Home / ಕವನ / ಕವಿತೆ / ಮುಟ್ಟಿದರೆ ಮುನಿಯೂ, ಕನಕಾಂಬರ ಬೀಜವೂ

ಮುಟ್ಟಿದರೆ ಮುನಿಯೂ, ಕನಕಾಂಬರ ಬೀಜವೂ

ಅರಳಲೋ ಬೇಡವೋ
ಎಂದನುಮಾನಿಸುತ್ತಲೇ
ಎಲೆದಳದಳಗಳ ಅರ್ಧವಷ್ಟೇ
ಮೆಲ್ಲಗೆ ವಿಕಸಿಸಿ
ಯಾರ ದಿಟ್ಟಿಗೂ ತಾಗದಿದ್ದರೆ
ಸಾಕೆನುತ
ಮೈಮನಗಳನೆಲ್ಲ ಮುದುರಿಸಿ
ದೇಹವೂ ನಾನೇ ಆತ್ಮವೂ ನಾನೇ
ಬಚ್ಚಿಡಲೆಂತು ಎರಡನೂ
ಪರಕೀಯ ದಾಳಿಯಿಂದ?
ಕಳವಳದಿಂದ
ಸಣ್ಣ ತಾಗುವಿಕೆಗೂ
ಮೈಮನಗಳ ಇಂಚಿಂಚೂ
ಒಳಗೊಳಗೇ ಮುದುರಿಕೊಳ್ಳುತಾ
ಬದುಕಿಡೀ ಚಡಪಡಿಸುತಾ
ಕಳೆವ ತುಡುಮುಡಿಕೆ ಜೀವ
ಈ ಮುಟ್ಟಿದರೆ ಮುನಿಯದು!

ಧ್ಯಾನಕ್ಕೆ ಕೂತು
ಆಳದಾಳದ ಮೌನದಲಿ ಹೂತು
ಬಿರುಬಿಸಿಲಿಗೆ ಹೊರ ಮೈ
ಒಣಗಿಸಿ
ಕಾವಿನಲಿ ಒಳಗು ಮಾಗಿಸಿ
ದೇಹ ನಾನಲ್ಲ. ಆತ್ಮ ನಾನು
ದೇಹಕ್ಕೂ ನನಗೂ
ಸಂಬಂಧವಿಲ್ಲೆನುತ
ಸಣ್ಣ ತಾಗುವಿಕೆಗೇ
ಪಟ್ಟನೆ ಒಡೆದು
ತಟ್ಟನೆ ಸಿಡಿದು
ಬಿರಿದುದುರಿದರೂ
ಒಳಗಿನದೆಲ್ಲಾ ಶುಭ್ರ
ಮಡಿಮಡಿ ಬಿಳುಪೆಂಬ
ಸಮಜಾಯಿಷಿಯಲಿ
ಮತ್ತೆ ಹಸಿಮಣ್ಣಲಿ ಹೂತು
ಧನ್ಯತೆಯ ಪಡೆವ ತವಕ
ಕಾದು ಕುಳಿತ
ಕನಕಾಂಬರ ಬೀಜದ್ದು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...