Home / ಲೇಖನ / ಇತರೆ / ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ

ಪಾಳಯಗಾರರು – ಯೂರೋಪಿನ ಫ್ಯೂಡಲ್ ಸಂಸ್ಥೆ

ಪಾಳೇಗಾರ

ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ ಅಂಶವನ್ನು ಕುರಿತೂ, ಹಿಂದಿನ ಉಪನ್ಯಾಸದಲ್ಲಿ ನನಗೆ ತಿಳಿದ ಮಟ್ಟಿಗೆ ಅರಿಕೆಮಾಡಿದೇನಷ್ಟೆ. ವಿಚಾರಮಾಡಕೊಂಡುಹೋದರೆ, ಯೂರೋಪ್ ಖಂಡದಲ್ಲಿಯೂ ಇಂಥಾ ಪಾಳಯಗಾರರ ತೆರದ ಸಂಸ್ಥೆ ಇದ್ದಂತೆ ಚನ್ನಾಗಿ ಹೇಳಬಹುದು. ಇದನ್ನು ಫ್ಯೂಡಲ್ ಸಂಸ್ಥೆ ಎಂದು ಕರೆಯುತ್ತಾರೆ. ಯೂರೊಪ್ ಖಂಡದಲ್ಲಿ ವಿಶೇಷ ಉತ್ತರಭಾಗದ ಕೆಲವು ಪ್ರದೇಶ ಹೊರತು ಉಳಿದ ದೇಶಗಳೆಲ್ಲಾ ರೋಮ್ ಚಕ್ರವರ್‍ತಿಗಳ ಆಳಿಕೆಗೆ ಸೇರಿದ್ದವು. ಇದು ಸುಮಾರು ಕ್ರಿ|| ಶ|| ೮ನೇ ಶತಮಾನದಲ್ಲಿ ಪೂರ್‍ವಚಕ್ರಾಧಿಪತ್ಯ, ಪಶ್ಚಿಮ ಚಕ್ರಾಧಿಪತ್ಯವೆಂದು ಎರಡು ಭಾಗವಾಯಿತು. ಪೂರ್‍ವಚಕ್ರಾಧಿಪತ್ಯಕ್ಕೆ ಕುಸ್ತನ್ತನಿಯ (Constantinopole) ಎಂಬ ಪಟ್ಟಣವು ರಾಜಧಾನಿಯಾಯಿತು. ಪಶ್ಚಿಮ ಚಕ್ರಾಧಿಪತ್ಯಕ್ಕೆ ಈಗಿನ ಜರ್‍ಮನಿಯು ಮೂಲಸ್ಥಾನವಾಯಿತು. ಫ್ಯೂಡಲ್ ಸಂಸ್ಥೆಯು ಕ್ರಿ|| ಶ|| ಐದನೇ ಶತಮಾನದಲ್ಲಿ ಫ್ರಾನ್ಸ್ ದೇಶದೊಳು ಪ್ರಚಾರಕ್ಕೆ ಬಂತು ಎಂದು ಹೇಳುತ್ತಾರೆ. ಕೆಲವರು ರೊಮಾಯ ಜನರ ಧರ್‍ಮಶಾಸ್ತ್ರದಲ್ಲಿ ಇದಕ್ಕೆ ಮೂಲವಿತ್ತು, ತರುವಾಯ ಕಾಲಕ್ರಮೇಣ ಇದು ವೃದ್ಧಿಯಾಯಿತು ಎನ್ನುತ್ತಾರೆ. ಆದರೆ ಈಚೆಗೆ ಕೆಲವು ಶೋಧಕರು-ಈ ಪದ್ಧತಿಯೂ, ಈಗಿನ ಇಂಗ್ಲೀಷರು, ಜರ್‍ಮನಿ ಜನರು ಮುಂತಾದವರಲ್ಲಿದ್ದ ಪದ್ಧತಿಯೂ ಫ್ರೆಂಚ್ ಜನರ ಮೂಲಪುರುಷರಲ್ಲಿ ವೃದ್ಧಿಹೊಂದಿ, ರೋಮಾಯಿ ಜನರ ಧರ್‍ಮಶಾಸ್ತ್ರವನ್ನು ಆಧಾರ ಮಾಡಿಕೊಂಡಿತು, ಎಂಬದಾಗಿ ಖಂಡಿತವಾದ ಅಭಿಪ್ರಾಯಪಟ್ಟಿದ್ದಾರೆ. ಎಂತಾದರೂ ಈ ಸಂಸ್ಥೆಯು ಹುಟ್ಟಿರಲಿ. ಇದೇನೋ ಯೂರೊಪ್ ಖಂಡದಲ್ಲಿ ಕ್ರಿ|| ಶ|| ೫ ರಿಂದ ೮ನೇ ಶತಮಾನದ ವರೆಗೆ ಪ್ರಚಾರಕ್ಕೆ ಬಂತು.

