Home / ಲೇಖನ / ವಿಜ್ಞಾನ / ಅಬ್ಬಬ್ಬಾ! ಇದೆಂಥ ಹೂ!

ಅಬ್ಬಬ್ಬಾ! ಇದೆಂಥ ಹೂ!

ಸಸ್ಯ ಪ್ರಪಂಚ ಅದ್ಭುತ ಪ್ರಪಂಚ. ಸಸ್ಯಪ್ರಪಂಚದಲ್ಲಿ ಕುತೂಹಲಕಾರಿಯಾದ, ವಿಸ್ಮಯಕಾರಿಯಾದ ಉದಾಹರಣೆಗಳಿಗೆ ಕೊನೆಮೊದಲಿಲ್ಲ. ಸಸ್ಯಗಳು ನಿರ್‍ವಹಿಸುವ ಕಾರ್‍ಯವೈಖರಿ, ಅವುಗಳ ಗಾತ್ರ, ಎತ್ತರ ಅಥವಾ ದೀರ್‍ಘಾಯುಷ್ಯಗಳಲ್ಲಿ ದಾಖಲೆ ಸ್ಥಾಪಿಸಿವೆ. ಅಂತಹ ಕುತೂಹಲಕಾರಿಯಾದ ಅಂಶ ರಾಫ್ಲೇಶಿಯಾ ಎಂಬ ಸಸ್ಯದ ಹೂ ರಚನೆಯಲ್ಲಿ ಕಾಣಬಹುದು.

ರಾಫ್ಲೇಶಿಯಾ ಎಂಬ ಸಸ್ಯವು ಮಲೇಶಿಯಾ, ಇಂಡೋನೇಶಿಯಾ ಮತ್ತು ಬರ್‍ಮಾ ದೇಶಗಳ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ರಾಫ್ಲೇಶಿಯೇಶೀ ಕುಟುಂಬವು ೧೪ ಜಾತಿಗಳನ್ನು ಹೊಂದಿದ್ದು ಅವುಗಳಲ್ಲಿ ರಾಫ್ಲೇಶಿಯಾ ಅರ್‍ನಾಲ್ಡಿ (Rafflesia arnoldii)ಯೂ ಒಂದು. ಇದೊಂದು ವಿಚಿತ್ರ ಸಸ್ಯ. ಈ ಸಸ್ಯಕ್ಕೆ ಎಲೆ ಅಥವಾ ಕಾಂಡಗಳಿಲ್ಲ. ಇದೊಂದು ಬೇರು ಪರಾವಲಂಬಿ (Root Parasite). ಇದರ ಬೇರುಗಳು ಶಿಲೀಂದ್ರಗಳಂತೆ ಸೂಕ್ಷ್ಮವಾದ ದಾರಗಳಾಗಿ ಮಾರ್‍ಪಾಟಾಗಿವೆ. ದ್ರಾಕ್ಷಿ ಕುಟುಂಬದ ಮೇಲೆ ಇತರ ಸಸ್ಯಗಳ ಬೇರುಗಳಲ್ಲಿ ತನ್ನ ಬೇರನ್ನು ತೂರಿಸಿ ಆಹಾರ ಹೀರುತ್ತ ಬದುಕುತ್ತದೆ! ಹಾಗಾಗಿ ಇದಕ್ಕೆ ಎಲೆಗಳ ಅವಶ್ಯಕತೆಯಿಲ್ಲ. ಹೂಗಳು ಮಾತ್ರ ನೆಲದ ಮೇಲೆ ಅರಳುತ್ತವೆ. ಹೂಗಳೆಂದರೆ ಎಂತಹ ಹೂಗಳೆನ್ನುತ್ತೀರಿ? ಅಬ್ಬಬ್ಬ! ದೈತ್ಯ ಹೂವುಗಳು. ವ್ಯಾಸದಲ್ಲಿ ಸಸ್ಯಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದೆಂಬ ಖ್ಯಾತಿಗಳಿಸಿವೆ.

