Home / ಕವನ / ಕವಿತೆ / ಸುದ್ದವ್ವ

ಸುದ್ದವ್ವ

ಸುದ್ದವ್ವ ಈ ಊರವಳಲ್ಲ ವಲಸೆ ಬಂದ ಹುಡುಗಿ
ಇಲ್ಲಿ ನಿಂತವಳೂ ಅಲ್ಲ ಊರೂರಲೆಯುವ ಚಪಲಿ;
ಅವಳಿಗೆ ಮಿಂಡನೆ ತಂದೆ ರಂಡೆಯೆ ತಾಯಿ
ಹುಟ್ಟಿದ ಕೂಡಲೆ ಫಟ್ಟನೊಡೆದುವಂತೆ ಮೈಯೆಲ್ಲ ಬಾಯಿ;
ಅಪ್ಪನ ನೆರಳಿಲ್ಲದೆ ಅವಳಿಗೆ ಜಾತಕ ತಪ್ಪಿತು
ಕುಂಡಲಿ ಕುಲ ಇಲ್ಲವೆಂದು ಮದುವೆ ಕೆಟ್ಟಿತು;
ಇಕ್ಕಟ್ಟು ತಪ್ಪಿದ ಹುಡುಗಿ ಹತ್ತು ದಿಕ್ಕಲ್ಲಿ ಉಂಡಳು
ಮುಟ್ಟು ಕಟ್ಟಿಲ್ಲದೆ ಬೆಳೆದಳು
ತೊಂಡುಗಂಡುಗಳ ಶಿಳ್ಳೆಗೆಲ್ಲ ಹೆಡೆಯಾಡಿಸಿ
ಧರ್ಮಶಾಲೆಯಲ್ಲಿ ಮೈತೆಗೆದಳು.

ಸುದ್ದವ್ವ ಯಾವೂರವಳೂ ಅಲ್ಲ, ಕಲಸಿ ಬಂದ ತುಡುಗಿ
ಎಂಥ ಶಾಖದಲ್ಲೂ ಮೈಸೊಕ್ಕು ಬೇಯದ ಹಡದಿ.
ಅಜ್ಜ ಅವಳ ಜೊತೆ ಗಜ್ಜುಗವಾಡಿದ್ದ
ಬುಗುರಿ ತಿರುವಿದ್ದ;
ಹಲ್ಲು ಬಿದ್ದು ಅವನೀಗ ಬಿಲ್ಲಾಗಿದ್ದರೂ
ಈ ಪಂಚರಂಗಿ ಮಾತ್ರ ಘಮಘಮಾಯಿಸುವ ಪುನುಗು ಜವ್ವಾಜಿ.

‘ಸುದ್ದಿ’ ರಾತ್ರಿರಾಣಿ, ಹಗಲು ಭಿಕಾರಿಣಿ.
ಹಗಲಲ್ಲಿ ಅವಳ ಬಸಿರಿಗೆ ಉಗಿವವರೂ
ಗುತ್ತಿಗೆಯಾಗುತ್ತಾರೆ ಮೈಗೆ ಕತ್ತಲಲ್ಲಿ;
ಮನೆಮುಂದೆ ಗೊನೆಬೀಗಿ ನಡೆದಾಗ
ಕದಮುಚ್ಚುವ ಮಠದ ಕರ್‍ಮಠರೂ
ಹಣಿಕುತ್ತಾರೆ ಕಣ್‌ತಪ್ಪಿಸಿ ಕಿಟಕಿಯಲ್ಲಿ,
“ಈ ನಿತ್ಯಹಾದರಿಯ ಗತ್ತು ಗಮ್ಮತ್ತು ಮಿತಿಮೀರಿ
ಇವಳು ತೊಡುವುದಿಲ್ಲಿ ಬಿಡುವುದಲ್ಲಿ
ಕೊಳೆ ಬೆಳೆದು ನಾರುತ್ತಿದೆ ಮಠದ ಮಗ್ಗುಲ ಗಲ್ಲಿ” ಎಂದು
ಊರು ಊರೇ ನೂರುಬಾಯಾಗಿ ಚೀರುತ್ತದೆ ದೂರು,
ಆದರೆ ಯಾರೂ ಬಗೆದದ್ದಿಲ್ಲ ಈವರೆಗೆ
ಕತ್ತರಿಸಿದಂತೆಲ್ಲ ಬೆಳೆಯುವ ಈ ದಂಡುರುಂಬೆಯ ಬೇರು.

