Home / ಕಥೆ / ಸಣ್ಣ ಕಥೆ / ರಾಜಭಕ್ತ ಮೈಸೂರಿನ ಸೆಟ್ಟಿ

ರಾಜಭಕ್ತ ಮೈಸೂರಿನ ಸೆಟ್ಟಿ

ಇಮ್ಮಡಿ ತಿಮ್ಮರಾಜಒಡೆಯರು ದೊರೆತನಮಾಡುತ್ತಿದ್ದ ಕಾಲದಲ್ಲಿ ಸಿಂಧುವಳ್ಳಿ, ಹುಣಸನಾಳುಗಳ ಪಾಳಯಗಾರರು ಅವರ ಅಶ್ರಿತರಾಗಿದ್ದರು.

ಒಂದುಸಲ ನಂಜನಗೂಡಿನ ರಥೋತ್ಸವ ಕಾಲದಲ್ಲಿ ದೊರೆಗಳು ಅಲ್ಲಿಗೆ ಬಂದಿದ್ದರು. ಅಲ್ಲಿಗೆ ಕೆಲವರು ಪಾಳಯಗಾರರು ದೇವರ ಸೇವೆಗೆಂದು ಬಂದಿದ್ದರು. ಪಾಳಯಗಾರರು ಬಹಳ ಅಟ್ಟಹಾಸದಿಂದ ಮೆರೆಯುತ್ತಲಿದ್ದು `ಬಿರುದೆಂತೆಂಬರಗಂಡ’ ನೆಂದು ಹೊಗಳಿಸಿ ಕೊಳ್ಳುತ್ತ ತಮ್ಮ ಸಮಾನರಿಲ್ಲವೆಂಬ ಜಂಭವನ್ನು ತೋರುತ್ತಿದ್ದರು.

ಇದನ್ನು ಕಂಡು ಮೈಸೂರಿನವರು ಸಹಿಸಲಿಲ್ಲ. ಅವರಲ್ಲಿ ಮುಖ್ಯನೂ ರಾಜಭಕ್ತನೂ ಆಗಿದ್ದ ಮೈಸೂರ ಸೆಟ್ಟಿಯು ಸಾಹಸದಿಂದ ಅವರೆದುರಿಗೆ ಹೋಗಿ “ಬಿರುದೆಂತೆಂಬರಗಂಡನೆಂಬ ಬಿರುದು ನಮ್ಮ ಮೈಸೂರಿನ ಒಡೆಯರಿಗೇ ಅಲ್ಲದೆ ನಿಮ್ಮಂತಹವರಿಗೆ ಸಲ್ಲುವುದಿಲ್ಲ; ನೀವು ಆ ಬಿರುದನ್ನು ಬಿಟ್ಟುಬಿಡಬೇಕು” ಎಂದು ಗಂಭೀರವಾಗಿ ಹೇಳಿದನು. ಪಾಳಯಗಾರರಿಗೆ ಕೋಪ ಬಂತು; ಈ ಅಧಿಕಪ್ರಸಂಗಿ ಸೆಟ್ಟಿಯನ್ನು ಶಿಕ್ಷಿಸಬೇಕೆಂದು ಅವನನ್ನು ಸೆರೆಹಿಡಿಸಿ ಒಯ್ದರು.

ಈ ಸಮಾಚಾರವು ಒಡೆಯರಿಗೆ ತಲಪಿತು; “ನಮ್ಮ ಧೀರ ಪ್ರಜೆಯಾದ ಸೆಟ್ಟಿಯನ್ನು ಹಿಡಿದುಕೊಂಡು ಹೋಗಲು ಆ ಪಾಳಯಗಾರರಿಗೆಷ್ಟು ಗರ್ವ! ನಮ್ಮ ಆಪ್ತನಾದ ಸೆಟ್ಟಿಯನ್ನು ಹಾಗೆ ಬಿಟ್ಟುಕೊಟ್ಟೇವೆಯೆ ನಾವು!” ಎಂದು ತಾವೇ ಸೈನ್ಯದೊಡನೆ ಹೊರಟು ಪಾಳಯಗಾರರ ಶಿಬಿರಕ್ಕೆ ಹೋಗಿ ಕೂಗಿಸಿ ಹೇಳಿಸಿದರು : “ಪಾಳಯಗಾರರಲ್ಲಿ ಯಾರಾದರೂ ಧೀರರೂ ಸಾಹಸಿಗಳೂ ಇದ್ದರೆ ಯುದ್ಧಕ್ಕೆ ಬರಬಹುದು; ಇಲ್ಲವಾದರೆ ಎಲ್ಲರೂ ಬಂದು ಸೆಟ್ಟಿಯನ್ನೊಪ್ಪಿಸಿ ತಪ್ಪಾಯಿತೆಂದು ದೊರೆಗಳ ಮನ್ನಣೆಯ ಬೇಡಬಹುದು” ಎಂದು. ಮದಿಸಿದ್ದ ಪಾಳಯಗಾರರು ಯುದ್ಧಕ್ಕೆ ಬಂದರು. ಒಡೆಯರು ಅವರೆಲ್ಲರನ್ನು ಸೋಲಿಸಿ ಸೆರೆಯಾದ ಸೆಟ್ಟಿಯನ್ನು ಕರೆತರಿಸಿ ಮರ್ಯಾದೆಯಿಂದ ಕಂಡು ಮೈಸೂರಿಗೆ ಜಯಶೀಲರಾಗಿ ಹಿಂತಿರುಗಿದರು. ಈ ಸಂಗತಿಯಿಂದ ರಾಜರಿಗೆ ‘ಮೊನೆಗಾರ’ ನೆಂಬ ಬಿರುದು ವಾಡಿಕೆಯಾಯ್ತು. ಅಂದಿನಿಂದ ಅರಮನೆಯಲ್ಲಿ ಸೆಟ್ಟಿಗೆ ಗೌರವವೂ ಹೆಚ್ಚಿತು.
*****
[ವಂಶರತ್ನಾಕರ ಪುಟ ೧೯; ವಂಶಾವಳಿ ಸಂಪುಟ ೧ ಪುಟ ೧೫- ೧೬]

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...