Home / ಕಥೆ / ಜನಪದ / ತಂದೆ ಮಗ

ತಂದೆ ಮಗ

ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ ವಿಚಾರವನ್ನು ಆತನ ಮುಂದೆ ವಿವರಿಸಿದನು. ಮಗನೂ ಅದಕ್ಕೆ ಸಮ್ಮತಿಸಿದನು.

ಕುದುರೆಯ ಮೇಲೆ ಸೀರೆಯ ಗಂಟುಗಳನ್ನು ಹೇರಿ, ನಾಲ್ಕು ದಿನ ಸಾಕಾಗುವಷ್ಟು ರೊಟ್ಟಿ – ಬುತ್ತಿ ಕಟ್ಟಿಕೊಂಡು ತಂದೆಯು ಮಗನೊಂದಿಗೆ ವ್ಯಾಪಾರಕ್ಕೆಂದು ತನ್ನ ದೂರದ ಹಳ್ಳಿಗಳತ್ತ ಹೊರಟನು. ಸರತಿ ಪ್ರಕಾರ ತಂದೆ-ಮಗ ಕುದುರೆ ಹತ್ತುತ್ತಿದ್ದರು. ಕುದುರೆ ತನ್ನದೇ ಆದ ವೇಗದಲ್ಲಿ ಸಾಗಬಹುದಾದರೂ ಅದರ ಬೆನ್ನ ಹಿಂದೆ ನಡೆಯುತ್ತ ಹೊರಟವರ ಸಲುವಾಗಿ ಮಂದವೇಗದಿಂದ ನಡೆಯಿತು. ಆ ಕಾರಣದಿಂದ ಅವರು ತಲಪಬೇಕಾದ ಹಳ್ಳಿಯನ್ನು ಸಾಯಂಕಾಲದೊಳಗಾಗಿ ತಲುಪಲು ಸಾಧ್ಯವಾಗಲಿಲ್ಲ. ಆ ಹಳ್ಳಿ ಇನ್ನೂ ಎರಡು ಹರದಾರಿ ದೂರವಿರುವಾಗಲೇ ಹೊತ್ತು ಮುಳುಗಿ ದೀಪಹಚ್ಚುವ ವೇಳೆಯಾಯಿತು. ತುಸು ರಾತ್ರಿಯಾದರೂ ಚಿಂತೆಯಿಲ್ಲ, ಹೋಗಿಯೇ ಬಿಡೋಣ ಎಂದು ಮಗ, ಇದೇ ಹಳ್ಳಿಯಲ್ಲಿ ರಾತ್ರಿ ಕಳೆದು ಮುಂಜಾನೆ ಹೋಗೋಣ ಎಂದು ತಂದೆ ಯೋಚಿಸತೊಡಗಿದನು.

ಮಗ ಕುದುರೆಯ ಮೇಲೆ ಕುಳಿತಿದ್ದಾನೆ. ತಂದೆ ನಡುವಿಗೆ ಒಲ್ಲಿಸುತ್ತಿ ಹಿಂದೆ ನಡೆದಿದ್ದಾನೆ. ಮುಂದಿನ ಊರ ಹಾದಿ ಹಿಡಿದ ಕುದುರೆಯನ್ನು ಹೊರಳಿಸಿ ಊರ ಅಗಸೆಯತ್ತ ಕರೆದೊಯ್ಯಲು ತಂದೆ ಲಗಾಮು ಹಿಡಿದಿದ್ದಾನೆ. ಮೇಲೆ ಕುಳಿತವನು ಮುಂದಿನ ದಾರಿ ಹಿಡಿಯಲು ತವಕಿಸುತ್ತಿದ್ದಾನೆ. ಆ ಹಳ್ಳಿಯ ಅಗಸೆಯ ಮುಂದೆ ತಂದೆ ಮಕ್ಕಳಲ್ಲಿ ಜಗ್ಗಾಟವೇ ನಡೆಯಿತು. “ನಿನಗೆ ತಿಳಿಯುವದಿಲ್ಲ. ನಾನು ಹೇಳಿದೆಂತೆ ಕೇಳು.” ಎಂಬುದೇ ಅವರಿಬ್ಬರ ಕಟ್ಟಾಜ್ಞೆಯಾಯಿತು. ಆ ಗಲವಿಲಿಗೆ ಹತ್ತೆಂಟುಜನ ನೆರೆಯಿತು ಅವರಲ್ಲೊಬ್ಬ ಕೇಳಿದರು –

