ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ

ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ

ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ ಅಂಶವನ್ನು ಕುರಿತೂ, ಹಿಂದಿನ ಉಪನ್ಯಾಸದಲ್ಲಿ ನನಗೆ ತಿಳಿದ ಮಟ್ಟಿಗೆ ಅರಿಕೆಮಾಡಿದೇನಷ್ಟೆ. ವಿಚಾರಮಾಡಕೊಂಡುಹೋದರೆ, ಯೂರೋಪ್ ಖಂಡದಲ್ಲಿಯೂ ಇಂಥಾ ಪಾಳಯಗಾರರ ತೆರದ ಸಂಸ್ಥೆ ಇದ್ದಂತೆ ಚನ್ನಾಗಿ ಹೇಳಬಹುದು. ಇದನ್ನು ಫ್ಯೂಡಲ್ ಸಂಸ್ಥೆ ಎಂದು ಕರೆಯುತ್ತಾರೆ. ಯೂರೊಪ್ ಖಂಡದಲ್ಲಿ ವಿಶೇಷ ಉತ್ತರಭಾಗದ ಕೆಲವು ಪ್ರದೇಶ ಹೊರತು ಉಳಿದ ದೇಶಗಳೆಲ್ಲಾ ರೋಮ್ ಚಕ್ರವರ್‍ತಿಗಳ ಆಳಿಕೆಗೆ ಸೇರಿದ್ದವು. ಇದು ಸುಮಾರು ಕ್ರಿ|| ಶ|| ೮ನೇ ಶತಮಾನದಲ್ಲಿ ಪೂರ್‍ವಚಕ್ರಾಧಿಪತ್ಯ, ಪಶ್ಚಿಮ ಚಕ್ರಾಧಿಪತ್ಯವೆಂದು ಎರಡು ಭಾಗವಾಯಿತು. ಪೂರ್‍ವಚಕ್ರಾಧಿಪತ್ಯಕ್ಕೆ ಕುಸ್ತನ್ತನಿಯ (Constantinopole) ಎಂಬ ಪಟ್ಟಣವು ರಾಜಧಾನಿಯಾಯಿತು. ಪಶ್ಚಿಮ ಚಕ್ರಾಧಿಪತ್ಯಕ್ಕೆ ಈಗಿನ ಜರ್‍ಮನಿಯು ಮೂಲಸ್ಥಾನವಾಯಿತು. ಫ್ಯೂಡಲ್ ಸಂಸ್ಥೆಯು ಕ್ರಿ|| ಶ|| ಐದನೇ ಶತಮಾನದಲ್ಲಿ ಫ್ರಾನ್ಸ್ ದೇಶದೊಳು ಪ್ರಚಾರಕ್ಕೆ ಬಂತು ಎಂದು ಹೇಳುತ್ತಾರೆ. ಕೆಲವರು ರೊಮಾಯ ಜನರ ಧರ್‍ಮಶಾಸ್ತ್ರದಲ್ಲಿ ಇದಕ್ಕೆ ಮೂಲವಿತ್ತು, ತರುವಾಯ ಕಾಲಕ್ರಮೇಣ ಇದು ವೃದ್ಧಿಯಾಯಿತು ಎನ್ನುತ್ತಾರೆ. ಆದರೆ ಈಚೆಗೆ ಕೆಲವು ಶೋಧಕರು-ಈ ಪದ್ಧತಿಯೂ, ಈಗಿನ ಇಂಗ್ಲೀಷರು, ಜರ್‍ಮನಿ ಜನರು ಮುಂತಾದವರಲ್ಲಿದ್ದ ಪದ್ಧತಿಯೂ ಫ್ರೆಂಚ್ ಜನರ ಮೂಲಪುರುಷರಲ್ಲಿ ವೃದ್ಧಿಹೊಂದಿ, ರೋಮಾಯಿ ಜನರ ಧರ್‍ಮಶಾಸ್ತ್ರವನ್ನು ಆಧಾರ ಮಾಡಿಕೊಂಡಿತು, ಎಂಬದಾಗಿ ಖಂಡಿತವಾದ ಅಭಿಪ್ರಾಯಪಟ್ಟಿದ್ದಾರೆ. ಎಂತಾದರೂ ಈ ಸಂಸ್ಥೆಯು ಹುಟ್ಟಿರಲಿ. ಇದೇನೋ ಯೂರೊಪ್ ಖಂಡದಲ್ಲಿ ಕ್ರಿ|| ಶ|| ೫ ರಿಂದ ೮ನೇ ಶತಮಾನದ ವರೆಗೆ ಪ್ರಚಾರಕ್ಕೆ ಬಂತು.

