Home / ಕವನ / ಅನುವಾದ / ನಿಜ ಒತ್ತಾಯಮಾಡುತ್ತದೆ

ನಿಜ ಒತ್ತಾಯಮಾಡುತ್ತದೆ

ನಾವು ಇದನ್ನೂ ಹೇಳಬೇಕೆಂದು
ನಿಜ ಒತ್ತಾಯ ಮಾಡುತ್ತದೆ :
‘ಬದುಕು ಸಾಗುತ್ತದೆ.’
ಕ್ಯಾನೆ, ಬೊರೊಡಿನೋಗಳಲ್ಲಿ
ಕೊಸೊವೊ ಪೊಲ್ಯೆ, ಗುರೆನಿಕಾಗಳಲ್ಲಿ
ಬದುಕು ಸಾಗುತ್ತದೆ.
ಜೆರಿಕೋದ ಪುಟ್ಟ ಸರ್ಕಲ್ಲಿನಲ್ಲಿ
ಒಂದು ಪೆಟ್ರೋಲ್ ಬಂಕಿದೆ,
ಬಿಲಾಹೊರಾದ ಪಾರ್ಕಿನ ಬೆಂಚಿಗೆ
ಬಳಿದ ಬಣ್ಣಹಸಿಯಾಗಿದೆ.
ಪರ್ಲ್ ಹಾರ್ಬರಿನಿಂದ ಹೇಸ್ಟಿಂಗ್ಸ್ ಗೆ
ಪತ್ರಗಳು ರವಾನೆಯಾಗುತ್ತವೆ,
ಚೆರೊನಿಯಾದ ಸಿಂಹ ಪ್ರತಿಮೆಯ ಮುಂದೆ
ವ್ಯಾನು ಸಾಗುತ್ತದೆ,
ವೆರ್ಡನ್‍ನ ತೋಟಗಳು
ಬರಲಿರುವ ವಸಂತನ ತಪ್ಪಿಸಿಕೊಳ್ಳಲಾರದಿವೆ.
ಎಲ್ಲವೂ ಎಷ್ಟೊಂದಿದೆಯೆಂದರೆ
ಏನನ್ನೂ ಪೂರ್ತಿ ಬಚ್ಚಿಡಲಾಗುವುದಿಲ್ಲ.
ಅಕ್ಟಿಯಂನಲ್ಲಿನಿಂತ ವಿಹಾರ ದೋಣಿಯಿಂದ
ಸಂಗೀತದ ಮಳೆ ಸುರಿದಿದೆ,
ಡೆಕ್ಕಿನ ಮೇಲೆ
ಇಳಿ ಬಿಸಿಲಲ್ಲಿ ದಂಪತಿಗಳ
ನರ್ತನ ಸಾಗಿದೆ.
ಯಾವಾಗಲೂ ಎಷ್ಟೊಂದೆಲ್ಲ ನಡೆಯುತ್ತೆದೆಂದರೆ
ಎಲ್ಲಾ ಮತ್ತೆಮತ್ತೆ ಆಗುತ್ತಲೇ ಇದೆ ಅಂತನ್ನಿಸುತ್ತದೆ.
ಮನೆ ಬಿದ್ದ ಎಡೆಯಲ್ಲಿ
ಒಳ್ಳೆಯ ಮನುಷ್ಯನನ್ನು
ಮಕ್ಕಳು ಪೀಡಿಸುತ್ತಿವೆ.
ಹಿರೋಷಿಮಾ ಇದ್ದ ಎಡೆಯಲ್ಲಿ
ಹಿರೋಷಿಮಾ ಮತ್ತೆ‌ಎದ್ದಿದೆ.
ದಿನ ಬಳಕೆಯ ಸಾವಿರ ಸಾಮಾನು
ತಯಾರಿಸಿದೆ.
ಈ ಭಯಂಕರ ಜಗತಿನಲ್ಲಿ
ಎದ್ದದ್ದು ಸಾರ್ಥಕ ಅನಿಸುವ ಹಾಗೆ
ಮಾಡುವ ಮುಂಜಾವಿನ
ಸೌಂದರ್ಯವಿಲ್ಲದೆ ಇಲ್ಲ.
ಬಯಲ ಹುಲ್ಲಿನ ಮೇಲೆ ಇಬ್ಬನಿ ಇದೆ,
ಹುಲ್ಲು ಯಾವಾಗಲೂ ಇರುವಂತೆ.
ಬಹುಶಃ ಎಲ್ಲ ಬಯಲೂ ರಣರಂಗವೇ.
ನಮಗೆ ನೆನಪಿರುವ
ನಮಗೆ ಮರೆತಿರುವ
ಯುದ್ಧಗಳು ನಡೆದ ತಾಣಗಳೇ.
ಬರ್ಚ್, ಸೀಡರ್, ಫರ್ ಕಾಡುಗಳು,
ಬಿಳಿಯ ಹಿಮ, ಬೂದಿ ಮರಳು,
ಕಂದು ಕಲ್ಲು, ಜೌಗು, ಪೊದೆ,
ಎಲ್ಲವೂ ಕಪ್ಟ ಬಂದಾಗ ಅಡಗುವ ತಾಣಗಳೇ.
ಇದೆಲ್ಲದರ ನೀತಿ ಏನು? ಬಹುಶಃ ಏನೂ ಇಲ್ಲ.
ರಕ್ತಹರಿಯುತ್ತದೆ, ರಕ್ತ ಒಣಗುತ್ತದೆ.
ಎಂದಿನಂತೆ ಕೆಲವು ನದಿಗಳು
ಕೆಲವು ಮೋಡಗಳು.
ದರಂತ ತುಂಬಿದ
ಪರ್ವತ ಕಣಿವೆಗಳಲ್ಲಿ
ಗಾಳಿ ಬೀಸಿ,
ಮೈ ಮರೆತು ನಡೆದವನ ಹ್ಯಾಟನ್ನು
ಹಾಯ್ದು ಹಾರಿಸಿದಾಗ
ನಾವು ನಗದೆ ಇರಲು ಸಾಧ್ಯವಿಲ್ಲ.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...