“ನೀವು ಒಬ್ಬರಿಗೊಬ್ಬರು ಏನಾಗಬೇಕು ?”
“ತಂದೆ-ಮಗ” ಎಂದು ಮುದುಕನು ಹೇಳಿದೆನು.
“ಸುಳ್ಳು. ನಾನು ಮಾಲಿಕ, ಆತ ಗುಮಾಸ್ತ” ಎಂದವನು ಮಗ.
“ಆ ಹುಡುಗನದೇನು ಕೇಳುವಿರಿ ? ನಾವು ತಂದೆ ಮಕ್ಕಳು.”
“ಆ ಮುದುಕನದೇನು ಕೇಳುವಿರಿ ? ನಾವು ಮಾಲಿಕ – ಗುಮಾಸ್ತ.”
“ಮಗನಾದವನು ತಂದೆಯ ಮಾತು ಕೇಳಬೇಕಲ್ಲವೇ ?” ಎಂಬುದು ಮುದುಕನ ವಾದ.
“ಗುಮಾಸ್ತನಾದವನು ಮಾಲಿಕನು ಹೇಳಿದೆಂತೆ ನಡೆಯಬೇಕಲ್ಲವೇ ?” ಎಂಬುದು ಮಗನ ಪ್ರತಿವಾದ.

ಹಗ್ಗವೂ ಹರಿಯದೆ ಕೋಲೂ ಮುರಿಯದೆ ವಾದವಿವಾದವು ಸಾಗಿದ ಬಳಿಕ, ಊರವರು ಅವರ ಕುದುರೆಯನ್ನು ಜಗ್ಗಿಕೊಂಡು ಚಾವಡಿಗೊಯ್ದರು. ಗೌಡನು ಅವರ ವಾದ-ಪ್ರತಿವಾದಗಳನ್ನು ಕೇಳಿ, ಮುಂದಿನ ಯೋಚನೆ ಹೇಳಿದನು – “ನೀವು ತಂದೆಮಕ್ಕಳೋ ಮಾಲಿಕ ಗುಮಾಸ್ತರೋ ಸ್ಪಷ್ಟವಾಗುವವರೆಗೆ ನಿಮ್ಮನ್ನು ಇಲ್ಲಿಂದ ಬಿಡುವುದೇ ಇಲ್ಲ. ನಿಮ್ಮೂರಿನ ಗ್ರಾಮಸ್ಥರಿಂದ ನಿಮ್ಮ ಹತ್ತಗಡೆಯ ವಿಷಯವನ್ನು ತರಿಸಿಕೊಡಿರಿ.”

ಮರುದಿನ ಗೌಡನು ಓಲೆಕಾರನನ್ನು ಅವರೂರಿಗೆ ಕಳಿಸಿ ಅವರ ವಿಷಯವನ್ನು ತರಿಸಿಕೊಂಡರೆ ತಂದೆ-ಮಗ ಎನ್ನುವುದು ತಿಳಿಯಿತು. ಶಿವಲಿಂಗಪ್ಪನಿಂದ ಓಲೆಕಾರನಿಗೆ ಎರಡು ರೂಪಾಯಿ ಕೊಡಿಸಿ, ಮಗನಿಗೆ ಬುದ್ಧಿಹೇಳಿ ಅವರನ್ನು ಮುಂದಿನೂರಿಗೆ ಹೋಗಗೊಟ್ಟನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...