ಯೂರೊಪ್ ಖಂಡದೊಳು ಫ್ರಾನ್ಸು, ಇಂಗ್ಲೆಂಡು, ಜರ್‍ಮನಿ ಮುಂತಾದ ದೇಶಗಳಲ್ಲಿ ಈ ಫ್ಯೂಡಲ್ ಸಂಸ್ಥೆಯು ಹುಟ್ಟಿದ್ದ ವಿಚಾರವಾಗಿ ಮೇಲಿನ ಅಂಶಕ್ಕೆ ಸ್ವಲ್ಪ ಭಿನ್ನಿಸಿದ ಅಭಿಪ್ರಾಯವನ್ನು ಕೆಲವರು ಹೇಳುತಾರೆ, ಹೇಗೆಂದರೆ:-

ರೋಮನ್ ಚಕ್ರಾಧಿಪತ್ಯದ ಅಂತ್ಯಭಾಗದಲ್ಲಿಯೂ ಆ ತರುವಾಯ ಮಧ್ಯಕಾಲ Medieval ದಲ್ಲಿಯೂ, ಪ್ರಜೆಗಳಿಗೆ ಯಾವ ಭೀತಿಯೂ ಇಲ್ಲದ ಹಾಗೆ ರಕ್ಷಣೆ ಮಾಡತಕ್ಕ ಪ್ರಭುತ್ವ ಅಗತ್ಯವಾಗಿತ್ತು. ಪರರಾಜರ ಕಾಟಕಾಯ, ಸ್ವರಾಜ್ಯದಲ್ಲಿ ರೈತರು ದಂಗೆ ಮೊದಲಾದ್ದನ್ನು ಮಾಡುವುದು, ಒಳದೇಶದಲ್ಲಿ ನೆರೆಹೊರೆಯವರೂ ಇತರ ಜನರೂ ಕೊಡುವ ಹಿಂಸೆ, ಸರ್‍ಕಾರದ ಉದ್ಯೋಗಸ್ಥರು ಲಂಚ ಮೊದಲಾದ್ದನ್ನು ತೆಗೆದುಕೊಳ್ಳುವುದು, ಧರ್‍ಮಶಾಸ್ತ್ರದ ವಿಧಾಯಕವೆಂದು ಹೇಳಿ ಕಾನೂನಿಗೆ ವಿರೋಧವಾಗಿ ಜನರಿಂದ ವರಿ ವಸೂಲ್ಮಾಡತಕ್ಕದ್ದು, ಇಂಥಾ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಪ್ರಜೆಗಳು ಮಾರ್‍ಗವನ್ನು ಹುಡುಕಬೇಕಾದ್ದು ಅಗತ್ಯವಾಗಿತ್ತು. ರೋಂ ಚಕ್ರವರ್‍ತಿಗಳ ಅಧಿಕಾರ ಖಿಲವಾಗುತಾ ಜರ್‍ಮನಿ ದೇಶದಲ್ಲಿ ಸರಿಯಾದ ರಾಜ್ಯಭಾರ ಇನ್ನೂ ಸ್ಥಾಪನೆಯಾಗದೆ ಇರುವಂಥಾ ಗಲಭೆಯಾದ ಕಾಲದಲ್ಲಿ ಸಂಣ ಸಂಣ ರೈತರಿಗೆ ಯಾವ ಕಡೆ ನೋಡಿದಾಗ್ಯೂ ಹಿಂಸೆ ಹೆಚ್ಚಾಗಿತ್ತು. ಇಂಥಾ ಹಿಂಸೆ ಇಲ್ಲದ ಹಾಗೆ ಕಾಪಾಡತಕ್ಕ ಸಾಮರ್‍ತ್ಯವುಳ್ಳ ಸರ್‍ಕಾರ ಸ್ಥಾಪನೆಯಾಗಿರಲಿಲ್ಲ. ಆದಕಾರಣ ಸರಿಯಾಗಿ ಸಂರಕ್ಷಣೆ ಮಾಡತಕ್ಕ ಪ್ರಭುವನ್ನು ರೈತರು ಹುಡುಕಿಕೊಳ್ಳಬೇಕಾಗಿ ಬಂತು. ಈ ಸಂರಕ್ಷಣೆಯು ಎರಡು ಬಗೆಯಾಗಿತ್ತು. ೧ನೇದು ರೈತರಿಗೆ ಯಾವ ಹಿಂಸೆಯೂ ಇಲ್ಲದಹಾಗೆ ಅವರನ್ನು ಮಾತ್ರ ಕಾಪಾಡುವುದು, ೨ನೇದು ಅವರ ಸ್ವತ್ತನ್ನು ಕಾಪಾಡುವುದು, ಈ ಎರಡು ಭಾಗ ಮುಖ್ಯವಗಿತ್ತು.

