Home / ಕವನ / ಕವಿತೆ / ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು)

ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ
ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ||

ಪುಣ್ಯಭೂಮಿ ನೀ ಗಣ್ಯಭೂಮಿ ಎಂದೇನೇನೋ ನಿನ ಹೊಗಳಿದರು
ದಿವ್ಯ ಭವ್ಯ ಭಾರತ ಅಂತಂದು ಬಾಯ್ತುಂಬ ಸುಳ್ಳೇ ಹಾಡಿದರು ||೧||

ಕೀರುತಿವಂತೆ ಖ್ಯಾತಿವಂತೆ ದಿಕ್ಕಿಲ್ಲದಂಥ ದುರ್ಗತಿ
ಯಾರಿಗಾಗಿ ನೀ ಬಾಳುವಿಯೇನೋ ಬದುಕಿದ್ದೂ ನೀ ಸತ್ತಿ ||೨||

ಲಂಡ ಭಂಡ ಪುಂಡಾಟದ ಕಂತ್ರಾಟ ರಾಜಕಾರಣಂದೋ ಯಾಪಾರ
ಹಾಡ ಹಗಲೆ ನಿನ್ನ ಲೂಟಿ ಮಾಡ್ಯಾರ ಮಂತ್ರಿ ಶಾಸಕರು ಕೈಯಾರ ||೩||

ವೋಟಿಗೆ ನೋಟನು ತೂರಿದ ಮಂತ್ರಿಗೆ ನಿನ್ನೆನಪ್ಹ್ಯಾಂಗ ಬರತೈತಿ
ಒಂದಕ್ಕ ನೂರ್ರಷ್ಟು ಬಳಕೊಳ್ಳಾಕ ಹಗಲಿಳ್ಳು ಸಾಲದು ಬಂದೈತೆ ||೪||

ಸಾವುಕಾರನಿಗೊ ಸಾವಿರ ಕೆಲಸ ಆಸ್ತಿ ಪಾಸ್ತಿ ಅಂತ ಬೆಳೆಸೋದೆ
ಬಡವರ ಬೆನ್ ಮ್ಯಾಲೆ ಸವ್ವಾರಿ ಮಾಡತಾ ದೇಶಾನ್ನ ನರಕಕೆ ಕಳಸೋದೆ ||೫||

ವ್ಯಾಪಾರಿ ತೂಗತಾನೆ ಅನ್ಯಾಯ ತಕ್ಕಡಿ ರೊಕ್ಕಾನೇ ಅವ್ಗೆ ಮನೆದೇವ್ರು
ಗಂಟು ಬಡ್ಡಿಗಳ ಹಣದ ಮೂಟೆಗಳು ದೇಶನ್ಯಾಕೆ ನೆನಸ್ತಾರೆ ಅಂಥಾವ್ರು ||೬||

ತಲೆಗಳ ಬೋಳಿಸಿ ಕೂಡಿಟ್ಟ ಭಂಡವಾಳ ಭಂಡತನವನ್ನೇ ಕಲಿಸ್ಯೈತಿ
ದೊಡ್ಡ ದೊಡ್ಡ ಬಿಜಿನೆಸು ದೊಡ್ಡದಾಗಿ ಬೆಳದಾವೆ ತಾಯಿಯ ಒಡಲೋ ಬರಿದೈತೆ ||೭||

ಲಂಚ ಲಂಚ ಅಂತ ನಾಲಿಗೆ ಚಾಚುತ ರೈತನ್ನ ರಗುತ ಹೀರುತ್ತ
ಉಬ್ಬುವ ಕೊಬ್ಬುವ ಅಧಿಕಾರಿಗಳಿಗೆ ದೇಶದ ಮಾತೇ ಅತ್ತತ್ತ ||೮||

ಸಂಬಳ ಸಾಲದು ಭಡತೀ ಸಾಲದು ಗಿಂಬಳಕಾಗೀ ಪೈಪೋಟಿ
ಸಾವಿರ ಲಕ್ಷದ ನೌಕರಿದಾರರು ತಾಯಿಗೆ ಸುಖವು ಯಾಪಾಟಿ ||೯||

