Home / ಕವನ / ಕವಿತೆ / ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

ಭಾರತಿ! ಎಲ್ಲಿಗೆ ಬಂತೇ ನಿನ್ನ ಗತಿ

(“ನೂರು ದೇವರನು ನೂಕಾಚೆ ದೂರ ಭಾರತೀ ದೇವಿಯನು ಪೂಜಿಸುವ ಬಾರ”…. ಕುವೆಂಪು)

ದೇವಿ ಭಾರತಿ ತಾಯಿ ಭಾರತಿ ಎಲ್ಲಿಗೆ ಬಂತೇ ನಿನ್ನ ಗತಿ
ಯಾರಿಗೆ ಅವರೇ ಬಡಿದಾಡ್ತಾರೆ ಯಾರಿಗೆ ಬೇಕೇ ನಿನ ಚಿಂತಿ ||ಪ||

ಪುಣ್ಯಭೂಮಿ ನೀ ಗಣ್ಯಭೂಮಿ ಎಂದೇನೇನೋ ನಿನ ಹೊಗಳಿದರು
ದಿವ್ಯ ಭವ್ಯ ಭಾರತ ಅಂತಂದು ಬಾಯ್ತುಂಬ ಸುಳ್ಳೇ ಹಾಡಿದರು ||೧||

ಕೀರುತಿವಂತೆ ಖ್ಯಾತಿವಂತೆ ದಿಕ್ಕಿಲ್ಲದಂಥ ದುರ್ಗತಿ
ಯಾರಿಗಾಗಿ ನೀ ಬಾಳುವಿಯೇನೋ ಬದುಕಿದ್ದೂ ನೀ ಸತ್ತಿ ||೨||

ಲಂಡ ಭಂಡ ಪುಂಡಾಟದ ಕಂತ್ರಾಟ ರಾಜಕಾರಣಂದೋ ಯಾಪಾರ
ಹಾಡ ಹಗಲೆ ನಿನ್ನ ಲೂಟಿ ಮಾಡ್ಯಾರ ಮಂತ್ರಿ ಶಾಸಕರು ಕೈಯಾರ ||೩||

ವೋಟಿಗೆ ನೋಟನು ತೂರಿದ ಮಂತ್ರಿಗೆ ನಿನ್ನೆನಪ್ಹ್ಯಾಂಗ ಬರತೈತಿ
ಒಂದಕ್ಕ ನೂರ್ರಷ್ಟು ಬಳಕೊಳ್ಳಾಕ ಹಗಲಿಳ್ಳು ಸಾಲದು ಬಂದೈತೆ ||೪||

ಸಾವುಕಾರನಿಗೊ ಸಾವಿರ ಕೆಲಸ ಆಸ್ತಿ ಪಾಸ್ತಿ ಅಂತ ಬೆಳೆಸೋದೆ
ಬಡವರ ಬೆನ್ ಮ್ಯಾಲೆ ಸವ್ವಾರಿ ಮಾಡತಾ ದೇಶಾನ್ನ ನರಕಕೆ ಕಳಸೋದೆ ||೫||

ವ್ಯಾಪಾರಿ ತೂಗತಾನೆ ಅನ್ಯಾಯ ತಕ್ಕಡಿ ರೊಕ್ಕಾನೇ ಅವ್ಗೆ ಮನೆದೇವ್ರು
ಗಂಟು ಬಡ್ಡಿಗಳ ಹಣದ ಮೂಟೆಗಳು ದೇಶನ್ಯಾಕೆ ನೆನಸ್ತಾರೆ ಅಂಥಾವ್ರು ||೬||

ತಲೆಗಳ ಬೋಳಿಸಿ ಕೂಡಿಟ್ಟ ಭಂಡವಾಳ ಭಂಡತನವನ್ನೇ ಕಲಿಸ್ಯೈತಿ
ದೊಡ್ಡ ದೊಡ್ಡ ಬಿಜಿನೆಸು ದೊಡ್ಡದಾಗಿ ಬೆಳದಾವೆ ತಾಯಿಯ ಒಡಲೋ ಬರಿದೈತೆ ||೭||

ಲಂಚ ಲಂಚ ಅಂತ ನಾಲಿಗೆ ಚಾಚುತ ರೈತನ್ನ ರಗುತ ಹೀರುತ್ತ
ಉಬ್ಬುವ ಕೊಬ್ಬುವ ಅಧಿಕಾರಿಗಳಿಗೆ ದೇಶದ ಮಾತೇ ಅತ್ತತ್ತ ||೮||