ಯೂರೊಪ್ ಖಂಡದೊಳು ಫ್ರಾನ್ಸು, ಇಂಗ್ಲೆಂಡು, ಜರ್‍ಮನಿ ಮುಂತಾದ ದೇಶಗಳಲ್ಲಿ ಈ ಫ್ಯೂಡಲ್ ಸಂಸ್ಥೆಯು ಹುಟ್ಟಿದ್ದ ವಿಚಾರವಾಗಿ ಮೇಲಿನ ಅಂಶಕ್ಕೆ ಸ್ವಲ್ಪ ಭಿನ್ನಿಸಿದ ಅಭಿಪ್ರಾಯವನ್ನು ಕೆಲವರು ಹೇಳುತಾರೆ, ಹೇಗೆಂದರೆ:-

ರೋಮನ್ ಚಕ್ರಾಧಿಪತ್ಯದ ಅಂತ್ಯಭಾಗದಲ್ಲಿಯೂ ಆ ತರುವಾಯ ಮಧ್ಯಕಾಲ Medieval ದಲ್ಲಿಯೂ, ಪ್ರಜೆಗಳಿಗೆ ಯಾವ ಭೀತಿಯೂ ಇಲ್ಲದ ಹಾಗೆ ರಕ್ಷಣೆ ಮಾಡತಕ್ಕ ಪ್ರಭುತ್ವ ಅಗತ್ಯವಾಗಿತ್ತು. ಪರರಾಜರ ಕಾಟಕಾಯ, ಸ್ವರಾಜ್ಯದಲ್ಲಿ ರೈತರು ದಂಗೆ ಮೊದಲಾದ್ದನ್ನು ಮಾಡುವುದು, ಒಳದೇಶದಲ್ಲಿ ನೆರೆಹೊರೆಯವರೂ ಇತರ ಜನರೂ ಕೊಡುವ ಹಿಂಸೆ, ಸರ್‍ಕಾರದ ಉದ್ಯೋಗಸ್ಥರು ಲಂಚ ಮೊದಲಾದ್ದನ್ನು ತೆಗೆದುಕೊಳ್ಳುವುದು, ಧರ್‍ಮಶಾಸ್ತ್ರದ ವಿಧಾಯಕವೆಂದು ಹೇಳಿ ಕಾನೂನಿಗೆ ವಿರೋಧವಾಗಿ ಜನರಿಂದ ವರಿ ವಸೂಲ್ಮಾಡತಕ್ಕದ್ದು, ಇಂಥಾ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಪ್ರಜೆಗಳು ಮಾರ್‍ಗವನ್ನು ಹುಡುಕಬೇಕಾದ್ದು ಅಗತ್ಯವಾಗಿತ್ತು. ರೋಂ ಚಕ್ರವರ್‍ತಿಗಳ ಅಧಿಕಾರ ಖಿಲವಾಗುತಾ ಜರ್‍ಮನಿ ದೇಶದಲ್ಲಿ ಸರಿಯಾದ ರಾಜ್ಯಭಾರ ಇನ್ನೂ ಸ್ಥಾಪನೆಯಾಗದೆ ಇರುವಂಥಾ ಗಲಭೆಯಾದ ಕಾಲದಲ್ಲಿ ಸಂಣ ಸಂಣ ರೈತರಿಗೆ ಯಾವ ಕಡೆ ನೋಡಿದಾಗ್ಯೂ ಹಿಂಸೆ ಹೆಚ್ಚಾಗಿತ್ತು. ಇಂಥಾ ಹಿಂಸೆ ಇಲ್ಲದ ಹಾಗೆ ಕಾಪಾಡತಕ್ಕ ಸಾಮರ್‍ತ್ಯವುಳ್ಳ ಸರ್‍ಕಾರ ಸ್ಥಾಪನೆಯಾಗಿರಲಿಲ್ಲ. ಆದಕಾರಣ ಸರಿಯಾಗಿ ಸಂರಕ್ಷಣೆ ಮಾಡತಕ್ಕ ಪ್ರಭುವನ್ನು ರೈತರು ಹುಡುಕಿಕೊಳ್ಳಬೇಕಾಗಿ ಬಂತು. ಈ ಸಂರಕ್ಷಣೆಯು ಎರಡು ಬಗೆಯಾಗಿತ್ತು. ೧ನೇದು ರೈತರಿಗೆ ಯಾವ ಹಿಂಸೆಯೂ ಇಲ್ಲದಹಾಗೆ ಅವರನ್ನು ಮಾತ್ರ ಕಾಪಾಡುವುದು, ೨ನೇದು ಅವರ ಸ್ವತ್ತನ್ನು ಕಾಪಾಡುವುದು, ಈ ಎರಡು ಭಾಗ ಮುಖ್ಯವಗಿತ್ತು.

