Home / ಕವನ / ಕವಿತೆ / ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು
ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ
ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ
ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ.
ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ
ದಂತಗೋಪುರಗಳಲ್ಲಿ ಕುಳಿತು
ಹೂವು-ಜೇನು, ನಾರಿ-ಸೀರೆ, ಇಂದ್ರ-ಚಂದ್ರರ, ಗಾಳಿಬುರುಡೆಯನ್ನಲ್ಲ
ನೆಲಕಿಳಿಯದ ಭೂತ ಬೆಂತರಗಳೊಡನಲ್ಲ
ಮಣ್ಣ ರುಚಿಕಾಣದ ಅಪ್ಸರೆಯರೊಡನಲ್ಲ
ಇಹದಲ್ಲಿಳಿದುಬರದ ಪರದ ಪರದಾಟವನ್ನಲ್ಲ

ಮಾತಾಡಲು ಮಾತೇ ಬೇಕೇನು?

ಬಾಯೆಂಬ ತೂತೇ ಬೇಕೇನು?

ಕರೆವ ಕರಿಭವಿಷ್ಯದೊಡನೆ, ಕಲ್ಲಾದ ಮಣ್ಣಿನೊಡನೆ
ಮಣ್ಣಾದ ಮಾನವತೆಯೊಡನೆ
ಉರಿಬಿಸಿಲು ಮೊರೆಗಾಳಿ ಹರಿನೀರು ಸುರಿಮಳೆ ಬರಿವಾಸ್ತವದೊಡನೆ
ಅಳುಮೊಗ ಕೊಳೆತ ಮತಿ ಎಲುಬುಗೂಡಿನ ಗುಡಿಸಲುಗಳೊಡನೆ
ಬೆವರ ಹನಿ ರಕ್ತ ಬಿಂದುಗಳಿಂದ
ಕೈ ಬೆರಳು, ತೋಳು ಕಾಲುಗಳ ಉಕ್ಕಿನ ಖಂಡಗಳಿಂದ
ಒಡಲ ವೀರ್ಯದಿಂದ ಸಾಹಸದ ತೂರ್ಯದಿಂದ
ಹಾರೆ ಸಲಿಕೆ ಸುತ್ತಿಗೆ ಚಮ್ಮಟಿಗೆಗಳಿಂದ
ಗ್ರಂಥ ದೀಪಗಳಿಂದ ಪ್ರನಾಳ ಭೂತಕನ್ನಡಿಗಳಿಂದ
ಎಲ್ಲಕ್ಕೂ ಒಳಗಿಳಿದು ಮಿದುಳುಬಳ್ಳಿಯಿಂದ ಮನದ ಮಾನದಿಂದ
ಬಿಚ್ಚದೆಯ ಮಿಡಿತದಿಂದ ಮಾನವತೆಯ ಏಕನಾಡಿ ಸೂತ್ರದಿಂದ
ನಾವಿಂದು ಮಾತಾಡಬೇಕು
ಅಂದರೆ ಮಾಡಬೇಕು
ಮಾತು ಮಾಡಿದಂತಿರಬೇಕು
ಮಾಡಿದ್ದೇ ಮಾತಾಗಬೇಕು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...