ಊರೂರಿಗೊಬ್ಬೊಬ್ಬ ಜಗದ್ದ್ ಗುರುವು ಶ್ರೀಮಂತ ಶಿಷ್ಯರ ಒಡನಾಟ
ಭೇದವ ಬೆಳೆಸೀ ಬಡದಾಡಕ್ಹಚ್ಚಿ ಮೆರೆಯೋರ್ ದೇಶಕೆ ಭಂಡಾಟ ||೧೦||

ತಿಮ್ಮಪ್ಪ ಬೊಮ್ಮಪ್ಪ ಎಲ್ಲವ್ವ ಹುಲಿಗೆವ್ವ ನೂರಾರು ದೇವರು ಮನೆಮನೆಗೆ
ಎಲ್ಲಾವು ಜನರನು ಹರಕೊಂಡು ತಿನುವಾಗ ಭಾರತಿ ದೇವಿಗೆ ಏನ್ ಕೊನೆಗೆ ||೧೧||

ಪೂಜಾರಿ ಚಿಂತೆ ಕಾಣಿಕೆ ಕಡೆಗೆ ಭಕ್ತರ ಚಿಂತೆ ಹೊರಗಡೆಗೆ
ಪುರಾಣ ನೀತಿ ಹೇಳುವ ಶಾಸ್ತ್ರಿಗೆ ಸುಂಭಾವನೆಯೇ ಕಡೆ ಗಳಿಗೆ ||೧೨||

ಬರೆಯುವ ಕವಿಗೆ ಸನ್ಮಾನ ಭಾಷಣ ಕೊರೆವಗೆ ಧನಮಾನ
ಭಾರತ ಮಾತೆಯ ಎಲ್ಲರು ಬಳಸಿ ಲಂಪಟತನದಲೆ ದಿನಮಾನ ||೧೩||

ಹರೇದ ಹುಡುಗ್ರಿಗೆ ಬಣ್ಬಣ್ಣ ಹುಡುಕೋದು ಮೀಸೆ ಬಂದಾಗ ದೇಶ ಕಾಣದು
ಹರೇದ ಹುಡುಗ್ಗೆ‍ಗೆ ಬಣ್ಬಣ್ಣ ಮೆರೆಯೋದು ದೇಶ ಅಂತಂದ್ರೆ ಗೊತ್ತಾಗದು ||೧೪||

ಖಾಕೀಯ ಉಡುಪಿಗೆ ಕೇಸೀನ ಬ್ಯಾಟಿ ಖಾದಿ ಉಡುಪಿಗಂತು ದೇಶನೆ ಬ್ಯಾಟಿ
ಕರ್ರನ್ನ ಉಡುಪಿಗೆ ಕೊಲೆಗಡ್ಕುರನುಳುಸೋದು ನ್ಯಾಯಾಲಯ್ದಾಗೆ ನ್ಯಾಯ ಲೂಟಿ ||೧೫||

ದುಡಿಯುವ ರೈತಗೆ ಶ್ರಮ ಜೀವಿಗಳಿಗೆ ಹೊಟ್ಟೇನ ತುಂಬೋದೆ ಕಡುಚಿಂತೆ
ಸುಲಿದು ತಿನ್ನುವಂಥ ಹದ್ದು ಕಾಗೆಗಳ ಕೈಯಾಗೆ ನರಳುವ ಜೀವ ಚಿತೆ ||೧೬||

ನೆಲದ ಮಕ್ಕಳೇ ನಿನ್ನ ಮಕ್ಕಳು ಅವರ ದುಸ್ಥಿತಿಯೆ ನಿನ್ನ ಸ್ಥಿತಿ
ಮಣ್ಣಿನ ಮಕ್ಕಳು ಕಣ್ಣು ಬಿಟ್ಟು ನಿಲ್ಲೋವರೆಗೆ ತಾಯಿ ನಿನಗಂತೂ ಇದೇ ಗತಿ ||೧೭||

೧೩.೬.೮೬
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...