ಇಂಥಾ ಸಂದರ್‍ಭವು ಫ್ರಾನ್ಸ್ ದೇಶವನ್ನು ರೋಮಾಯರು ಬಂದು ಜೈಸಿ ಆಕ್ರಮಿಸಿಕೊಳ್ಳುವುದಕ್ಕೆ ಮುಂಚಿನಿಂದಲೂ ಇದ್ದಹಾಗೆ ತಿಳಿಯಬರುವುದು. ಭೂಮಿ ಇಲ್ಲದ ಬಡವನಾದ ಬಗರುಜಿರಾಯಿತು ಕುಳವು ಹೆಗ್ಗಡಿಯಾಗಿ ಬಲವಾಗಿರತಕ್ಕ ಪುರುಷನ ಸಹಾಯವನ್ನು ಪಡೆಯಬೇಕಾಗಿತ್ತು. ಈ ಸಂದರ್‍ಭದಲ್ಲಿ ಅನ್ಯೋನ್ಯ ಸಹಾಯವು ಮುಖ್ಯವಾದ ಸಮಯಬಂಧ. ಸಂಣ ರೈತರಿಗೆ ಇತರರ ಬಾಧೆ ಇಲ್ಲದಹಾಗೆ ಕಾಪಾಡುವುದು ಹೆಗ್ಗಡಿಯ ಕೆಲಸ. ಹೆಗ್ಗಡಿ ಹೇಳಿದಹಾಗೆ ಅವನು ಪ್ರಯೋಜನವನ್ನು ನೋಡಿಕೊಳ್ಳುವುದ ರೈತನ ಕೆಲಸ. ಈ ಸಂಬಂಧಕ್ಕೆ ಕಮೆಂಡೇಷನ್ (Commendation) ಎನ್ನುತಾರೆ. ಈ ಸಂಬಂಧವನ್ನು ಊಭಯತ್ರರಿಗೂ ನಡೆದು ಒಂದು ಕರಾರಿನಂತೆ ಜರ್‍ಮನಿಯವರು ಭಾವಿಸುತಾ ಬಂದರು. ಇದಕ್ಕೂ ತಪ್ಪಿ ನಡೆದವರು ಒಂದು ವಿಧವಾದ ಶಿಕ್ಷೆಯನ್ನನುಭವಿಸಬೇಕೆಂದು ಗೊತ್ತಾಯಿತು. ಎರಡನೇ ವಿಧವಾದ ಸಂರಕ್ಷಣೆ ವಿಚಾರ ಭೂಸಂಬಂಧದಾಗಿತ್ತು. ಇದು ಒಂದು ಬಗೆಯಾದ ಹಿಡುವಳಿ. ಇದರ ಪ್ರಕಾರ ಭೂಮಿಯನ್ನು ರೈತನಿಗೆ ಇನಾಮಾಗಿ ಕೊಡುವುದು ಅಥವಾ ಕೊಟ್ಟಸಾಲಕ್ಕೆ ಆಧಾರವಾಗಿ ಭೋಗ್ಯವಾಗಿ ಕೊಡುವುದು. ಇದರಲ್ಲಿ ಭೂಮಿಯ ಯಜಮಾನನಿಗೆ ಅನುಭವದಾರನು ಏನು ಕೊಡಬೇಕಾದ್ದಿಲ್ಲ. ಅನುಭವದಾರನಿಗೆ ಭೂಮಿಗೆ ಹಕ್ಕಿಲ್ಲ. ಉಳಿದ ಭಾಗದಲ್ಲಿ ಉಭಯ ಕಕ್ಷಿಯವರ ಅಭಿಪ್ರಾಯವೂ ಒಂದೇ. ಫ್ಯೂಡಲ್ ಸಂಸ್ಥೆಯ ಮುಲದ ವಿಷಯದಲ್ಲಿ ಇದು ಒಂದು ಮತ.

ಇಂಥ ಫ್ಯೂಡಲ್ ಸಂಸ್ಥೆಯನ್ನು ಎರಡು ಭಾಗ ಮಾಡಿ ವಿಚಾರ ಮಾಡಬೇಕಾಗಿದೆ.
(೧) ಭಮಿಯ ಹಿಡುವಳಿ ವಿಧಾನ,
(೨) ರಾಜ್ಯಭಾರ ಕ್ರಮ
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...