Home / ಕಥೆ / ಜನಪದ / ಮನೆ ಅಳಿಯ

ಮನೆ ಅಳಿಯ

ಅಳಿಯನಿಗೆ ಮನೆಯಳಿಯ ಮಾಡಿಕೊಂಡಿದ್ದರು ; ಮಗಳಿಗೆ ಮನೆಯಾಗೇ ಇಟ್ಟುಕೊಂಡಿದ್ದರು. ಅಳಿಯ ದನಕರುಗಳನ್ನು ಕಾಯಬೇಕು. ಮನೆಯಲ್ಲಿ ತಂಗುಳಬಂಗುಳ ಉಣ್ಣಬೇಕು – ಈ ರೀತಿ ವ್ಯವಸ್ಥೆಮಾಡಿದ್ದರು. ಅಳಿಯನೆಂದರೆ ದನಕಾಯುವ ಹುಡುಗ ಅಂತ ನಿಷ್ಕಾಳಜಿ ಮಾಡುತ್ತಿದ್ದರು.

“ನನ್ನ ಹಣೇಬರಹದಾಗ ಇಷ್ಟೇ ಬರೆದಾದ. ಅದಕ್ಕ್ಯಾಕ ಚಿಂತಿ ಮಾಡಬೇಕು” ಎಂದು ವಿಚಾರಮಾಡಿ ದಿನಾಲು ಕೆಲಸಮಾಡುತ್ತ ಇದ್ದನು. ಒಂದುದಿನ ಹೊಲದಾಗ ಎತ್ತುಬಿಟ್ಟಿದ್ದ. ಧಾರೆ ಮಳೆ ಸುರೀಲಿಕ್ಕ ಹತ್ತಿತು. ಆ ಸಮಯದಾಗ ನೀರಿನ ಬಿಂದಿಗೆಯೊಳಗಿನ ನೀರೆಲ್ಲ ಚೆಲ್ಲಿ ಅದರಲ್ಲಿ ಅಂಗಿ, ಧೋತರ ತುರುಕಿದನು. ತಾನು ಬರಿಯ ಚಡ್ಡಿಯಮೇಲೆ ನಿಂತನು. ಬಿಂದಿಗೆ ಬೋರಲು ಹಾಕಿದ- ಹಾಂಗೇ ತಾಸು ಗಟ್ಟಲೆ ನಿಂತನು. ಮಳೆ ಹೊಡೆದು ಹೊಡೆದು ಬಹಳ ಹೊತ್ತಿನ ಮೇಲೆ ನಿಂತು ಬಿಟ್ಟಿತು. ಛಕ್ಕನೆ ಬಿಸಿಲುಬಿತ್ತು. ಉಟ್ಟುಕೊಂಡು ತೊಟ್ಟುಕೊಂಡು ನಿಂತನು. ಅಲ್ಲಿಗೆ ಒಬ್ಬ ಗೋಸಾವಿ ಮೈತೋಯಿಸಿಕೊಂಡು ಬಂದನು. “ನಾನು ಇಷ್ಟು ತೋಯಿಸಿಕೂಂಡೀನು. ಈ ಮನುಷ್ಯ ಏನೂ ತೋಯಿಸಿಕೊಂಡಿಲ್ಲ. ಇದರಾಗೇನಿದೆ ಚಮತ್ಕಾರ” ಎಂದುಕೊಂಡನು. “ಯಾಕಪ್ಪ ನಿನ್ನ ಮೈಮ್ಯಾಗ ಮಳೆ ಬಿದ್ದೀಲ್ಲೇನು” ಎಂದು ಕೇಳಿದನು.

“ನಂದು ನನಗೇ ಗೊತ್ತು. ನಿಂದು ನಿನಗೇ ಗೊತ್ತು. ನನಗ ಇದರ ಅರ್ಥಹೇಳು ಅಂದರ, ನಿನ್ನ ಹಂತ್ಯಾಕಿದ್ದ ಮಂತ್ರ ತಂತ್ರ ಹೇಳಿದೆರ ನಾ ನನ್ನ ಹಿಕಮತಿ ಹೇಳತೀನಿ” ಎಂದು ನುಡಿದನು ಅಳಿಯ-

ತನ್ನ ಪರಿಸ್ಥಿತಿಯನ್ನೆಲ್ಲ ಅಳಿಯ ಹೇಳಿದನು. “ಹೂತ್ತರಳಿ ದನಕಾಯಲು ಅತ್ತ ಮಾವ ಕಳಿಸತಾರ. ಅತ್ತಿ ಮಾವ ಹೇಣತಿ ಯಾರೂ ಸೇರೂದಿಲ್ಲ. ಈ ಪರಿಸ್ಥಿತಿ ಹೋಗೂ ಸಲುವಾಗಿ ಒಂದು ಉಪಾಯ ಹೇಳು” ಎಂದು ಗೋಸಾವಿಗೆ ಕೇಳಿಕೊಂಡನು. ಗೋಸಾವಿ ಅಲ್ಲೇಬಿದ್ದ ಏಳು ಹರಳು ಆರಿಸಿಕೊಂಡನು.

