Home / ಕವನ / ಕವಿತೆ / ಗ್ರಾಮರ್ ಟೀಚರಿಗೆ

ಗ್ರಾಮರ್ ಟೀಚರಿಗೆ

ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ
ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ.
ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ
ಈ ಗ್ರಾಮರು ಡಾಮರು ಯಾಕೆ?
ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ
ಪಾಣಿನಿ ಪತಂಜಲಿ ಬೇಕೆ?

ನಿನ್ನ ಕಾಲ ಬಳಿ ಐವತ್ತು ಗ್ರೀಷ್ಮಋತು ಉದುರಿದೆ
ಬಿಳಿಗೂದಲಲ್ಲಿ ತಲೆ
ಸಾವಿನ ಬಲೆ ನೇಯುತ್ತಿದೆ
ಹಣೆ ನಿರಿಗೆಯಲ್ಲಿ ಬೇಡನ ಭಾರಿ ಕಣೆ
ಕ್ರಮಕ್ರಮೇಣ ಮೊನೆಗೊಂಡು ಬೆಳೆಯುತ್ತಿದೆ.

ಅಯ್ಯಾ, ನಿನ್ನೆ ನೈಕಟ್ಯ ಪ್ರಾಕಟ್ಯಗಳ ಹುಲಿಮುಖ ಕಳಚಿ
ಹೆಂಡತಿ ಜತೆ ಜಗಳವಾಡಿ ಸ್ವಲ್ಪ ಬೈಸಿಕೊ,
ಕತ್ತೆತ್ತರಕ್ಕೆ ನೀನೇ ಎತ್ತಿಹಿಡಿದು
ನಿನ್ನ ಮಗು ಕೈಯಲ್ಲಿ ಕೆನ್ನೆಗೆ ಬಿಗಿಸಿಕೊ.
ಕೊಟ್ಟ ಹಲಸನ್ನು ಮುಚ್ಚಿಟ್ಟು ಕೂತವನೆ
ಅದನ್ನಷ್ಟು ಹೆಚ್ಚು
ಎಣ್ಣೆ ಹಚ್ಚಿದ ಕೈಯನ್ನ ಅದರಲ್ಲಿ ಬಿಚ್ಚಿ
ಲೋಕದ ತೊಡೆಗೆ ಹಲ್ಲುಹಾಕಿ ಕಚ್ಚು;
ಹತ್ತಿದ ಸೊನೆಯನ್ನು ಒದರುತ್ತ
ಜೊಲ್ಲಿಳಿಸಿ ಸಿಹಿತೊಳೆ ಜಗಿಯುತ್ತ
ಒಂದು ದಿನವಾದರೂ ನಿಜವಾಗಿ ಬಾಳು;
ಅಲ್ಲಿಯವರೆಗೆ ಮಿದುಳ ಬಾಗಿಲು ತೆರೆದು
ನೀ ಕಾಪೀಚೆಟ್ಟು ಹೊಡೆದ ಬ್ಲೂಮ್‌ಫೀಲ್ಡನಿಗೆ
ಗೇಟಾಚೆ ನಿಂತಿರಲು ಹೇಳು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...