ಸಂಬಳ ಸಾಲದು ಭಡತೀ ಸಾಲದು ಗಿಂಬಳಕಾಗೀ ಪೈಪೋಟಿ
ಸಾವಿರ ಲಕ್ಷದ ನೌಕರಿದಾರರು ತಾಯಿಗೆ ಸುಖವು ಯಾಪಾಟಿ ||೯||

ಊರೂರಿಗೊಬ್ಬೊಬ್ಬ ಜಗದ್ದ್ ಗುರುವು ಶ್ರೀಮಂತ ಶಿಷ್ಯರ ಒಡನಾಟ
ಭೇದವ ಬೆಳೆಸೀ ಬಡದಾಡಕ್ಹಚ್ಚಿ ಮೆರೆಯೋರ್ ದೇಶಕೆ ಭಂಡಾಟ ||೧೦||

ತಿಮ್ಮಪ್ಪ ಬೊಮ್ಮಪ್ಪ ಎಲ್ಲವ್ವ ಹುಲಿಗೆವ್ವ ನೂರಾರು ದೇವರು ಮನೆಮನೆಗೆ
ಎಲ್ಲಾವು ಜನರನು ಹರಕೊಂಡು ತಿನುವಾಗ ಭಾರತಿ ದೇವಿಗೆ ಏನ್ ಕೊನೆಗೆ ||೧೧||

ಪೂಜಾರಿ ಚಿಂತೆ ಕಾಣಿಕೆ ಕಡೆಗೆ ಭಕ್ತರ ಚಿಂತೆ ಹೊರಗಡೆಗೆ
ಪುರಾಣ ನೀತಿ ಹೇಳುವ ಶಾಸ್ತ್ರಿಗೆ ಸುಂಭಾವನೆಯೇ ಕಡೆ ಗಳಿಗೆ ||೧೨||

ಬರೆಯುವ ಕವಿಗೆ ಸನ್ಮಾನ ಭಾಷಣ ಕೊರೆವಗೆ ಧನಮಾನ
ಭಾರತ ಮಾತೆಯ ಎಲ್ಲರು ಬಳಸಿ ಲಂಪಟತನದಲೆ ದಿನಮಾನ ||೧೩||

ಹರೇದ ಹುಡುಗ್ರಿಗೆ ಬಣ್ಬಣ್ಣ ಹುಡುಕೋದು ಮೀಸೆ ಬಂದಾಗ ದೇಶ ಕಾಣದು
ಹರೇದ ಹುಡುಗ್ಗೆ‍ಗೆ ಬಣ್ಬಣ್ಣ ಮೆರೆಯೋದು ದೇಶ ಅಂತಂದ್ರೆ ಗೊತ್ತಾಗದು ||೧೪||

ಖಾಕೀಯ ಉಡುಪಿಗೆ ಕೇಸೀನ ಬ್ಯಾಟಿ ಖಾದಿ ಉಡುಪಿಗಂತು ದೇಶನೆ ಬ್ಯಾಟಿ
ಕರ್ರನ್ನ ಉಡುಪಿಗೆ ಕೊಲೆಗಡ್ಕುರನುಳುಸೋದು ನ್ಯಾಯಾಲಯ್ದಾಗೆ ನ್ಯಾಯ ಲೂಟಿ ||೧೫||

ದುಡಿಯುವ ರೈತಗೆ ಶ್ರಮ ಜೀವಿಗಳಿಗೆ ಹೊಟ್ಟೇನ ತುಂಬೋದೆ ಕಡುಚಿಂತೆ
ಸುಲಿದು ತಿನ್ನುವಂಥ ಹದ್ದು ಕಾಗೆಗಳ ಕೈಯಾಗೆ ನರಳುವ ಜೀವ ಚಿತೆ ||೧೬||

ನೆಲದ ಮಕ್ಕಳೇ ನಿನ್ನ ಮಕ್ಕಳು ಅವರ ದುಸ್ಥಿತಿಯೆ ನಿನ್ನ ಸ್ಥಿತಿ
ಮಣ್ಣಿನ ಮಕ್ಕಳು ಕಣ್ಣು ಬಿಟ್ಟು ನಿಲ್ಲೋವರೆಗೆ ತಾಯಿ ನಿನಗಂತೂ ಇದೇ ಗತಿ ||೧೭||

೧೩.೬.೮೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...