Home / ಕಥೆ / ಜನಪದ / ಸೊಸೆಗೇನು ಅಧಿಕಾರ ?

ಸೊಸೆಗೇನು ಅಧಿಕಾರ ?

ಸೆರಗಿನಿಂದ ಕೈ‌ಒರಸಿಕೊಂಡು ದಾರಿಯಲ್ಲಿ ಬರುತ್ತಿದ್ದ ನೀಲಜ್ಜಿಯನ್ನು ಕಂಡು ಸಂಗಮ್ಮ ಕೇಳಿದಳು – “ಎಲ್ಲಿಗೆ ಹೋಗಿದ್ದೆ ನೀಲಜ್ಜಿ ?”

“ನಿಮ್ಮ ಮನೆಗೆ ಹೋಗಿದ್ದೆ. ಮುಕ್ಕು ಮಜ್ಜಿಗೆ ಸಿಕ್ಕಾವೆಂದು ?”

“ಏನಂದರು ?” ಸಂಗಮ್ಮನ ಪ್ರಶ್ನೆ.

“ಮಜ್ಜಿಗೆ ಆಗಿಲ್ಲವೆಂದರು” ನೀಲಜ್ಜಿಯ ಪಡಿನುಡಿ.

“ಯಾರು ಹೇಳಿದರು ಹೀಗೆ ?”

“ನಿನ್ನ ಸೊಸೆ ನಿಂಬೆಕ್ಕ.”

“ಆಕೆಗೇನು ಅಧಿಕಾರ ಹಾಗೆ ಹೇಳಲಿಕ್ಕೆ. ಬಾನನ್ನೊಡನೆ” ಎಂದಳು ಸಂಗಮ್ಮ.

ಸಂಗಮ್ಮ ಮುಂದೆ ಮುಂದೆ, ನೀಲಜ್ಜಿ ಹಿಂದೆ ಹಿಂದೆ. ಹತ್ತುಮಾರು ಹೋಗುವಷ್ಟರಲ್ಲಿ ಮನೆ ಬಂತು. ಸಂಗಮ್ಮ ಬಿರಬಿರನೆ ತಲೆವಾಗಿಲು ಹೊಕ್ಕು ಪಡಸಾಲೆಯನ್ನು ಏರಿದಳು. ನೀಲಜ್ಜಿಯು ಮೆಲ್ಲನೆ ನಡೆದು ಬಂದು ಮೆಟ್ಟುಗಟ್ಟೆಯ ಬಳಿ ನಿಂತುಕೊಂಡಳು.

“ತಾ ಇಲ್ಲಿ. ಮಜ್ಜಿಗೆ ಒಯ್ಯುವುದಕ್ಕೆ ಏನು ತಂದಿರುವಿ?” ಎನ್ನುತ್ತ ಸಂಗವ್ವನು ಆಕೆ ಕೊಟ್ಟ ಚಿಕ್ಕ ಗಡಿಗೆಯನ್ನು ತೆಗೆದುಕೊಂಡು ಅಡಿಗೆ ಮನೆ ಹೊಕ್ಕಳು. ಸಂಗಮ್ಮನು ಮರಳಿ ಬರುವ ದಾರಿಯನ್ನೇ ಮಿಕಿಮಿಕಿ ನೋಡುತ್ತ ನೀಲಜ್ಜಿ ನಿಂತುಕೊಳ್ಳುವಷ್ಟರಲ್ಲಿ ಸಂಗಮ್ಮ ಹೊರಕ್ಕೆ ಬಂದೇ ಬಿಟ್ಟಳು. “ನಿನ್ನ ಮಕ್ಕಳ ಹೊಟ್ಟೆ ತಣ್ಣಗಾಗಲಿ ಸಂಗೂ” ಎಂದು ನೀಲಜ್ಜಿ ಹರಕೆ ನುಡಿಯಾಡುತ್ತಿರುವಾಗಲೇ ಸಂಗಮ್ಮ –

“ಇಗಾ ಅಜ್ಜಿ. ಈ ಹೊತ್ತು ಮಜ್ಜಿಗೆ ಆಗಿಲ್ಲ” ಎನ್ನುತ್ತ ಆಕೆಯ ಗಡಿಗೆಯನ್ನು ಇದ್ದಕ್ಕಿದ್ದ ಹಾಗೆ ಒಪ್ಪಿಸಿದಳು. “ಅಯಽ ! ಅದೇ ಮಾತು ಖರೇ ಅಯ್ತಲ್ಲ” ಎನ್ನುತ್ತ ನೀಲಜ್ಜಿ ತನ್ನ ಮನೆಯ ಹಾದಿ ಹಿಡಿದಳು.

ಮಜ್ಜಿಗೆ ಆಗಿಲ್ಲವೆಂದು ಹೇಳುವುದಕ್ಕೆ ಸೊಸೆಗೇನು ಅಧಿಕಾರ ? ಆ ಮಾತನ್ನು ಅತ್ತೆಯಾದವಳೇ ಹೇಳಬೇಕು ಅಲ್ಲವೇ ?
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...