Home / ಕಥೆ / ಜನಪದ / ಪಾದರಕ್ಷೆಯ ಪುಣ್ಯ

ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು ನಿಶ್ಚಯಿಸಿದರು. ತಮ್ಮ ಮನೆಯೊಳಗಿನ ಒಂದು ಕೋಣೆಯಲ್ಲಿ ಗುರುಗಳು ಇಳಿದುಕೊಳ್ಳಲು ಏರ್ಪಡಿಸಿದರು. ಆದರೆ ಗುರುಗಳಿಗೆ ಬಿನ್ನಹಮಾಡಿ ದಕ್ಷಿಣೆಕೊಡಮಾಡುವುದು ಏತರಿಂದ – ಎಂದು ಆ ದಂಪತಿಗಳು ಯೋಚಿಸತೊಡಗಿದರು. ಅವರಿಗೊಂದು ಯುಕ್ತಿ ಹೊಳೆಯಿತು – “ಗುರುಗಳಿಗೆ ಪ್ರತ್ಯೇಕವಾದ ಒಂದು ಜೊತೆ ಚಮ್ಮಳಿಗೆಗಳಿವೆ. ಹೇಗಾದರೂ ಅವುಗಳನ್ನು ಅವರು ಉಪಯೋಗಿಸುವದಿಲ್ಲ. ಚೀಲದಲ್ಲಿ ಬಯತಿರಿಸಿರುತ್ತಾರೆ. ಅವುಗಳನ್ನು ಅವರಿಗೆ ಗೊತ್ತಾಗದಂತೆ ಒಯ್ದು ಮಾರಿ ಬಂದರಾಯಿತು. ತಕ್ಕಷ್ಟು ಹಣ ಬರುತ್ತದೆ. ಅದನ್ನೇ ಖರ್ಚು ಮಾಡಿ, ಗುರುಗಳಿಗೆ ಬಿನ್ನಹಮಾಡಿಸಿ ಮೇಲೆ ದಕ್ಷಿಣೆ ಕೊಡಬಹುದು.

ಗಂಟಿನಲ್ಲಿದ್ದ ಆ ಚಮ್ಮಳಿಗೆಗಳನ್ನು ಗುರುಗಳಿಗೂ ಅವರ ಸೇವಕನಿಗೂ ಗೊತ್ತಾಗದಂತೆ ಎತ್ತಿತಂದು ಕೊಟ್ಟವಳು ಹೆಂಡತಿ. ಅವುಗಳನ್ನು ಪೇಟೆಗೊಯ್ದು ಮಾರಿಕೊಂಡು ಮೂವತ್ತು ರೂಪಾಯಿ ತಂದವನು ಗಂಡ. ಆ ಬಳಿಕ ಗೋದಿ, ಅಕ್ಕಿ, ಬೇಳೆ, ಬೆಲ್ಲ, ಬೆಣ್ಣೆ, ಎಣ್ಣಿ ಮೊದಲಾದವುಗಳನ್ನು ಕೊಂಡುತಂದರು. ಗೊತ್ತು ಮಾಡಿದ ದಿವಸ ಹೂರಣಕ್ಕೆ ಹಾಕಿ ಹೋಳಿಗೆ ಮಾಡಿದರು. ತುಪ್ಪವಂತೂ ಬೆಣ್ಣೆ ಕಾಸಿದ್ದಿತ್ತು.

ಗುರುಗಳ ಸ್ನಾನ, ಪೂಜೆ ಆದ ಬಳಿಕ ಆ ದಂಪತಿಗಳು ಪಾದಪೂಜೆಗೆ ಕುಳಿತರು. ಅದು ಮುಗಿದ ಮೇಲೆ ಕರಣಪ್ರಸಾದ ತೆಗೆದುಕೊಂಡು ಗುರುಗಳಿಗೆ
ಉಣಬಡಿಸುವ ಏರ್ಪಾಡು ನಡೆಸಿದರು. ಹೋಳಿಗೆ – ತುಪ್ಪದ ಊಟದಿಂದ ಗುರುಗಳು ಸಂತೃಪ್ತರಾದರು. ಶಿಷ್ಯ ಮಕ್ಕಳು ಗುರುಗಳ ಕಾಲಿಗೆರಗಿ ಇಪ್ಪತ್ತು ರೂಪಾಯಿ ಗುರುದಕ್ಷಿಣೆಯಿಟ್ಟರು. ಗುರುಗಳಿಗೆ ಅತಿಶಯ ಆನಂದವಾಗಿ ಅವರ ಔದಾರ್ಯವನ್ನು ಹೊಗಳ ತೊಡಗಿದರು.

ಗಂಡಹೆಂಡಿರು ಕೈಮುಗಿದು – “ಅದೆಲ್ಲ ತಮ್ಮ ಪಾದರಕ್ಷೆಯ ಪುಣ್ಯ” ಎಂದು ವಿನಯಿಸಿದರು.

ಸೇವಕನನ್ನು ಕರೆದು ಗುರುಗಳು ಮುಂದಿನ ಪಯಣದ ಸಿದ್ಧತೆ ನಡೆಸಿದರು. ಗಂಡಹೆಂಡಿರನ್ನು ಕರೆದು ಅವರ ಭಕ್ತಿಯನ್ನೂ ಔದಾರ್ಯವನ್ನೂ ಕೊಂಡಾಡಿದರು. ದಂಪತಿಗಳಿಬ್ಬರೂ ಗುರುಗಳ ಕಾಲಿಗೆರಗಿ – ‘ತಮ್ಮ ಪಾದರಕ್ಷೆ ಯ ಪುಣ್ಯ’ ಎನ್ನುತ್ತ ಆಶೀರ್ವಾದ ಪಡೆದರು.

ಮುಂದಿನೂರು ತಲುಪಿ ಬೀಡು ಬಿಟ್ಟಾಗ ಗುರುಗಳು ತಮ್ಮ ಚಮ್ಮಳಿಗೆಗಳನ್ನು ಹುಡುಕಾಡಿದರೆ ಸಿಗಲೇ ಇಲ್ಲ. ಸೇವಕನನ್ನು ಕೇಳಿದರು – “ಎಲ್ಲಿ ಮಾಯವಾದವು?”

ಗುರುಗಳಿಗಂತೂ ಏನೂ ತಿಳಿಯಲಿಲ್ಲ. ಕೊನೆಗೆ ಸೇವಕನೇ ಅನುಮಾನಿಸುತ್ತ ನುಡಿದನು-

“ಹಿಂದಿನೂರಿನ  ಶಿಷ್ಯಮಕ್ಕಳು ಮಾತುಮಾತಿಗೆ ‘ತಮ್ಮ ಪಾದರಕ್ಷೆಯ ಪುಣ್ಯ’ ವೆನ್ನುತ್ತಿದ್ದರು. ಅವರೇ ಪುಣ್ಯಕಟ್ಟಿಕೊಂಡಂತೆ ಕಾಣುತ್ತದೆ.”

“ಗುರುದಕ್ಷಿಣೆ ಈ ಬಗೆಯಾಗಿ ಸಿಕ್ಕಿತೆನ್ನೋಣ – ಗುರುವಿನಿಂದ ದಕ್ಷಿಣೆ” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...