ತಂದೆ ಮಗ

ಸನಗಿನ ವ್ಯಾಪಾರಮಾಡುವುದರಲ್ಲಿಯೇ ಮುದುಕನಾದ ಶಿವಲಿಂಗಪ್ಪನು, ಕೈಗೆ ಬಂದ ಮಗನಿಗೆ ತನ್ನ ವ್ಯಾಪಾರದ ಹಾಗು ತನ್ನ ಗಿರಾಕಿಗಳ ಪರಿಚಯ ಮಾಡಿಸಿಕೊಟ್ಟರೆ ತಾನು ಕೆಲಸದಿಂದ ನಿವೃತ್ತನಾಗುವುದಕ್ಕೆ ನಿಶ್ಚಿಂತವಾಗುವುದೆಂದು ಆಲೋಚಿಸಿ, ಮಗನನ್ನು ಕರೆದು ತನ್ನ ವಿಚಾರವನ್ನು ಆತನ ಮುಂದೆ ವಿವರಿಸಿದನು. ಮಗನೂ ಅದಕ್ಕೆ ಸಮ್ಮತಿಸಿದನು.

ಕುದುರೆಯ ಮೇಲೆ ಸೀರೆಯ ಗಂಟುಗಳನ್ನು ಹೇರಿ, ನಾಲ್ಕು ದಿನ ಸಾಕಾಗುವಷ್ಟು ರೊಟ್ಟಿ – ಬುತ್ತಿ ಕಟ್ಟಿಕೊಂಡು ತಂದೆಯು ಮಗನೊಂದಿಗೆ ವ್ಯಾಪಾರಕ್ಕೆಂದು ತನ್ನ ದೂರದ ಹಳ್ಳಿಗಳತ್ತ ಹೊರಟನು. ಸರತಿ ಪ್ರಕಾರ ತಂದೆ-ಮಗ ಕುದುರೆ ಹತ್ತುತ್ತಿದ್ದರು. ಕುದುರೆ ತನ್ನದೇ ಆದ ವೇಗದಲ್ಲಿ ಸಾಗಬಹುದಾದರೂ ಅದರ ಬೆನ್ನ ಹಿಂದೆ ನಡೆಯುತ್ತ ಹೊರಟವರ ಸಲುವಾಗಿ ಮಂದವೇಗದಿಂದ ನಡೆಯಿತು. ಆ ಕಾರಣದಿಂದ ಅವರು ತಲಪಬೇಕಾದ ಹಳ್ಳಿಯನ್ನು ಸಾಯಂಕಾಲದೊಳಗಾಗಿ ತಲುಪಲು ಸಾಧ್ಯವಾಗಲಿಲ್ಲ. ಆ ಹಳ್ಳಿ ಇನ್ನೂ ಎರಡು ಹರದಾರಿ ದೂರವಿರುವಾಗಲೇ ಹೊತ್ತು ಮುಳುಗಿ ದೀಪಹಚ್ಚುವ ವೇಳೆಯಾಯಿತು. ತುಸು ರಾತ್ರಿಯಾದರೂ ಚಿಂತೆಯಿಲ್ಲ, ಹೋಗಿಯೇ ಬಿಡೋಣ ಎಂದು ಮಗ, ಇದೇ ಹಳ್ಳಿಯಲ್ಲಿ ರಾತ್ರಿ ಕಳೆದು ಮುಂಜಾನೆ ಹೋಗೋಣ ಎಂದು ತಂದೆ ಯೋಚಿಸತೊಡಗಿದನು.

