Home / ಕವನ / ಕವಿತೆ / ಸ್ವತಂತ್ರ ಭಾರತ (ಆಗಸ್ಟ್ ೧೫-೧೯೪೭)

ಸ್ವತಂತ್ರ ಭಾರತ (ಆಗಸ್ಟ್ ೧೫-೧೯೪೭)

ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ||

ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ
ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ||

ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ,
ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ;
ತನ್ನ ತಾನು ಮರೆತು ಜೊಳ್ಳು ಪುತ್ರರನ್ನು ನಂಬಿರೆ,
ಆತ್ಮಖ್ಯಾತಿ ಘನತೆಗಳನು ಕಳೆದು ತಾಯಿ ನೊಂದಳೊ!  ||ಭಾ||

ಬಡತನದಿ ಬೇನೆಯಿಂದ ಬೆಂದು ಬಳಲಿ ಬಾಡಿತು
ದೇಶದಲ್ಲಿ ಶಾಂತಿ ಕಾಂತಿ ಕಳೆದು ಭ್ರಾಂತಿ ತುಂಬಿತು,
ಹಿಂದೂದೇಶ ಕರ್ಮಭೂಮಿ ಧರ್ಮಕ್ಷೇತ್ರ ಖ್ಯಾತಿಯು
ಶೂರ ಆರ್ಯಜನರ ಸ್ಥೈರ್ಯ ಶೂನ್ಯವಾಗಿ ಪೋದುವೊ!  ||ಭಾ||

ಒಲಿದು ನಲಿದು ಮುಗುಳು ನಗೆಯ ತೋರಿ ಹಾಡಿ ಬರುವಳು
ಹೂವ ಮುಡಿದು ತಿಲಕ ಹಚ್ಚಿ ಧ್ವಜವ ಹಾರ್‍ಸಿ ಮೆರೆವಳು,
ಕಾಲಗೆಜ್ಜೆ ಝಣಽ ಝಣರೆಂದೆನಿಸಿ ಕುಣಿದು ಕರೆವಳು
ನಲಿದಳೀ ನಲ್ವತ್ತು ಕೋಟಿ ಕುರವರರೊಡನೆ ಹರುಷದಿ!  ||ಭಾ||

ಅಹೋ ಏನು ಧಣಿದರವಳ ವೀರ ತ್ಯಾಗಿ ಪುತ್ರರು,
ದೇಶಬಂಧು ಲೋಕಮಾನ್ಯ ಮೋತಿಲಾಲ ಶಿಷ್ಟರು;
ಆ ನೇತಾಜಿ ನೆಹುರು ವಲ್ಲಭಾದಿ ಗೋಕಲೇಯರು,
ದಣಿದು ಕಾದು ಸತ್ತ ಹಿರಿಯ ಕಿರಿಯ ಹಲವು ವೀರರು!  ||ಭಾ||

ರಕ್ತ ಹರಿಸಿ ತನುವ ಸವೆಸಿ ಧಣಿದರಲವು ಜನಗಳು
ಏಸು ಕಾಲ ಪಾರತಂತ್ರ್‍ಯದಿಂದ ಇರ್ದ ದೇಶದೊಳ್;
ಶೂರಗಾಂಧಿ ರಾಜಋಷಿಯು ಬಡವಗೊಲಿದ ದೇವನು
ಸತ್ಯಾಗ್ರಹಾದಾಯುಧವೇ ದೇಶ ವಿಜಯಕಾಯ್ದನು!  ||ಭಾ||

ಬಂದಳದೋ ವಿಜಯಭೇರಿಯನ್ನು ಮೊಳಗಿ ಮಾನಸಿ,
ಗಳಿಸಿದೊಂದು ಕೀರ್ತಿಯನ್ನು ಕಂದರೊಳಗೆ ಹಬ್ಬಿಸಿ;
ಧರೆಯ ರಾಷ್ಟ್ರಗಳಲಿ ನಮ್ಮ ಪ್ರಭೆಯು ಇನ್ನು ಬೀರ್ವುದು,
ಧವಳ ಕೇತು ಹಾರ್‍ಸಿ ತಂದಳದೋ ಭಾರತೀವಧು!  ||ಭಾ||
*****
ಪುಸ್ತಕ: ಸೂರ್ಯ ಕಾಂತಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...