ಇಂಥಾ ಸಂದರ್‍ಭವು ಫ್ರಾನ್ಸ್ ದೇಶವನ್ನು ರೋಮಾಯರು ಬಂದು ಜೈಸಿ ಆಕ್ರಮಿಸಿಕೊಳ್ಳುವುದಕ್ಕೆ ಮುಂಚಿನಿಂದಲೂ ಇದ್ದಹಾಗೆ ತಿಳಿಯಬರುವುದು. ಭೂಮಿ ಇಲ್ಲದ ಬಡವನಾದ ಬಗರುಜಿರಾಯಿತು ಕುಳವು ಹೆಗ್ಗಡಿಯಾಗಿ ಬಲವಾಗಿರತಕ್ಕ ಪುರುಷನ ಸಹಾಯವನ್ನು ಪಡೆಯಬೇಕಾಗಿತ್ತು. ಈ ಸಂದರ್‍ಭದಲ್ಲಿ ಅನ್ಯೋನ್ಯ ಸಹಾಯವು ಮುಖ್ಯವಾದ ಸಮಯಬಂಧ. ಸಂಣ ರೈತರಿಗೆ ಇತರರ ಬಾಧೆ ಇಲ್ಲದಹಾಗೆ ಕಾಪಾಡುವುದು ಹೆಗ್ಗಡಿಯ ಕೆಲಸ. ಹೆಗ್ಗಡಿ ಹೇಳಿದಹಾಗೆ ಅವನು ಪ್ರಯೋಜನವನ್ನು ನೋಡಿಕೊಳ್ಳುವುದ ರೈತನ ಕೆಲಸ. ಈ ಸಂಬಂಧಕ್ಕೆ ಕಮೆಂಡೇಷನ್ (Commendation) ಎನ್ನುತಾರೆ. ಈ ಸಂಬಂಧವನ್ನು ಊಭಯತ್ರರಿಗೂ ನಡೆದು ಒಂದು ಕರಾರಿನಂತೆ ಜರ್‍ಮನಿಯವರು ಭಾವಿಸುತಾ ಬಂದರು. ಇದಕ್ಕೂ ತಪ್ಪಿ ನಡೆದವರು ಒಂದು ವಿಧವಾದ ಶಿಕ್ಷೆಯನ್ನನುಭವಿಸಬೇಕೆಂದು ಗೊತ್ತಾಯಿತು. ಎರಡನೇ ವಿಧವಾದ ಸಂರಕ್ಷಣೆ ವಿಚಾರ ಭೂಸಂಬಂಧದಾಗಿತ್ತು. ಇದು ಒಂದು ಬಗೆಯಾದ ಹಿಡುವಳಿ. ಇದರ ಪ್ರಕಾರ ಭೂಮಿಯನ್ನು ರೈತನಿಗೆ ಇನಾಮಾಗಿ ಕೊಡುವುದು ಅಥವಾ ಕೊಟ್ಟಸಾಲಕ್ಕೆ ಆಧಾರವಾಗಿ ಭೋಗ್ಯವಾಗಿ ಕೊಡುವುದು. ಇದರಲ್ಲಿ ಭೂಮಿಯ ಯಜಮಾನನಿಗೆ ಅನುಭವದಾರನು ಏನು ಕೊಡಬೇಕಾದ್ದಿಲ್ಲ. ಅನುಭವದಾರನಿಗೆ ಭೂಮಿಗೆ ಹಕ್ಕಿಲ್ಲ. ಉಳಿದ ಭಾಗದಲ್ಲಿ ಉಭಯ ಕಕ್ಷಿಯವರ ಅಭಿಪ್ರಾಯವೂ ಒಂದೇ. ಫ್ಯೂಡಲ್ ಸಂಸ್ಥೆಯ ಮುಲದ ವಿಷಯದಲ್ಲಿ ಇದು ಒಂದು ಮತ.

ಇಂಥ ಫ್ಯೂಡಲ್ ಸಂಸ್ಥೆಯನ್ನು ಎರಡು ಭಾಗ ಮಾಡಿ ವಿಚಾರ ಮಾಡಬೇಕಾಗಿದೆ.
(೧) ಭಮಿಯ ಹಿಡುವಳಿ ವಿಧಾನ,
(೨) ರಾಜ್ಯಭಾರ ಕ್ರಮ
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯು ಭಜಿಸು
Next post ನಮ್ಮ ಭಾರತ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…