ಮಗ ಕುದುರೆಯ ಮೇಲೆ ಕುಳಿತಿದ್ದಾನೆ. ತಂದೆ ನಡುವಿಗೆ ಒಲ್ಲಿಸುತ್ತಿ ಹಿಂದೆ ನಡೆದಿದ್ದಾನೆ. ಮುಂದಿನ ಊರ ಹಾದಿ ಹಿಡಿದ ಕುದುರೆಯನ್ನು ಹೊರಳಿಸಿ ಊರ ಅಗಸೆಯತ್ತ ಕರೆದೊಯ್ಯಲು ತಂದೆ ಲಗಾಮು ಹಿಡಿದಿದ್ದಾನೆ. ಮೇಲೆ ಕುಳಿತವನು ಮುಂದಿನ ದಾರಿ ಹಿಡಿಯಲು ತವಕಿಸುತ್ತಿದ್ದಾನೆ. ಆ ಹಳ್ಳಿಯ ಅಗಸೆಯ ಮುಂದೆ ತಂದೆ ಮಕ್ಕಳಲ್ಲಿ ಜಗ್ಗಾಟವೇ ನಡೆಯಿತು. “ನಿನಗೆ ತಿಳಿಯುವದಿಲ್ಲ. ನಾನು ಹೇಳಿದೆಂತೆ ಕೇಳು.” ಎಂಬುದೇ ಅವರಿಬ್ಬರ ಕಟ್ಟಾಜ್ಞೆಯಾಯಿತು. ಆ ಗಲವಿಲಿಗೆ ಹತ್ತೆಂಟುಜನ ನೆರೆಯಿತು ಅವರಲ್ಲೊಬ್ಬ ಕೇಳಿದರು –

“ನೀವು ಒಬ್ಬರಿಗೊಬ್ಬರು ಏನಾಗಬೇಕು ?”
“ತಂದೆ-ಮಗ” ಎಂದು ಮುದುಕನು ಹೇಳಿದೆನು.
“ಸುಳ್ಳು. ನಾನು ಮಾಲಿಕ, ಆತ ಗುಮಾಸ್ತ” ಎಂದವನು ಮಗ.
“ಆ ಹುಡುಗನದೇನು ಕೇಳುವಿರಿ ? ನಾವು ತಂದೆ ಮಕ್ಕಳು.”
“ಆ ಮುದುಕನದೇನು ಕೇಳುವಿರಿ ? ನಾವು ಮಾಲಿಕ – ಗುಮಾಸ್ತ.”
“ಮಗನಾದವನು ತಂದೆಯ ಮಾತು ಕೇಳಬೇಕಲ್ಲವೇ ?” ಎಂಬುದು ಮುದುಕನ ವಾದ.
“ಗುಮಾಸ್ತನಾದವನು ಮಾಲಿಕನು ಹೇಳಿದೆಂತೆ ನಡೆಯಬೇಕಲ್ಲವೇ ?” ಎಂಬುದು ಮಗನ ಪ್ರತಿವಾದ.

ಹಗ್ಗವೂ ಹರಿಯದೆ ಕೋಲೂ ಮುರಿಯದೆ ವಾದವಿವಾದವು ಸಾಗಿದ ಬಳಿಕ, ಊರವರು ಅವರ ಕುದುರೆಯನ್ನು ಜಗ್ಗಿಕೊಂಡು ಚಾವಡಿಗೊಯ್ದರು. ಗೌಡನು ಅವರ ವಾದ-ಪ್ರತಿವಾದಗಳನ್ನು ಕೇಳಿ, ಮುಂದಿನ ಯೋಚನೆ ಹೇಳಿದನು – “ನೀವು ತಂದೆಮಕ್ಕಳೋ ಮಾಲಿಕ ಗುಮಾಸ್ತರೋ ಸ್ಪಷ್ಟವಾಗುವವರೆಗೆ ನಿಮ್ಮನ್ನು ಇಲ್ಲಿಂದ ಬಿಡುವುದೇ ಇಲ್ಲ. ನಿಮ್ಮೂರಿನ ಗ್ರಾಮಸ್ಥರಿಂದ ನಿಮ್ಮ ಹತ್ತಗಡೆಯ ವಿಷಯವನ್ನು ತರಿಸಿಕೊಡಿರಿ.”

ಮರುದಿನ ಗೌಡನು ಓಲೆಕಾರನನ್ನು ಅವರೂರಿಗೆ ಕಳಿಸಿ ಅವರ ವಿಷಯವನ್ನು ತರಿಸಿಕೊಂಡರೆ ತಂದೆ-ಮಗ ಎನ್ನುವುದು ತಿಳಿಯಿತು. ಶಿವಲಿಂಗಪ್ಪನಿಂದ ಓಲೆಕಾರನಿಗೆ ಎರಡು ರೂಪಾಯಿ ಕೊಡಿಸಿ, ಮಗನಿಗೆ ಬುದ್ಧಿಹೇಳಿ ಅವರನ್ನು ಮುಂದಿನೂರಿಗೆ ಹೋಗಗೊಟ್ಟನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೮೩
Next post ಕಲ್ಲು ಮಣ್ಣು

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…