ರಾಫ್ಲೇಶಿಯಾ ಹೂವಿನ ವ್ಯಾಸ ಅಷ್ಟಿಷ್ಟಲ್ಲ. ೫೦ ಸೆಂ.ಮೀ.ಗಳು ಎಂದರೆ ನಂಬುತ್ತೀರಾ? ದಪ್ಪ ೧.೯ ಸೆಂ.ಮೀ.ಗಳು. ಇದು ನಿಜ. ಅದರ ಐದು ದಳಗಳನ್ನು ಹೊಂದಿದ್ದು ಅವುಗಳ ಉದ್ದ ೩ ಅಡಿಗಳು. ಈ ದಳಗಳ ತೂಕ ೧೪೫ ಪೌಂಡ್‌ಗಳು ಅಂದರೆ ಸುಮಾರು ೭ ಕಿ.ಗ್ರಾಂ ಗಳು! ಒಂದೇ ಒಂದು ಹೂವಿನ ಒಟ್ಟು ತೂಕ ೧೧ ಕಿ.ಗ್ರಾಂಗಳು!

ಹೂಗಳು ಕೆಂಪು ಅಥವಾ ಊದಾಮಿಶ್ರಿತ ಕಂದು ಬಣ್ಣ ಇಲ್ಲವೇ ಪಟ್ಟೆಗಳನ್ನು ಹೊಂದಿದ್ದು, ದಪ್ಪ ಮತ್ತು ಮಾಸಲವಾಗಿರುತ್ತವೆ. ೫ ರಿಂದ ೭ ದಿನಗಳವರೆಗೆ ಅರಳಿರುತ್ತವೆ ಮತ್ತು ಏಕಲಿಂಗಿಯಾಗಿವೆ. ಈ ಹೂನಲ್ಲಿ ಐದು ಒರಟು ದಳಗಳಿದ್ದು ಅವುಗಳ ಮೇಲೆ ಬೊಬ್ಬೆಗಳಂತಹ ಬುಗುಟುಗಳಿವೆ. ಹೂ-ದೈತ್ಯಾಕಾರವಾಗಿದ್ದರೂ ಬೀಜ ಮಾತ್ರ ಗಸಗಸೆ ಕಾಳಿನಂತಿದೆ.

ಭೂಮಿಯಲ್ಲಿಯ ಹೆಚ್ಚಾನೆಚ್ಚು ಹೂಗಳು ಅವು ಬೀರುವ ಸುವಾಸನೆಗಳಿಗೆ ಹೆಸರುವಾಸಿಯಾಗಿವೆ. ಅವುಗಳ ಸುಗಂಧಕ್ಕೆ ನಾವೆಲ್ಲ ಮನಸೋತಿದ್ದೇವೆ. ಆದರೆ ರಾಫ್ಲೇಶಿಯಾ ಹೂವಿನಿಂದ ಹೊರಹೊಮ್ಮುವುದು ಸುಗಂಧವಲ್ಲ. ದುರ್‍ಗಂಧ ಅದೂ ಕೊಳೆತ ಮಾಂಸದಂತೆ. ಯಾವುದಾದರೂ ಪ್ರಾಣಿ ಕೊಳೆತು ನಾರುತ್ತಿದೆಯೋ ಏನೋ ಎಂಬಂತೆ. ಹಾಗಾಗಿ ಮನುಷ್ಯ ಅಥವಾ ಪ್ರಾಣಿಗಳು ಅದರ ಹತ್ತಿರ ಸುಳಿಯಲಾರವು. ಈ ದುರ್‍ಗಂಧಕ್ಕೆ ಆಕರ್‍ಷಿತವಾಗುವುದು ನೊಣಗಳು ಮಾತ್ರ. ಹಾಗಾಗಿ ನೊಣಗಳಿಂದಲೇ ಪರಾಗಣವಾಗುತ್ತದೆ.