“ಒಂದು ಹರಳು ಒಗೆದು ಅಲ್ಲೇ ಚಿಟಕಾಸಿ ಕೂಡು, ಅಂದರ ಅಲ್ಲೇ ನೆಲಕ್ಕ ಹತ್ತಂಡಿ ಆಗಿ ಚಿಟಕಾಸಿಕೊಂಡು ಬಿಡತಾದ. ಅತ್ತಿ ಮಾವ ಮಲಕೊಂಡ ಜಾಗಾದಿಂದ ಏಳಬಾರದು – ಎರಡು ಹರಳು ಒಗೆದರೆ – ಯಾರೂ ಅವರೀಗಿ ಎಬ್ಬಿಸಲಿಕ್ಕೆ ಸಾಧ್ಯವಿಲ್ಲ. ಹೀಂಗ ಏಳು ಹರಳು ಉಪಯೋಗಿಸುವುದರಾಗ ಅತ್ತಿ ಮಾವ ಹಾದೀ ಮ್ಯಾಲ ಬರತಾರ” ಎಂದು ಹೇಳಿ, ಅಳಿಯನ ಹಿಕಮತ್ತಿಯ ಬಗ್ಗೆ ಕೇಳುತ್ತಾನೆ.

“ಗುಂಡರಗಿಯೊಳಗೆ ಅರಿವೆ ತುರುಕಿ ಬಿಂದಿಗೆ ಬೋರಲ ಹಾಕಿದ್ದರಿಂದ ಮಳಿ ಹತ್ತಲಿಲ್ಲ.”

ಅಳಿಯ ಮನೆಗೆ ಬಂದು ಬಂಕಿನಲ್ಲಿ ಮಲಗಿಕೊಂಡನು”. ಬಾಗಿಲಲ್ಲಿ ಬಂದು ಅತ್ತೆ ಮಾವ ಮಲಗಿದಲ್ಲೆ ಮಲಗಲಿ ಎಂದು ಸೈ ಎಂದನು. ಬಾಗಿಲಿಗೆ ಬಂದು ಬಾಗಿಲು ತೆರೆಯಿರಿ ಅನ್ನುತ್ತಾನೆ. ಅವರು ನೆಲಕ್ಕೆ ಮೆತ್ತಿಕೊಂಡವರು ಮೇಲೆ ಏಳಲೊಲ್ಲರಾದರು. “ತೊರೆಯ ಆಚೆಗೆ ಜಾಣಿಹಾಳ. ಅವಳೀಗಿ ಕೇಳಿ ಬರ್ರಿ” ಎಂದು ಮಂದೀಗಿ ಕಳಿಸ್ತಾರ. ಜಾಣಿ ನಡುನೀರೊಳಗಿಂದ ಹಾಯ್ದು ಬರುವಾಗ ಇಂವ ನಿಂತಲ್ಲಿ – ನಿಂತು – ನೀರಾಗ ನಿಂತಕ್ಕಿ ನಿಂತಾಂಗೇ ಇರಲಿ ಎಂದು ಗಟ್ಟಿಯಾಗಿ ಹೇಳುತ್ತಲೇ ಹರಳ ಒಗೆಯುತ್ತಾನೆ.

ಜಾಣಿ ಇವನಿಗೆ ಅಂಗಲಾಚಿ ಬೇಡುತ್ತಾಳೆ – “ನನಗೆ ಬಿಡುಗಡೆ ಮಾಡಿದರೆ ನಿನಗ ಬೇಡಿದ್ದು ಕೊಡುತ್ತೀನಿ.”

ನಡೆ ಅಂದಕೂಡಲೇ ನೀರೂಳಗಿಂದ ಜಾಣಿ ಪಾರಾಗಿ ಮುಂದೆ ಮುಂದೆ ಬಂದಳು. ಬಂದು ಅತ್ತೆ ಮಾವಂದಿರಿಗೆ ಬುದ್ಧಿ ಹೇಳಿದಳು –

“ನಿಮ್ಮ ಅಳಿಯನಿಗೆ ಈ ರೀತಿ ಕಾಡಬೇಡಿರಿ. ಇಲ್ಲ ಅಂದರೆ ನೀವು ನೆಲದ ಮ್ಯಾಗಿಂದ ಏಳಲಿಕ್ಕೆ ಸಾಧ್ಯವೇ ಇಲ್ಲ” ಎಂದು ಗಟ್ಟಿಯಾಗಿ ಹೇಳುತ್ತಾಳೆ.

“ನಾವು ಹಿಂಥಾ ಕೆಲಸ ಇನ್ನೆಂದೂ ಮಾಡೂದಿಲ್ಲ” ಎಂದು ಗಲ್ಲಗಲ್ಲ ಬಡಕೊಳ್ಳುತ್ತಾರೆ. ಏಳಬೇಕೆನ್ನುತ್ತಾರೆ, ಏಳುವದಾಗಲಿಲ್ಲ. ಆಗ ಅಳಿಯ “ನಡೆ” ಅಂದ ಕೂಡಲೇ ಗಪ್ಪನೆ ಎದ್ದು ಕುಳಿತರು.

ಅಂದಿನಿಂದ ಅಳಿಯದೇವರ ಸತ್ಕಾರ ನಡೆಯಲು ಆರಂಭವಾಯಿತು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...