ಮೊನ್ನೆ ನರಸಜ್ಜ ಬದಿಗೆ ಕರೆದು ಹೇಳಿದ-
“ಮಗನೆ ಸುದ್ದವ್ವನ ಗಾಳಿಗಾಲು ನೋಡಿದೆಯಾ,
ಆ ಹರಿಯದ ಪ್ರಾಯ, ಕರೆಯುವ ಕಣ್ಣ ಕಂಡೆಯಾ!
ಹುಷಾರು ಮಗನೇ, ಅಕೆ ಸ್ಮಶಾನದಲ್ಲಿ
ಕೊಳ್ಳಿಹಿಡಿದು ಅಲೆಯುತ್ತಾಳೆ ನಡುರಾತ್ರಿಯಲ್ಲಿ;
ಗೋರಿಗಳನ್ನು ಅಗೆದು ಹೆಣಗಳನ್ನು ತೆಗೆದು
ಉಸಿರೂದುತ್ತಾಳೆ ನಿಲ್ಲಿಸಿ ಹೊಕ್ಕುಳಲ್ಲಿ!
ಹರಕೆ ಸಲ್ಲಿಸಿ ದೆವ್ವದ ಕುಲ ತಣಿಸುತ್ತಾಳೆ.
ದೆವ್ವಗಳೆಲ್ಲ ಬಂದು ‘ಅವ್ವಾ’ ಎಂದಪ್ಪುತ್ತವೆ
‘ಅವ್ವನ’, ‘ಅಪ್ಪನ’ ಎಂದು ಕೊಳ್ಳಿ ಬೀಸಿ ಹಾಡುತ್ತವೆ.
ಸುಸ್ತಾಗುವ ತನಕ ಬತ್ತಲೆ ಕುಣಿತ ಕುಣಿದು
ಎದ್ದು ಬಂದ ಗೋರಿಯಲ್ಲೆ ಬಿದ್ದುಬಿಡುತ್ತವೆ ಕಡೆಗೆ.

ಮಗನೇ ಬುದ್ಧಿ ಕೈಯಲ್ಲಿರಲಿ
ಸುದ್ದಿಯ ಮುರಕಕ್ಕೆ ಮಾರು ಹೋದೀಯಾ!
ಬಲಿದು ನಕ್ಕಾಳು ಅದಕ್ಕೆ ಅರಳೀಯ!
ಉಕ್ಕುವ ಜವ್ವನಿಗರನ್ನೆ ಆ ವಿಷಹಲ್ಲಿನ ನಾಗಿಣಿ
ಅಪ್ಪಿ ಮುಕ್ಕುತ್ತಾಳೆ ಸಕ್ಕರೆಯೆನ್ನುವಂತೆ
ಮುತ್ತಿಡುವಾಗ ಮುಖದಲ್ಲಿ ಮೆಲ್ಲಗೆ ಹಲ್ಲೂರುತ್ತಾಳೆ
ರಕ್ತದ ರುಚಿಹಿಡಿದು ಮೈಯ ಗುರುತು ಹಾಕುತ್ತಾಳೆ
ಹಲ್ಲೂರಿದ ಮೈಯಲ್ಲಿ ಗುಲ್ಲೊಂದು ಸೇರುತ್ತದೆ
“ಮೈ ಬಿಡುವವರೆಗೆ ದೆವ್ವವಾಗಿ ಕಾಡುತ್ತದೆ”

ಅಜ್ಜನ ಮಾತು ಕೇಳಿ ತುಟಿಮರೆಯಲ್ಲಿ ನಕ್ಕೆ
ಜೊತೆಗೇ ದುಃಖಪಟ್ಟೆ!
ಅರುಳು ಮರುಳಾದ ಮೇಲೆ ನಾನಂತೂ ಇರಬಾರದೆಂದು
ಅಗಲೇ ಉರುಳು, ಹೊಳೆ, ಬಾವಿಯೆಲ್ಲ ಯೋಚಿಸಿ
ಮಲಗಿದೆ.

ಬೆಳಿಗ್ಗೆ ಎದ್ದು ತೆರೆದರೆ ಬಾಗಿಲು
ಒಳಗೆ ಬಿತ್ತು ಬೆಳೆದ ಹಗಲು,
ಜೊತೆಗೇ ಒಳತೂರಿತು ಸುದ್ದಿಯ ಹೆಗಲು.
ಅವ್ವನ್ನ ಅರಸುವಾಗ ದೆವ್ವ ಕಂಡಂತಾಗಿ
ಗಾರಾಗಿ ಜೋರಾಗಿ ಕೂಗಿದೆ.
“ನೀ ಯಾರೆ ಇಲ್ಲಿ, ನನಗೇನು ಸಂಬಂಧ” ಎಂದೆ
ಸುದ್ದಿ ನಕ್ಕಳು, ಬೆನ್ನು ತಿರುವಿದಳು-ಅಲ್ಲಿ
ವಿಳಾಸ ನನ್ನದೆ, ಸೀಲು ಶಿವಮೊಗ್ಗೆಯದೆ
ಸಂಬಂಧವಿರದಿದ್ದರೂ ಇವಳು ನನ್ನವಳೆ!
ಉಕ್ಕಿದ ಕೋಪದಲ್ಲಿ ಥಟ್ಟನ ತೋಳು ಸೊಕ್ಕಿ
ಎತ್ತಿ ಒಂದು ಕೊಟ್ಟೆ.
ಬಿಗಿದರೆ ಕೆನ್ನೆಗೆ ಬಾಯಿಬಿಟ್ಟದ್ದು ಹೊಟ್ಟೆ
ಬಸಿರಿನಲ್ಲೋ ಒಂದು ಕೊಳೆತ ಮೊಟ್ಟೆ!
ಜೀವವಾಗಿ ಬೆಳೆಯಬೇಕಿದ್ದ ಭ್ರೂಣ
ಗರ್‍ಭಸ್ರಾವವಾಗಿ ಸಾಯುವುದೆ?
ಅನ್ಯಾಯಕ್ಕೆ ಉಸ್ಸೆನಿಸಿ ಉಸಿರು ಸೋತು
ಎಲ್ಲ ಆಚೆ ಚೆಲ್ಲಿದೆ;
ತೋಚದೆ,
ಗೂಬೆ ಮೆಟ್ಟಿದ ಮನೆಯಲ್ಲಿ ಕೂತೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...