ಸಿಂಗಾಪೂರ ದೇಶದ ಸ್ಥಾಪಕನಾದ ಈಸ್ಟ್ ಇಂಡಿಯ ಕಂಪನಿಯ ಗವರ್‍ನರ್‍ ಸರ್‍ ಸ್ಟ್ಯಾಂಫೋರ್‍ಡ್ ರಾಫಲ್ಸ್ ಅವರ ಹೆಸರನ್ನು ಈ ಸಸ್ಯಕ್ಕೆ ಇಡಲಾಗಿದೆ. ಏಕೆಂದರೆ ಈ ಸಸ್ಯವನ್ನು ಕಂಡುಹಿಡಿದದ್ದು ಅವನೇ. ೧೮೨೧ರಲ್ಲಿ ಬ್ರಿಟಿಶ್ ಸಸ್ಯ ವಿಜ್ಞಾನಿ ರಾಬರ್‍ಟ್ ಬ್ರೌನ್ ಈ ದೈತ್ಯ ಪುಷ್ಪದ ವಿವರಣೆಯನ್ನು ನೀಡಿದ.

ಈ ಹೂವು ಶೇಖರಿಸುವ ಮಕರಂದವೆಷ್ಟು ಗೊತ್ತೆ? ಪೂರ್‍ತಿ ೧೨ ಪಿಂಟ್‌ಗಳಷ್ಟು, ಅಂದರೆ ಸುಮಾರು ೭ ಲೀಟರ್‌ಗಳಷ್ಟು!

ರಾಫ್ಲೇಶಿಯಾ ಸಸ್ಯವು ಬೀಜರಹಿತ ತಿರುಳುಳ್ಳ ಹಣ್ಣು (Berry) ಉತ್ಪಾದಿಸುತ್ತದೆ. ಬೃಹದಾಕಾರದ ಹೂವಿನ ಗಿಡದ ಬೀಜಗಳ ಪ್ರಸಾರಕ್ಕೆ ಬೃಹದಾಕಾರದ ಪ್ರಾಣಿಗಳಾದ ಆನೆಗಳು ಕಾರಣವಾಗಿವೆ. ಬೀಜಗಳು ಅಂಟು-ಅಂಟಾಗಿದ್ದು, ಆನೆಗಳ ಕಾಲಿಗೆ ಅಂಟಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲ್ಪಡುತ್ತವೆ.

ಸುಮಾತ್ರ, ಜಾವಾ ಮತ್ತವುಗಳ ನೆರೆಯ ದೇಶಗಳ ಅರಣ್ಯಗಳಲ್ಲಿಯೂ ರಾಫ್ಲೇಶಿಯಾ ಸಸ್ಯಗಳು ಬೆಳೆಯುತ್ತವೆ. ಈ ಪ್ರಬೇಧಕ್ಕೆ ಸೇರಿದ ಸಸ್ಯಗಳು ನಮ್ಮ ದೇಶದ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳ ಅರಣ್ಯಗಳಲ್ಲಿ ಬೆಳೆಯುತ್ತವೆ. ಸಪ್ರಿಯಾ ಹಿಮಾಲಯಾನಾ ಅವುಗಳಲ್ಲೊಂದು. ಇದೂ ಪರಾವಲಂಬಿ ಸಸ್ಯವಾಗಿದ್ದು ಭಾರತದಲ್ಲಿ ಅತ್ಯಂತ ದೊಡ್ಡದಾದ (ವ್ಯಾಸದಲ್ಲಿ) ಹೂ ಬಿಡುವ ಸಸ್ಯ ಎಂಬ ಹೆಸರು ಪಡೆದಿದೆ. ಈ ಸಸ್ಯದ ಹೂಗಳ ವ್ಯಾಸ ೧೫ ರಿಂದ ೩೦ ಸೆಂಟಿಮೀಟರ್‍ಗಳು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...