ನಿಲುವು

ಪ್ರಿಯ ಸಖಿ,
ಇದು ಕಂಪ್ಯೂಟರ್ ಯುಗ. ಬಟನ್ ಒತ್ತಿದರೆ ಸಾಕು ಬೇಕೆಂದ ಮಾಹಿತಿ ನಿಮಿಷಾರ್ಧದಲ್ಲಿ ಕಣ್ಮುಂದೆ ಬರುತ್ತದೆ. ಇದು ಮಾಹಿತಿಯ ವಿಷಯಕ್ಕಾಯ್ತು. ಆದರೆ, ವ್ಯಕ್ತಿಯೊಬ್ಬನ ಭಾವನೆಗಳನ್ನು ಹೀಗೆ ಇಷ್ಟೇ ಸಲೀಸಾಗಿ ಅರ್ಧೈಸಲಾದೀತೇ? ವ್ಯಕ್ತಿಯ ಭಾವನೆಗಳನೇಕ ಇಂದಿಗೂ ನಿಗೂಢವಾಗಿಯೇ ಉಳಿದಿವೆ. ಎಷ್ಟೇ ಸರಳ ವ್ಯಕ್ತಿಯನ್ನೂ ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟದ ಮಾತೇ. ಅದಕ್ಕೆಂದೇ ವ್ಯಕ್ತಿ ಗುಂಪಿನಲ್ಲಿದ್ದಾಗಲೂ ಒಬ್ಬಂಟಿಯೇ! ಅವನ ಮನದ ಭಾವನೆಗಳು ಅವನಿಗಷ್ಟೇ ಪರಿಪೂರ್ಣವಾಗಿ ಅರ್ಥವಾದೀತು. ಎಷ್ಟೆಲ್ಲಾ ಸೃಷ್ಟಿಸಿರುವ ಮಾನವನಿಗೆ, ಮನಸ್ಸಿಗೊಂದು ಸಮರ್ಥ ಕನ್ನಡಿಯನ್ನು, ವ್ಯಕ್ತಿಯ ಮನಸ್ಸನ್ನೋದುವ ಕಂಪ್ಯೂಟರ್ ಒಂದನ್ನು ಇಂದಿಗೂ ಸೃಷ್ಟಿಸಲಾಗಿಲ್ಲ.

ವ್ಯಕ್ತಿಯೊಬ್ಬ ಅರ್ಥವಾಗದಿರುವುದಕ್ಕೆ ಒಂದು ಕಾರಣ ಅವನು ಹಾಕಿಕೊಂಡಿರುವ ಮುಖವಾಡಗಳು. ಸಮಯಕ್ಕೆ ತಕ್ಕಂತೆ, ಎದುರಿನ ವ್ಯಕ್ತಿಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ಹಾಕಿಕೊಳ್ಳುವ ಕಲೆ ಮನುಷ್ಯನಿಗೆ ಚೆನ್ನಾಗಿ ಕರಗತವಾಗಿದೆ. ಕೆಲವೊಮ್ಮೆ ತಾನು ತೊಟ್ಟುಕೊಂಡ ಮುಖವಾಡವೇ ನಿಜಮುಖವೆಂದು ಅವನ ಮುಖವಾಡ ಸಮರ್ಥವಾಗಿ ನಟನೆಯಾಡುತ್ತದೆ.

ಹಾಗೆಂದು ವ್ಯಕ್ತಿಯೊಬ್ಬನಿಗೆ ಖಾಸಗಿ ಬದುಕೊಂದು ಇರಲೇಬಾರದೆಂದು ಇದರರ್ಥವಲ್ಲ. ಆದರೆ ತನ್ನ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಬದುಕುವ ವ್ಯಕ್ತಿ ಪೊಳ್ಳು ಸ್ವಾರ್ಥಕ್ಕೆ ಬಲಿಯಾಗಿ ಹೇಗೆಂದರೆ ಹಾಗೆ ವ್ಯಕ್ತಿತ್ವ ಬದಲಿಸುವ ಊಸರವಳ್ಳಿಯಾಗಬಾರದಲ್ಲವೇ ಸಖಿ? ಜಿ. ಎಸ್. ಶಿವರುದ್ರಪ್ಪನವರ ‘ನಿಲುವು’ ಎಂಬ ಈ ಕವನದ ಸಾಲುಗಳು ಇದನ್ನೇ ಸಮರ್ಥಿಸುತ್ತವೆ.

ಬಚ್ಚಿಟ್ಟುಕೊಂಡು ಬದುಕುವುದು ನನಗಿಷ್ಟವಿಲ್ಲ
ಹಾಗಂತ ಎಲ್ಲವನ್ನೂ ಬಿಚ್ಚಿ ಹರಾಜಿಗಿಡುತ್ತೇನೆಂದು
ಇದರರ್ಥವಲ್ಲ
ಬಹುದೊಡ್ಡ ಮಾತನಾಡುತ್ತ
ದಿನದಿನದ ಸರಳ ಸಾಧಾರಣದ ಬದುಕಿ –
ಗವಮಾನ ಮಾಡುವವರನ್ನು ಕಂಡರೆ
ನನಗೆ ಆಗುವುದಿಲ್ಲ
ತೂಗಾಡುವ ಕಿರೀಟಗಳಿಗೆ ತಕ್ಕಂತೆ
ತಲೆಯ ಆಕಾರಗಳನ್ನು ಬದಲಾಯಿಸುತ್ತ
ಪರದಾಡುವುದು ನನಗೆ ಅಭ್ಯಾಸವಿಲ್ಲ

ಎನ್ನುತ್ತಾರೆ. ವ್ಯಕ್ತಿಯೊಬ್ಬ ಪ್ರಾಮಾಣಿಕನಾದಾಗ ಮುಖವಾಡಗಳಿಲ್ಲದೇ ಕಿರೀಟವಿದೆಯೆಂದು ಅದರ ಆಕಾರಕ್ಕೆ ತಕ್ಕಂತೆ ತನ್ನ ತಲೆಯನ್ನು ಬದಲಿಸದೇ ತನ್ನ ನಿಲುವನ್ನು, ತನ್ನ ವ್ಯಕ್ತಿತ್ವವನ್ನು ಸಮರ್ಥಿಸುವಂತೆ ಪಾರದರ್ಶಕವಾಗಿ ಬದುಕಿದರೆ ಅದಕ್ಕಿಂತಾ ದೊಡ್ಡ ಬದುಕು ಬೇರಾವುದಿದೆ? ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಳ ಒಳ್ಳೇವ್ರ್‍ ನಮ್ ಮಿಸ್ಸು
Next post ಶೆಲ್ಲಿಗೆ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…