ಹನಿಗಳು ಒಡೆದ ಸಂಜೆ

ಒಂದು ದೀರ್ಘ ಮಳೆಗಾಲದ ಸಂಜೆ
ಹೆದ್ದಾರಿ ಹಾವಿನಂತೆ ಫಳಫಳ ಹೊಳೆಯುತ್ತಲಿದೆ.
ಒಂದು ಖಚಿತ ಧ್ವನಿಯಲ್ಲಿ ಕತ್ತಲೆ ನನ್ನ ಕಿಟಕಿಯ
ಹಾಯ್ದು ಬಂದಿದೆ. ಮೈ ಕೊರೆಯುವ ಚಳಿಯ
ಮಬ್ಬಿನಲಿ ಒಲೆಯು ನೀಲಿ ಜ್ವಾಲೆಯ ಉಗುಳುತ್ತಿದೆ.
ಮತ್ತು ಚಹಾ ಕುದಿಯುತ್ತಿದೆ.

ಆಗ ಒಂದು ನಿವೇದನೆಯ ಪತ್ರ ಬರೆದೆ.
ದುಂಡಾದ ಮೇಜಿನ ಮೇಲೆ ಚಹಾ ಕಪ್ಪುಗಳು
ಸಪ್ಪಳ ಹರಡಿ ಕೂತಿವೆ. ಮತ್ತೆ ಮಾಳಿಗೆಯಿಂದ
ಹನಿಗಳು ಜಂಪಲು ಹಿಡಿದಿವೆ, ಒರಗಿ ಕುಳಿತ
ತಲೆದಿಂಬಿನ ಕವರಿನ ಮೇಲೆ ಯಾರದೋ ವಿಷಾದ
ಹರಡಿದೆ, ಮತ್ತೆ ಮಳೆ ಜೋರಾಗಿ ಬರುತ್ತಿದೆ.

ಸ್ವಲ್ಪ ಹೊತ್ತು ಮಾತುಗಳು ಮೂಕವಾಗಿ
ಮೂಲೆ ಹಿಡಿದು ಕುಳಿತಿವೆ. ಯಾರೂ ಇಲ್ಲದ ಮನೆ
ಕೌನೆರಳು ಹಾಸಿದೆ. ಒಂದು ವಿರಹ ಗೀತೆ ಮತ್ತು
ಕಥೆಗಳು ಹೇಳದ ಧ್ವನಿಗಳು, ಈ ಸಂಜೆ ಒಂದು
ಮೆರವಣಿಗೆ ಹೋಗಿವೆ. ಮತ್ತೆ ಒಂದು ವಿರಾಮ
ಕೋಣೆಯಲಿ ತುಂಬಿದೆ ಮಳೆ ಹೊಯ್ಯುತಿದೆ.

ಮೋಡಗಳು ಬಾಗಿಲಿಗೆ ಬಂದು ನಿಂತಿವೆ. ಒಳಗೆ
ಬಿಕ್ಕುಗಳು ಯಾವುದೂ ಸರಳವಲ್ಲ ಎಂಬ ಮಾತಲಿ
ಮೌನದ ಕಂಬಳಿ ಹೊದ್ದು ಮಲಗಿವೆ, ಗೋಡೆ ಮೇಲೆ
ಹಲ್ಲಿ ಲೊಚಗುಡುತ್ತಿದೆ. ಸ್ವಲ್ಪ ಅಳು
ಸಂಜೆಗತ್ತಲಲಿ ಅಡಗಿ ಕುಳಿತಿದೆ. ಯಾರೋ ಮನೆಯ
ಸುತ್ತ ಸುಳಿದಾಡುತ್ತಿದ್ದಾರೆ. ಮತ್ತೆ ಹನಿ ಜೋರಾಗಿ ಒಡೆದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ದೇಶ ಭಾರತ
Next post ಆಕಳು ಅಂಬಾ! ಅನ್ನುತಿದೆ!

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…