ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು ನಿಶ್ಚಯಿಸಿದರು. ತಮ್ಮ ಮನೆಯೊಳಗಿನ ಒಂದು ಕೋಣೆಯಲ್ಲಿ ಗುರುಗಳು ಇಳಿದುಕೊಳ್ಳಲು ಏರ್ಪಡಿಸಿದರು. ಆದರೆ ಗುರುಗಳಿಗೆ ಬಿನ್ನಹಮಾಡಿ ದಕ್ಷಿಣೆಕೊಡಮಾಡುವುದು ಏತರಿಂದ – ಎಂದು ಆ ದಂಪತಿಗಳು ಯೋಚಿಸತೊಡಗಿದರು. ಅವರಿಗೊಂದು ಯುಕ್ತಿ ಹೊಳೆಯಿತು – “ಗುರುಗಳಿಗೆ ಪ್ರತ್ಯೇಕವಾದ ಒಂದು ಜೊತೆ ಚಮ್ಮಳಿಗೆಗಳಿವೆ. ಹೇಗಾದರೂ ಅವುಗಳನ್ನು ಅವರು ಉಪಯೋಗಿಸುವದಿಲ್ಲ. ಚೀಲದಲ್ಲಿ ಬಯತಿರಿಸಿರುತ್ತಾರೆ. ಅವುಗಳನ್ನು ಅವರಿಗೆ ಗೊತ್ತಾಗದಂತೆ ಒಯ್ದು ಮಾರಿ ಬಂದರಾಯಿತು. ತಕ್ಕಷ್ಟು ಹಣ ಬರುತ್ತದೆ. ಅದನ್ನೇ ಖರ್ಚು ಮಾಡಿ, ಗುರುಗಳಿಗೆ ಬಿನ್ನಹಮಾಡಿಸಿ ಮೇಲೆ ದಕ್ಷಿಣೆ ಕೊಡಬಹುದು.

ಗಂಟಿನಲ್ಲಿದ್ದ ಆ ಚಮ್ಮಳಿಗೆಗಳನ್ನು ಗುರುಗಳಿಗೂ ಅವರ ಸೇವಕನಿಗೂ ಗೊತ್ತಾಗದಂತೆ ಎತ್ತಿತಂದು ಕೊಟ್ಟವಳು ಹೆಂಡತಿ. ಅವುಗಳನ್ನು ಪೇಟೆಗೊಯ್ದು ಮಾರಿಕೊಂಡು ಮೂವತ್ತು ರೂಪಾಯಿ ತಂದವನು ಗಂಡ. ಆ ಬಳಿಕ ಗೋದಿ, ಅಕ್ಕಿ, ಬೇಳೆ, ಬೆಲ್ಲ, ಬೆಣ್ಣೆ, ಎಣ್ಣಿ ಮೊದಲಾದವುಗಳನ್ನು ಕೊಂಡುತಂದರು. ಗೊತ್ತು ಮಾಡಿದ ದಿವಸ ಹೂರಣಕ್ಕೆ ಹಾಕಿ ಹೋಳಿಗೆ ಮಾಡಿದರು. ತುಪ್ಪವಂತೂ ಬೆಣ್ಣೆ ಕಾಸಿದ್ದಿತ್ತು.

ಗುರುಗಳ ಸ್ನಾನ, ಪೂಜೆ ಆದ ಬಳಿಕ ಆ ದಂಪತಿಗಳು ಪಾದಪೂಜೆಗೆ ಕುಳಿತರು. ಅದು ಮುಗಿದ ಮೇಲೆ ಕರಣಪ್ರಸಾದ ತೆಗೆದುಕೊಂಡು ಗುರುಗಳಿಗೆ
ಉಣಬಡಿಸುವ ಏರ್ಪಾಡು ನಡೆಸಿದರು. ಹೋಳಿಗೆ – ತುಪ್ಪದ ಊಟದಿಂದ ಗುರುಗಳು ಸಂತೃಪ್ತರಾದರು. ಶಿಷ್ಯ ಮಕ್ಕಳು ಗುರುಗಳ ಕಾಲಿಗೆರಗಿ ಇಪ್ಪತ್ತು ರೂಪಾಯಿ ಗುರುದಕ್ಷಿಣೆಯಿಟ್ಟರು. ಗುರುಗಳಿಗೆ ಅತಿಶಯ ಆನಂದವಾಗಿ ಅವರ ಔದಾರ್ಯವನ್ನು ಹೊಗಳ ತೊಡಗಿದರು.

ಗಂಡಹೆಂಡಿರು ಕೈಮುಗಿದು – “ಅದೆಲ್ಲ ತಮ್ಮ ಪಾದರಕ್ಷೆಯ ಪುಣ್ಯ” ಎಂದು ವಿನಯಿಸಿದರು.

ಸೇವಕನನ್ನು ಕರೆದು ಗುರುಗಳು ಮುಂದಿನ ಪಯಣದ ಸಿದ್ಧತೆ ನಡೆಸಿದರು. ಗಂಡಹೆಂಡಿರನ್ನು ಕರೆದು ಅವರ ಭಕ್ತಿಯನ್ನೂ ಔದಾರ್ಯವನ್ನೂ ಕೊಂಡಾಡಿದರು. ದಂಪತಿಗಳಿಬ್ಬರೂ ಗುರುಗಳ ಕಾಲಿಗೆರಗಿ – ‘ತಮ್ಮ ಪಾದರಕ್ಷೆ ಯ ಪುಣ್ಯ’ ಎನ್ನುತ್ತ ಆಶೀರ್ವಾದ ಪಡೆದರು.

ಮುಂದಿನೂರು ತಲುಪಿ ಬೀಡು ಬಿಟ್ಟಾಗ ಗುರುಗಳು ತಮ್ಮ ಚಮ್ಮಳಿಗೆಗಳನ್ನು ಹುಡುಕಾಡಿದರೆ ಸಿಗಲೇ ಇಲ್ಲ. ಸೇವಕನನ್ನು ಕೇಳಿದರು – “ಎಲ್ಲಿ ಮಾಯವಾದವು?”

ಗುರುಗಳಿಗಂತೂ ಏನೂ ತಿಳಿಯಲಿಲ್ಲ. ಕೊನೆಗೆ ಸೇವಕನೇ ಅನುಮಾನಿಸುತ್ತ ನುಡಿದನು-

“ಹಿಂದಿನೂರಿನ  ಶಿಷ್ಯಮಕ್ಕಳು ಮಾತುಮಾತಿಗೆ ‘ತಮ್ಮ ಪಾದರಕ್ಷೆಯ ಪುಣ್ಯ’ ವೆನ್ನುತ್ತಿದ್ದರು. ಅವರೇ ಪುಣ್ಯಕಟ್ಟಿಕೊಂಡಂತೆ ಕಾಣುತ್ತದೆ.”

“ಗುರುದಕ್ಷಿಣೆ ಈ ಬಗೆಯಾಗಿ ಸಿಕ್ಕಿತೆನ್ನೋಣ – ಗುರುವಿನಿಂದ ದಕ್ಷಿಣೆ” ಎಂದರು ಗುರುಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೧೭
Next post ಪ್ರಜಾರಾಜ್ಯದ ಅಣಕಾಟ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys