ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕೊರತೆ, ಕೀಳರಿಮೆ

ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕೊರತೆ, ಕೀಳರಿಮೆ

ಅಧ್ಯಾಯ – ೬

ನಾನು ಕಪ್ಪಗಿದ್ದೇನೆ, ನನ್ನ ತೆಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ, ಆಟೋಟಗಳಲ್ಲಿ ಪ್ರೈಜ್‌ಗಳನ್ನು ತೆಗೆದುಕೊಂಡಿದ್ದೇನೆ. ಒಳ್ಳೆಯ ವಿದ್ಯಾರ್ಥಿನಿ ಎಂದು ಹೆಸರು ಪಡೆದಿದ್ದೇನೆ. ಎಲ್ಲ ಗುಣಗಳನ್ನು ಒಂದು ಮಸಿ ನುಂಗಿತು ಎನ್ನುವ ಹಾಗೆ, ನನ್ನ ಮೈ ಬಣ್ಣ ನನ್ನ ಆತ್ಮವಿಶ್ವಾಸವನ್ನು ತಿಂದುಹಾಕಿ ಬಿಟ್ಟಿದೆ ಸರ್. ನನ್ನ ಮದುವೆ ಮಾಡುವುದು ಕಷ್ಟವಂತೆ. ಕಪ್ಪಗಿರುವ ಹುಡುಗಿಯರನ್ನು ಮೆಚ್ಚಿ ಮದುವೆಯಾಗಲು ಕಪ್ಪನೆಯ ಹುಡುಗರೂ ತಯಾರಿರುವುದಿಲ್ಲವಂತೆ. ನಾನು ನಮ್ಮ ಮನೆಗೆ ಹೊರೆಯಾಗುತ್ತೇನಂತೆ, ಈ ಮಾತನ್ನು ದಿನಕ್ಕೆ ಒಂದು ಸಲವಾದರೂ ನನ್ನ ತಾಯಿ ಮತ್ತು ಅಜ್ಜಿ ಹೇಳುತ್ತಲೇ ಇರುತ್ತಾರೆ. ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲೇ ಎನಿಸಿಬಿಡುತ್ತದೆ” ಎಂದು ಕಣ್ಣೀರು ಹಾಕಿದಳು ವಿಜಯ.

“ನಾನು ಐದಡಿ ಎತ್ತರ ಇದ್ದೇನೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ನನಗಿಂತ ಆರು ಅಂಗುಲ ಹೆಚ್ಚು ಎತ್ತರವಾಗಿದ್ದಾನೆ. ಗುಂಗುರ ಕೂದಲು, ಲಕ್ಷಣವಾಗಿದ್ದಾನೆ. ನಾವು ಜೊತೆಯಾಗಿ ಹೋದರೆ ಎಲ್ಲರೂ ಅವನನ್ನು ಗಮನಿಸಿ, ಮಾತನಾಡಿಸುತ್ತಾರೆಯೇ ಹೊರತು ನನ್ನನ್ನು ಮಾತನಾಡಿಸುವುದಿಲ್ಲ. ನಾನು ದಿನವೂ ಜಿಮ್‌ಗೆ ಹೋಗುತ್ತೇನೆ. ಜಾಗಿಂಗ್ ಮಾಡುತ್ತೇನೆ, ಈಜುತ್ತೇನೆ. ನನ್ನ ಶರೀರ ಕಂಡು ನನಗೇ ಬೇಜಾರಾಗುತ್ತದೆ. ಮುಖ ಮರೆಸಿಕೊಂಡು ಎಲ್ಲಿಯಾದರೂ ಓಡಿಹೋಗೋಣ ಎನಿಸುತ್ತದೆ” ಎಂದ ಬಾಬುರಾವ್

ಕೆಳಜಾತಿಯಲ್ಲಿ ಹುಟ್ಟಿ, ಸಣ್ಣ ಹಳ್ಳಿಯೊಂದರಲ್ಲಿ ಬದುಕುವುದು ಬಹಳ ಕಷ್ಟ, ಅಸ್ಪೃಶ್ಯತೆ ನಿವಾರಣೆ ಮಾಡಲು ಸರ್ಕಾರ ಕಾನೂನು ಮಾಡಿದೆ. ಏನು ಪ್ರಯೋಜನ? ಹೋಟೆಲ್‌ಗೆ ಹೋಗಿ, ಮೇಲ್ಜಾತಿಯವರಿಗೆ ಸ್ಟೀಲ್ ಲೋಟದಲ್ಲಿ ಕಾಫಿ, ಟೀ ಕೊಟ್ಟರೆ, ನಮಗೆ ಪ್ಲಾಸ್ಟಿಕ್ ಲೋಟದಲ್ಲಿ ಕೊಡುತ್ತಾರೆ ಅಂಗಡಿಯಲ್ಲಿ ಸಾಮಾನು ತೆಗೆದುಕೊಳ್ಳುವಾಗ ನಾವು ಬಂದು ಪಕ್ಕಕ್ಕೆ ನಿಲ್ಲಬೇಕು. ನಮ್ಮ ತರಗತಿಯಲ್ಲಿ ಯಾವಾಗಲೂ ನಾನೇ ಫಸ್ಟ್ ಅಥವಾ ಸೆಕೆಂಡ್ ಬರುತ್ತೇನೆ. ಹೆಚ್ಚಿನ ಟೀಚರ್‌ಗಳು, ಮನಃಪೂರ್ವಕವಾಗಿ ಅಭಿನಂದನೆ ಹೇಳುವುದಿಲ್ಲ. ‘ಯಾಕೋ ಇಷ್ಟು ಕಷ್ಟಪಡುತ್ತೀಯಾ, ೫೦ ಅಥವಾ ೬೦ ಪರ್ಸೆಂಟ್ ಮಾರ್ಕ್ಸ್ ತೆಗೆದರೆ ಸಾಕು ನಿಮಗೆ ರಿಸರ್ವೇಶನ್ ಪಾಲಿಸಿಯಿಂದ ಕೇಳಿದ ಸೀಟು ಉದ್ಯೋಗ ದೊರೆಯುತ್ತದೆ’ ಎನ್ನುತ್ತಾರೆ. ‘ನಮ್ಮ ಹತ್ತಿರ ಬರಲು, ಮಾತನಾಡಲು ಯಾರಿಗೂ ಇಷ್ಟವಿಲ್ಲ. ಈ ಅನಿಷ್ಟ ಜಾತಿಪದ್ಧತಿ ಯಾವಾಗ ಹೋಗುತ್ತದೋ’ ಎಂದ ಬಲರಾಮ.

“ನಾವು ಬಡವರಾಗಿರುವುದೇ ಒಂದು ಅಪರಾಧವಾಗಿಬಿಟ್ಟಿದೆ ಸಾರ್. ಎಲ್ಲಿಯೂ ನಮಗೆ ಗೌರವ ಸಿಗುವುದಿಲ್ಲ. ಅಂಗಡಿಯಲ್ಲಿ ಸಾಮಾನು ತರಲು ಹೋದರೆ, ‘ದುಡ್ಡಿದೆಯಾ, ನಮ್ಮಲ್ಲಿ ಸಾಲ ದೊರೆಯುವುದಿಲ್ಲ’ ಎಂದು ಅಂಗಡಿಯವರು ಹೇಳುತ್ತಾರೆ. ಸಭೆ ಸಮಾರಂಭಗಳಿಗೆ ಹೋದರೆ ಕುರ್ಚಿಗಳು ಖಾಲಿ ಇದ್ದರೂ, ನಾವು ನಿಂತು ಕೊಂಡಿರಬೇಕು. ಅಕಸ್ಮಾತ್ ಕುಳಿತಿದ್ದರೆ, ಏಳು, ಏಳು, ದೊಡ್ಡ ಮನುಷ್ಯರು ಬರುತ್ತಾರೆ. ಅವರು ನಿನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆಯೇ ಎಂದು ಸಂಘಟಕರು ಎಬ್ಬಿಸುತ್ತಾರೆ. ದುಡ್ಡಿದ್ದರೆ ದೊಡ್ಡಪ್ಪ, ದುಡ್ಡಿಲ್ಲದಿದ್ದರೆ ಏನೂ ಇಲ್ಲ. ಇದು ನ್ಯಾಯವೇ. ದುಡ್ಡಿಲ್ಲದ ನಾವು ಕೀಳು ಎಂದು ಪ್ರತಿ ನಿಮಿಷ ಪ್ರತಿದಿನ ನಮಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ” ಎಂದ ಸಿದ್ದೇಶ.

ಹೀಗೆ ಅಸಂಖ್ಯಾತ ಹರೆಯದವರು, ನಾನಾ ಕಾರಣಗಳಿಂದ ಕೀಳರಿಮೆಯಿಂದ ಬಳಲುತ್ತಾರೆ. ಆಲ್‌ಫ್ರೆಡ್ ಆಡ್ಲರ್ ಎನ್ನುವ ಮನೋ ವಿಜ್ಞಾನಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದಂದಿನಿಂದಲೇ ಕೀಳರಿಮೆಯನ್ನು ಅನುಭವಿಸುತ್ತಾನೆ. ಏಕೆಂದರೆ ಮಾನವ ಶಿಶು ಅತ್ಯಂತ ಅಸಹಾಯಕ ಪ್ರಾಣಿ. ತನ್ನ ಕಾಲಮೇಲೆ ನಿಲ್ಲಲು ಅದಕ್ಕೆ ಎಂಟೊಂಭತ್ತು ತಿಂಗಳು ಬೇಕಾಗುತ್ತದೆ. ತನ್ನ ಅನ್ನ ಸಂಪಾದಿಸಲು ಇಪ್ಪತ್ತು ವರ್ಷ ಕಾಯಬೇಕಾಗುತ್ತದೆ. ಅಸಹಾಯಕ ಮತ್ತು ಪರಾವಲಂಬಿಯಾದ ಶಿಶು ತಾನು ಕೀಳು ಎಂದುಕೊಳ್ಳುವುದರಲ್ಲಿ ಅಸಹಜತೆ ಏನು ಇಲ್ಲ. ಮೇಲರಿಮೆ (Superior) ಯನ್ನು ಸಾಧಿಸುವುದೇ ಪ್ರತಿಯೊಂದು ಜೀವಿಯ ಆಶಯ, ಗುರಿಯಾಗುತ್ತದೆ. ಇದಕ್ಕೆ ವ್ಯಕ್ತಿ ಹಲವು ವಿಧಿ ವಿಧಾನಗಳನ್ನು ಅನುಸರಿಸುತ್ತಾನೆ / ಳೆ.

* ಸುಂದರ, ಆಕರ್ಷಕ ಶರೀರವನ್ನು ಪಡೆಯುವುದು. ಸೌಂದರ್ಯ ಸಾಧನಗಳನ್ನು ಬಳಸುವುದು.

* ಶರೀರವನ್ನು ಅಲಂಕಾರಿಕ ವಸ್ತ್ರ ವಸ್ತುಗಳಿಂದ ಅಲಂಕರಿಸುವುದು.

* ಶಾಲಾ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯುವುದು.

* ಹಾಡು, ನೃತ್ಯ, ಅಭಿನಯ, ಸಾಹಿತ್ಯ ಸೃಷ್ಟಿ, ಸೃಜನಶೀಲ ಚಟುವಟಿಕೆಗಳು, ಕ್ರೀಡೆಗಳಲ್ಲಿ ಪ್ರತಿಭೆಯನ್ನು ತೋರಿಸುವುದು.

* ಇತರರು ಮೆಚ್ಚುವ, ಹೊಗಳುವ ನಡೆ ನುಡಿಗಳನ್ನು ಪ್ರಕಟಿಸುವುದು.

* ದಾನ, ಧರ್ಮ, ಪರೋಪಕಾರದಲ್ಲಿ ತೊಡಗುವುದು.

* ಪ್ರಶಸ್ತಿ, ಪುರಸ್ಕಾರ, ಬಹುಮಾನಗಳನ್ನು ಪಡೆಯುವುದು. ಪತ್ರಿಕೆಗಳು, ದೂರದರ್ಶನಗಳಲ್ಲಿ ಕಾಣಿಸಿಕೊಳ್ಳುವುದು.

* ಯಾವುದೇ ಕೆಲಸ ಕರ್ತವ್ಯವನ್ನು ಅಚ್ಚುಕಟ್ಟಾಗಿ, ಚೆನ್ನಾಗಿ ಮಾಡುವುದು.

* ಕೆಟ್ಟ ಹೆಸರು ಬರದಂತೆ ಎಚ್ಚರವಹಿಸುವುದು.

ಈ ವಿಧಿ ವಿಧಾನಗಳಲ್ಲಿ ಸಫಲರಾದರೆ, ಕೀಳರಿಮೆ ಹೋಗುತ್ತದೆ ಅಥವಾ ಕಡಿಮೆಯಾಗುತ್ತದೆ. ವಿಫಲರಾದರೆ ಕೀಳರಿಮೆ ಮತ್ತಷ್ಟು ಹೆಚ್ಚುತ್ತದೆ. ಯಾವುದೇ ವ್ಯಕ್ತಿಯಲ್ಲಿ ಕೀಳರಿಮೆ ತೀವ್ರಮಟ್ಟದಲ್ಲಿರಲು ಅಥವಾ ಹೆಚ್ಚಾಗಲು ಸಾಮಾನ್ಯ ಕಾರಣಗಳು:

* ಸುಂದರವಲ್ಲದ ಕುರೂಪಿ ಶರೀರ ಅಥವಾ ಅಂಗವೈಕಲ್ಯಗಳು, ವಿಪರೀತ ದಪ್ಪ ಅಥವಾ ವಿಪರೀತ ಸಣ್ಣ, ಅತಿ ಎತ್ತರ ಅಥವಾ ಅತಿ ಕುಳ್ಳು, ಅತಿ ಕಪ್ಪು ಬಣ್ಣ ಇತ್ಯಾದಿ.

* ತಂದೆ ತಾಯಿ / ಪೋಷಕರ ಪ್ರೀತಿ, ವಾತ್ಸಲ್ಯ ಕಡಿಮೆ, ಅವರ ಟೀಕೆ, ತಿರಸ್ಕಾರ, ಹೀನಾಯ, ಬೇಡದ ಮಗುವಾಗಿ ಬೆಳೆಯುವುದು.

* ಶಾಲೆ / ವಿದ್ಯಾಭ್ಯಾಸದಲ್ಲಿ / ಕಲಿಕೆಯಲ್ಲಿ ಹಿಂದುಳಿಯುವುದು.

* ಯಾವುದೇ ಪ್ರತಿಭೆ ಇಲ್ಲದಿರುವುದು ಅಥವಾ ಇದ್ದರೂ ಅದರ ಪ್ರಕಟಣೆಗೆ ಅವಕಾಶ, ಪ್ರೋತ್ಸಾಹ ಇಲ್ಲದಿರುವುದು.

* ಕೆಳವರ್ಗ, ಜಾತಿ ಅಥವಾ ಮೈನಾರಿಟಿ ಗುಂಪಿಗೆ ಸೇರಿರುವುದು.

* ತಂದೆ ತಾಯಿ ಶಾರೀರಿಕ ದುಡಿಮೆ ಮಾಡುವ ಶ್ರಮಿಕ ವರ್ಗಕ್ಕೆ ಸೇರಿರುವುದು.

* ಸಾಮಾಜಿಕ ಕಳಂಕವನ್ನುಂಟು ಮಾಡುವ ಕಾಯಿಲೆಗಳು ತನಗೆ ಅಥವಾ ಮನೆಯವರಿಗೆ ಇರುವುದು. ಉದಾ: ಕುಷ್ಟರೋಗ, ತೊನ್ನು, ಬಿಳಿ ಮಚ್ಚೆಗಳು, ಸೋರಿಯಸಿಸ್, ಎಕ್ಸಿಮಾ ಇತ್ಯಾದಿ.

* ಪದೇ ಪದೇ ಸೋಲು ನಿರಾಶೆಗಳು.

* ಮನೆಯವರ, ಇತರರ ಕಟು ಟೀಕೆ, ಅಪಮಾನ

* ಕಡಿಮೆ ಭಾಷಾ ಸಾಮರ್ಥ್ಯ ಮತ್ತು ಸಂವಹನ ಸಾಮರ್ಥ್ಯ

ಆತ್ಮ ವಿಶ್ವಾಸ ಹೆಚ್ಚಲು ಹೀಗೆ ಮಾಡಿ:

* ಒಳ್ಳೆಯ ಆಹಾರ, ವ್ಯಾಯಾಮ, ಸ್ವಚ್ಚತೆಯಿಂದ ನಿಮ್ಮ ದೇಹವನ್ನು ಆರೋಗ್ಯವಾಗಿಡಿ. ಅದನ್ನು ಸರಳವಾಗಿ ಅಲಂಕರಿಸಿ.

* ನಿಮ್ಮ ಜ್ಞಾನ ತಿಳುವಳಿಕೆ – ಕೌಶಲಗಳನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳಿ.

* ಕೆಲಸ-ಕರ್ತವ್ಯ ನಿರ್ವಹಣೆಯು ಉತ್ತಮಗೊಂಡಷ್ಟು ನಿಮ್ಮ ಆತ್ಮಶಕ್ತಿ ವೃದ್ಧಿಸುತ್ತದೆ.

* ನಿಮ್ಮ ನಡೆ-ನುಡಿಗಳಲ್ಲಿ ಸೌಜನ್ಯತೆ ಇರಲಿ, ವಿನಯ-ವಿಧೇಯತೆ ಇರಲಿ, ಆಗ ಬಹುತೇಕ ಮಂದಿ ನಿಮ್ಮನ್ನು ಮೆಚ್ಚುತ್ತಾರೆ. ನಿಮ್ಮ ನಿತ್ಯ ಜೀವನದಲ್ಲಿ ಶಿಸ್ತು-ಸಂಯಮವನ್ನು ರೂಢಿಸಿಕೊಳ್ಳಿ, ಶಿಸ್ತು ಸಂಯಮ ಇತರರ ಶ್ಲಾಘನೆಗೆ ಪಾತ್ರವಾಗುತ್ತವೆ.

* ಒಳ್ಳೆಯ ಹವ್ಯಾಸ, ಸೃಜನ ಶೀಲತೆಯನ್ನು ಬೆಳೆಸಿಕೊಳ್ಳಿ. ಹಾಡು, ಓದು, ಬರವಣಿಗೆ, ಚಿತ್ರಕಲೆ, ಅಭಿನಯ, ಮಿಮಿಕ್ರಿ ಇತ್ಯಾದಿ. ಇವು ನಿಮಗೆ ಜನಪ್ರಿಯತೆಯನ್ನು ತಂದುಕೊಡುತ್ತದೆ. ನಿಮ್ಮ ಕೊರತೆ ನ್ಯೂನತೆಗಳನ್ನು ಅದು ಪರಿಣಾಮಕಾರಿಯಾಗಿ ಮುಚ್ಚಿಹಾಕುತ್ತದೆ.

* ಸಹಾಯ ಸೇವೆ ಸಹಾನುಭೂತಿ ದಯೆ ಅನುಕಂಪ. ಇವನ್ನು ಮಾನವೀಯ ಗುಣಗಳು ಎನ್ನುತ್ತಾರೆ. ಇವನ್ನು ಪ್ರದರ್ಶಿಸುವ ವ್ಯಕ್ತಿಯನ್ನು ಜನರು ದೇವರ ಸಮಾನ ಎಂದು ಗುರುತಿಸುತ್ತಾರೆ. ಮರ್‍ಯಾದೆ, ಗೌರವ, ಮಾನ್ಯತೆಯನ್ನು ನೀಡಲು ಮುಂದಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ನಾವು ಕಷ್ಟ ನೋವಿನಲ್ಲಿರುವ ವ್ಯಕ್ತಿ, ವ್ಯಕ್ತಿಗಳಿಗೆ ನಮ್ಮ ಕೈಲಾದ ಕಿಂಚಿತ್ ಸಹಾಯವನ್ನು ಮಾಡಿದರೆ ದಯೆ ಸಹಾನುಭೂತಿಯನ್ನು ತೋರಿಸಿದರೆ ನಮ್ಮ ಸ್ವಾಭಿಮಾನ ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.

* ಯಾವುದೇ ಕೆಲಸ / ಚಟುವಟಿಕೆಯನ್ನು ಅಚ್ಚುಕಟ್ಟಾಗಿ ಮಾಡಿ. ವಿಶಿಷ್ಟ ರೀತಿಯಲ್ಲಿ ಮಾಡಿ. ಆಗ ಅದನ್ನು ಯಾರಾದರೂ ಮೆಚ್ಚುತ್ತಾರೆ. ಶ್ಲಾಘಿಸುತ್ತಾರೆ. ಹಾಗೇ ನೀವೂ ನಿಮ್ಮನ್ನು ಶ್ಲಾಘಿಸಿಕೊಳ್ಳಿ ಪ್ರತಿ ಶ್ಲಾಘನೆ / ಮೆಚ್ಚುಗೆಯಿಂದ ಕೀಳರಿಮೆ ಕರಗುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ.

* ನಿಮ್ಮಿಂದ ಯಾವುದೇ ತಪ್ಪು ಅಚಾತುರ್ಯವಾಗದಂತೆ ಎಚ್ಚರ ವಹಿಸಿ, ಆಕಸ್ಮಿಕವಾಗಿ ತಪ್ಪು ಅಚಾತುರ್ಯವಾದಾಗ, ಸಂಬಂಧಪಟ್ಟವರ ಬೇಷರತ್ ಕ್ಷಮೆಯಾಚಿಸಿ, ಅದು ನಿಮಗಿರುವ ಗೌರವವನ್ನು ಹೆಚ್ಚಿಸುತ್ತದೆ. ತಪ್ಪಿತಸ್ಥ ಭಾವನೆಯನ್ನು ನಿಮ್ಮಿಂದ ದೂರ ಮಾಡುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮಹತ್ಯೆ
Next post ಬೋರಂಗಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…