೆಂದ ಮೌನಿವರೇಣ್ಯರು-
ಎಲ್ಲಿ ಶಾಸ್ತ್ರದ ಕವಿಗಳು? ಅವ-
ರೆಲ್ಲಿ ಕೀರ್ತಿಯ ರವಿಗಳು?
೫
ಮನ್ನಣೆಯ ವೇದಗಳ ‘ಭಾಷ್ಯ’ ವನೊರೆದ ಸಾಯಣ ವಿಪ್ರನು,
ಕನ್ನಡದಿ ಭಾರತವ ಬರೆದಿಹ ಆ ಕುಮಾರ ವ್ಯಾಸನು,
ನಿನ್ನ ಘನತೆಯ ಬೀರುತ,-ಇಂ-
ದಿನ್ನು ಮೆರೆವರು ಸಂತತ!
೬
ವಿಜಯನಗರವೆ! ನೈಜದಿಂದೆವೆದೆರೆದನಾ ಭಾಗ್ಯದ ರವಿ!
ವಿಜಯ-ವಿಭವದ ಹೆಮ್ಮೆ..ಹುಮ್ಮಸ ಮಿರುಗಿತಾ ಪ್ರಗತಿಚ್ಛವಿ!!
ಅ೦ದೆ ನೀ ಮುಂದೊತ್ತಿದೆ!… ಕಣ್-
ಮುಂದೆ ಮಿಗೆ ತಲೆಯೆತ್ತಿದೆ!!
೭
ಅಂದು ವಿಪುಲೈಶ್ವರ್ಯದಿಂದಲಿ ಜಗವ ವಿಸ್ಮಯಗೊಳಿಸಿದೆ;
ಮುಂದರಿದು, ನವ ನಾಗರೀಕತೆಯಿಂದ ಚೇತನಕೆಳಸಿದೆ
ಶಿಲೆಗಳಿಗೆ ರೂಪಿತ್ತಿಹೆ- ಸತ್-
ಕಲೆಗಳಲಿ ಕಳೆಯೇರಿಹೆ
೮
ಯಾರು ವಿಜಯದ ದಶಮಿಯಲಿ ಹೊಸ ಹುರುಪಿನಲಿ ಹೊರಹೊಮ್ಮುತ
ಸಾರಿ ಪರರಾಷ್ಟ್ರವನು ಸಮರದಿ ವೀರ ವಿಜಯದೊಳುಬ್ಬುತ
ಮೆರೆದರೋ ಆ ರಾಜರು- ಈ
ಗಿರುವರೇ ನವ ತೇಜರು ?
೯
ಶೂರ ಹರಿಹರ-ಬುಕ್ಕ ನರಪತಿ-ವೀರ ಕಂಪ ನೃಪಾಲಕ,
ಧೀರ ಕೃಷ್ಣ ಸುದೇವರಾಯನು-ಅಧಟಿನೆಚ್ಚಮನಾಯಕ
ಎ೦ದು ಮೊದಲಾದರಸರು-ಎ-
ಲ್ಲಿಂದಿಹರು ಬಹು ಸರಸರು?
೧೦
ಅಂದು ನಿನ್ನಲಿ ನೃಪರು ಮೆರೆದರು; ಅಂದು ರಾಣಿಯರೊಲಿದರು,
ಅಂದು ಕವಿಗಳು ಕವನ ಕಟ್ಟಿದರಂದು ಗಾಯಕರು ಉಲಿದರು,
ವಾದಿಸಿದರಾ ವಾದಿಗಳ್,- ಮ-
ತ್ತೋದಿದರು ವರ ಗಮಕಿಗಳ್
೧೧
ಏನು ಹೇಳಲಿ? ವಿಜಯನಗರವೆ! ನಿನ್ನ ಪರಿಭವ ವಾರ್ತೆಯ
ಮಾನಸವು ಮರುಗುವುದು- ಶತ್ರುಗಳಿಂದು ನುಗ್ಗುತ ನಿನ್ನಯ
ಪಟ್ಟಣವ ಪುಡಿಗೈದರು-ನಿ
ನ್ನಟ್ಟಹಾಸವ ಹಿಳಿದರು
೧೨
*ತಾಳಿಕೋಟೆಯ ಕಾಳಗದ ಕಳದಲ್ಲಿ ನಿನ್ನ ಮಹತ್ವವ
ಸೀಳಿಬಿಟ್ಟನೆ ಕಾಲ ರಾಕ್ಷಸ?- ಕೋಳುಗೊಂಡನೆ ಸತ್ವವ?
ಅ೦ದಿನಾ ದುಷ್ಕಾಲವು?- ಆ-
ನಂದದಾ ಕೊನೆಗಾಲವು
೧೩
ಸತ್ಕಲಾಚಾರ್ಯರ ಪರಿಶ್ರಮದಿಂದಲೇಳಿಗೆವಡೆದಿಹ,
ಉತ್ಕಟಾಮಲ ದೈವ ಭಕ್ತಿಯ ಶಕ್ತಿಯಲಿ ಮೈವೆತ್ತಿಹ
ಆ ಬೃಹದ್ವಿಗ್ರಹಗಳು- ಸಂ-
ಕ್ಷೋಭೆಯನು ಪಡೆದವುಗಳು
೧೪
ನಿನ್ನ ಕೀರ್ತಿಯ ವಿಜಯ ತೂರ್ಯವು ಅಂದು ಗಾನವ ನಿಲಿಸಿತೇ?
ನಿನ್ನ ಹೆಸರಿನ ‘ವಿಜಯ’ ಶಬ್ದದ ಮೊಗಕೆ ಅಪಜಯ ಕವಿಯಿತೇ
ಆ ಮಹಾ ಸಾಮ್ರಾಜ್ಯವು- ತ-
ನ್ನಾಮ ಮಾತ್ರದಿ ಶೇಷವು!
೧೫
ಒಂದೆ ದಿನದಲಿ ನಿನ್ನ ಮಂಗಲ ತಿಲಕ ಹಣೆಯಿಂದಳಿಯಿತು
ಸುಂದರ ಸ್ವಾತಂತ್ರ್ಯ ಕೇತುವು, ಮುರಿದು, ಮಳಲಲಿ ಮುರುಟಿತು!
ಆಶೆಯಾ ಕುಡಿ ಮುಗ್ಗಿತು-ಸಂ-
ತೋಷದಾ ಕಳೆ ಕುಗ್ಗಿತು
೧೬
ಕಾಲ ಚಕ್ರದ ಕಾಲಡಿಗೆ ನೀ ಬಿದ್ದು ಗಾಸಿಯ ಪಡೆದರೂ,
ಲೀಲೆಯಾ ನೋಟಗಳು ನಿನ್ನಲಿ ತುಂಬಿಹವು- ಅದನಾದರೂ
ಇಂದು ನೋಡುತ, ನೆನೆಯುವ-ನಾ-
ವಂದಿನಾ ಗತವೈಭವ!
*****
೧೯೩೬
# ತ್ರೇತಾಯುಗದಲ್ಲಿ, ರಾಮಾಯಣ ಕಾಲದಲ್ಲಿ.
*ರಕ್ಕಸತಂಗಡಿ
ವಿಜಯನಗರದ ಷಟ್ ಶತ ಸಾಂವತ್ಸರಿಕೋತ್ಸವದ ಸವಿಪಿನೆನಪಿಗೆ ಅದೇ ವರ್ಷ ಬರೆದುದು

















